ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ:
ಚಿತ್ತೂರು, ಜೂ.೧೯: ಯಾವುದೇ ಸರಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಬೇಕಾದಲ್ಲಿ ಪೋಷಕರು, ಎಸ್ಡಿಎಂಸಿ ಸದಸ್ಯರು ಹಾಗೂ ಶಿಕ್ಷಕರು ಒಂದೇ ಉದ್ದೇಶದಲ್ಲಿ ಮುಂದುವರಿಯಬೇಕು. ಪಾಠ ಮಾಡುವ ಶಿಕ್ಷಕರ ಒಡಲಲ್ಲಿ ವಿದ್ಯಾರ್ಥಿಗಳ ಬಗ್ಗೆ ಹಾಗೂ ವಿದ್ಯಾರ್ಥಿಗಳ ಭವಿಷ್ಯದ ಕುರಿತು ಒಳ್ಳೆಯ ಅಂಶ ಇದ್ದಲ್ಲಿ ವಿದ್ಯಾರ್ಥಿಗಳ ಭವಿ಼ಷ್ಯ ಒಳ್ಳೆಯದಾಗಲಿದೆ ಎಂದು ಬೈಂದೂರು ಶಾಸಕ ಗುರುರಾಜ್ ಶೆಟ್ಟಿಯವರು ನುಡಿದರು.

ಅವರು ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ತೂರು ಇಲ್ಲಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರ ನೇತೃತ್ವದ ಎಂ.ಎಸ್.ಮಂಜ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಮವಸ್ತ್ರ, ಪಠ್ಯ ಪರಿಕರ ವಿತರಣಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಎಂ.ಎಸ್.ಮಂಜ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ಮಾತನಾಡಿ ಶಾಲೆಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ದಾರಿದೀಪ. ಮನೆಯಲ್ಲಿ ಪೋಷಕರು ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಡಬೇಕು. ಮಕ್ಕಳಿಗೆ ಮೊಬೈಲ್ ಕೊಡುವುದನ್ನು ನಿಲ್ಲಿಸಬೇಕು. ತಾಯಂದಿರು ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಧಾರವಾಹಿ ನೋಡುತ್ತಾ ಕುಳಿತುಕೊಳ್ಳುವುದಕ್ಕಿಂತ ಟಿವಿ ಆಫ್ ಮಾಡಿ ಮಕ್ಕಳ ಜೊತೆಯಲ್ಲಿ ಕುಳಿತುಕೊಂಡು ಅವರ ಓದಿನ ಕಡೆ ಗಮನ ಹರಿಸಬೇಕು. ಸರಕಾರಿ ಶಾಲೆಗಳ ಬಗ್ಗೆ ಊರವರು ಹಾಗೂ ಎಲ್ಲಾ ಪೋಷಕರು ಗಮನ ಹರಿಸಿಬೇಕು ಎಂದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಡಾ.ರಾಜೇಶ್ ಬಾಯರಿ ಅಧ್ಯಕ್ಷತೆ ವಹಿಸಿದ್ದು ಅವರು ಮಾತನಾಡಿ ಮಕ್ಕಳ ಆರೋಗ್ಯದ ಬಗ್ಗೆ ಪೋಷಕರು ಸದಾ ಗಮನ ಹರಿಸಬೇಕು. ಎಣ್ಣೆಯ ತಿಂಡಿಗಳನ್ನು, ಬಿಸ್ಕೆಟ್ಸ್ಗಳನ್ನು ಕೊಡುವುದು ಸರಿಯಲ್ಲ. ಮನೆಯಲ್ಲಿ ಪೌಷ್ಟಿಕಾಂಶದ ಆಹಾರ ಪದಾರ್ಥಗಳನ್ನು ಕೊಡಬೇಕು. ಒಳ್ಳೆಯ ಆಹಾರಗಳು ಮಕ್ಕಳ ಜ್ಞಾನ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ನುಡಿದರು.
ಮುಖ್ಯ ಅತಿಥಿ ಡಾ.ಅತುಲ್ ಕುಮಾರ್ ಶೆಟ್ಟಿಯವರು ಮಾತನಾಡಿ ನಮ್ಮ ಮಕ್ಕಳು ಉತ್ತಮ ಪ್ರಜೆಗಳಾಗಿ ಬೆಳೆಯಲು ಶಾಲೆಯಲ್ಲಿ ಉತ್ತಮ ಶಿಕ್ಷಣ ದೊರಕುವಂತಾಗಬೇಕು. ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರ ನೇತೃತ್ವದಲ್ಲಿ ಚಿತ್ತೂರು ಶಾಲೆಯಲ್ಲಿ ಉತ್ತಮ ಶಿಕ್ಷಣ ನೀಡಲು ಇಲ್ಲಿನ ಶಿಕ್ಷಕ ವೃಂದ ಪ್ರಯತ್ನಿಸುತ್ತಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್ ಮಾತನಾಡಿ ಚಿತ್ತೂರು ಶಾಲೆ ಬೈಂದೂರು ವಲಯದಲ್ಲಿ ಮಾದರಿ ಶಾಲೆಯಾಗಿದೆ ಎಂದು ನುಡಿದರು.
ಮುಖ್ಯ ಅತಿಥಿಗಳಾಗಿ ವನದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ವಂಡಬಳ್ಳಿ ಜಯರಾಮ ಶೆಟ್ಟಿ, ವಂಡ್ಸೆ ಸಿ ಎ ಬ್ಯಾಂಕ್ ನಿವೃತ್ತ ಕಾರ್ಯನಿರ್ವಹಣಾಧಿಕಾರಿ ಸೀತಾರಾಮ ಪೂಜಾರಿ, ವಂಡ್ಸೆ ವಲಯದ ಸಮೂಹ ಸಂಪನ್ಮೂಲ ವ್ಯಕ್ತಿ ನಾಗರಾಜ ಶೆಟ್ಟಿ, ಚಿತ್ತೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಶ್ರೀಮತಿ ಜಯಂತಿ ಪೂಜಾರಿ , ಚಿತ್ತೂರು ಪ್ರೌಢಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಶ್ರೀಮತಿ ಗೌರಿ ಅಡಿಗ, ಎಸ್.ಡಿ.ಎಂಸಿ.ಉಪಾಧ್ಯಕ್ಷೆ ಶ್ರೀಮತಿ ಲತಾ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿವೃತ್ತ ಶಿಕ್ಷಕ ಗೋವಿಂದ ಶೆಟ್ಟಿ ಹಾಗೂ ಅವರ ಪತ್ನಿ ಶ್ರೀಮತಿ ಸವಿತಾ ದಂಪತಿಯನ್ನು ಸನ್ಮಾನಿಸಲಾಯಿತು. ನಿವೃತ್ತ ಶಿಕ್ಷಕರ ಸೇವೆಯ ಕುರಿತು ಶಿಕ್ಷಕಿ ಶ್ರೀಮತಿ ಯಶೋಧ ಮಾತನಾಡಿದರು.
ಶಿಕ್ಷಕಿ ಶ್ರೀಮತಿ ಗೀತಾ ಸನ್ಮಾನ ಪತ್ರ ವಾಚಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕಿ ಶ್ರೀಮತಿ ದೀಪಾ ವಂದಿಸಿದರು. ಶಿಕ್ಷಕ ಗುರುರಾಜ್ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.
