ಉಡುಪಿಮಿತ್ರ ಪತ್ರಿಕೆ ಸುದ್ದಿ :
ಬ್ರಹ್ಮಾವರ, ಫೆ. ೧೮: ಕಳಿ ಆಲೂರು ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದ ಸಿಬ್ಬಂದಿಗಳ ಮಿತ್ರಕೂಟ ಕುಂದಾಪುರದ ಹೋಟೆಲ್ ಶರೋನ್ ಮಿನಿಹಾಲ್ನಲ್ಲಿ ಜರುಗಿತು.
ಈ ಸಂದರ್ಭ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಚಿತ್ತೂರು ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ ಸುಮಾರು 30 ದೇಶಗಳ ಜನರು ನಮ್ಮೂರಿನ ಚಿತ್ರಕೂಟಕ್ಕೆ ಬಂದು ಚಿಕಿತ್ಸೆ ಪಡೆದು ಹೋಗುತ್ತಿರುವುದು ಹಾಗೂ ಚಿಕಿತ್ಸಾಲಯ ಬೆಳೆದು ನಿಂತಿರುವುದಕ್ಕೆ ಚಿತ್ರಕೂಟದ ಆಡಳಿತ ನಿರ್ದೇಶಕ ಡಾ. ರಾಜೇಶ್ ಬಾಯರಿಯವರ ವೈದ್ಯ ತಂಡ ಹಾಗೂ ಸಿಬ್ಬಂದಿಗಳ ಗುಣಮಟ್ಟದ ಚಿಕಿತ್ಸೆಯೇ ಕಾರಣ ಎಂದು ನುಡಿದರು.

ಪತ್ರಕರ್ತ ಚಿತ್ತೂರು ಪ್ರಭಾಕರ ಆಚಾರ್ಯ ಮಾತನಾಡಿ ಡಾ.ರಾಜೇಶ್ ಬಾಯರಿಯವರ ಅಧ್ಯಯನ, ಚಿಂತನೆ, ಕಠಿಣ ಪರಿಶ್ರಮ, ಸಾಮಾಜಿಕ ಸಂಪರ್ಕ, ಶೈಕ್ಷಣಿಕ ಕಾಳಜಿ ಇವೆಲ್ಲವೂ ವಿಭಿನ್ನವಾದುದು. ವರ್ಷದಲ್ಲಿ ಒಂದು ದಿನ ಚಿತ್ರಕೂಟ ಆಯುರ್ವೇದ ಆಸ್ಪತ್ರೆಯ ತನ್ನೆಲ್ಲಾ ಸಿಬ್ಬಂದಿಗಳಿಗೆ ವೇದಿಕೆಯನ್ನು ಸಜ್ಜುಗೊಳಿಸಿ ಉತ್ತಮ ಕಾಳಜಿಯಿಂದ, ಪ್ರಾಮಾಣಿಕವಾಗಿ ಕೆಲಸ ಮಾಡುವ ಸಿಬ್ಬಂದಿಗಳನ್ನು ಗೌರವಿಸುವ ಅವರ ಕೆಲಸ ಎಲ್ಲಾ ಸಂಸ್ಥೆಗಳಿಗೂ ಮಾದರಿಯಾದದ್ದು ಎಂದರು.

ಅತಿಥಿಯಾಗಿ ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ಇದರ ಕಾರ್ಯದರ್ಶಿ ಜೆರಾಲ್ಡ್ ಭಾಗವಹಿಸಿ ಶುಭ ಹಾರೈಸಿದರು. ಮಹಾಬಲ ಬಾಯರಿ, ಶ್ರೀಮತಿ ಕಲಾವತಿ ಮಹಾಬಲ ಬಾಯರಿ, ಡಾ.ಅನುಲೇಖಾ ಬಾಯರಿ ಉಪಸ್ಥಿತರಿದ್ದರು.
ಸಿಬ್ಬಂದಿಗಳ ವಾರ್ಷಿಕ ಮಿತ್ರಕೂಟದಲ್ಲಿ ಸಂಸ್ಥೆಯಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳನ್ನು ಗುರುತಿಸಿ ಗೌರವಿಸಲಾಯಿತು.
ಡಾ.ರಾಜೇಶ್ ಬಾಯರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರಾಧ್ಯ ಬಾಯರಿ ಪ್ರಾರ್ಥಿಸಿದ್ದು ಸಂತೋಷ್ ಕಾರ್ಯಕ್ರಮ ನಿರೂಪಿಸಿದರು.



