• June 29, 2025
  • Last Update June 29, 2025 10:13 am
  • Brahmavara

ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದಲ್ಲಿ ‘ಆಸರೆ’ ಸಹಾಯದ ಸ್ಪಂದನ ಕಾರ್ಯಕ್ರಮ

ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದಲ್ಲಿ ‘ಆಸರೆ’ ಸಹಾಯದ ಸ್ಪಂದನ ಕಾರ್ಯಕ್ರಮ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ

ಚಿತ್ತೂರು, ಎ.೨೯: ತಮ್ಮ ಮಕ್ಕಳು ಸಾಧನೆ ಮಾಡಿದಾಗ ಅದನ್ನು ಕಂಡ ತಂದೆ ತಾಯಿ ನಿಜವಾಗಿಯೂ ಸಂತೋಷಪಡುತ್ತಾರೆ. ಡಾ. ರಾಜೇಶ್ ಬಾಯರಿಯವರು ತಂದೆ ತಾಯಿ ಹೆಮ್ಮೆ ಪಡೆಯುವಂತಹ ಕೆಲಸ ಮಾಡಿದ್ದಾರೆ. ಹಳ್ಳಿ ಊರಲ್ಲಿ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯ ಸ್ಥಾಪಿಸಿ ಅದನ್ನು ಹೆಮ್ಮರವಾಗಿ ಬೆಳೆಯುವಂತೆ ಮಾಡಿದ್ದಾರೆ. ಇಂದು ದೇಶವಿದೇಶಗಳಿಂದ ರೋಗಿಗಳು ಚಿಕಿತ್ಸೆ ಪಡೆಯಲು ಇಲ್ಲಿಗೆ ಆಗಮಿಸುತ್ತಿದ್ದಾg. ಆಯುರ್ವೇದದ ಉತ್ತಮ ಚಿಕಿತ್ಸೆ ದೊರಕುತ್ತಿರುವುದರಿಂದಲೇ ಇಲ್ಲಿಗೆ ಸಾಕಷ್ಟು ರೋಗಿಗಳು ಆಗಮಿಸುತ್ತಿದ್ದಾರೆ ಎಂದು ಹೈದರಬಾದ್‌ನ ಹೋಟೆಲ್ ಉದ್ಯಮಿ, ಕೊಡುಗೈದಾನಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ನುಡಿದರು.
ಅವರು ಆಲೂರು ಕಳಿ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದಲ್ಲಿ ಎ.೨೯ರಂದು ಸಂಜೆ ನಡೆದ ‘ಚಿತ್ರಕೂಟ ಆಸರೆ ಸಹಾಯದ ಸ್ಪಂದನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಡಾ. ರಾಜೇಶ್ ಬಾಯರಿಯವರು ಕೇವಲ ಚಿಕಿತ್ಸಾಲಯದ ಕೆಲಸ ಮಾತ್ರ ಮಾಡದೆ ಸಮಾಜಮುಖಿಯಾಗಿಯೂ ತೊಡಗಿಸಿಕೊಂಡಿದ್ದಾರೆ. ಶಿಕ್ಷಣ ಹಾಗೂ ಅನಾರೋಗ್ಯಕ್ಕೊಳಗಾದವರ ಚಿಕಿತ್ಸಾವೆಚ್ಚಕ್ಕೆ ಅವರು ಸಹಾಯಧನ ವಿತರಿಸಿ ಉತ್ತಮ ಕೆಲಸ ಮಾಡಿದ್ದಾರೆ ಎಂದರು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ ಗೋಪಾಲ್ ಪೂಜಾರಿ ಭಾಗವಹಿಸಿದ್ದು ಅವರು ಮಾತನಾಡಿ ಶಿಕ್ಷಣ ಹಾಗೂ ಆರೋಗ್ಯಕ್ಕೆ ಸಹಾಯ ಮಾಡುವುದು ನಿಜವಾಗಿ ಪುಣ್ಯದ ಕೆಲಸ. ಡಾ.ರಾಜೇಶ್ ಬಾಯರಿಯವರು ಅತ್ಯಂತ ಕಷ್ಟದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳನ್ನು ಆರಿಸಿ ಹಾಗೂ ಅನಾರೋಗ್ಯಕ್ಕೆ ಒಳಗಾದವರ ಚಿಕಿತ್ಸೆಗೆ ಸಹಾಯ ಮಾಡುವ ಉತ್ತಮ ಕೆಲಸ ಮಾಡಿದ್ದಾರೆ ಎಂದು ನುಡಿದರು.
ವಿಶ್ವ ಹಿಂದೂ ಪರಿಷತ್‌ನ ಕರ್ನಾಟಕ ದಕ್ಷಿಣ ಪ್ರಾಂತ ಮಂದಿರ ಅರ್ಚಕ ಪುರೋಹಿತ ಸಂಪರ್ಕ ಪ್ರಮುಖ ಪ್ರೇಮಾನಂದ ಶೆಟ್ಟಿ ಮಾತನಾಡಿ ಸಂಸ್ಕಾರ ನೀಡದ ಯಾವುದೇ ಶಿಕ್ಷಣ ಶಿಕ್ಷಣ ಅನ್ನಿಸಿಕೊಳ್ಳಲ್ಲ. ಡಾ. ಬಾಯರಿ ದಂಪತಿ ಭಾರತೀಯ ವೈದ್ಯ ಪದ್ದತಿ ಮೂಲಕ ಚಿಕಿತ್ಸಾಲಯವನ್ನು ಬೆಳೆಸಿ ೫೦ಕ್ಕೂ ಹೆಚ್ಚಿನವರಿಗೆ ಉದ್ಯೋಗ ನೀಡುವ ಕೆಲಸ ಮಾಡಿದ್ದಾರೆ. ಅದರೊಂದಿಗೆ ಒಂದಷ್ಟು ಸಮಾಜಮುಖ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಪತ್ರಕರ್ತ ಕೆ.ಸಿ.ರಾಜೇಶ್ ಹಾಗೂ ಆಲೂರು ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ದೇವಾಡಿಗ ಸಮಾರಂಭ ಉದ್ದೇಶಿಸಿ ಮಾತನಾಡಿದರು.ವೇದಿಕೆಯಲ್ಲಿ ಮಹಾಬಲ ಬಾಯರಿ, ಶ್ರೀಮತಿ ಕಲಾವತಿ ಮಹಾಬಲ ಬಾಯರಿ, ಡಾ. ರಾಜೇಶ್ ಬಾಯರಿ, ಡಾ.ಅನುಲೇಖಾ ರಾಜೇಶ್ ಬಾಯರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಶಿಕ್ಷಣ ಹಾಗೂ ಆರೋಗ್ಯಕ್ಕೆ ಸಂಬಂಧಿಸಿ ಡಾ.ರಾಜೇಶ್ ಬಾಯರಿ ಸಹಕಾರವನ್ನು ನೀಡಿದರು. ಇದೇ ಸಂದರ್ಭ ಹರೀಶ್ ಅವರನ್ನು ಗೌರವಿಸಲಾಯಿತು. ಚಿಕಿತ್ಸಾಲಯದ ಸಿಬ್ಬಂದಿ ಸಂಗೀತ ಸಹಾಯವನ್ನು ಪಡೆದವರ ಪಟ್ಟಿಯನ್ನು ವಾಚಿಸಿದರು ಡಾ. ರಾಜೇಶ್ ಬಾಯರಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು ಶ್ರೀಮತಿ ಅನುಲೇಖಾ ಬಾಯರಿ ವಂದಿಸಿದ್ದು ಪತ್ರಕರ್ತ ಚಿತ್ತೂರು ಪ್ರಭಾಕರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

ಪ್ರತೀ ವರ್ಷ ‘ಆಸರೆ ಸಹಾಯದ ಸ್ಪಂದನ’ ಕಾರ್ಯಕ್ರಮ-ಡಾ.ರಾಜೇಶ್ ಬಾಯರಿ

ಕಿಡ್ನಿ, ಕ್ಯಾನ್ಸರ್ ಸೇರಿದಂತೆ ದೀರ್ಘಕಾಲಿಕ ಆರೋಗ್ಯ ಸಮಸ್ಯೆ ಎದುರಿಸುತ್ತಾ ಚಿಕಿತ್ಸಾ ವೆಚ್ಚಕ್ಕೆ ಕಷ್ಟಪಡುವವರು ಅನೇಕರಿದ್ದಾರೆ. ಅತ್ಯಂತ ಕಷ್ಟದಲ್ಲಿರುವವರನ್ನು ಗುರುತಿಸಿ ‘ಆಸರೆ’ ಸಹಕಾರಕ್ಕೆ ಆಯ್ಕೆ ಮಾಡಲಾಗಿದೆ. ಗ್ರಾಮೀಣ ಭಾಗದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿದ್ದು ಆರ್ಥಿಕ ಅಡಚಣೆಯಿಂದ ಈ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇಂತಹ ವಿದ್ಯಾರ್ಥಿಗಳಿಗೆ ಶಕ್ತಿಯುಳ್ಳವರು ಸಹಕಾರ ನೀಡಬೇಕಾಗಿದೆ. ನಿಜವಾಗಿ ಆರ್ಥಿಕ ತೊಂದರೆಯಲ್ಲಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಸಹಕಾರ ನೀಡುವ ಉದ್ದೇಶದಲ್ಲಿ ಈ ವರ್ಷದಿಂದ ಉನ್ನತ ಶಿಕ್ಷಣದಲ್ಲಿ ತೊಡಗಿಸಿಕೊಂಡಿರುವ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಕಾರ ನೀಡಲಾಗಿದೆ. ಪ್ರತೀ ವರ್ಷ ‘ಆಸರೆ ಸಹಾಯದ ಸ್ಪಂದನ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಚಿತ್ರಕೂಟದ ಡಾ.ರಾಜೇಶ್ ಬಾಯರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.

administrator

Related Articles

Leave a Reply

Your email address will not be published. Required fields are marked *