ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಬ್ರಹ್ಮಾವರ, ಫೆ.೨೪ : ಕೋಟ, ಫೆ. ೨೩: ರಥವನ್ನು ಎಲ್ಲರೂ ಸೇರಿ ಎಳೆದಾಗ ಸುಲಭದಲ್ಲಿ ಬರುವಂತೆ ಕಂದ್ರಂಜೆಯ ದೇವಸ್ಥಾನದ ಅಭಿವೃದ್ಧಿ ಕೆಲಸದಲ್ಲಿ ಸರ್ವರೂ ಭಾಗಿಯಾದುದರಿಂದ ಹಾಗೂ ಬದುಕಿನಲ್ಲಿ ಸಂಪಾದಿಸಿದುದರಲ್ಲಿ ಒಂದಷ್ಟು ಮೊತ್ತವನ್ನು ಕೃಷ್ಣಾರ್ಪಣಮಸ್ತು ಎಂದು ನೀಡಿರುವುದರಿಂದ ಪಾಳು ಬಿದ್ದ ದೇವಸ್ಥಾನ ಇಂದು ಶಿಲಾಮಯ ದೇವಸ್ಥಾನವಾಗಿ ಸಹಸ್ರ ಸಹಸ್ರ ವರ್ಷಗಳ ಕಾಲ ಅಳಿವು ಇಲ್ಲವೆಂಬಂತೆ ಬೆಳಗಿದೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ತಿಳಿಸಿದರು.
ಬಿಲ್ಲಾಡಿ ಗ್ರಾಮದ ನೈಲಾಡಿ ಕದ್ರಂಜೆ ಶ್ರೀಮಹಾಲಿಂಗೇಶ್ವರ ದೇಗುಲದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಫೆ.೨೩ರಂದು ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿ ಮಾತನಾಡಿದರು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪ್ರಥ್ವಿರಾಜ್ ಶೆಟ್ಟಿಯವರು ಕೋವಿಡ್ ಸಂದರ್ಭ ನೀಲಾವರ ಗೋಶಾಯ ಗೋವುಗಳಿಗೆ ವಿವಿಧ ಸಮಾಜ ಸೇವಾ ಸಂಘಟನೆಗಳ ಜೊತೆಗೂಡಿ ನಿರಂತರವಾಗಿ ಹುಲ್ಲನ್ನು ಒದಗಿಸಿದ್ದರು. ಗೋ ಸೇವೆಯ ಪರಿಣಾಮ ಅವರಿಗೆ ದೇಗುಲದ ಜೀರ್ಣೋದ್ದಾರದ ಮುಂದಾಳತ್ವ ವಹಿಸಿಕೊಳ್ಳುವ ಪುಣ್ಯ ಪ್ರಾಪ್ತಿಯಾಗಿದೆ. ದೇವರ ಕಾರ್ಯದ ಜನತೆಗೆ ಸಾಮಾಜಿಕ ಕೆಲಸ ಕಾರ್ಯಗಳು ಮುಂದುವರಿದು ನಾಡಿನ ಜನತೆಯ ಸೇವೆಗೈಯುವ ಭಾಗ್ಯ ಸಿಗಲಿ ಎಂದರು.

ಹೈದರಬಾದ್ನ ಹೋಟೆಲ್ ಉದ್ಯಮಿ, ಕೊಡುಗೈದಾನಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಮಾತನಾಡಿ, ದೇವರ ಕೆಲಸವನ್ನು ನಾನು ಮಾಡಿದ್ದೇನೆ ಎನ್ನುವು ದಕ್ಕಿಂತ ಭಗವಂತ ಹತ್ತು ಮನಸ್ಸುಗಳನ್ನು ಒಟ್ಟು ಸೇರಿಸಿ ಮಾಡಿಸಿಕೊಂಡಿದ್ದಾನೆ ಎನ್ನುವುದು ಮುಖ್ಯವಾಗುತ್ತದೆ. ಕಾಲ ಬಂದಾಗ ಸೌಭಾಗ್ಯ ಪ್ರಾಪ್ತಿ, ನಾಡಿಗೆ ಸುಭಿಕ್ಷೆ ಪ್ರಾಪ್ತಿಯಾಗುತ್ತದೆ. ಇದಕ್ಕೆ ಈ ಕ್ಷೇತ್ರವೇ ಸಾಕ್ಷಿ ಎಂದರು.
ಕೃಷ್ಣಪ್ರಸಾದ್ ಕ್ಯಾಶ್ಯೂ ಇಂಡಸ್ಟ್ರೀಸ್ ಮಾಲಕ ಸಂಪತ್ ಶೆಟ್ಟಿ ಮಾತನಾಡಿ ದೇವಸ್ಥಾನದ ಅಭಿವೃದ್ಧಿಯಲ್ಲಿ ಬಿಲ್ಲಾಡಿ ಪ್ರಥ್ವಿರಾಜ್ ಶೆಟ್ಟಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಎಲ್ಲಿಯೇ ಹೋದರೂ ದೇವಸ್ಥಾನದ ಅಭಿವೃದ್ಧಿ ಹಾಗೂ ಆರ್ಥಿಕ ಸಂಗ್ರಹದ ಬಗ್ಗೆಯೇ ಅವರು ಯೋಚಿಸಿದ್ದರಿಂದ ಶಿಲಾಮಯ ದೇವಾಲಯ ಮಾಡಲು ಮಾಡಲು ಸಾಧ್ಯವಾಗಿದೆ ಎಂದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕೋಟ ಶ್ರೀ ಅಮೃತೇಶ್ವರಿ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಆನಂದ್ ಸಿ. ಕುಂದರ್, ಮಂದಾರ್ತಿ ದುರ್ಗಾ ಪರಮೇಶ್ವರೀ ದೇಗುಲದ ಅನುವಂಶೀಯ ಮೊಕ್ತೇಸರ ಧನಂಜಯ ಶೆಟ್ಟಿ ಉದ್ಯಮಿ ನೇರಂಬಳ್ಳಿ ರಾಘವೇಂದ್ರ ರಾವ್, ಜೀರ್ಣೋದ್ಧಾರ ಸಮಿತಿ ಪ್ರಮುಖರಾದ ಉಮೇಶ್ ಹೆಗ್ಡೆ ಅಶೋಕ್ ಕುಮಾರ್ಶೆಟ್ಟಿ ಗಣೇಶ್ ಪ್ರಸಾದ್ ಕಾಂಚನ್, ಸಜೀತ್ ಹೆಗ್ಡೆ ಕರುಣಾಕರ ಶೆಟ್ಟಿ ನೈಲಾಡಿ, ಭರತ್ ಕುಮಾರ್ ಶೆಟ್ಟಿ ಬಿಲ್ಲಾಡಿ, ಭುಜಂಗ ಶೆಟ್ಟಿ ನೈಲಾಡಿ, ಪ್ರಿಯದರ್ಶನ್ ಶೆಟ್ಟಿ ಬಿಲ್ಲಾಡಿ, ಕಟ್ಟಡ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ ಬಿಲ್ಲಾಡಿ, ಅರ್ಚಕ ಪ್ರಭಾಕರ ಚಡಗ, ಮಹಿಳಾ ಸಮಿತಿ ಅಧ್ಯಕ್ಷೆ ಶ್ರೀಮತಿ ಗುಲಾಬಿ ಉಪಸ್ಥಿತರಿದ್ದರು.
ದೇಗುಲ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು ಈ ಸಂದರ್ಭ ಪ್ರಥ್ವಿರಾಜ್ ಶೆಟ್ಟಿಯವರನ್ನು ಪೇಜಾವರ ಶ್ರೀಗಳು ಸಮ್ಮಾನಿಸಿದರು.
ದೇಗುಲಕ್ಕೆ ವಿವಿಧ ಸೇವೆ ಸಲ್ಲಿಸಿರುವ ದಾನಿಗಳನ್ನು ಗೌರವಿಸಲಾಯಿತು. ದಾಮೋದರ್ ಶರ್ಮ ನಿರೂಪಿಸಿದರು.



