ಉಡುಪಿ ಮಿತ್ರ ಪತ್ರಿಕೆ ಸುದ್ದಿ :
ಬ್ರಹ್ಮಾವರ ಫೆ.೧೯: ಕ್ರಿಕೆಟ್ ಆಟದ ವೇಳೆ ಉಂಟಾದ ವಾಗ್ವಾದ ಹಲ್ಲೆಗೆ ತಿರುಗಿದ ಘಟನೆ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ದಿನಾಂಕ 16.02.2026ರಂದು ಸಂಜೆ ಹೊಸೂರು ಗ್ರಾಮದ ಕರ್ಜೆ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಟವಾಡಿ ತೆರಳುತ್ತಿದ್ದ ಜೀವನ್ ಶೆಟ್ಟಿ (36) ಹುಲಿಕಟ್, ಆಲಡ್ಕ, ಹಲುವಳ್ಳಿ ಅವರನ್ನು ಆರೋಪಿತ ರಮೇಶ್ ಶೆಟ್ಟಿ ತಡೆದು ನಿಲ್ಲಿಸಿದ್ದಾನೆ ಎನ್ನಲಾಗಿದೆ.

ಆಟದ ವೇಳೆ ತೊಂದರೆ ನೀಡುತ್ತಿದ್ದೀಯೆಂದು ಹೇಳಿ ರಮೇಶ್ ಶೆಟ್ಟಿ ಏಕಾಏಕಿ ಕೈಯಲ್ಲಿದ್ದ ಕ್ರಿಕೆಟ್ ಬ್ಯಾಟ್ನಿಂದ ಜೀವನ್ ಶೆಟ್ಟಿಯ ಎಡ ಭುಜಕ್ಕೆ ಬಲವಾಗಿ ಹೊಡೆದಿದ್ದಾನೆ. ಹೊಡೆತದಿಂದ ಅವರು ರಸ್ತೆಯಲ್ಲಿ ಬಿದ್ದಾಗ, ಮತ್ತೆ ಬೆನ್ನಿಗೆ ಬ್ಯಾಟ್ನಿಂದ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದಲ್ಲದೆ, “ಕೈ ತುಂಡು ಮಾಡುತ್ತೇನೆ ಎಂದು ಬೆದರಿಕೆ ಹಾಕಿ ಮತ್ತೊಮ್ಮೆ ಬ್ಯಾಟ್ ಎತ್ತಿ ಹೊಡೆಯಲು ಮುಂದಾದ ವೇಳೆ, ಜೀವನ್ ಶೆಟ್ಟಿ ಕೂಗಿಕೊಂಡಾಗ ರಮೇಶ್ ಶೆಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮುಂದೆಯಾದರೂ ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುವುದಾಗಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಕಲಂ ೧೧೮(೧), ೧೨೬(೨), ೩೫೨, ೩೫೧(೨)(೩) ಅಡಿ ತನಿಖೆ ಕೈಗೊಂಡಿದ್ದಾರೆ.



