ಬೈಂದೂರು: ವಿಶ್ವಕರ್ಮ ಸಮಾಜ ದವರು ಕುಲಕಸುಬಿನೊಂದಿಗೆ ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ಹೆಚ್ಚು ಒತ್ತು ಕೊಟ್ಟು ಅವರನ್ನು ಸಮಾಜದ ಆಸ್ತಿಯನ್ನಾಗಿಸಬೇಕು ಎಂದು ಪತ್ರಕರ್ತ ಚಿತ್ತೂರು ಪ್ರಭಾಕರ ಅಚಾರ್ಯ ಹೇಳಿದರು.
ಬೈಂದೂರು ವಿಶ್ವಕರ್ಮ ಸಮಾಜ ಸೇವಾ ಸಂಘದ ವಾರ್ಷಿಕೋತ್ಸವದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಯಾವುದೇ ಸಮಾಜ ಶೈಕ್ಷಣಿಕವಾಗಿ ಮುಂದುವರಿದಾಗ ಸಮಾಜವು ಬೆಳೆಯಲಿದೆ. ಆದ್ದರಿಂದ ಸಮಾಜದ ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪಡೆಯಲು ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸರಿಯಾದ ಮಾಹಿತಿಯನ್ನು ಮಾಗದರ್ಶನವನ್ನು ಸಂಘಸಂಸ್ಥೆಗಳು ಮಾಡಬೇಕೆಂದರು.
ಮುರ್ಡೇಶ್ವರ ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್ ವಿಭಾಗೀಯ ಮುಖ್ಯಸ್ಥ ದಿನೇಶ ಆಚಾರ್ಯ ಚೇಂಪಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು ಅವರು ಮಾತನಾಡುತ್ತಾ ಸಂಘಟನೆಗಳು ಸಮಾಜದ ಅಶಕ್ತರನ್ನು ಗುರುತಿಸಿ ಅವರಿಗೆ ಸಹಕಾರ ನೀಡುವುದರ ಜೊತೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕು. ಉನ್ನತ ಶಿಕ್ಷಣದ ಬಗೆಗೂ ಮಾಹಿತಿ ನೀಡಬೇಕೆಂದರು.
ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ನಾರಾಯಣ ಆಚಾರ್ಯ ಮಾವಡ ಅಧ್ಯಕ್ಷತೆ ವಹಿಸಿದ್ದರು. ಉಪ್ರಳ್ಳಿ ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರರು ಕಾರ್ಯಕ್ರಮ ಉದ್ಘಾಟಿಸಿದರು. ಲಾವಣ್ಯ ಬೈಂದೂರಿನ ಹಿರಿಯ ಕಲಾವಿದ ಗಣೇಶ ಕಾರಂತ ಮಾತನಾಡಿ ವಿಶ್ವಕರ್ಮ ಸಮುದಾಯದವರು ಅತ್ಯಂತ ಪ್ರತಿಭಾನ್ವಿತ ಸಮಾಜ. ಈ ಸಮಾಜ ತಾಂತ್ರಿಕ ಕೆಲಸಗಳು, ಕೆತ್ತನೆ ಕೆಲಸಗಳ ಮೂಲಕ ಎಲ್ಲಾ ಸಮಾಜಕ್ಕೂ ಬೇಕಾದ ಸಮಾಜವಾಗಿ ಬೆಳೆದು ಬಂದಿದೆ ಎಂದರು.
ಮಹೇಶ ಆಚಾರ್ಯ ಉಪ್ಪುಂದ ಪ್ರಾರ್ಥಿಸಿದರು. ಕಾರ್ಯದರ್ಶಿ ಬಿ. ನಾಗರಾಜ ಆಚಾರ್ಯ ಸ್ವಾಗತಿಸಿದರು. ಲಕ್ಷ್ಮಣ ಆಚಾರ್ಯ ನಾಯ್ಕನಕಟ್ಟೆ ವಂದಿಸಿದರು. ವಿಶ್ವನಾಥ ಆಚಾರ್ಯ ಉಪ್ಪುಂದ ಕಾರ್ಯಕ್ರಮ ನಿರೂಪಿಸಿದರು. ನಂತರ ಸಾಸ್ತಾನದ ಸಾಧನಾ ಕಲಾ ತಂಡದಿಂದ ಕಿತಾಪತಿ ಕಿಟ್ಟ ನಾಟಕ ಪ್ರದರ್ಶನಗೊಂಡಿತು
