ವರದಿ : ಚಿತ್ತೂರು ಪ್ರಭಾಕರ ಆಚಾರ್ಯ,
ಉಡುಪಿಮಿತ್ರ ಪತ್ರಿಕೆ ಸುದ್ದಿ:
ಬ್ರಹ್ಮಾವರ, ಮೇ.೩೦; ಕೋವಿಡ್ ಸಂದರ್ಭದಲ್ಲಿ ಎಲ್ಲಾ ಇಂಡಸ್ಟ್ರಿಗಳು ಬಾಗಿಲು ಹಾಕಿದರೂ ಕೃಷಿಯನ್ನು ನಮ್ಮ ರೈತರು ಅತ್ಯಂತ ಯಶಸ್ವಿಯಾಗಿ ಮಾಡಿದ್ದಾರೆ. ಕೃಷಿಯನ್ನು ಲಾಭದಾಯಕವಾಗಿ ಮಾಡಲು ಸಾಕಷ್ಟು ಅವಕಾಶವಿದೆ. ರೈತರ ಬೆಳೆಯಲ್ಲಿ ಸರಿಯಾಗಿ ಸಂಸ್ಕರಣೆ ಮಾಡದೆ ಇರುವುದರಿಂದ ತರಕಾರಿ ಹಾಗೂ ಹಣ್ಣುಗಳಲ್ಲಿ ಶೇ.೩೫ರಿಂದ ಶೇ.೪೦ ಹಾಳಾಗುತ್ತಿದೆ. ಧಾನ್ಯಗಳಲ್ಲಿ ಶೇ.೮ರಿಂದ ಶೇ.೧೦ ಹಾಳಾಗುತ್ತಿದೆ. ಇದನ್ನು ಸರಿಯಾಗಿ ಸಂಸ್ಕರಣೆಯೊಂದಿಗೆ ಮೌಲ್ಯವರ್ಧಿದ ಪದಾರ್ಥಗಳನ್ನಾಗಿ ಮಾಡಿ ಆಕರ್ಷಕವಾದ ಪ್ಯಾಕೇಜಿಂಗ್ ಮಾಡಿ, ಬ್ರಾಂಡಿಂಗ್ ಮಾಡಿದಲ್ಲಿ ರಪ್ತು ಮಾಡಲು ಸಾಕಷ್ಟು ಅವಕಾಶವಿದೆ ಎಂದು ಬೆಂಗಳೂರಿನ ಕೃಷಿ ತಂತ್ರಜ್ಞರ ಸಂಸ್ಥೆಯ ಅಧ್ಯಕ್ಷ ಡಾ.ಎ.ಬಿ.ಪಾಟೀಲ ನುಡಿದರು.

ಅವರು ರೋಟರಿ ಕ್ಲಬ್ ಬ್ರಹ್ಮಾವರ, ರೋಟರಿ ಕ್ಲಬ್ ಬಾರ್ಕೂರು, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ, ಐ.ಸಿ.ಎ.ಆರ್ ಕೃಷಿ ವಿಜ್ಞಾನ ಕೇಂದ್ರ ಮತ್ತು ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಹಾಗೂ ಡಿಪ್ಲೋಮ ಕೃಷಿ ಮಹಾ ವಿದ್ಯಾಲಯ ಬ್ರಹ್ಮಾವರ ಇವರ ಸಹಯೋಗದಲ್ಲಿ ಬ್ರಹ್ಮಾವರದ ಎಸ್ಎಮ್ಎಸ್ ಸಮುದಾಯ ಭವನದಲ್ಲಿ ಆರಂಭಗೊಂಡ ಹಲಸು ಮತ್ತು ಹಣ್ಣು ಮೇಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಎಕರೆಗೆ ೬೦-೭೦ ಕ್ವಿಂಟಾಲ್ ಬೆಳೆಯುವ ರೈತರು ನಮ್ಮಲ್ಲಿದ್ದಾರೆ. ಕೆಲವರು ಕೇವಲ ೧೦ ಕ್ವಿಂಟಾಲ್ ಬೆಳೆಯುವವರು ಇದ್ದಾರೆ. ಕೃಷಿ ವಿಜ್ಞಾನಿಗಳು ಹೇಳಿದರೂ ನಂಬದೇ ಇರುವ ರೈತರಿಗೆ ಹೆಚ್ಚು ಬೆಳೆಯನ್ನು ತೆಗೆಯುವ ರೈತರಿಂದಲೇ ಮಾಹಿತಿ ಒದಗಿಸಿದಲ್ಲಿ ಕಡಿಮೆ ಬೆಳೆ ತೆಗೆಯುವ ರೈತ ಕೂಡ ಯಶಸ್ಸು ಪಡೆಯಲಿದ್ದಾನೆ. ಕೇವಲ ಹಲಸು ಹಣ್ಣಿನಲ್ಲಿ ಸುಮಾರು ೧೩೫ ಪ್ರಾಡಕ್ಟ್ಗಳನ್ನು ಮಾಡಲು ಅವಕಾಶವಿದೆ. ಈ ಮಾಹಿತಿಯನ್ನು ರೈತರಿಗೆ ನೀಡಬೇಕಾಗಿದೆ ಎಂದರು.

ಬ್ರಹ್ಮಾವರ ಕೃಷಿ ಡಿಪ್ಲೋಮಾ ಮಹಾವಿದ್ಯಾಲಯ ಪ್ರಾಂಶುಪಾಲ ಡಾ.ಸುಧೀರ್ ಕಾಮತ್ ಕೆ.ವಿ. ಮಾತನಾಡಿ ಹಲಸು ಹಣ್ಣಿನಲ್ಲಿ ಫ್ಯಾಟಿಲಿವರ್, ಡಯಾಬಿಟೀಸ್, ರಕ್ತದೊತ್ತಡ, ಹೃದಯ ಸಮಸ್ಯೆಗಳನ್ನು ನಿವಾರಿಸುವ ಶಕ್ತಿ ಇದೆ. ‘ಎ’ವಿಟಮಿನ್ ಅಂಶವಿದ್ದು ಕಣ್ಣಿನ ಆರೋಗ್ಯಕ್ಕೂ ಸಹಕಾರಿಯಾಗಿದೆ. ಕ್ಯಾನ್ಸರ್ಗೂ ಇದು ಪರಿಣಾಮಕಾರಿಯಾಗಿದೆ. ಹಲಸು ಹಣ್ಣಿನಲ್ಲಿ ನಮಗೆ ತುರ್ತು ಎನರ್ಜಿ ಸಿಗಲಿದೆ ಎಂದು ನುಡಿದರು.
ಸಿ.ಎ.ದೇವಾನಂದ್ ಹಲಸು ಹಾಗೂ ಹಣ್ಣು ಮೇಳ ಉದ್ಘಾಟಿಸಿ ಮಾತನಾಡಿದರು.
ಬ್ರಹ್ಮಾವರ ರೋಟರಿ ಅಧ್ಯಕ್ಷ ಶ್ರೀಧರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಅತಿಥಿಗಳಾಗಿ ಟಿಎಪಿಸಿಎಮ್ಎಸ್ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಮೈರ್ಮಾಡಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಶ್ರೀಮತಿ ಭುವನೇಶ್ವರಿ, ಸೈಂಟ್ ಮೇರೀಸ್ ಚರ್ಚ್ ಧರ್ಮಗುರು ರೆ,ಫಾ.ಎಮ್.ಸಿ.ಮಥಾಯ, ರೋಟರಿ ಅಸಿಸ್ಟೆಂಟ್ ಗವರ್ನರ್ ಎಮ್.ರಾಘವೇಂದ್ರ ಸಾಮಗ, ಬ್ರಹ್ಮಾವರ ಹೋಟೆಲ್ ಆಶ್ರಯದ ಮಾಲಕ ರಾಜಾರಾಮ್ ಶೆಟ್ಟಿ, ರೋಟರಿ ಸಂಸ್ಥೆಯ ಪ್ರತಿನಿಧಿಗಳಾದ ದಿನೇಶ್ ನಾಯರಿ ಹಾಗೂ ಶಂಕರ ಸುವರ್ಣ ಭಾಗವಹಿಸಿದ್ದರು. ಬಾರ್ಕೂರು ರೋಟರಿ ಅಧ್ಯಕ್ಷ ಗಣೇಶ್ ಶೆಟ್ಟಿ, ಬ್ರಹ್ಮಾವರ ರೋಟರಿ ಕಾರ್ಯದರ್ಶಿ ಉದಯ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭೆಯಲ್ಲಿ ಪ್ರಗತಿಪರ ಕೃಷಿಕ ಸದಾಶಿವ ಪೂಜಾರಿ, ಹಲಸಿನಿಂದ ವಿವಿಧ ತಿಂಡಿಗಳನ್ನು ಮಾಡುವ ಶ್ರೀಮತಿ ಜಯಶ್ರೀ ಪೂಜಾರಿ ಹಾಗೂ ಕೃಷಿ ತಂತ್ರಜ್ಞರ ಸಂಸ್ಥೆಯ ಅಧ್ಯಕ್ಷ ಡಾ.ಎ.ಬಿ.ಪಾಟೀಲರನ್ನು ಸನ್ಮಾನಿಸಲಾಯಿತು.
ಶ್ರೀಧರ ಶೆಟ್ಟಿ ಶ್ವಾಗತಿಸಿದ್ದು ಬಾರಕೂರು ರೋಟರಿ ಕಾರ್ಯದರ್ಶಿ ಅಜಿತ್ ಕುಮಾರ್ ಶೆಟ್ಟಿ ವಂದಿಸಿದರು. ಅಲ್ವನ್ ಅಂದ್ರಾದೆ ಕಾರ್ಯಕ್ರಮ ನಿರೂಪಿಸಿದರು.

ಹಲಸು ಹಣ್ಣಿನ ಮೇಳದಲ್ಲಿ ಏನೇನಿವೆ?
ನಾನಾ ರೀತಿಯ ಮಾವಿನ ಹಣ್ಣುಗಳು, ವಿವಿಧ ಬಗೆಯ ಹಲಸು ಹಣ್ಣುಗಳು, ಎಲ್ಲಾ ರೀತಿಯ ಗಿಡಗಳು, ಬಟ್ಟೆಗಳು, ಗೃಹ ಕೈಗಾರಿಕಾ ಉತ್ಪನ್ನಗಳು, ಹಲಸಿನಿಂದ ತಯಾರಿಸಿದ ಜಿಲೇಬಿ, ಹಲಸಿನ ಹೋಳಿಗೆ, ವಿವಿಧ ಹಣ್ಣುಗಳ ಐಸ್ಕ್ರೀಂ, ಹಲಸು ಹಾಗೂ ಹಣ್ಣಿನಿಂದ ತಯಾರಿಸಿದ ವಿವಿಧ ಖಾದ್ಯಗಳು, ಹೂವಿನ ಹಾಗೂ ಹಣ್ಣಿನ ನರ್ಸರಿ ಸ್ಟಾಲ್ಗಳು, ನೇಕಾರರು ನೇಯ್ದ ಸೀರೆಗಳು, ಹಪ್ಪಳ, ಸಂಡಿಗೆ ಇನ್ನಿತರ ವಸ್ತುಗಳು ರಿಯಾಯಿತಿ ದರದಲ್ಲಿ ಲಭ್ಯವಿವೆ.