ವರದಿ: ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ದಿ:
ರೋಟರಿ ಕ್ಲಬ್ ಬ್ರಹ್ಮಾವರ, ರೋಟರಿ ಕ್ಲಬ್ ಬಾರ್ಕೂರು, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ, ಐ.ಸಿ.ಎ.ಆರ್ ಕೃಷಿ ವಿಜ್ಞಾನ ಕೇಂದ್ರ ಮತ್ತು ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಹಾಗೂ ಡಿಪ್ಲೋಮ ಕೃಷಿ ಮಹಾ ವಿದ್ಯಾಲಯ ಬ್ರಹ್ಮಾವರ ಇವರ ಸಹಯೋಗದಲ್ಲಿ ಹಲಸು ಮತ್ತು ಹಣ್ಣು ಮೇಳ ಮೇ ೩೦ ಶುಕ್ರವಾರ, ಮೇ ೩೧ ಶನಿವಾರ ಹಾಗೂ ಜೂನ್ ೧ ಆದಿತ್ಯವಾರ ತನಕ ಬ್ರಹ್ಮಾವರದ ಎಸ್ಎಮ್ಎಸ್ ಸಮುದಾಯ ಭವನದಲ್ಲಿ ನಡೆಯಲಿದೆ. ಈ ಮೇಳದಲ್ಲಿ ವಿವಿಧ ರೀತಿಯ ಹಣ್ಣುಗಳು ಬಯಲು ಸೀಮೆಯ ಅತ್ಯಂತ ಸಿಹಿಯಾದ ಮಾವು ಹಾಗೂ ಪ್ರಸಿದ್ಧ ಕೆಂಪು ಹಲಸು ಹಣ್ಣಿನ ಉತ್ಪನ್ನಗಳು, ಹಲವಾರು ಹಣ್ಣಿನ ಖಾದ್ಯಗಳು, ಬಗೆ ಬಗೆ ಹಣ್ಣಿನ ಐಸ್ ಕ್ರೀಮ್, ಹಲಸಿನ ಹೋಳಿಗೆ ಅಲ್ಲದೇ ವಿವಿಧ ಹಣ್ಣಿನ ಗಿಡಗಳು ತರಕಾರಿ ಬೀಜಗಳು ಆಯುರ್ವೇದಿಕ್ ಹಾಗೂ ಗೃಹ ತಯಾರಿಕೆಯ ವಸ್ತುಗಳು ಹೀಗೆ ನೂರಾರು ಮಳಿಗೆಗಳು ಆಗಮಿಸಲಿವೆ. ಕಳೆದ ನಾಲ್ಕು ಬಾರಿ ಯಶಸ್ವಿಯಾಗಿ ಹಲಸು ಮೇಳ ನಡೆಸಿದ್ದು ಈ ಬಾರಿಯ ಮೇಳಕ್ಕೆ ಈಗಾಗಲೇ ನೂರಕ್ಕೂ ಅಧಿಕ ಸ್ಟಾಲ್ ಗಳು ನೊಂದಾವಣೆ ಆಗಿವೆ. ರಾಮನಗರದ ಮಾವಿನ ಹಣ್ಣುಗಳ ೧೮ ಸ್ಟಾಲ್ಗಳ ಮಾಲಕರು ನೊಂದಾವಣೆ ಮಾಡಿಕೊಂಡಿದ್ದಾರೆ. ಎರಡು ಸ್ಟಾಲ್ಗಳಲ್ಲಿ ಹಲಸಿನ ಜಿಲೇಬಿಗಳನ್ನೇ ಮಾಡಲಿದ್ದಾರೆ. ಹಣ್ಣಿನ ಐಸ್ ಕ್ರೀಮ್, ಆಯುರ್ವೇದ ಉತ್ಪನ್ನಗಳ ಸ್ಟಾಲ್, ಗೃಹ ಉತ್ಪನ್ನಗಳ ಸ್ಟಾಲ್, ನರ್ಸರಿ ಗಿಡಗಳ ಸ್ಟಾಲ್, ಸೀರೆಗಳ ಸ್ಟಾಲ್ಗಳು ಬರಲಿದೆ ಎಂದು ಬ್ರಹ್ಮಾವರ ಹಲಸು ಮೇಳದ ಸಂಯೋಜಕ ಅಲ್ವಿನ್ ಅಂದ್ರಾದೆ ನುಡಿದರು.
ಅವರು ಸಾಸ್ತಾನ ಕೋಸ್ಟಲ್ ಪ್ಯಾರಡೈಸ್ ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ರೋಟರಿ ಅಧ್ಯಕ್ಷ ಶ್ರೀಧರ ಶೆಟ್ಟಿ ಮಾತನಾಡಿ ರೈತರು ಹಾಗೂ ಗ್ರಾಹಕರ ನಡುವೆ ನೇರ ವ್ಯವಹಾರದ ಉದ್ದೇಶದಲ್ಲಿ ಈ ಹಣ್ಣು ಹಾಗೂ ಹಲಸು ಮೇಳ ಆಯೋಜಿಸುತ್ತಿದ್ದು ಜನರು ಇದರ ಸೌಲಭ್ಯ ಪಡೆದುಕೊಳ್ಳಬೇಕೆಂದರು.
ಬ್ರಹ್ಮಾವರ ಕೃಷಿ ಡಿಪ್ಲೋಮಾ ಮಹಾವಿದ್ಯಾಲಯ ಪ್ರಾಂಶುಪಾಲ ಡಾ.ಸುಧೀರ್ ಕಾಮತ್ ಮಾತನಾಡಿ ಹಣ್ಣು ಮೇಳದಲ್ಲಿ ಕೃಷಿ ಕೇಂದ್ರದಲ್ಲಿ ಕೃಷಿ ಕೇಂದ್ರದ ವಿಜ್ಞಾನಿಗಳು ಭಾಗವಹಿಸುತ್ತಿದ್ದು ರೈತರು ಯಾವುದೇ ಮಾಹಿತಿಯನ್ನು ಸ್ಥಳದಲ್ಲೇ ಪಡೆಯಬಹುದು ಎಂದರು.
ಬಾರ್ಕೂರು ರೋಟರಿ ಅಧ್ಯಕ್ಷ ಗಣೇಶ್ ಶೆಟ್ಟಿ ಮಾತನಾಡಿ ಮೇ೩೦ರಂದು ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು ಸಿ.ಎ.ದೇವಾನಂದ್ ಉದ್ಘಾಟಿಸಲಿದ್ದಾರೆ. ಆರೂರು ಶ್ರೀಧರ ವಿ.ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು, ಅತಿಥಿಗಳಾಗಿ ಅಶೋಕ್ ಕುಮಾರ್ ಶೆಟ್ಟಿ ಮೈರ್ಮಾಡಿ, ಡಾ.ಎ.ಬಿ.ಪಾಟೀಲ, ಆನಂದ ಸಿ.ಕುಂದರ್, ಶ್ರೀಮತಿ ಭುವನೇಶ್ವರಿ, ನಿತ್ಯಾನಂದ ಬಿ.ಆರ್, ರೆ,ಫಾ.ಎಮ್.ಸಿ.ಮಥಾಯ, ಡಾ.ಸುಧೀರ ಕಾಮತ್ ಕೆ.ವಿ., ಡಾ.ಭೂಮಿಕಾ ಎಚ್.ಆರ್., ಎಮ್.ರಾಘವೇಂದ್ರ ಸಾಮಗ, ರಾಜಾರಾಮ್ ಶೆಟ್ಟಿ, ಗಣೇಶ್ ಶೆಟ್ಟಿ, ದಿನೇಶ್ ಬಾಯರಿ ಹಾಗೂ ಶಂಕರ ಸುವರ್ಣ ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಹಂದಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಉದಯ ಪೂಜಾರಿ ಉಪಸ್ಥಿತರಿದ್ದರು. ಅಲ್ವನ್ ಅಂದ್ರಾದೆ ಸ್ವಾಗತಿಸಿದ್ದು ಗಣೇಶ್ ಶೆಟ್ಟಿ ವಂದಿಸಿದರು.
