ಚಿತ್ತೂರು ಪ್ರಭಾಕರ ಆಚಾರ್ಯ ಉಡುಪಿಮಿತ್ರ ಪತ್ರಿಕೆ ಸುದ್ಧಿ : ಭಾರತಿ ಶ್ರೀಧರ ಆಚಾರ್ಯ ಬ್ರಹ್ಮಾವರ ಇವರು ಶಾಸ್ತ್ರೀಯ ಸಂಗೀತದ ಹಾಡುಗಾರಿಕೆ ವಿಭಾಗದಲ್ಲಿ ಸೀನಿಯರ್ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರಿಗೆ ಚಿಕ್ಕಂದಿನಿಂದಲೂ ಸಂಗೀತದ ಬಗ್ಗೆ ವಿಶೇಷ ಆಸಕ್ತಿ. ಮನೆಯಲ್ಲಿ ಹಿರಿಯರ ಭಜನೆ ಹಾಡುಗಳನ್ನು ಆಲಿಸುತ್ತಿದ್ದ ಇವರು ಅವರೊಂದಿಗೆ ಭಜನೆ ಹಾಡುಗಳನ್ನು ಹಾಡುತ್ತಿದ್ದರು. ಸಂಗೀತದಲ್ಲಿ ಏನಾದರೊಂದು ಸಾಧನೆ ಮಾಡಬೇಕೆಂಬ ತುಡಿತ ಆ ಕ್ಷೇತ್ರದಲ್ಲಿ ಮುಂದುವರಿಯುವಂತೆ ಇವರನ್ನು ಪ್ರೇರೇಪಿಸಿತು. ಇವರು ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಉಡುಪಿಯ ಯು.ಎನ್.ರಮೇಶ್ರವರಲ್ಲಿ 2 ವರ್ಷ ಅಭ್ಯಾಸ ಮಾಡಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಹಿಂದೂಸ್ತಾನಿ ಸಂಗೀತ ಪ್ರಾಥಮಿಕ (ಗ್ರೇಡ್ ಪರೀಕ್ಷೆಯಲ್ಲಿ) ವಿಶಿಷ್ಟ ಶ್ರೇಣಿಯಲ್ಲಿ ಪಾಸಾದರು. ಜೂನಿಯರ್ ವಿಭಾಗ ಮುಗಿಸಿದ ನಂತರ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಹಾಡುಗಾರಿಕೆ ಹಾಗೂ ಹಾರ್ಮೋನಿಯಂನ್ನು ಸಾಹೇಬರಕಟ್ಟೆಯ ವಿದ್ವಾನ್ ಅಶೋಕ್ ಆಚಾರ್ಯರಲ್ಲಿ ಅಭ್ಯಾಸ ಮಾಡಿದರು. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಹಾಡುಗಾರಿಕೆ ವಿಭಾಗದಲ್ಲಿ ಜೂನಿಯರ್ ಮುಗಿಸಿ ೨೦೨೩-೨೪ರ ಸಾಲಿನಲ್ಲಿ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ ಮೈಸೂರು ಇಲ್ಲಿ ನಡೆಸುವ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಹಾಡುಗಾರಿಕೆ ವಿಭಾಗದಲ್ಲಿ ಸೀನಿಯರ್ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಪಾಸಾದರು. ಪ್ರಸ್ತುತ ಇವರು ರಾಗಶ್ರೀ ಸಂಗೀತ ಶಿಕ್ಷಣ ಕೇಂದ್ರ ಸಾಹೇಬರಕಟ್ಟೆ ಇಲ್ಲಿಯ ಸಂಗೀತ ಶಾಲೆಯಲ್ಲಿ ವಿದ್ವತ್ ತಯಾರಿ ನಡೆಸುತ್ತಿದ್ದಾರೆ.
ಭಾರತೀ ಶ್ರೀಧರ ಆಚಾರ್ಯರು ಹಾರ್ಮೋನಿಯಂ ವಾದಕರಾಗಿಯೂ ಗುರುತಿಸಿಕೊಂಡಿದ್ದಾರೆ. ಸಂಗೀತಾಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೂ ತರಬೇತಿ ನೀಡುತ್ತಿರುವ ಇವರು ಸಾಹೇಬರಕಟ್ಟೆಯ ರಾಗಶ್ರೀ ಸಂಗೀತ ಶಿಕ್ಷಣ ಕೇಂದ್ರದಲ್ಲಿ ಶಿಕ್ಷಕಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಅನೇಕ ಕಡೆಗಳಲ್ಲಿ ತಮ್ಮ ತಂಡದ ಮೂಲಕ ಭಜನಾ ಕಾರ್ಯಕ್ರಮ ನೀಡುತ್ತಾ ಬಂದಿದ್ದಾರೆ. ಕಾರ್ಕಳ, ಮುಂಬೈ, ಬಾರಕೂರು ಉಡುಪಿ, ಮಂಗಳೂರು, ಸುರತ್ಕಲ್, ಕಟಪಾಡಿ, ಕುತ್ಯಾರು, ರಂಗನಕೇರಿ, ಅಲ್ಲದೆ ಹಲವಾರು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ವೇದಿಕೆಯಲ್ಲೂ ಭಜನಾ ಕಾರ್ಯಕ್ರಮ ನೀಡಿರುತ್ತಾರೆ. ರೋಟರಿ ಹಂಗಾರಕಟ್ಟೆ-ಸಾಸ್ತಾನ ನಡೆಸಿದ ವಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಇವರು ಪ್ರಥಮ ಸ್ಥಾನ ಗಳಿಸಿದ್ದಾರೆ. ಭಾರತಿಯವರ ಪ್ರತಿಭೆಯ ಹಾಗೂ ಸಂಗೀತದ ಸಾಧನೆಯನ್ನು ಗುರುತಿಸಿ ರೋಟರಿ ಕ್ಲಬ್ ಬ್ರಹ್ಮಾವರ, ರೋಟರಿ ಕ್ಲಬ್ ಕೊಕ್ಕರ್ಣೆ ಸನ್ಮಾನಿಸಿವೆ. ಸಂಗೀತ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಲಿ ಎಂಬುದು ಹಾರೈಕೆಯಾಗಿದೆ