ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ:
ವಂಡ್ಸೆ, ಜ.೩೧: ಕೊಲ್ಲೂರು ಹೆಮ್ಮಾಡಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರೊಂದರಲ್ಲಿ ಹೊಗೆ ಕಾಣಿಸಿಕೊಂಡು ನಂತರ ಸಂಪೂರ್ಣ ಸುಟ್ಟು ಹೋದ ಘಟನೆ ಕುಂದಾಪುರ ತಾಲೂಕು ವಂಡ್ಸೆ ಸಮೀಪದ ಹರವರಿಯಲ್ಲಿ ನಡೆದಿದೆ.

ಭಾಸ್ಕರ ಆಚಾರ್ಯ ನಾವುಂದ (ಬೀಜಾಡಿ) ಎಂಬವರು ಕೆಲಸ ನಿಮಿತ್ತ ತನ್ನ ಕೆಎ 20 ಎಂ.ಎಫ್ 5470 ಸಿಟ್ರಿಯೋನ್ ( Citroen) ಕಾರಿನಲ್ಲಿ ಆಲೂರು ಮಾರ್ಗವಾಗಿ ಚಿತ್ತೂರಿಗೆ ತೆರಳಿ ನಂತರ ವಂಡ್ಸೆ ಕಡೆಗೆ ಹೊರಟಿದ್ದರು.
ಹರವರಿ ಮಲಯಾಳ ಬೊಬ್ಬರ್ಯ ದೈವಸ್ಥಾನದ ಸಮೀಪ ಹೋಗುವಾಗ ಕಾರಿನೊಳಗೆ ಹೊಗೆ ಬರುವುದು ಇವರ ಗಮನಕ್ಕೆ ಬಂದಿತ್ತು. ತಕ್ಷಣ ಕಾರು ನಿಲ್ಲಿಸಿ ಬಾಗಿಲು ತೆಗೆದು ಇಳಿಯುತ್ತಿದ್ದಂತೆ ಬೆಂಕಿ ಹೊತ್ತಿಕೊಂಡು ಉರಿಯಲಾರಂಭಿಸಿತು. ಸ್ಥಳಿಯರು ಬೆಂಕಿ ನಂದಿಸಲು ಯತ್ನ ನಡೆಸಿದರೂ ಸಾಧ್ಯವಾಗಿಲ್ಲ. ಕೂಡಲೆ ಅಗ್ನಿಶಾಮಕ ದಳದವರಿಗೆ ಸುದ್ದಿ ಮುಟ್ಟಿಸಿದ್ದು ಅವರು ಬರುವಷ್ಟರಲ್ಲಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಸುಟ್ಟು ಕರಕಲಾಗುತ್ತಿದ್ದಂತೆ ಇಳಿಜಾರಿನಲ್ಲಿ ಕಾರು ಹಿಮ್ಮುಖವಾಗಿ ಸರಿದು ಬಂದು ಮಣ್ಣಿನ ರಾಶಿಯೊಂದರ ಸಮೀಪ ಬಂದು ನಿಂತಿತ್ತು. ನಂತರ ಅಗ್ನಿ ಶಾಮಕದ ಸಿಬ್ಬಂದಿಗಳು ಸಂಪೂರ್ಣ ಬೆಂಕಿ ಆರಿಸಿದ್ದರು.

ಕಾರಿನ ಮಾಲಕ ಭಾಸ್ಕರ ಆಚಾರ್ಯ ಅವರು ಮಾತನಾಡುತ್ತಾ ೨೦೨೩ರ ಮಾಡೆಲ್ನ ಕಾರು ರೂ.8.60 ಲಕ್ಷ ವೆಚ್ಚದ್ದಾಗಿದ್ದು ಡ್ರೈವಿಂಗ್ ಮಾಡುವಾಗ ಹೊಗೆ ಬರುವುದನ್ನು ಕಂಡು ತಕ್ಷಣ ನಿಲ್ಲಿಸಿ ಹೊರ ಬಂದೆ. ನೋಡ ನೋಡುತ್ತಲೇ ಬೆಂಕಿ ಆವರಿಸಿಕೊಂಡು ಬಿಟ್ಟಿತು. ಬಹುಶಃ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿಗಾಹುತಿಯಾಗಿರಬಹುದು ಎಂದು ತಿಳಿಸಿದ್ದಾರೆ.




