ಉಡುಪಿ ಮಿತ್ರ ಪತ್ರಿಕೆ ಸುದ್ದಿ :
ಯಾವುದೇ ನಾಗಮಂಡಲ ಯಶಸ್ವಿಯಾಗಬೇಕಾದಲ್ಲಿ ಊರಿನವರ ಹಾಗೂ ಕಾರ್ಯಕರ್ತರ ಸಹಕಾರ ಮುಖ್ಯವಾಗಲಿದೆ. ಇಲ್ಲಿ ನಡೆಯುವ ನಾಗಮಂಡಲ ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ಹಾಗೂ ಸಂತರ್ಪಣೆ, ಧಾರ್ಮಿಕ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಈ ಗ್ರಾಮದ ಪ್ರಮುಖರು, ಇಲ್ಲಿನ ಜನರು ಹಾಗೂ ಸಂಘ ಸಂಸ್ಥೆಗಳ ಸದಸ್ಯರು ಪೂರ್ಣ ಸಹಕಾರ ನೀಡಬೇಕೆಂದು ಕೂಡಾಲು ಶಂಕರ ಶೆಟ್ಟಿಯವರು ಮನವಿ ಮಾಡಿದರು. ಅವರು ಫೆ.೯ರಂದು ಯಡಾಡಿ ಮತ್ಯಾಡಿಯ ಕೂಡಾಲಿನ ‘ಶ್ರೀ ತೇಜವನ’ ಮನೆಯ ಅಂಗಳದಲ್ಲಿ ನಡೆದ ಚತುಃಪವಿತ್ರ ನಾಗಮಂಡಲೋತ್ಸವದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ವೇದಮೂರ್ತಿ ಶ್ರೀ ರಮೇಶ್ ಭಟ್ ನಾಯರಬೆಟ್ಟು ಬಾರಕೂರು ಇವರು ಮಾತನಾಡಿ ನಾಗಮಂಡಲಕ್ಕೆ ಈಗಾಗಲೆ ವಾಸ್ತು ಪ್ರಕಾರವೇ ಎಲ್ಲಾ ಕೆಲಸ ಆರಂಭಿಸಿದ್ದೇವೆ. ಅಗ್ನಿ ಮೂಲೆಯಲ್ಲಿ ಅಡುಗೆಗೆ, ಎತ್ತರದಲ್ಲಿ ಉಗ್ರಾಣ, ಬ್ರಾಹ್ಮಣರಿಗೆ, ವಿಐಪಿಗಳಿಗೆ, ಭಕ್ತಾದಿಗಳಿಗೆ ಹೀಗೆ ಎಲ್ಲರಿಗೂ ಊಟದ ಚಪ್ಪರದ ಸಿದ್ದತೆಗಾಗಿ ಜಾಗವನ್ನು ಸಮತಟ್ಟು ಮಾಡಲಾಗಿದೆ. 5೦೦ ಜನರಿಗೆ ಕುಳಿತುಕೊಳ್ಳಲು ೪ ಚಪ್ಪರಗಳನ್ನು ಮಾಡುತ್ತಿದ್ದೇವೆ. ಎಷ್ಟೇ ಜನರು ಬಂದರೂ ಹೆಚ್ಚು ಹೊತ್ತು ಕಾಯದೆ ಬೇಗ ಬೇಗನೆ ಊಟ ಮಾಡಿ ಹೋಗಲು ವ್ಯವಸ್ಥೆ ಮಾಡಲಾಗುವುದು. ಸಾರ್ವಜನಿಕರ ಸಹಕಾರದಲ್ಲಿ ವಿವಿಧ ಸಮಿತಿಗಳನ್ನು ಮಾಡಲಾಗಿದೆ. ಎಪ್ರಿಲ್ ೧ ರಂದು ಸಂಸ್ಕಾರ ಕ್ರಿಯಾರಂಭವಾಗಲಿದೆ. ಎಪ್ರಿಲ್ 4ರಂದು ಉಗ್ರಾಣ ಮಹೂರ್ತ, ರಾತ್ರಿ ಸ್ವಾಮಿ ಪರಿವಾರ ದೇವರಿಗೆ ಕಲಾಭಿವೃದ್ಧಿ ಕಾರ್ಯಕ್ರಮ, ನಾಗ ಸನ್ನಿಧಿಯಲ್ಲಿ ವಾಸ್ತು ರಾಕ್ಷೋಘ್ನ, ಏಪ್ರಿಲ್ 5ರಂದು ನಾಗಬನದಲ್ಲಿ ನವಕ ಪ್ರಧಾನ ಕಲಶ, ಅಧಿವಾಸಹೋಮ, ಕಲಶಾಭಿಷೇಕ, ಆಶ್ಲೇಷಬಲಿ, ಉದ್ಯಾಪನ ಹೋಮ, ಮಂಡಲ ಮಂಟಪದಲ್ಲಿ ವಾಸ್ತು ರಾಕ್ಷೋಘ ನಡೆಯಲಿದೆ. ತೆಂಕು ಹಾಗೂ ಬಡಗಿನ ಇಬ್ಬರೂ ನಾಗಪಾತ್ರಿಗಳ ದರ್ಶನ ಸೇವೆ ನಡೆಯಲಿದೆ ಎಂದರು.

ಹೊರೆ ಕಾಣಿಕೆ : ನಾಗಮಂಡಲೋತ್ಸವಕ್ಕೆ ಹೊರೆಕಾಣಿಕೆ ಸಮರ್ಪಣೆ ನಡೆಯಲಿದೆ. ಹೊರೆಕಾಣಿಕೆ ವಿಜೃಂಭಣೆಯಿಂದ ಮಾಡಬೇಕೆಂಬ ಉದ್ದೇಶದಲ್ಲಿ ಬಿದ್ಕಲ್ಕಟ್ಟೆಯ ರಾಮ ಮಂದಿರದಿಂದ ಪ್ರಾರಂಭ ಮಾಡಲಾಗುವುದು.ಹೊರೆಕಾಣಿಕೆಗೂ ಎಲ್ಲರೂ ಸಹಕಾರ ನೀಡಬೇಕು.
ಏಪ್ರಿಲ್ 6ರಂದು ಚತುಃಪವಿತ್ರ ನಾಗಮಂಡಲೋತ್ಸವ ಸೇವೆ ನಡೆಯಲಿದ್ದು ಅಂದು ಬೆಳಿಗ್ಗೆ 7.೦೦ರಿಂದ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ. ಮಧ್ಯಾಹ್ನ 12.30ಕ್ಕೆ ಅನ್ನ ಸಂತರ್ಪಣೆ, ಸಂಜೆ ಗಂಟೆ 7.೦೦ಕ್ಕೆ ಹಾಲಿಟ್ಟು ಸೇವೆ, ರಾತ್ರಿ 7.3೦ಕ್ಕೆ ಮಂಡಲ ಪೂಜೆ, ರಾತ್ರಿ 8.೦೦ರಿಂದ ಚತುಃಪವಿತ್ರ ನಾಗಮಂಡಲೋತ್ಸವ ಸೇವೆ, ಪ್ರಸಾದ ವಿತರಣೆ, ಮಂತ್ರಾಕ್ಷತೆ ನಡೆಯಲಿದೆ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಭಾಗಿಯಾಗುವಂತೆ ಹಾಗೂ ಸ್ಥಳಿಯರು ಇದರ ಯಶಸ್ಸಿಗೆ ಸಹಕರಿಸುವಂತೆ ಶಂಕರ ಶೆಟ್ಟಿ ಕೂಡಾಲು (ಬೆಂಗಳೂರು) ವಿನಂತಿಸಿದರು.

ಪೂರ್ವಭಾವಿ ಸಭೆಯ ವೇದಿಕೆಯಲ್ಲಿ ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಚಿಟ್ಟೆಬೈಲು ಜಗನ್ನಾಥ ಶೆಟ್ಟಿ, ಸುಬ್ರಹ್ಮಣ್ಯ ಶೆಟ್ಟಿ, ಬಿದ್ಕಲ್ಕಟ್ಟೆ ನಾಗಲಕ್ಷ್ಮೀ ಸಭಾಂಗಣದ ಮಾಲಕ ರಾಘವೇಂದ್ರ ಅಡಿಗ, ಶಂಭು ಶೆಟ್ಟಿ ಕೂಡಾಲು, ಬಾಲಕೃಷ್ಣ ಹೆಗ್ಡೆ, ಲಕ್ಷ್ಮೀನಾರಾಯಣ ಅಡಿಗ ಕೂಡಾಲು ಉಪಸ್ಥಿತರಿದ್ದರು.
ಸಭೆಯಲ್ಲಿ ರವೀಂದ್ರನಾಥ ಕಿಣಿ ಸಾಹೇಬರಕಟ್ಟೆ, ಮಹೇಶ್ ಶೆಣೈ ಗಾವಳಿ, ಗ್ರಾಮ ಪಂಚಾಯತ್ ಸದಸ್ಯ ಜಯಪ್ರಕಾಶ್ ಶೆಟ್ಟಿ, ವಿಶ್ವನಾಥ ಅಡಿಗ, ನಾಗೇಶ್ ಪಡಿಯಾರ್ ಗಾವಳಿ, ಪ್ರಭಾಕರ ಶೆಟ್ಟಿ ಸಿರಿಮಠ, ಶಂಕರ ಕುಲಾಲ್, ಸಂಘಸಂಸ್ಥೆಗಳ ಪ್ರತಿನಿಧಿಗಳು, ಊರವರು ಹಾಗೂ ಕೊತ್ತೂರು ಕುಮೇರಿಮನೆ ಹಾಗೂ ಕೂಡಾಲು ನಡುಮನೆ ಕುಟುಂಬದ ಸದಸ್ಯರು ಭಾಗವಹಿಸಿದ್ದರು. ಶಿಕ್ಷಕ ವಿಶ್ವನಾಥ ಶೆಟ್ಟಿ ನಿರೂಪಿಸಿ ವಂದಿಸಿದರು.
ವರದಿ: ಚಿತ್ತೂರು ಪ್ರಭಾಕರ ಆಚಾರ್ಯ

