ಉಡುಪಿಮಿತ್ರ ಪತ್ರಿಕೆ ವೆಬ್ಸೈಟ್ ಸುದ್ದಿ:
ಕುಂದಾಪುರ, ಜ.೨೨ : ಕುಂದಾಪುರದ ಬಿ.ಟಿ.ಆರ್ ರಸ್ತೆಯ ಅಯೋಧ್ಯಾ ಕಂಪೌಂಡ್ನಲ್ಲಿ ಜ.೨೨ರಂದು ಶಿವಗಿರಿ ರೆಸಿಡೆನ್ಸಿ ಉದ್ಘಾಟನಾ ಸಮಾರಂಭ ನಡೆಯಿತು.
ಬಾರಕೂರು ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ವಿ. ಶ್ರೀಧರ ಆಚಾರ್ ವಡೇರಹೋಬಳಿ ಕಟ್ಟಡವನ್ನು ಉದ್ಘಾಟಿಸಿ ಮಾತನಾಡುತ್ತಾ ಇಂದು ಜಾಗ ಖರೀದಿಸಿ ಕಟ್ಟಡ ನಿರ್ಮಿಸಿ ಬಾಡಿಗೆ ನೀಡುವುದು ಕಟ್ಟಡ ನಿರ್ಮಿಸುವ ಮಾಲಕರಿಗೆ ಲಾಭದಾಯಕವಲ್ಲ. ಅದೇ ಮೊತ್ತವನ್ನು ಬ್ಯಾಂಕಿನಲ್ಲಿ ನಿರಖು ಠೇವಣಿ ಇರಿಸಿದರೆ ಅದರ ಬಡ್ಡಿ ಹಣವೇ ಲಾಭದಾಯಕ. ಆದರೆ ಕುಂದಾಪುರದಂತಹ ತಾಲೂಕು ಕೇಂದ್ರದಲ್ಲಿ ಉದ್ಯೋಗಕ್ಕೆ ವರ್ಗಾವಣೆಗೊಂಡು ೨-೩ವರ್ಷಗಳಿಗಾಗಿ ಬರುವವರ ಸೇವೆಗೆ ಬಾಡಿಗೆ ಮನೆಗಳ ಅವಶ್ಯಕತೆ ಇದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ರಥಶಿಲ್ಪಿ ರಾಜಗೋಪಾಲ ಆಚಾರ್ಯ ವಹಿಸಿ ಮಾತನಾಡುತ್ತಾ ಆರ್ಥಿಕ ಸದೃಢತೆಗೆ ಬ್ಯಾಂಕ್ನವರ ಸಹಕಾರ ಬೇಕು. ಆದರೆ ಸಾಲವನ್ನು ಪಡೆಯಲು ದಾಖಲಾತಿಗಳನ್ನು ಹೊಂದಿಸಲು ಸರಿಯಾದ ಮಾಹಿತಿ ಕೊಡುವವರೇ ಇಲ್ಲ. ಮಾಹಿತಿಯನ್ನು ಒದಗಿಸುವ ಕೆಲಸವನ್ನು ಸಿಬ್ಬಂದಿಗಳು ಮಾಡಬೇಕು. ಬ್ಯಾಂಕ್ ಸಿಬ್ಬಂದಿಗಳ ಸಹಕಾರದ ಕೊರತೆಯಿಂದಲೇ ಇಂದು ಅನೇಕರು ಸಾಲ ಪಡೆಯಲು ಹಿಂಜರಿಯುತ್ತಾರೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬಾರಕೂರು ಶ್ರೀ ಕಾಳಿಕಾಂಬಾ ದೇವಸ್ಥಾನದ ಪುರೋಹಿತರಾದ ಪ್ರಕಾಶ್ ಆಚಾರ್ಯ ಮಾತನಾಡಿ ಈ ಭೂಮಿಯಲ್ಲಿ ಜನಿಸಿದ ಪ್ರತಿಯೊಬ್ಬರು ದೇವಋಣ, ಋಷಿಋಣ ಪಿತೃಋಣವನ್ನು ತೀರಿಸಬೇಕೆಂದರು.
ತೋಟಗಾರಿಕಾ ಇಲಾಖೆಯ ನಿವೃತ್ತ ಅಧಿಕಾರಿ ಕಚೇಲಯ್ಯ, ಕೆನರಾ ಬ್ಯಾಂಕ್ ನಿವೃತ್ತ ವಿಭಾಗೀಯ ವ್ಯವಸ್ಥಾಪಕರಾದ ರತ್ನಾಕರ ಗಾಣಿಗ ಶುಭ ಹಾರೈಸಿ ಮಾತನಾಡಿದರು. ಕಂಟ್ರಾಕ್ಟರ್ ಉದಯ ಆಚಾರ್ಯ ಹುಚ್ಕೆರೆ ಅತಿಥಿಯಾಗಿ ಭಾಗವಹಿಸಿದ್ದರು.
ಪ್ರಕಾಶ್ ಆಚಾರ್ಯ ಕೊಟೇಶ್ವರ ಸ್ವಾಗತಿಸಿ ಕಟ್ಟಡದ ಕೆಲಸ ನಿರ್ವಹಿಸಿದವರನ್ನು ಅಭಿನಂದಿಸಿ ಮಾತನಾಡಿದರು. ರಮಾನಂದ ಆಚಾರ್ಯ ಕೋಟೇಶ್ವರ ವಂದಿಸಿದರು. ಜಿ.ವಿ.ವೆಂಕಟೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು

