ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಬ್ರಹ್ಮಾವರ, ಜೂ.೪: ಪ್ರತಿಯೊಬ್ಬರಿಗೂ ಜೀವನದಲ್ಲಿ ಗುರಿ ಇರಬೇಕು. ನಮ್ಮ ಜೀವನದ ಗುರಿ ಏನು ಎಂಬುದನ್ನು ಮೊದಲು ನಿರ್ಧರಿಸಿಕೊಳ್ಳಬೇಕು. ಉತ್ತಮ ನಿರ್ಧಾರಗಳು ಮಾತ್ರ ಜೀವನದಲ್ಲಿ ಉತ್ತಮ ಫಲಿತಾಂಶ ನೀಡಲಿದೆ ಎಂಬುದನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು ಎಂದು ಬ್ರಹ್ಮಾವರ ಹೋಲಿ ಫ್ಯಾಮಿಲಿ ಚರ್ಚ್ನ ರೆ.ಫಾ.ಜಾನ್ ಫೆರ್ನಾಂಡಿಸ್ ನುಡಿದರು.
ಅವರು ನಿರ್ಮಲ ಆಂಗ್ಲ ಮಾದ್ಯಮ ಶಾಲೆಯ ಆಡಳಿತ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ವರ್ಗಾವಣೆಗೊಂಡ ರೆ. ಫಾ. ಲೆನ್ಸನ್ ಲೋಬೋ ಅವರನ್ನು ಸನ್ಮಾನಿಸಿ ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಪೋಷಕರು, ಶಿಕ್ಷಕರು ಹಾಗೂ ಬೇರೆಯವರನ್ನು ಗೌರವದಿಂದ ನೋಡುವ ಅಭ್ಯಾಸ ಮಾಡಿಕೊಳ್ಳಬೇಕು. ಉತ್ತಮ ಫಲಿತಾಂಶಕ್ಕೆ ಪ್ರಯತ್ನಿಸಬೇಕು ಎಂದರು.
ವರ್ಗಾವಣೆಗೊಂಡ ರೆ. ಫಾ.ಲೆನ್ಸನ್ ಲೋಬೋ ಮಾತನಾಡಿ ನಿರ್ಮಲ ಆಂಗ್ಲ ಮಾದ್ಯಮ ಶಾಲೆಯಲ್ಲಿ ಶಿಕ್ಷಕರು, ಮಕ್ಕಳು, ಪೋಷಕರು, ಪಿಟಿಎ ಕಮಿಟಿಯೊಂದಿಗೆ ಕಳೆದ ಸಮಯ ಜೀವನದ ಅಮೂಲ್ಯ ಸಮಯ ಎಂದು ಭಾವಿಸುತ್ತೇನೆ ಎಂದು ನುಡಿದರು.

ಪಿಟಿಎ ಕಮಿಟಿ ನಿಕಟಪೂರ್ವ ಅಧ್ಯಕ್ಷ, ಸರಕಾರಿ ಪ್ರೌಢಶಾಲೆ ನಾಲ್ಕೂರು ಇಲ್ಲಿಯ ಮುಖ್ಯ ಶಿಕ್ಷಕ ಕೃಷ್ಣ ನಾಯ್ಕ್ ಕೆ.ರವರು ಮಾತನಾಡಿ ಫಾ.ಲೆನ್ಸನ್ ಲೋಬೋ ಅವರು ಉತ್ತಮವಾಗಿ ಸೇವೆ ಸಲ್ಲಿಸಿ ಶಾಲೆಯಲ್ಲಿ ಉತ್ತಮ ಫಲಿತಾಂಶಕ್ಕೆ ಕಾರಣರಾಗಿದ್ದಾರೆ ಎಂದರು. ರೆ.ಫಾ.ಲೆನ್ಸನ್ ಲೋಬೋ ಅವರನ್ನು2022-23, 2023-24, 2024-25ರ ಸಾಲಿನ ಪಿಟಿಎ ಕಮಿಟಿಗಳ ವತಿಯಿಂದ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಶಾಲೆಯ ನೂತನ ಆಡಳಿತ ಅಧಿಕಾರಿ ರೆ.ಫಾ. ಮ್ಯಾಥ್ಯೂ ಡಯಾಸ್, ಸಿಸ್ಟರ್ ಕಾನುಕಾ ಉಪಸ್ಥಿತರಿದ್ದರು.
ಸನ್ಮಾನದ ಸಂದರ್ಭ ಪಿಟಿಎ ಕಮಿಟಿ ಮಾಜಿ ಅಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ, ಮಾಜಿ ಉಪಾಧ್ಯಕ್ಷೆ ಶ್ರೀಮತಿ ಲೀಲಾ ಮಂಜುನಾಥ್, ಶ್ರೀಮತಿ ವಿಲ್ಮಾ ಡಿಸಿಲ್ವಾ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು. ನಿಕಟಪೂರ್ವ ಪಿಟಿಎ ಕಾರ್ಯದರ್ಶಿ ಶ್ರೀಮತಿ ಮಲ್ಲಿಕಾ ನಿರೂಪಿಸಿದರು. ಶಿಕ್ಷಕರು, ವಿದ್ಯಾರ್ಥಿಗಳು ಈ ಸಂದರ್ಭ ಉಪಸ್ಥಿತರಿದ್ದರು.