ಉಡುಪಿಮಿತ್ರ ಪತ್ರಿಕೆ ಸುದ್ದಿ :
ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಬ್ರಹ್ಮಾವರ, ಫೆ.೧೮: ಎಲ್ಲಾ ಕೊಡುಗೆಗಳಿಗಿಂತ ದೇವಾಲಯಗಳ ಕೊಡುಗೆ ಶಾಶ್ವತವಾಗಿ ಉಳಿಯುವಂಹದ್ದು. ಹಿಂದೆ ಬಾರಕೂರಿನ ರಾಣಿಯರು, ರಾಜರು ಅನೇಕ ಕೊಡುಗೆಗಳನ್ನು ಈ ಊರಿಗೆ ಕೊಟ್ಟಿದ್ದಾರೆ. ಆದರೆ ಅವರು ನೀಡಿದ ಕೊಡುಗೆಗಳಲ್ಲಿ ದೇವಾಲಯಗಳು ಮಾತ್ರ ಶಾಶ್ವತವಾಗಿ ಉಳಿದಿವೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೆಂದ್ರ ಹೆಗ್ಗಡೆಯವರು ನುಡಿದರು. ಅವರು ಬಾರಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಜಗತ್ತಲ್ಲಿ ಯಾರೂ ಶಾಶ್ವತವಾಗಿ ಉಳಿಯಲು ಸಾಧ್ಯವಿಲ್ಲ. ಎಲ್ಲರೂ ದೇಹ ಬಿಟ್ಟು ತೆರಳಬೇಕು. ನಾವು ಅಳಿದ ನಂತರವೂ ನಮ್ಮ ಹೆಸರು ಉಳಿಯಬೇಕಾದಲ್ಲಿ ಧರ್ಮ ಕಾರ್ಯ ಅಥವಾ ಒಳ್ಳೆಯ ಕಾರ್ಯ ಮಾಡಬೇಕು. ಹೀಗೆ ಮಾಡಿದರೆ ನಾವು ಅಳಿದ ನಂತರವೂ ಜನರು ನಮ್ಮನ್ನು ಸ್ಮರಿಸುತ್ತಾರೆ. ಆದ್ದರಿಂದ ಎಲ್ಲರೂ ಉತ್ತಮ ಕೆಲಸಗಳನ್ನು ಮಾಡಬೇಕು. ಅದು ಭಗವಂತನಿಗೂ ತೃಪ್ತಿ ನೀಡುತ್ತದೆ. ಭಗವಂತನನ್ನು ತೃಪ್ತಿಪಡಿಸುವ ಇನ್ನೊಂದು ಮಾರ್ಗವೆಂದರೆ ಭಗವಂತನ ಭಕ್ತರ ಸೇವೆಯನ್ನು ಮಾಡುವುದು. ಇದರಿಂದಲೂ ದೇವರಿಗೆ ಸಂತೋಷವಾಗುವುದು. ದೇವರ ಕೆಲಸಕ್ಕೆ ವಿನಿಯೋಗಿಸಿದ ಹಣದ ವಿವರವನ್ನು ಭಗವಂತ ತನ್ನ ಲೆಕ್ಕದಲ್ಲಿ ದಾಖಲಿಸಿಕೊಳ್ಳುತ್ತಾನೆ ಎಂದು ಹೆಗ್ಗಡೆಯವರು ನುಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶ್ರೀನಿವಾಸ ಶೆಟ್ಟಿಗಾರ್ ಸ್ವಾಗತಿಸಿ ಪ್ತಾಸ್ತಾವಿಕ ಮಾತುಗಳನ್ನಾಡಿದರು.
ಕೋಟ ಅಮೃತೇಶ್ವರೀ ದೇವಸ್ಥಾನದ ವ್ಯವಸ್ಥಾಪನಾ ಅಧ್ಯಕ್ಷ ಆನಂದ ಸಿ.ಕುಂದರ್ ರವರು ಮಾತನಾಡಿ ಬಾರಕೂರು ಉಡುಪಿ ಜಿಲ್ಲೆಯ ದೇವಾಲಯಗಳ ನಾಡು. ಪ್ರತೀ ವರ್ಷ ಇಲ್ಲಿ ಒಂದಲ್ಲ ಒಂದು ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ಪ್ರತಿಯೊಬ್ಬರು ದೇವರ ಬಗ್ಗೆ ಧರ್ಮದ ಬಗ್ಗೆ ತಿಳಿದುಕೊಂಡು ಸತ್ಕಾರ್ಯದಲ್ಲಿ ಭಾಗಿಯಾಗಬೇಕು. ಒಳ್ಳೆಯ ಅಂಶಗಳನ್ನು ನಾವು ಹಂಚಿಕೊಳ್ಳಬೇಕು. ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳಕ್ಕೆ ಹರಿದು ಬಂದ ಕಾಣಿಕೆಗಳನ್ನು ದೇವಾಲಯಗಳ ಅಭಿವೃದ್ಧಿಗೆ ಸಮಾಜದ ಹಿತಕ್ಕೆ ನೀಡುತ್ತಿದ್ದಾರೆ. ದಾನಧರ್ಮವನ್ನು ಎಲ್ಲರೂ ಮಾಡಬೇಕು. ನಮ್ಮ ಕಾಲದ ನಂತರವೂ ನಮ್ಮ ಸತ್ಕಾರ್ಯ, ದಾನಧರ್ಮದ ಲೆಕ್ಕಾಚಾರವನ್ನು ದೇವರು ಮಾಡಲಿದ್ದಾನೆ. ಆದ್ದರಿಂದ ಮಕ್ಕಳನ್ನು ಕೂಡ ಸತ್ಕಾರ್ಯದಲ್ಲಿ ಭಾಗಿಯಾಗುವಂತೆ ಹಿರಿಯರು ಮಾಡಬೇಕು ಎಂದರು.

ತಂತ್ರಿಗಳಾದ ರಮೇಶ್ ಭಟ್ ಮಾತನಾಡಿ ೮೪ ಲಕ್ಷ ಜೀವಿಗಳಲ್ಲಿ ಬಟ್ಟೆ ಧರಿಸುವವರು ಮಾನವರು ಮಾತ್ರ. ಅಂತಹ ಬಟ್ಟೆಯನ್ನು ನೆಯ್ದು ಕೊಡುವವರು ಪದ್ಮಶಾಲಿ ಸಮಾಜದವರು. ಇಂತಹ ಸಮಾಜ ಬಾಂಧವರು ಈ ದೇವಸ್ಥಾನದಲ್ಲಿ ಶ್ರದ್ಧೆ ಭಕ್ತಿಯಿಂದ ಬ್ರಹ್ಮಕಲಶೋತ್ಸವ ನಡೆಸಿದ್ದಾರೆ ಎಂದರು.
ಬಾರಕೂರು ಗ್ರಾಮ ಪಂಚಾಯತ್ ಅಧ್ಯಕ್ಷ ಶಾಂತಾರಾಮ ಶೆಟ್ಟಿಯವರು ಮಾತನಾಡಿ ಬಾರಕೂರಿನಲ್ಲಿ ಎಲ್ಲಾ ಸಮುದಾಯದವರ ದೇವಾಲಯಗಳಿರುವುದರಿಂದ ಇದೊಂದು ಪುಣ್ಯಭೂಮಿ ಎನಿಸಿದೆ ಎಂದರು.

ಮುಖ್ಯ ಅತಿಥಿಗಳಾಗಿ ಮಂದರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಮೊಕ್ತೇಸರ ಧನಂಜಯ ಶೆಟ್ಟಿ, ಕಚ್ಚೂರು ನಾಗೇಶ್ವರ ದೇವಸ್ಥಾನ ದೇವಸ್ಥಾನದ ಆಡಳಿತ ಮೊಕ್ತೇಸರ ಲಕ್ಷ್ಮಣ ಕರಾವಳಿ, ಬೋಳೂರು ಶ್ರೀ ವೀರಭದ್ರ ಮಹಾಮಾಯಿ ದೇವಸ್ಥಾನದ ಅಧ್ಯಕ್ಷ ಬಾಲಕೃಷ್ಣ ಕಲ್ಬಾವಿ, ಕಲ್ಯಾಣಪುರ ಶ್ರೀ ಆದಿಶಕ್ತಿ ವೀರಭದ್ರ ಬ್ರಹ್ಮಲಿಂಗ ದೇವಸ್ಥಾನದ ಶ್ರೀ ಜ್ಯೋತಿ ಪ್ರಸಾದ್ ಶೆಟ್ಟಿಗಾರ್, ಮುಲ್ಕಿ ಶ್ರೀ ವೀರಭದ್ರ ಮಹಾಮಾಯಿ ದೇವಸ್ಥಾನದ ಮೊಕ್ತೇಸರ ರಾಜೇಶ್ ಶೆಟ್ಟಿಗಾರ್ ಸಾಣೂರು, ಹಳೆಯಂಗಡಿ ಕಲ್ಲಾಪು ಶ್ರೀ ವೀರಭದ್ರ ಮಹಾಮಾಯಿ ದೇವಸ್ಥಾನದ ಅಧ್ಯಕ್ಷ ಲೋಲಾಧರ ಶೆಟ್ಟಿಗಾರ್ ಬೆಳ್ಳಯಾರು ಭಾಗವಹಿಸಿದ್ದರು.

ಪುರುಷೋತ್ತಮ ಶೆಟ್ಟಿಗಾರ್, ನಾರಾಯಣ ಶೆಟ್ಟಿಗಾರ್, ಎಚ್.ಎ.ಗೋಪಾಲ ಸುರತ್ಕಲ್, ಡಾ.ಸಿ.ಜಯರಾಮ ಶೆಟ್ಟಿಗಾರ್, ಡಾ.ಶಿವಪ್ರಸಾದ್ ದೊಡ್ಡಣಗುಡ್ಡೆ, ವಿಠಲ ಶೆಟ್ಟಿಗಾರ್ ಕೆಳಾರ್ಕಳಬೆಟ್ಟು, ಮೀನಾಕ್ಷಿ ನಾರಾಯಣ ಶೆಟ್ಟಿಗಾರ್, ಪುರುಷೋತ್ತಮ ಮಣಿಪಾಲ, ಸದಾಶಿವ ಶೆಟ್ಟಿಗಾರ್ ಬ್ರಹ್ಮಾವರ, ಪ್ರೇಮ ಸದಾಶಿವ ಶೆಟ್ಟಿ, ಶ್ರೀಮತಿ ಯಶೋಧಾ ಶ್ರೀನಿವಾಸ ಶೆಟ್ಟಿಗಾರ್ ದಂಪತಿ, ಶ್ರೀಮರಿ ಶಾಂತಾ, ಶ್ರೀ ವಿ.ಎಸ್.ಚಂದ್ರಶೇಖರ್ , ನಾರಾಯಣಮೂರ್ತಿ ಬೆಂಗಳೂರು, ಪುರೋಹಿತ ದಾಮೋಧರ ಶರ್ಮಾ ಹಾಗೂ ಶಿಲ್ಪಿ ಮಾಧವ ಆಚಾರ್ಯರನ್ನು ವೀರೇಂದ್ರ ಹೆಗ್ಗಡೆಯವರು ಸನ್ಮಾನಿಸಿದರು.

ಕ್ಷೇತ್ರದ ವತಿಯಿಂದ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಡಾ.ಡಿ ವಿರೇಂದ್ರ ಹೆಗ್ಗಡೆಯವರನ್ನು ಸನ್ಮಾನಿಸಲಾಯಿತು.
ಪುರುಶೋತ್ತಮ ಶೆಟ್ಟಿಗಾರ್ ವಂದಿಸಿದರು. ಪುರೋಹಿತ್ ದಾಮೋದರ ಶರ್ಮಾ ಕಾರ್ಯಕ್ರಮ ನಿರೂಪಿಸಿದರು.