ವರದಿ: ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಬ್ರಹ್ಮಾವರ, ಜೂನ್.9 ನಶಿಸಿ ಹೋಗುತ್ತಿರುವ ಪಾರಂಪರಿಕ ಕುಲಕಸುಬುಗಳಿಗೆ ಉತ್ತೇಜನ ನೀಡುವ ಉದ್ದೇಶದಲ್ಲಿ ವಿಶ್ವಕರ್ಮ ಯೋಜನೆಯಲ್ಲಿ ಪ್ರತೀ ದಿನ ಊಟ, ಉಪಹಾರದೊಂದಿಗೆ 5 ದಿನಗಳ ಕಾಲ ತರಬೇತಿ ನೀಡಿ ರೂ.೫೦೦ರಂತೆ ಭತ್ಯೆ ನೀಡುತ್ತದೆ. ೧೮ ಕುಲ ಕಸುಬುಗಳಿಗೆ ಕೇಂದ್ರ ಸರ್ಕಾರ ರೂ. 1ರಿಂದ 3 ಲಕ್ಷದ ವರೆಗೆ ಸಾಲ ನೀಡುವುದಲ್ಲದೆ ರೂ. 15 ಸಾವಿರ ಮೌಲ್ಯದ ಕಿಟ್ಗಳನ್ನು ಉಚಿತವಾಗಿ ನೀಡುತ್ತದೆ. ಉಡುಪಿ ಜಿಲ್ಲೆಯಲ್ಲಿ ಸುಮಾರು 1450 ಮಂದಿಗೆ ಈ ಸೌಲಭ್ಯ ನೀಡಲಾಗಿದೆ. ಕೇವಲ ಸಾಲ ಪಡೆಯುವ ಉದ್ದೇಶದಲ್ಲಿ ಸುಮಾರು 12000 ಜನ ಉಡುಪಿ ಜಿಲ್ಲೆಯಲ್ಲಿ ಟೈಲರಿಂಗ್ಗೆ ಅರ್ಜಿ ಹಾಕಿದ್ದಾರೆ. ಆದರೆ ಕೇಂದ್ರದಲ್ಲಿ 12 ಸಾವಿರ ಮಂದಿ ಹೊಸದಾಗಿ ಟೈಲರಿಂಗ್ ಮಾಡಿದರೆ ಅವರಿಗೆ ಕೆಲಸ ಎಲ್ಲಿಂದ ಬರಬೇಕು ಎಂಬ ಪ್ರಶ್ನೆ ಕೇಳಿದ್ದಾರೆ. ಆದ್ದರಿಂದ ಟೈಲರಿಂಗ್ ಅಸೋಸಿಯೇಶನ್ನಲ್ಲಿ ನೊಂದಾಯಿಸಿಕೊಂಡವರನ್ನು ಗುರುತಿಸಿ ಈ ಸೌಲಭ್ಯ ನೀಡಲಾಗುತ್ತಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ನುಡಿದರು. ಅವರು ಬ್ರಹ್ಮಾವರದ ವಾರಂಬಳ್ಳಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದ ಪಿ.ಎಂ.ವಿಶ್ವಕರ್ಮ ಯೋಜನೆಯ ಸೌಲಭ್ಯ ವಿತರಣಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಕೇಂದ್ರ ಸರ್ಕಾರ 12 ಸಾವಿರ ಕೋಟಿ ರೂ. ಮೊತ್ತವನ್ನು ಈ ಯೋಜನೆಗೆ ವಿನಿಯೋಗಿಸುತ್ತಿದ್ದು ಉಡುಪಿ ಜಿಲ್ಲೆಯಲ್ಲಿ ರೂ. 14ವರೆ ಕೋಟಿ ರೂ. ವಿನಿಯೋಗಿಸಲಾಗಿದೆ. ಅಂಚೆ ಇಲಾಖೆಯವರು ಉತ್ತಮವಾಗಿ, ಪ್ರಾಮಾಣಿಕವಾಗಿ ಕೆಲಸಮಾಡುತ್ತರೆಂಬ ಉದ್ದೇಶದಲ್ಲಿ ಸಲಕರಣೆಗಳನ್ನು ಅಂಚೆ ಇಲಾಖೆಯ ಮೂಲಕ ನೀಡಲಾಗುತ್ತಿದೆ ಎಂದರು.

ಸಭಾಧ್ಯಕ್ಷತೆ ವಹಿಸಿದ್ದ ವಾರಂಬಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ನಿತ್ಯಾನಂದ ಬಿ.ಆರ್. ಮಾತನಾಡಿ ವಿಶ್ವಕರ್ಮ ಯೋಜನೆ ಒಂದು ಉತ್ತಮ ಯೋಜನೆಯಾಗಿದ್ದು ಸರಕಾರ ನೀಡಿರುವ ಕಿಟ್ಗಳಲ್ಲಿ ಬಹಳ ಉಪಯುಕ್ತ ಉಪಕರಣಗಳನ್ನು ನೀಡಲಾಗುತ್ತಿದೆ. ಫಲಾನುಭವಿಗಳು ಈ ಪರಿಕರಗಳನ್ನು ಹಾಗೂ ಶೇ.೫%ರ ಬಡ್ಡಿ ದರದಲ್ಲಿ ನೀಡುತ್ತಿರುವ ಸಾಲ ಸೌಲಭ್ಯವನ್ನು ಬಳಸಿಕೊಂಡು ತಮ್ಮ ಕುಲಕಸುಬುಗಳಲ್ಲಿ ಸ್ವಾವಲಂಬನೆ ಸಾಧಿಸಿಕೊಳ್ಳಬೇಕೆಂದು ನುಡಿದರು.

ಅತಿಥಿಗಳಾಗಿ ತಾಲೂಕು ಪಂಚಾಯತ್ ಕಾರ್ಯನಿರ್ವಣಾಧಿಕಾರಿ ಎಚ್.ವಿ. ಇಬ್ರಾಹಿಂಪುರ, ಅಂಚೆ ಇಲಾಖೆಯ ಸಹಾಯಕ ಅಂಚೆ ಅಧೀಕ್ಷಕ ಕೃಷ್ಣರಾಜ ವಿ.ಭಟ್, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಬಿ.ಎನ್ ಶಂಕರ ಪೂಜಾರಿ, ಹಂದಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾರದಾ ಪೂಜಾರಿ, ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಬಿರ್ತಿ ರಾಜೇಶ್ ಶೆಟ್ಟಿ, ವಾರಂಬಳ್ಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಉಮಾಬಾಯಿ, ಬ್ರಹ್ಮಾವರ ಅಂಚೆ ಕಚೇರಿಯ ಪೋಸ್ಟ ಮಾಸ್ಟರ್ ಶ್ರೀಮತಿ ಗಾಯತ್ರಿ ರಾವ್, ಪಿಡಿಓ ಆದರ್ಶ ಶೆಟ್ಟಿ ಉಪಸ್ಥಿತರಿದ್ದರು.
ಸಂಸದರ ಆಪ್ತ ಕಾರ್ಯದರ್ಶಿ ಹರೀಶ್ ಶೆಟ್ಟಿ ಫಲಾನುಭವಿಗಳ ಪಟ್ಟಿ ವಾಚಿಸಿದರು. ಕಾರ್ಯದರ್ಶಿ ಶೇಖರ ನಾಯ್ಕ್ ಸ್ವಾಗತಿಸಿ ವಂದಿಸಿದರು.

