ವರದಿ : ಚಿತ್ತೂರು ಪ್ರಬಾಕರ ಆಚಾರ್ಯ
ಉಡುಪಿ ಮಿತ್ರ ಪತ್ರಿಕೆ ಸುದ್ದಿ :
ಬ್ರಹ್ಮಾವರ, ಮೇ.೩: ಉಡುಪಿ ಹಾಗೂ ದ.ಕ.ಜಿಲ್ಲೆಯಲ್ಲಿ ಯಕ್ಷಗಾನಕ್ಕೆ ವಿಶೇಷ ಮಾನ್ಯತೆ ಇದೆ. ಯಕ್ಷಗಾನದಲ್ಲಿ ನಮ್ಮ ಸಂಸ್ಕೃತಿ, ಪೌರಾಣಿಕ ಜ್ಞಾನ ಇದೆ. ದೇಹ ದಂಡನೆಯ ಈ ಕಲೆಯಲ್ಲಿ ಸಂಗೀತ, ಕುಣಿತ, ಮಾತುಗಾರಿಕೆ, ಬಣ್ಣ, ಅಭಿನಯ ಎಲ್ಲವೂ ಅಡಕವಾಗಿದ್ದು ಒಂದು ವಿಭಿನ್ನ ಕಲೆ ಅನ್ನಿಸಿಕೊಂಡಿದೆ ಎಂದು ಬಾಳ್ಕುದ್ರುಮಠದ ಶ್ರೀ ಶ್ರೀ ಶ್ರೀ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ ತಮ್ಮ ಆಶೀರ್ವಾಚನದಲ್ಲಿ ನುಡಿದರು. ಅವರು ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದಲ್ಲಿ ನಡೆದ ನಲಿ-ಕುಣಿ ೨೦ ದಿನಗಳ ಯಕ್ಷಗಾನ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ
ಮಾತನಾಡಿದರು.
ಸಭಾಧ್ಯಕ್ಷತೆ ವಹಿಸಿದ್ದ ಕಲಾ ಕೇಂದ್ರದ ಅಧ್ಯಕ್ಷ ಆನಂದ ಸಿ.ಕುಂದರ್ ಮಾತನಾಡಿ ಭವಿಷ್ಯದ ಜವಾಬ್ದಾರಿ ಹೊಂದಿರುವ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಉತ್ತಮ ನಾಗರಿಕರನ್ನಾಗಿ ಮಾಡಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಆ ಹಿನ್ನೆಲೆಯಲ್ಲಿ ನಮ್ಮ ಯಕ್ಷಗಾನ ಕಲಾಕೇಂದ್ರ ಪ್ರಯತ್ನ ನಡೆಸುತ್ತಿದೆ ಎಂದರು.
ಮುಖ್ಯ ಅತಿಥಿಗಳಾಗಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ, ತೆರಿಗೆ ಸಲಹೆಗಾರ ಜತೀಂದ್ರ ಮರವಂತೆ ಭಾಗವಹಿಸಿದ್ದರು.
ಕಲಾಕೇಂದ್ರ ಪ್ರಾಚಾರ್ಯ ಕೆ.ಸದಾನಂದ ಐತಾಳ, ಕಲಾವಿದರಾದ ಕೇಶವ ಆಚಾರ್ಯ ನೀಲಾವರ, ರೋಹಿತ್ ತೀರ್ಥಹಳ್ಳಿ, ಶ್ರೀಶ ಆಚಾರ್ ಬಾರಕೂರು ಇವರನ್ನು ಸನ್ಮಾನಿಸಲಾಯಿತು.
ನಲಿ-ಕುಣಿ ಶಿಬಿರದ ಬಗ್ಗೆ ಕೆ.ಸದಾನಂದ ಐತಾಳ, ವಿದ್ಯಾರ್ಥಿಗಳಾದ ತಜ್ಞಾ, ವಿಶ್ವ, ಅಭಿಜ್ಞಾ ಹಾಗೂ ಗಗನ ಮಾತನಾಡಿದರು.
ಕಲಾಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್ ಪ್ರಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಸೀತಾರಮ ಸೋಮಯಾಜಿ ವಂದಿಸಿದ್ದು ಪತ್ರಕರ್ತ ಚಿತ್ತೂರು ಪ್ರಭಾಕರ ಆಚಾರ್ಯ ನಿರೂಪಿಸಿದರು.
