ಉಡುಪಿ ಮಿತ್ರ ಸುದ್ದಿ :
ಚಿಕ್ಕಮಗಳೂರು, ಜ.2: ಬಿ.ಎಸ್.ಎನ್.ಎಲ್ ಟವರ್ಗಳು 2f ಇಂದ ೪ಜಿ ಅಳವಡಿಕೆ ಮಾಡಿದ ಹಿನ್ನೆಲೆಯಲ್ಲಿ ನೆಟ್ವರ್ಕ್ ನ ಸಮಸ್ಯೆ ಎದುರಾಗುತ್ತಿದ್ದು ಜಿಲ್ಲೆಗೆ ಹೆಚ್ಚುವರಿ ಟವರ್ಗಳ ಅಗತ್ಯವಿದೆ. ಕೇಂದ್ರ ಸರ್ಕಾರದ ದೂರಸಂಪರ್ಕ ಇಲಾಖೆಯ ಸಚಿವ ಜ್ಯೋತಿರಾಜ್ ಸಿಂಧ್ಯಾರವರ ಸಹಕಾರದೊಂದಿಗೆ ಚಿಕ್ಕಮಗಳೂರು ಜಿಲ್ಲೆಗೆ 103 ಟವರ್ಗಳು ಹೊಸತಾಗಿ ಮಂಜೂರಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಚಿಕ್ಕಮಗಳೂರು ಜಿಲ್ಲೆಯ ಬಿ.ಎಸ್.ಎನ್.ಎಲ್ ಮುಖ್ಯ ಕಚೇರಿಯಲ್ಲಿ ಬಿ.ಎಸ್.ಎನ್.ಎಲ್. ಪ್ರಗತಿ ಪರಿಶೀಲನೆ ಮಾಡಿ ಮಾತನಾಡುತ್ತಿದ್ದರು. ಸ್ಪರ್ಧಾತ್ಮಕ ಯುಗದಲ್ಲಿ ಇತರ ಖಾಸಗಿ ಮೊಬೈಲ್ ಸಂಸ್ಥೆಗಳಿಗಿಂತ ಉತ್ತಮ ಗುಣಮಟ್ಟದ ಸೇವೆ ನೀಡಿದಾಗ ಮಾತ್ರ ಬಿಎಸ್ಎನ್ಎಲ್ ತನ್ನ ಹಿಂದಿನ ಗೌರವವನ್ನು ಉಳಿಸಿಕೊಳ್ಳುತ್ತದೆ. ಆದ್ದರಿಂದ ಎಲ್ಲಾ ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಶ್ರಮವಹಿಸಿ ದುಡಿದು ನೆಟ್ವರ್ಕ್ ಸಮಸ್ಯೆ ಬಗೆಹರಿಸಬೇಕೆಂದು ಸಂಸದ ಕೋಟ ಸಲಹೆ ಇತ್ತರು. ಸಭೆಯಲ್ಲಿ ಶಿವಮೊಗ್ಗ ವಿಭಾಗದ ಜಿ.ಎಮ್. ವಿನಯ್ ಕುಮಾರ್ ಸಿನ್ಹಾ, ಡಿ.ಜಿ.ಎಮ್.ಬಾಲಾಜಿ, ಎ.ಜಿ.ಎಮ್.ಗಳಾದ ಗೋಪಾಲ ಕೃಷ್ಣಾ ಭಟ್ ಮತ್ತು ಶ್ರೀಮತಿ ಆಶಿಯಾ ಹಾಗೂ ಬಿ.ಎಸ್.ಎನ್.ಎಲ್. ನಾಮನಿರ್ದೇಶನ ಸದಸ್ಯರಾದ ಸೋಮಶೇಖರ್, ಶ್ರೀಮತಿ ಆಶಾ ಮೂಡಿಗೆರೆ, ಪುಟ್ಟಸ್ವಾಮಿ ಹಿರೇಮಂಗಳೂರು, ಚಿಮನ, ವಿನೋದ್ ಬೊಗಸೆ ಮತ್ತು ಶಶಿ ಆಲ್ದೂರು ಹಾಗೂ ದೀಪಕ್ ದೊಡ್ಡಯ್ಯ ಮುಂತಾದವರು ಹಾಜರಿದ್ದರು.



