ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿ ಮಿತ್ರ ಪತ್ರಿಕೆ ಸುದ್ಧಿ :
ಬ್ರಹ್ಮಾವರ, ಎ.೨೬: ರೂ.೯೦ ಕೋಟಿ ವೆಚ್ಚದಲ್ಲಿ ಭದ್ರಗಿರಿಯಿಂದ ಮಾಬುಕಳದವರೆಗೆ ಸರ್ವಿಸ್ ರಸ್ತೆಗೆ ಟೆಂಡರ್ ಆಗಿದೆ ಎನ್ನುವ ಮಾಹಿತಿ ಮಾದ್ಯಮಗಳಲ್ಲಿ ಬರುತ್ತಿದೆ. ಇದು ಸತ್ಯವೇ ಎಂಬ ವಿಚಾರದ ಬಗ್ಗೆ ಅಧೀಕೃತ ಆದೇಶದೊಂದಿಗೆ ಸಂಸದರು, ಜಿಲ್ಲಾಧಿಕಾರಿಯವರು ಅಥವಾ ಹೆದ್ದಾರಿ ಇಲಾಖೆಯವರು ಈ ತನಕ ಹೇಳಿಕೆ ನೀಡಿಲ್ಲ. ಅವರುಗಳು ಅಧೀಕೃತ ಆದೇಶದೊಂದಿಗೆ ಹೇಳಿಕೆಯನ್ನು ನೀಡಿದಲ್ಲಿ ಬ್ರಹ್ಮಾವರದ ನಾಗರಿಕರಿಗೆ ಭರವಸೆ ಮೂಡುತ್ತದೆ. ಯಾವುದೇ ಅನುದಾನ ಮಂಜೂರಾಗದೆ ಸಾರ್ವಜನಿಕರಿಗೆ ತಪ್ಪು ಮಾಹಿತಿ ಹೋಗುವುದು ಸರಿಯಲ್ಲ. ಆದಷ್ಟು ಬೇಗ ಸರ್ವಿಸ್ ರಸ್ತೆ ಹಾಗೂ ಪ್ಲೈ ಓವರ್ಗೆ ಅನುದಾನ ಮಂಜೂರು ಮಾಡಿ ಕಾಮಗಾರಿ ಆರಂಭಿಸದೇ ಇದ್ದಲ್ಲಿ ಈ ಹಿಂದೆ ಘೋಷಿಸಿದಂತೆ ನಮ್ಮ ಹೋರಾಟ ನಡೆಯಲಿದೆ ಎಂದು ರಾಷ್ಟ್ರೀಯ ಹೆದ್ದಾರಿ -66 ಉಳಿಸಿ ಸಮಿತಿ ಸಂಚಾಲಕ ಬಿ.ಗೋವಿಂದ್ರಾಜ್ ಹೆಗ್ಡೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತುರ್ತಾಗಿ ಸರ್ವಿಸ್ ರಸ್ತೆಯನ್ನು ಭದ್ರಗಿರಿಯಿಂದ ಮಾಬುಕಳದ ವರೆಗೆ ಹೆದ್ದಾರಿಯ ಎಡ ಮತ್ತು ಬಲ ಭಾಗದಲ್ಲಿ ರಚಿಸಲೇಬೇಕು. ಕಾಲಮಿತಿಯೊಳಗೆ ಮೇಲ್ ಸೇತುವೆ ರಚಿಸಬೇಕು.
ಕಳೆದ ೫ ವರ್ಷಗಳಿಂದ ಮಹೇಶ್ ಆಸ್ಪತ್ರೆ ಜಂಕ್ಷನ್, ಬಸ್ ಸ್ಟ್ಯಾಂಡ್ ಮತ್ತು ಆಕಾಶವಾಣಿ ಜಂಕ್ಷನ್ಗಳಲ್ಲಿ ೫೦ ಕ್ಕೂ ಹೆಚ್ಚು ಅಪಘಾತಗಳಾಗಿವೆ. ೨೦೧೩ ರಿಂದಲೇ ಸಂಬಂಧಪಟ್ಟವರಿಗೆ ಸಮಿತಿ ವತಿಯಿಂದ ಮನವಿ ನೀಡುತ್ತಾ ಬಂದಿದ್ದರೂ ಸೂಕ್ತ ಕ್ರಮ ಕೈಗೊಳ್ಳದ ಹೆದ್ದಾರಿ ಇಲಾಖೆಯ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ದಿನಾಂಕ-09.04.2025 ರಿಂದ ೯೦ ದಿವಸಗಳ ಕಾಲಮಿತಿಯಲ್ಲಿ ಈ ಮೂರು ಬೇಡಿಕೆಗಳನ್ನು ಈಡೇರಿಸಲು ಮಾಧ್ಯಮದ ಮೂಲಕ ಕೋರಿರುತ್ತೇವೆ ಮತ್ತು ಸಂಬಂಧಪಟ್ಟವರಿಗೆ ಮನವಿಗಳನ್ನು ನೀಡಲಿದ್ದೇವೆ. ಬೇಡಿಕೆ ಈಡೇರುವ ಸೂಚನೆ ಕಾಣದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟದ ಬಗ್ಗೆ ಸೂಕ್ತ ತೀರ್ಮಾನ ಕೂಡಲೇ ಕೈಗೊಳ್ಳುತ್ತೇವೆ. ನಾವೂ ಕೂಡಾ ಹೆದ್ದಾರಿ ಇಲಾಖೆಯವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯತೆಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಗೋವಿಂದ್ರಾಜ್ ಹೆಗ್ಡೆ ತಿಳಿಸಿದ್ದಾರೆ.
