• June 29, 2025
  • Last Update June 29, 2025 10:13 am
  • Brahmavara

ಕೊಟೇಶ್ವರದಲ್ಲಿ ವಿಕಸಿತ ಭಾರತ ಸಂಕಲ್ಪ ಸಭೆ : ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ಸಾಕಷ್ಟು ಬದಲಾಗಿದೆ – ಶಾಸಕ ಕಿರಣ್ ಕುಮಾರ್ ಕೊಡ್ಗಿ

ಕೊಟೇಶ್ವರದಲ್ಲಿ ವಿಕಸಿತ ಭಾರತ ಸಂಕಲ್ಪ ಸಭೆ : ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ಸಾಕಷ್ಟು ಬದಲಾಗಿದೆ – ಶಾಸಕ ಕಿರಣ್ ಕುಮಾರ್ ಕೊಡ್ಗಿ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿ ಮಿತ್ರ ಪತ್ರಿಕೆ ಸುದ್ಧಿ:

ಕೊಟೇಶ್ವರ, ಜೂ.೧೭: ನರೇಂದ್ರ ಮೋದಿಯವರು ನೀಡಿದ ಉತ್ತಮ ಆಡಳಿತದಿಂದ ಕಳೆದ 11 ವರ್ಷಗಳಲ್ಲಿ ಭಾರತ ಸಾಕಷ್ಟು ಬದಲಾಗಿದೆ. ಜಗತ್ತಿನ ಶಕ್ತಶಾಲಿ ರಾಷ್ಟ್ರಗಳ ಸಾಲಿಗೆ ಸೇರಿದ್ದು ಆರ್ಥಿಕವಾಗಿ 4ನೇ ಸ್ಥಾನಕ್ಕೆ ಜಿಗಿದಿದೆ. ಮೋದಿಜಿಯವರ ನೇತೃತ್ವದಲ್ಲಿ ಆಗಿರುವ ಬದಲಾವಣೆಯನ್ನು ಕಾರ್ಯಕರ್ತರು ಜನರಿಗೆ ತಲುಪಿಸಬೇಕೆಂದು ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು. ಅವರು ಕೊಟೇಶ್ವರ ಶಾರದಾ ಕಲ್ಯಾಣ ಮಂಟಪದಲ್ಲಿ ನಡೆದ ವಿಕಸಿತ ಭಾರತ ಸಂಕಲ್ಪ ಸಭೆಯನ್ನುದ್ದೇಶಿಸಿ ಮಾತನಾಡಿದರು.


ಭಾರತ ಬಿಜೆಪಿ ಸರ್ಕಾರ ಇದ್ದಾಗ ಮನೆ/ಸೈಟ್‌ಗಳಿಗೆ 9&11 ಒದಗಿಸುವ ಜವಾಬ್ದಾರಿಯನ್ನು ಗ್ರಾಮ ಪಂಚಾಯತ್‌ಗೆ ನೀಡಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಅದನ್ನು ಪ್ರಾಧಿಕಾರಕ್ಕೆ ನೀಡಿದ್ದರಿಂದ ಜನರಿಗೆ ಸಿಂಗಲ್ ಲೇಔಟ್ ಪಡೆಯಲು ಒಂದು ವರ್ಷ ಸಮಯ ತಗಲುತ್ತಿದೆ. ಇದರಿಂದ ಜನರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ವಿಧಾನಸೌಧದಲ್ಲೂ ಈ ಕುರಿತು ಕರಾವಳಿ ಭಾಗದ ಶಾಸಕರುಗಳೆಲ್ಲ ಸರಕಾರದ ಗಮನ ಸೆಳೆದು ಗ್ರಾಮ ಪಂಚಾಯತ್‌ಗೆ ನೀಡಲು ಕೋರಿಕೊಂಡರೂ ಇದುವರೆಗೂ ಗ್ರಾಮ ಪಂಚಾಯತ್‌ಗೆ ಅಧಿಕಾರ ನೀಡಿಲ್ಲ ಎಂದು ಶಾಸಕರು ನುಡಿದರು.
ಸರಿಯಾದ ಸಮಯಕ್ಕೆ ಸರಿಯಾದ ಸ್ಥಾನಕ್ಕೆ ಸರಿಯಾದ ವ್ಯಕ್ತಿಯಾದ ನರೇಂದ್ರ ಮೋದಿಯವರನ್ನು ಈ ದೇಶದ ಜನರು 2014ರಲ್ಲಿ ಪೂರ್ಣ ಬಹುಮತದ ಜೊತೆ ಆರಿಸಿ ಪ್ರಧಾನಮಂತ್ರಿಯನ್ನಾಗಿ ಮಾಡಿದರು. ಅವರು ಪ್ರಧಾನ ಮಂತ್ರಿಯಾಗಿ 11 ವರ್ಷಗಳಲ್ಲಿ ದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ರೈತರ, ಮಹಿಳೆಯರ ಹಾಗೂ ಯುವಕರ ಕಷ್ಟ ಏನೆಂಬುದು ಸ್ವತಃ ಮೋದಿಯವರಿಗೆ ಅನುಭವ ಇರುವುದರಿಂದ ಎಲ್ಲರಿಗೂ ಉತ್ತಮ ಯೋಜನೆಗಳನ್ನು ನೀಡಿದ್ದಾರೆ. 2014ರ ಹೊತ್ತಿನಲ್ಲಿದ್ದ ಭಾರತ ಮತ್ತು 2025ರ ಭಾರತದ ಬೆಳವಣಿಗೆಯನ್ನು ಅವಲೋಕಿಸಿದರೆ ಸರ್ವರಿಗೂ ವ್ಯತ್ಯಾಸ ಗೊತ್ತಾಗಲಿದೆ. ವಿದೇಶಿ ನೀತಿ, ಆರ್ಥಿಕ ಕ್ಷೇತ್ರ, ಕೈಗಾರಿಕಾ ಕ್ಷೇತ್ರ, ನಮ್ಮ ಪರಂಪರೆ, ದೇಶದ ಏಕತೆ ಭದ್ರತೆಗೆ ನೀಡಿದ ಆದ್ಯತೆ, ಸೈನ್ಯದ ಶಕ್ತಿ ಹೆಚ್ಚಿಸಿದ್ದನ್ನು ಗಮನಿಸಬಹುದಾಗಿದೆ. 2014ರ ನಂತರ ವಿದೇಶದಲ್ಲಿ ಭಾರತೀಯರಿಗೆ ವಿಶೇಷ ಗೌರವ ಸಿಗುತ್ತಿದೆ. ಮೋದಿಯವರ ಒಂದೊಂದು ಯೋಜನೆಗಳನ್ನು ಗಮನಿಸುವಾಗ ಭಾರತ ಎಷ್ಟು ಬದಲಾಗಿದೆ ಎಂಬುದು ಗೊತ್ತಾಗಲಿದೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳನ್ನು ಪ್ರತಿ ನಾಗರಿಕರಿಗೂ ಕಾರ್ಯಕರ್ತರು ತಲುಪಿಸಬೇಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್ ನುಡಿದರು.


ಸಮಾರಂಭದ ಅಧ್ಯಕ್ಷತೆಯನ್ನು ಬಿಜೆಪಿ ಕುಂದಾಪುರ ಮಂಡಲದ ಅಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ ವಹಿಸಿದ್ದು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು.
ವಿಕಸಿತ ಭಾರತ ಸಂಕಲ್ಪ ಕಾರ್ಯಕ್ರಮದ ಜಿಲ್ಲಾ ಸಂಚಾಲಕ ರಾಜೇಶ್ ಕಾವೇರಿ ಮಾತನಾಡಿ ನರೇಂದ್ರ ಮೋದಿಜಿ ಕೊಟ್ಟ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು. ಜೂನ್21ರಂದು ವಿಶ್ವ ಯೋಗ ಶಿಬಿರಗಳನ್ನು ಆಯೋಜಿಸಿ, ಯೋಗಾಸನ, ಪ್ರಾಣಾಯಾಮ ಮತ್ತು ಧ್ಯಾನದ ತರಬೇತಿ ನೀಡಬೇಕು. ಪರಿಸರ ದಿನದ ಅಂಗವಾಗಿ ತಾಯಿಯ ಹೆಸರಲ್ಲಿ ಗಿಡಗಳನ್ನು ನೆಡಬೇಕು ಎಂದರು. ವೇದಿಕೆಯಲ್ಲಿ ಜಿಲ್ಲಾ ಬಿಜೆಪಿ ಯುವ ಘಟಕದ ಅಧ್ಯಕ್ಷ ಪ್ರಥ್ವಿರಾಜ್ ಶೆಟ್ಟಿ, ಕುಂದಾಪುರ ಮಂಡಲದ ಅಧ್ಯಕ್ಷ ನಿಕಟಪೂರ್ವ ಶಂಕರ ಅಂಕದಕಟ್ಟೆ, ಉಡುಪಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಸದಾನಂದ ಬಳ್ಳೂರು, ಮಂಡಲ ಪ್ರಧಾನ ಕಾರ್ಯದರ್ಶಿ ಸುಧೀರ್ ಕೆ.ಎಸ್., ಮಂಡಲ ಕಾರ್ಯದರ್ಶಿ ರಾಜೇಶ್ ಶೆಟ್ಟಿ ಶಿರೂರು, ಮಂಡಲದ ಉಪಾಧ್ಯಕ್ಷೆ ರೂಪ ಪೈ ಕೊಟೇಶ್ವರ ಉಪಸ್ಥಿತರಿದ್ದರು.


ಕೋವಿಡ್ ಸಂದರ್ಭ ಉಚಿತ ಸೇವೆ ನೀಡಿರುವ ಅಟೋ ಡ್ರೈವರ್ ಸತೀಶ್ ಪ್ರಭು ಅವರನ್ನು ಸನ್ಮಾನಿಸಲಾಯಿತು. ವಿಕಸಿತ ಭಾರತ ಕಂದಾಪುರದ ಸಂಚಾಲಕ ಸುನಿಲ್ ಶೆಟ್ಟಿ ಪ್ರತಿಜ್ಞಾ ವಿಧಿ ಬೋಧಿಸಿದರು. ಮಂಡಲ ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ ವಕ್ವಾಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

administrator

Related Articles

Leave a Reply

Your email address will not be published. Required fields are marked *