ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಮರವಂತೆ, ಮೇ.೧೨: ಮಕ್ಕಳಿಗೆ ತಂದೆ ತಾಯಿಯೇ ಮಾದರಿಯಾಗಿರಬೇಕು. ಮಕ್ಕಳ ಮುಂದೆ ಯಾವ ಪೋಷಕರು ಸುಳ್ಳನ್ನು ಹೇಳಬಾರದು. ಮನೆಯಲ್ಲಿ ಪೋಷಕರು ದುಃಶ್ಚಟಗಳಿಂದ ದೂರ ಇದ್ದು ಶಿಸ್ತು, ವಿನಯದಿಂದ ನಡೆದುಕೊಂಡು ಸದಾ ಒಳ್ಳೆಯ ಕೆಲಸ ಮಾಡಿದಾಗ ಮಕ್ಕಳು ಕೂಡ ಒಳ್ಳೆಯ ನಾಗರಿಕರಾಗಿ ಬೆಳೆಯಲು ಸಾಧ್ಯವಾಗುತ್ತದೆ. ಎಂದು ನಿವೃತ್ತ ಶಿಕ್ಷಕ ಶಂಕರ ಬಿಲ್ಲವ ನುಡಿದರು. ಅವರು ಆಸರೆ ಚಾರಿಟೇಬಲ್ ಟ್ರಸ್ಟ್ ರಿ., ಸ.ಹಿ.ಪ್ರಾ.ಶಾಲೆ ಮರವಂತೆ ಇಲ್ಲಿನ ಹಳೆವಿದ್ಯಾರ್ಥಿ ಸಂಘ ರಿ.ಮರವಂತೆ ಹಾಗೂ ನೇತಾಜಿ ಸುಭಾಶ್ಚಂದ್ರ ಬೋಸ್ ಸರಕಾರಿ ಪ್ರೌಢಶಾಲೆ ಮರವಂತೆ ಇವರ ಆಶ್ರಯದಲ್ಲಿ ನೇತಾಜಿ ಸುಭಾಶ್ಚಂದ್ರ ಬೋಸ್ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನಡೆದ ೭ ದಿನಗಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಸಭಾಧ್ಯಕ್ಷತೆಯನ್ನು ನೇತಾಜಿ ಸುಭಾಷ್ ಚಂದ್ರ ಬೋಸ್ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಭಾಸ್ಕರ ಮಯ್ಯ ವಹಿಸಿದ್ದರು.
ಆಸರೆ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿ ಶಿವರಾಮ ಪೂಜಾರಿ, ಗ್ರಾಮ ಪಂಚಾಯತ್ ಅಧ್ಯಕ್ಷ ನಾಗರಾಜ್ ಪಟಗಾರ, ನಿವೃತ್ತ ಉಪನ್ಯಾಸಕ ಎಸ್.ಜನಾದನ್ ಮರವಂತೆ, ಬಿ.ರಾಮಕೃಷ್ಣ ಮಾಲೂರು, ಶಿಬಿರಾಧಿಕಾರಿ ರಮೇಶ್ ನಾಯ್ಕ್, ಸಂಪನ್ಮೂಲ ವ್ಯಕ್ತಿ ಸ್ವರ್ಣ ಕುಂದಾಪುರ, ಶಿವರಾಮ ಪೂಜಾರಿ ಮರವಂತೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಜಾದಿನದಲ್ಲೂ ಆಗಮಿಸಿ ವಿದ್ಯಾರ್ಥಿಗಳಿಗೆ ಅಡುಗೆ ಮಾಡಿ ಬಡಿಸಿದ ಶ್ರೀಮತಿ ಸುಶೀಲ ಹಾಗೂ ಶ್ರೀಮತಿ ಲಕ್ಷ್ಮೀಯವರನ್ನು, ಎಲ್ಲಾ ಸಂಪನ್ಮೂಲ ವ್ಯಕ್ತಿಗಳನ್ನು ಹಾಗೂ ಸಹಕಾರ ನೀಡಿದವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಶಿಬಿರದಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ದೃಢೀಕರಣ ಪತ್ರ ವಿತರಿಸಲಾಯಿತು.
ಆಸರೆ ಚಾರಿಟೇಬಲ್ ಟ್ರಸ್ಟ್ ಹಾಗೂ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ ಆಚಾರ್ಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿದ್ದು ಆಸರೆ ಟ್ರಸ್ಟ್ ಸದಸ್ಯ ಸತೀಶ್ ಜಿ. ಗಂಗೊಳ್ಳಿಯರಮನೆ ಸ್ವಾಗತಿಸಿದರು. ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಹಾಗೂ ಆಸರೆ ಟ್ರಸ್ಟನ ಟ್ರಸ್ಟಿ ರವಿಮಡಿವಾಳ ಕಾರ್ಯಕ್ರಮ ನಿರೂಪಿಸಿದರು. ಆಸರೆ ಟ್ರಸ್ಟಿ ಕರುಣಾಕರ ಆಚಾರ್ಯ ಮರವಂತೆ ವಂದಿಸಿದರು. ಆಸರೆ ಟ್ರಸ್ಟ್ನ ಸದಸ್ಯರಾದ ಮಂಜುನಾಥ ಮಧ್ಯಸ್ಥ, ಸಂತೋಷ ಮೊಗವೀರ ಸಹಕರಿಸಿದರು. ಹಳೆ ವಿದ್ಯಾರ್ಥಿ ಸಂಘದ ಸದಸ್ಯರು, ಪೋಷಕರು, ವಿದ್ಯಾರ್ಥಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

