• June 29, 2025
  • Last Update June 29, 2025 10:13 am
  • Brahmavara

ಮಂದಾರ್ತಿ : ಆದಿಸುಬ್ರಹ್ಮಣ್ಯ ದೇವಸ್ಥಾನ ಪುನರ್ ನಿರ್ಮಾಣ, ಬ್ರಹ್ಮಕಲಶ, ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಓರ್ವ ಶ್ರೇಷ್ಟ ದಾನಿ-ರಘುಪತಿ ಭಟ್

ಮಂದಾರ್ತಿ : ಆದಿಸುಬ್ರಹ್ಮಣ್ಯ ದೇವಸ್ಥಾನ ಪುನರ್ ನಿರ್ಮಾಣ, ಬ್ರಹ್ಮಕಲಶ,  ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಓರ್ವ ಶ್ರೇಷ್ಟ ದಾನಿ-ರಘುಪತಿ ಭಟ್

ಬ್ರಹ್ಮಾವರ,ಫೆ.೩ : ಸಮಾಜದಲ್ಲಿ ಸಾಕಷ್ಟು ದಾನಿಗಳಿದ್ದಾರೆ. ಆದರೆ ದೇವರ ಗುಡಿಕಟ್ಟುವಂತಹ ಅವಕಾಶ ದೇವರು ಎಲ್ಲರಿಗೂ ಕೊಡಲ್ಲ. ಶ್ರದ್ಧೆ, ಭಕ್ತಿ, ಪರಿಶುದ್ಧ ಮನಸ್ಸಿನಿಂದ ಯಾರು ದಾನ ಮಾಡಬಲ್ಲರೋ ಅಂತವರಿಗೆ ಮಾತ್ರ ಭಗವಂತ ಅವಕಾಶ ನೀಡುತ್ತಾರೆ. ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಓರ್ವ ಶ್ರೇಷ್ಟ ದಾನಿಗಳಾಗಿದ್ದಾರೆ. ಆದ್ದರಿಂದ ಇಂತಹ ಶ್ರೇಷ್ಟ ಕೆಲಸ ಮಾಡುವ ಅವಕಾಶ ಅವರಿಗೆ ದೊರೆತಿದೆ ಎಂದು ಉಡುಪಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ರಘುಪತಿ ಭಟ್ ನುಡಿದರು.
ಅವರು ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಫೆ.೩ರಂದು ನಡೆದ ಆದಿ ಸುಬ್ರಹ್ಮಣ್ಯ ದೇವರ ಶಿಲಾಮಯ ದೇವಸ್ಥಾನವನ್ನು ಪುನರ್ ನಿರ್ಮಿಸಿಕೊಟ್ಟ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ಸಹೋದರರ ಅಭಿನಂದನಾ ಸಭೆಯಲ್ಲಿ ಮಾತನಾಡಿದರು.
ಮುಂದಿನ ೭೦೦ ವರ್ಷಗಳ ಕಾಲ ಇನ್ನು ಮಂದಾರ್ತಿಯ ಆದಿ ಸುಬ್ರಹ್ಮಣ್ಯ ದೇವರ ಗುಡಿ ನಿರ್ಮಾಣ ಮಾಡುವ ಅಗತ್ಯವಿಲ್ಲ. ಆ ಅವಕಾಶ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರಿಗೆ ಲಭಿಸಿದೆ ಎಂದರು.
ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಮಾತನಾಡಿ ನಮ್ಮಲ್ಲಿ ಎಷ್ಟೇ ಹಣವಿದ್ದರೂ, ಆಸ್ತಿ ಇದ್ದರೂ ಅದನ್ನು ಕೊಂಡು ಹೋಗಲು ಸಾಧ್ಯವಿಲ್ಲ. ಒಂದಲ್ಲ ಒಂದು ದಿನ ಅದನ್ನು ಪ್ರತಿಯೊಬ್ಬರು ಬಿಟ್ಟು ಹೋಗಲೇ ಬೇಕು. ಈ ಸತ್ಯವನ್ನು ಹಣವಂತರು ಅರಿತುಕೊಳ್ಳಬೇಕು. ದಾನ ಧರ್ಮದಿಂದ ದೇವರ ಅನುಗ್ರಹ ಪಡೆಯಲು ಸಾಧ್ಯ. ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರಲ್ಲಿ ಸಾತ್ವಿಕತೆ, ಶ್ರೇಷ್ಟ ಮನಸ್ಸು, ದಾನ ಧರ್ಮದ ಗುಣ ಇರುವುದರಿಂದ ದೇವರು ಅವರಿಂದ ಉತ್ತಮ ಕೆಲಸ ಮಾಡಿಸಿಕೊಳ್ಳುತ್ತಿದ್ದಾನೆ ಎಂದು ನುಡಿದರು.
ಆದಿ ಸುಬ್ರಹ್ಮಣ್ಯನಿಗೆ ದೇವಸ್ಥಾನ ನಿರ್ಮಿಸಿಕೊಟ್ಟ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಮಾತನಾಡಿ ಯಾವುದೇ ಕೆಲಸ ನಾನು ಮಾಡಿದ್ದೇನೆ ಅಂತ ಯಾರೂ ಹೇಳಿಕೊಳ್ಳುವುದು ಸರಿಯಲ್ಲ. ದೇವರ ಅನುಗ್ರಹ ಇದ್ದರೆ ಮಾತ್ರ ಯಾವುದಾದರೂ ಕೆಲಸ ಮಾಡಲು ಸಾಧ್ಯ. ನನ್ನದು ಅನ್ನುವ ಶರೀರ ಕೂಡ ನಮ್ಮದಲ್ಲ. ಅದು ತಂದೆ ತಾಯಿಯ ಬಳುವಳಿ. ಏನನ್ನೇ ಪಡೆದಿದ್ದರೂ ಅದನ್ನು ನಾವು ಇಲ್ಲಿಂದಲೇ ಪಡೆದಿದ್ದೇವೆ ಎಂಬ ಸತ್ಯವನ್ನು ಎಲ್ಲರೂ ಅರಿತುಕೊಂಡು ಸತ್ಕಾರ್ಯವನ್ನು ಮಾಡಬೇಕು. ಈ ಗುಡಿಯನ್ನು ಕಟ್ಟಿಕೊಡುತ್ತೇವೆ ಎಂದು ನಾವು ಕನಸಿನಲ್ಲೂ ಎಣಿಸಿರಲಿಲ್ಲ. ದೇವರು ನನ್ನಿಂದ ಈ ಕೆಲಸವನ್ನು ಕೇವಲ ೪ ತಿಂಗಳಲ್ಲಿ ಮಾಡಿಸಿಕೊಂಡಿದ್ದಾನೆ. ಹಣ ಇದ್ದರೂ ಎಲ್ಲವನ್ನು ಮಾಡಲು ಸಾಧ್ಯವಿಲ್ಲ. ಅದಕ್ಕೆ ದೇವರ ಪ್ರೇರಣೆ, ಅನುಗ್ರಹ ಬೇಕು. ಮಹಾಕುಂಭ ಮೇಳ ನಡೆಯುವ ಈ ಕಾಲದಲ್ಲಿ ಈ ಕೆಲಸ ಮಾಡಲು ದೇವರು ಅವಕಾಶ ನೀಡಿದ್ದಾನೆ. ಆದಿ ಸುಬ್ರಹ್ಮಣ್ಯನ ಗುಡಿ ಕಟ್ಟಲು ಎಲ್ಲರೂ ಸಹಕಾರ ಕೊಟ್ಟಿದ್ದಾರೆ. ಅವರೆಲ್ಲರಿಗೂ ನಾನು ಕೃತಜ್ಞತೆ ಅರ್ಪಿಸಿಕೊಳ್ಳುತ್ತೇನೆ ಎಂದು ನುಡಿದರು.
ದೇವಸ್ಥಾನದ ಅಧ್ಯಕ್ಷ ಹೆಚ್.ಧನಂಜಯ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶೃಂಗೇರಿ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಜೀವರಾಜ್, ಶೇಡಿಕೊಡ್ಲು ವಿಠಲ ಶೆಟ್ಟಿ, ಕಾರ್ಯ ನಿರ್ವಹಣಾಧಿಕಾರಿ ಜಯಮ್ಮ ಪಿ. ಉಪಸ್ಥಿತರಿದ್ದರು. ಕೃಷ್ಣಮೂರ್ತಿ ಮಂಜರ ತಾಯಿ ವಿಶಾಲಾಕ್ಷಿಯಮ್ಮನವರನ್ನು ಕಾರ್ಯ ನಿರ್ವಹಣಾಧಿಕಾರಿ ಜಯಮ್ಮ ಪಿ. ಸನ್ಮಾನಿಸಿದರು. ಸುಬ್ರಹ್ಮಣ್ಯ ದೇವರ ಶಿಲಾಮಯ ದೇವಸ್ಥಾನ ನಿರ್ಮಿಸಿದ ಕೊಡುಗೈ ದಾನಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ಹಾಗೂ ಅವರ ಧರ್ಮ ಪತ್ನಿ ಶ್ರೀಮತಿ ಶಾಂತಿ ಕೆ. ಮಂಜ, ಹಾಗೂ ಕೃಷ್ಣಮೂರ್ತಿ ಮಂಜರ ಹಿರಿಯ ಸಹೋದರ ಶ್ರೀ ಶ್ರೀಧರ ಮಂಜ ದಂಪತಿ, ಕಿರಿಯ ಸಹೋದರ ಶ್ರೀ ನಾಗರಾಜ ಮಂಜ ದಂಪತಿಯನ್ನು ದೇವಸ್ಥಾನದ ವತಿಯಿಂದ ಸನ್ಮಾನಿಸಲಾಯಿತು.
ಇದೇ ಸಂದರ್ಭ ದೇವಸ್ಥಾನದ ಶಿಲಾ ಕೆಲಸ ಮಾಡಿದ ಶಿಲ್ಪಿ ದಿನೇಶ್ ಕಾರ್ಕಳ, ಮರದ ಕೆಲಸ ಮಾಡಿದ ಚಂzಯ ಆಚಾರ್ಯ, ಮೇಸ್ತ್ರಿ ಕೆಲಸ ಮಾಡಿದ ರಾಜೀವ ನಾಯ್ಕ, ಸಂದೀಪ್ ಮಂದಾರ್ತಿ, ಕ್ರೇನ್ ವ್ಯವಸ್ಥೆ ಮಾಡಿದ ಗುರು ಇವರನ್ನು ಸನ್ಮಾನಿಸಲಾಯಿತು. ನೂತನ ಮನೆಕಟ್ಟುತ್ತಿರುವ ಹಿರಿಯ ಯಕ್ಷಗಾನ ಕಲಾವಿದ ಆಜ್ರಿ ಗೋಪಾಲ ಗಾಣಿಗರಿಗೆ ರೂ. ಲಕ್ಷ ಮೊತ್ತವನ್ನು ಕೃಷ್ಣಮೂರ್ತಿ ಮಂಜರು ನೀಡಿದರು.
ಶಿಕ್ಷಕ ಪ್ರಶಾಂತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ದೇವಸ್ಥಾನದ ಸಿಬ್ಬಂದಿಗಳು ಸಹಕರಿಸಿದರು.
ಅಭಿನಂದನಾ ಸಮಾರಂಭದ ಪೂರ್ವದಲ್ಲಿ ಬೆಳಿಗ್ಗೆ ಋಷಿಕೇಶ ಬಾಯರಿಯವರ ಮಾರ್ಗದರ್ಶನದಲ್ಲಿ ಪ್ರಾಯಶ್ಚಿತ್ತ ತಿಲಹೋಮ, ಕೂಷ್ಮಾಂಡ ಹೋಮ, ಪವಮಾನ ಹೋಮ, ಅಧಿವಾಸ ಹೋಮ, ಬ್ರಹ್ಮಕಲಶಾಭಿಷೇಕ. ಮಹಾಪೂಜೆ ನಡೆಯಿತು. ನಂತರ ಸಂದರ್ಶನ, ತೀರ್ಥ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು. ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮದಲ್ಲಿ ಊರ ಪರ ಊರ ಅನೇಕ ಗಣ್ಯರು, ಭಕ್ತಾದಿಗಳು ಭಾಗವಹಿಸಿದ್ದರು.

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ

administrator

Related Articles

Leave a Reply

Your email address will not be published. Required fields are marked *