ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಬ್ರಹ್ಮಾವರ, ಜ.೧೦: ಮೂಡುಗಿಳಿಯಾರು ಜನಸೇವಾ ಟ್ರಸ್ಟ್ ನೇತೃತ್ವದಲ್ಲಿ ನಡೆಯುವ ೨೦೨೬ರ ಅಭಿಮತ ಸಂಭ್ರಮ ಕಾರ್ಯಕ್ರಮದ ಪೋಸ್ಟರ್ ಅನಾವರಣ ಕಾರ್ಯಕ್ರಮ ಬ್ರಹ್ಮಾವರ ರೋಟರಿ ಭವನದಲ್ಲಿ ನಡೆಯಿತು.
ಮಿಸ್ ಗ್ಲೋಬಲ್ ಇಂಡಿಯಾ ೨೦೨೪ ಪ್ರಶಸ್ತಿ ಪುರಸ್ಕೃತರಾದ ಸ್ವಿಜ್ಜಲ್ ಪುರ್ಟಾಡೋ ಪೋಸ್ಟರ್ ಅನಾವರಣ ಮಾಡಿ ಮಾತನಾಡುತ್ತಾ ನಮ್ಮ ಸಂಸ್ಕೃತಿಯ ಉಳಿವಿಗೆ ಶ್ರಮಿಸುತ್ತಾ ಬಂದಿರುವ ಜನಸೇವಾ ಟ್ರಸ್ಟ್ನ ಅಭಿಮತ ಸಂಭ್ರಮ ಕಾರ್ಯಕ್ರಮ ಯಶಸ್ಸು ಕಾಣಲಿ ಎಂದರು.

ಬಿಡುಗಡೆ ಸಮಾರಂಭದಲ್ಲಿ ಜಿ.ಎಮ್.ಎಜುಕೇಶನ್ ಸಂಸ್ಥೆಯ ಸಂಸ್ಥಾಪಕ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ ಯಾವುದೇ ಕಾರ್ಯಕ್ರಮದ ಹಿಂದೆ ಒಂದು ಒಳ್ಳೆಯ ಉದ್ದೇಶ ಇರಬೇಕು. ಜನಸೇವಾ ಟ್ರಸ್ಟ್ ಆ ಒಳ್ಳೆಯ ಉದ್ದೇಶದಲ್ಲಿ ಸಮಾಜಮುಖಿ ಕಾರ್ಯಕ್ರಮ ನಡೆಸುತ್ತಾ ಬಂದಿದೆ ಎಂದರು.
ಬ್ರಹ್ಮಾವರ ರೋಟರಿ ಅಧ್ಯಕ್ಷ ಸತೀಶ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.

ವೇದಿಕೆಯಲ್ಲಿ ಸಾಂಸ್ಕೃತಿಕ ಚಿಂತಕ ಉದಯ ಶೆಟ್ಟಿ ಪಡುಕೆರೆ, ಸ್ವಾಗತ ಸಮಿತಿಯ ಅಧ್ಯಕ್ಷ ಪತ್ರಕರ್ತ ಕೆ.ಸಿ.ರಾಜೇಶ್, ಜನಸೇವಾ ಟ್ರಸ್ಟ್ ಅಧ್ಯಕ್ಷ ವಸಂತ್ ಗಿಳಿಯಾರ್, ಟೀಮ್ ಅಭಿಮತ ಸಂಚಾಲಕ ಪ್ರವೀಣ್ ಯಕ್ಷಿಮಠ ಉಪಸ್ಥಿತರಿದ್ದರು.
ವಸಂತ್ ಗಿಳಿಯಾರ್ ಪ್ರಾಸ್ತಾವಿಕ ಮಾತುಗಳನ್ನಾಡಿ ಜನಸೇವಾ ಟ್ರಸ್ಟ್ ಬೆಟ್ಟಿಂಗ್, ಡ್ರಗ್ ಮಾಫಿಯ ಹಾಗೂ ಕಾನೂನು ಬಾಹಿರ ಕೃತ್ಯಗಳನ್ನು ವಿರೋಧಿಸುತ್ತಾ ಬಂದಿದೆ. ಇಡೀ ವರ್ಷದ ಸೇವಾ ಕಾರ್ಯಕ್ರಮದ ನಡುವೆ ವರ್ಷದಲ್ಲಿ ಒಂದು ದಿನ ಅಭಿಮತ ಸಂಭ್ರಮವನ್ನು ಉತ್ಸವದಂತೆ ನಡೆಸುತ್ತೇವೆ
ಫೆ.೧೪ ರಂದು ಅಭಿಮತ ಸಂಭ್ರಮ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು ಇದೇ ಸಂದರ್ಭ ಯಶೋಗಾಥೆ, ಕೀರ್ತಿಕಲಶ ಪುರಸ್ಕಾರ ನೀಡಲಿದ್ದೇವೆ. ಈ ಸಂದರ್ಭ ಎಲ್ಲರೂ ಭಾಗವಹಿಸುವಂತೆ ವಿನಂತಿಸಿದರು. ಪ್ರಣೂತ್ ಆರ್. ಗಾಣಿಗ ಪಡುಕೆರೆ ಕಾರ್ಯಕ್ರಮ ನಿರೂಪಿಸಿದರು.



