ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ:
ಬಿದ್ಕಲ್ಕಟ್ಟೆ, ಮಾ.30: ಸಾರ್ವಜನಿಕರು ಹಾಗೂ ಕಾರ್ಯಕರ್ತರ ಸಂಘಟನೆ ಹಾಗೂ ಹೋರಾಟದಿಂದ ಯಾವುದೇ ಸಮಾರಂಭವನ್ನು ಯಶಸ್ವಿಗೊಳಿಸಲು ಸಾಧ್ಯ. ಕೂಡಾಲಿನಲ್ಲಿ ಜರಗುವ ಚತುಃಪವಿತ್ರ ನಾಗಮಂಡಲೋತ್ಸವವನ್ನು ಇದೇ ರೀತಿ ಎಲ್ಲರೂ ಸೇರಿ ಯಶಸ್ವಿಗೊಳಿಸಬೇಕೆಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಇದರ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಬೀಜಾಡಿ ಮನವಿ ಮಾಡಿದರು. ಅವರು ಯಡಾಡಿ ಮತ್ಯಾಡಿಯ ಕೂಡಾಲು ‘ಶ್ರೀ ತೇಜವನ’ ಶಂಕರ ಶೆಟ್ಟಿಯವರ ಕುಟುಂಬದವರ ನಾಗಸನ್ನಿಧಿಯಲ್ಲಿ ಎ.6 ರವಿವಾರದಂದು ನಡೆಯುವ ಚತುಃಪವಿತ್ರ ನಾಗಮಂಡಲೋತ್ಸವದ ಕುರಿತು ಮಾ.30ರಂದು ನಡೆದ ವಿವಿಧ ಸಮಿತಿ ಸದಸ್ಯರ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಚಿಟ್ಟೆಬೈಲು ಜಗನ್ನಾಥ ಶೆಟ್ಟಿಯವರು ಮಾತನಾಡಿ ಪ್ರಚಾರ ಸಮಿತಿಯ ಮೂಲಕ ಎಲ್ಲಾ ಗ್ರಾಮಗಳ ಜನರಿಗೆ ಆಹ್ವಾನ ಪತ್ರಿಕೆಗಳನ್ನು ಮುಟ್ಟಿಸಲಾಗಿದೆ. ಪ್ರಚಾರಕ್ಕೆ ಎಲ್ಲಾ ರೀತಿಯ ಪ್ರಯತ್ನ ನಡೆಸಲಾಗಿದೆ ಎಂದರು.
ಅರುಣ ಕುಮಾರ್ ಹೆಗ್ಡೆ ಮಾತನಾಡಿ ಇದುವರೆಗೆ ಎಲ್ಲರ ಸಹಕಾರದಲ್ಲಿ ಪೂರ್ವ ಸಿದ್ದತೆಗಳು ಅತ್ಯಂತ ಯಶಸ್ವಿಯಾಗಿ ನಡೆದಿದೆ. ನಾಗ ಮಂಡಲದ ದಿನವೂ ಸರ್ವರೂ ಇದೇ ರೀತಿ ಸಹಕಾರ ನೀಡಬೇಕೆಂದರು.
ಎ.4ರಂದು ಹೊರೆ ಕಾಣಿಕೆ :
ಎ.4ರಂದು ಮಧ್ಯಾಹ್ನ ಗಂಟೆ೪.೦೦ಕ್ಕೆ ಬಿದ್ಕಲ್ಕಟ್ಟೆಯಿಂದ ಹೊರೆ ಕಾಣಿಕೆ ಹೊರಡಲಿದ್ದು ಹೊರೆ ಕಾಣಿಕೆ ಸಲ್ಲಿಸುವ ಭಕ್ತಾದಿಗಳು ಬಿದ್ಕಲ್ಕಟ್ಟೆಗೆ ಆಗಮಿಸಬೇಕು. ವಿಜೃಂಭಣೆಯ ಮೆರವಣಿಗೆ ಮೂಲಕ ನಾಗಮಂಡಲ ನಡೆಯುವ ಕೂಡಾಲು ‘ಶ್ರೀ ತೇಜವನಕ್ಕೆ ಬರಲಾಗುವುದು ಎಂದು ಶಂಕರ ಶೆಟ್ಟಿ ಕೂಡಾಲು (ಬೆಂಗಳೂರು)ತಿಳಿಸಿದರು.
ಸಭೆಯಲ್ಲಿ ವಿವಿಧ ಸಮಿತಿಗಳ ಕಾರ್ಯಕರ್ತರು ನಡೆಸಿರುವ ಸಿದ್ದತೆಗಳ ಕುರಿತು ಹಾಗೂ ನಾಗ ಮಂಡಲದ ದಿನದ ಜವಾಬ್ದಾರಿಯ ಕುರಿತು ಚರ್ಚೆ ನಡೆಯಿತು. ಸಭೆಯಲ್ಲಿ ಮಹೇಶ ಶೆಣೈ ಗಾವಳಿ, ರವೀಂದ್ರನಾಥ ಕಿಣಿ ಸಾಹೇಬರಕಟ್ಟೆ, ಮನೋಹರ ಶೆಟ್ಟಿ, ಸುರೇಂದ್ರ ಶೆಟ್ಟಿ ಬಡಾಗಾವಳಿ, ಸಖರಾಮ ಸೋಮಯಾಜಿ ಮುಂಡಾಡಿ, ಪ್ರಭಾಕರ ಶೆಟ್ಟಿ ಸಿರಿಮಠ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶ್ರೀಮತಿ ಶರ್ಮಿಳ, ಉದಯಕುಮಾರ್ ಶೆಟ್ಟಿ, ಸುರೇಂದ್ರ ಶೆಟ್ಟಿ ಬೆಂಗಳೂರು, ಗಣೇಶ್ ಎಂ.ಕೆ., ತಾ.ಪಂ. ಮಾಜಿ ಸದಸ್ಯ ಶಂಕರ ಮೊಗವೀರ ಮತ್ಯಾಡಿ, ಶಿಕ್ಷಕ ಸತೀಶ್ ಶೆಟ್ಟಿ ಜಪ್ತಿ, ಶಿಕ್ಷಕ ವಿಶ್ವನಾಥ ಶೆಟ್ಟಿ, ಅಕ್ಷಯ ಹೆಗ್ಡೆ ಮೊಳಹಳ್ಳಿ, ಇನ್ನಿತರರು ಭಾಗವಹಿಸಿದ್ದರು.
