ವರದಿ : ಚಿತ್ತೂರು ಪ್ರಭಾಕರ ಆಚಾರ್ಯ,
ಉಡುಪಿ ಮಿತ್ರ ಪತ್ರಿಕೆ ಸುದ್ಧಿ :
ಬ್ರಹ್ಮಾವರ, ಡಿ.೫ : ಭಕ್ತಾದಿಗಳು ಮತ್ತು ಸಾರ್ವಜನಿಕರ ಸಹಕಾರದಲ್ಲಿ ನಡೆಯುವ ಬ್ರಹ್ಮಾವರ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಪೂರ್ವಭಾವಿಯಾಗಿ ಡಿ.೫ರಂದು ಪೂರ್ವಾಹ್ನ ಧ್ವಜ ಮರದ ಕೆಲಸಕ್ಕೆ ಮಹೂರ್ತ ನೆರವೇರಿಸಿ ಮರಗೆಲಸದ ಶಿಲ್ಪಿಗಳಿಗೆ ಕೆತ್ತನೆಯ ಜವಾಬ್ದಾರಿ ನೀಡಲಾಯಿತು. ಧ್ವಜಮರದ ಪೂಜಾ ಮಹೂರ್ತಕ್ಕೆ ಮೊದಲು ದೇವಸ್ಥಾನದೊಳಗೆ ಮಹಾಲಿಂಗೇಶ್ವರನಿಗೆ ವಿಶೇಷ ಪೂಜೆ ನಡೆಸಲಾಯಿತು. ಧ್ವಜ ಮರದ ಮಹೂರ್ತ ನೆರವೇರಿಸಿದ ನಂತರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗೋವಿಂದರಾಜ್ ಹೆಗ್ಡೆ ಮಾತನಾಡಿ ಕಳೆದ ಜನವರಿಯಲ್ಲಿ ಈ ದ್ವಜಮರವನ್ನು ಸುಳ್ಯದಿಂದ ತಂದು ದೇವಸ್ಥಾನದ ಕೆರೆಯಲ್ಲಿ ಹಾಕಲಾಗಿತ್ತು. ಅಗಸ್ಟ್ ತಿಂಗಳಲ್ಲಿ ಇದನ್ನು ಹೊರತೆಗೆದು ನೀರು ಆರಿ ಹೋಗುವಂತೆ ಮಾಡಲಾಗಿದ್ದು ಇಂದು ಧ್ವಜ ಮರದ ಕೆಲಸಕ್ಕೆ ಮಹೂರ್ತ ನೆರವೇರಿಸಲಾಗಿದೆ. ಶೀಘ್ರದಲ್ಲೇ ದೇವಸ್ಥಾನದ ಜೀರ್ಣೋದ್ಧಾರ ಕೆಲಸ ಆರಂಭಿಸಲಿದ್ದು ಸಮಸ್ತ ಭಕ್ತಾದಿಗಳು ಸಹಕಾರ ನೀಡುವಂತೆ ಕೋರಿಕೊಂಡರು.

ಈ ಸಂದರ್ಭ ಅನಂತ ಪದ್ಮನಾಭ ವಾರಂಬಳ್ಳಿ, ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ ಮಟಪಾಡಿ, ಸೂರ್ಯನಾರಾಯಣ ಗಾಣಿಗ ಮಟಪಾಡಿ, ಕೋಶಾಧಿಕಾರಿ ರಾಜು, ಗ್ರಾಮ ಸಮಿತಿಯ ಅಧ್ಯಕ್ಷರಾದ ಎಂ.ಗಿರೀಶ್ಚಂದ್ರ ಆಚಾರ್ಯ ಮಟಪಾಡಿ, ಅಶೋಕ್ ಪೂಜಾರಿ ಹಾರಾಡಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪದ್ಮನಾಭ ಕಾಂಚನ್, ವಿಜಯ ನಾಯರಿ ನಿಡಂಪಳ್ಳಿ, ಚಂದ್ರಶೇಖರ ದೇವಾಡಿಗ, ಚಂದ್ರಶೇಖರ ನಾಯ್ಕ್, ಉಮೇಶ್ ಪೂಜಾರಿ, ಇಂದಿರಾವತಿ ವಾರಂಬಳ್ಳಿ, ಸರಸ್ವತಿ ನಾಯ್ಕ ಹಾಗೂ ಪ್ರಮುಖರಾದ ಆಶ್ರಯ ಹೋಟೆಲ್ ಮಾಲಕ ರಾಜಾರಾಮ ಶೆಟ್ಟಿ, ದಯಾನಂದ ಶೆಟ್ಟಿ ಹಾರಾಡಿ, ಶಶಿಕಲಾ ಹೆಗ್ಡೆ, ಭಾಸ್ಕರ ಶೆಟ್ಟಿ ಚಾಂತಾರು, ಬ್ರಹ್ಮಾವರ ಅಭಿವೃದ್ಧಿ ಸಮಿತಿಯ ಪ್ರತೀತ್ ಹೆಗ್ಡೆ, ವೈಷ್ಣವಿ ಹೆಗ್ಡೆ, ಜಯರಾಮ ನಾಯರಿ, ಗಣಪಯ್ಯ ನಾಯರಿ, ಅಶೋಕ್ ಹಾರಾಡಿ, ಸರೋಜ ನಾಯರಿ ನಿಡಂಪಳ್ಳಿ, ಸುಬ್ರಹ್ಮಣ್ಯ ಭಟ್, ಗಣೇಶ್ ಪ್ರಸಾದ್ ಹೆಗ್ಡೆ, ಜಯರಾಮ ನಾಯ್ಕ , ಗ್ರಾಮ ಸಹಾಯಕ ಹರೀಶ ಪೂಜಾರಿ, ರಂಗ ದೇವಾಡಿಗ, ಅರ್ಚಕ ಅನಂತ ಪದ್ಮನಾಭ ಭಟ್, ರಾಮ ಐತಾಳ ಹಾಗೂ ಮರದ ಕೆತ್ತನೆ ಕೆಲಸಗಾರರಾದ ಮಾಧವ ಆಚಾರ್ಯ ಪುತ್ತೂರು ಉಡುಪಿ, ಪ್ರವೀರ ಆಚಾರ್ಯ ಕಡ್ತಲ ಇದ್ದರು.

ವಿಶೇಷ ನಂದಿಯ ಆಗಮನ !
ಎಲ್ಲರೂ ಧ್ವಜ ಮರದ ಪೂಜೆಯಲ್ಲಿ ಮಗ್ನರಾಗಿರುವ ಸಂದರ್ಭ ಎಲ್ಲಿಯೋ ಇದ್ದ ನಂದಿ ಧ್ವಜ ಮರಕ್ಕೆ ಪೂಜೆ ಸಲ್ಲಿಸುವ ಸ್ಥಳಕ್ಕೆ ಆಗಮಿಸಿತು. ಹಿಂದಿನಿಂದ ಬಂದು ಎಲ್ಲರ ನಡುವೆಯೆ ಧ್ವಜಮರದ ಹತ್ತಿರವೇ ಬಂದು ನಿಂತದ್ದು ಎಲ್ಲರಿಗೂ ಅಚ್ಚರಿಯಾಗಿತ್ತು. ಪೂಜೆ ಸಂಪೂರ್ಣ ಆಗುವವರೆಗೆ ಇದ್ದು ಸಮಿತಿಯವರು ನೀಡಿದ ಬಾಳೆಹಣ್ಣನ್ನು ತಿಂದು ಅಲ್ಲಿಂದ ತೆರಳಿದ್ದು ವಿಶೇಷವಾಗಿತ್ತು.




