ಅಮಾಸೆಬೈಲು ಸರಕಾರಿ ಹಿ.ಪ್ರಾ.ಶಾಲೆಯಲ್ಲಿ
ಎಲ್ಕೆಜಿ, ಯುಕೆಜಿ ಉದ್ಘಾಟನೆ
ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ:
ಅಮಾಸೆಬೈಲು, ಜೂ.೧೦: ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಿ ಪೋಷಕರ ವಿಶ್ವಾಸ ಗಳಿಸಲು ಸಾಧ್ಯವಾದರೆ ಸರ್ಕಾರಿ ಶಾಲೆಗಳಲ್ಲೂ ಮಕ್ಕಳ ಸಂಖ್ಯೆ ಹೆಚ್ಚಲಿದೆ ಎಂಬುದಕ್ಕೆ ಅಮಾಸೆಬೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಾಕ್ಷಿಯಾಗಿದೆ. ಸರಕಾರಿ ಶಾಲೆಗಳ ಶಿಕ್ಷಕರು ತಮ್ಮ ತಮ್ಮ ಶಾಲೆಗಳ ವಿದ್ಯಾರ್ಥಿಗಳ ಭವಿಷ್ಯ ಗಮನದಲ್ಲಿಟ್ಟುಕೊಂಡು ಆಲಸ್ಯ ತೋರದೆ ಉತ್ತಮ ಶಿಕ್ಷಣ ನೀಡಬೇಕು ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ನುಡಿದರು. ಅವರು ಅಮಾಸೆಬೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್ಕೆಜಿ, ಯುಕೆಜಿ ತರಗತಿ ಉದ್ಘಾಟಿಸಿ ಮಾತನಾಡಿದರು.
ಸರಕಾರಿ ಶಾಲೆಗಳಲ್ಲೂ ಖಾಸಗಿ ಶಾಲೆಗಳಿಗೆ ಸರಿಯಾಗಿ ಎಲ್ಕೆಜಿ ಯುಕೆಜಿ ಆರಂಭಿಸಿದಲ್ಲಿ ಮಕ್ಕಳ ಸಂಖ್ಯೆ ಹೆಚ್ಚಲಿದೆ. ಅಮಾಸೆಬೈಲು ಶಾಲೆಯಲ್ಲಿ ಇಂದು ಎಲ್ಕೆಜಿ ಯುಕೆಜಿ ಆರಂಭಿಸಲಾಗಿದೆ.ಈ ಶಾಲೆಯ ಅಭಿವೃದ್ಧಿಯಲ್ಲಿ ಗೀತಾ ಎಚ್.ಎಸ್.ಎನ್.ಫೌಂಡೇಶನ್ ಅಧ್ಯಕ್ಷ ಶಂಕರ ಐತಾಳರು ಹಾಗೂ ಟ್ರಸ್ಟಿಗಳು ಮಹತ್ತರ ಪಾತ್ರ ವಹಿಸಿದ್ದಾರೆ. ಈ ಶಾಲೆಯಲ್ಲಿ ಶಿಕ್ಷಕರು ಉತ್ತಮ ಶಿಕ್ಷಣ ನೀಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಈ ಶಾಲೆಯನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ಗೆ ಪ್ರಪೋಸಲ್ ಕಳಿಸಲಾಗಿದೆ ಎಂದು ಶಾಸಕರು ನುಡಿದರು.

ಉಡುಪಿ ಜಿಲ್ಲಾ ವಿದ್ಯಾಂಗ ಉಪ ನಿರ್ದೇಶಕ (ಪ್ರಭಾರ) ಡಾ.ಅಶೋಕ್ ಕಾಮತ್ ಮಾತನಾಡಿ ಮಕ್ಕಳೊಂದಿಗೆ ಪೋಷಕರು ಹಾಗೂ ಶಿಕ್ಷಕರು ಹೆಚ್ಚೆಚ್ಚು ಮಾತನಾಡಬೇಕು. ಶಾಲೆಯಲ್ಲಿ ಏನೇನಾಯಿತು ಎಂಬುದನ್ನು ಮನೆಯಲ್ಲಿ ಮಕ್ಕಳೊಂದಿಗೆ ಚರ್ಚಿಸಬೇಕು.ಮಕ್ಕಳ ಜೊತೆ ಸ್ಪಂಧನೆ ಇಟ್ಟುಕೊಂಡಾಗ ಮಕ್ಕಳಿಗೆ ನಮ್ಮ ಪೋಷಕರಿಗೆ ನಮ್ಮ ಬಗ್ಗೆ ಕಾಳಜಿ ಇದೆ ಎಂದು ಅರ್ಥೈಸಿಕೊಳ್ಳುತ್ತಾರೆ. ಶಿಕ್ಷಕರು ತುಂಬಾ ತನ್ಮಯತೆಯಿಂದ ಮಕ್ಕಳಿಗೆ ಕಲಿಸಬೇಕು. ಸ್ಥಳಿಯ ಸಂಪನ್ಮೂಲಗಳನ್ನು ಬಳಸಿಕೊಳ್ಳಬೇಕೆಂಬುದನ್ನು ಎನ್ಇಪಿಯಲ್ಲಿ ಹೇಳಲಾಗಿದೆ. ಮಗು ಭಾವನಾತ್ಮಕವಾಗಿ, ಪರಿಸರದೊಂದಿಗೆ ಬೆಳೆಯಲು ಶಿಕ್ಷಕರು ಹಾಗೂ ಪೋಷಕರು ಅವಕಾಶ ಕಲ್ಪಿಸಿಕೊಡಬೇಕೆಂದು ನುಡಿದರು.
ಗೀತಾ ಎಚ್.ಎಸ್.ಎನ್. ಫೌಂಡೇಶನ್ ಅಧ್ಯಕ್ಷ ಶಂಕರ ಐತಾಳ್ ಮಾತನಾಡಿ ಸರಕಾರಿ ಶಾಲೆಗಳಲ್ಲಿ ಮುಖ್ಯ ಶಿಕ್ಷಕರು, ಶಿಕ್ಷಕರು, ಎಸ್.ಡಿ.ಎಂ.ಸಿಯವರ ಮೇಲೆ ಸಾಕಷ್ಟು ಜವಾಬ್ದಾರಿಗಳಿವೆ ಇದನ್ನು ಅರಿತುಕೊಂಡು ಶಾಲೆಗಳ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ರಟ್ಟಾಡಿ ಮಾತನಾಡಿ ಶಿಕ್ಷಕರು ಹಾಗೂ ಪೋಷಕರು ಮಕ್ಕಳು ಮೊಬೈಲ್ ವ್ಯಾಮೋಹದಿಂದ ಹೊರಬರುವಂತೆ ನೋಡಿಕೊಳ್ಳಬೇಕು. ಸಂಸ್ಕೃತಿ ಸಂಸ್ಕಾರಗಳನ್ನು ಮಕ್ಕಳಿಗೆ ನೀಡಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಮಲ್ಲಿಕಾ ಕುಲಾಲ್, , ಫೌಂಡೇಶನ್ ಕಾರ್ಯದರ್ಶಿ ರಾಮ ಅಡಿಗ, ಟ್ರಸ್ಟಿ ಮುಸ್ತಾಕ್ ಅಹಮ್ಮದ್ ಬೆಳ್ವೆ, ಕೋಶಾಧಿಕಾರಿ ಶಿವರಾಮ ಅಡಿಗ, ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಅಮಾಸೆಬೈಲು ವಲಯದ ವಲಯ ಅರಣ್ಯ ಅಧಿಕಾರಿ ರೂಪೇಶ್, ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಸುಮತಿ, ಶಿಕ್ಷಣ ಸಂಯೋಜಕ ಶೇಖರ್, ಅಮಾಸೆಬೈಲು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸದಾನಂದ ಶೆಟ್ಟಿ, ಎಸ್ಡಿಎಂಸಿ ಅಧ್ಯಕ್ಷ ಸುಕೇಶ್ ಭಂಡಾರಿ, ಮುಖ್ಯ ಶಿಕ್ಷಕ ಶಶಿಧರ ಶೆಟ್ಟಿ, ನಿವೃತ್ತ ಶಿಕ್ಷಕ ಶ್ರೀಧರ ಶೆಟ್ಟಿ ಭಾಗವಹಿಸಿದ್ದರು.

ಗೀತಾಎಚ್.ಎಸ್.ಎನ್ ಫೌಂಡೇಶನ್ ವತಿಯಿಂದ ವಿದ್ಯಾರ್ಥಿ ವೇತನ, ಅತಿಥಿ ಶಿಕ್ಷಕರಿಗೆ ಗೌರವಧನ, ಮಕ್ಕಳಿಗೆ ನೋಟ್ ಪುಸ್ತಕ, ಶುದ್ಧ ಕುಡಿಯುವ ನೀರಿನ ಘಟಕ, ಮಕ್ಕಳಿಗೆ ಊಟದ ತಟ್ಟೆಗಳನ್ನು, ಸೋಲಾರ್ ಕೊಡುಗೆಯನ್ನು, ವೈದ್ಯಕೀಯ ವೆಚ್ಚವನ್ನು, ಮನೆ ದುರಸ್ತಿಗೆ ಆರ್ಥಿಕ ಸಹಕಾರವನ್ನು ಹಾಗೂ ಲ್ಯಾಪ್ ಟಾಪ್ ಕೊಡುಗೆಗಳನ್ನು ಶಂಕರ ಐತಾಳರು ಹಾಗೂ ಟ್ರಸ್ಟಿಗಳು ಹಸ್ತಾಂತರಿಸಿದರು.

ಮುಖ್ಯ ಶಿಕ್ಷಕ ಶಶಿಧರ ಶೆಟ್ಟಿ ಸ್ವಾಗತಿಸಿದರು. ಶಿಕ್ಷಕಿ ಶ್ರೀಮತಿ ಸವಿತಾ ವಂದಿಸಿದರು. ಶಿಕ್ಷಕಿ ಶ್ರೀಮತಿ ಗೀತಾ ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭ ಅರಣ್ಯ ಇಲಾಖೆಯ ಕುದುರೆಮುಖ ವನ್ಯಜೀವಿ ವಿಭಾಗ ಕಾರ್ಕಳ, ಸೋಮೇಶ್ವರ ಅಭಯಾರಣ್ಯ ಆಗುಂಬೆ ವನ್ಯ ಜೀವಿ ವಲಯದ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡಗಳನ್ನು ನೆಡಲಾಯಿತು.

