ಚಿತ್ತೂರು, ಸೆ.19: ರಾಷ್ಟ್ರೀಯ ಆಯುರ್ವೇದ ದಿನದ ಪ್ರಯುಕ್ತ ಕುಂದಾಪುರ ತಾಲೂಕು ಆಲೂರಿನ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದಲ್ಲಿ ಪ್ರಬಂಧ, ಭಾಷಣ, ಕವನ ಸ್ಪರ್ಧೆ ನಡೆಯಲಿದೆ ಎಂದು ಆಯುರ್ವೇದ ಚಿಕಿತ್ಸಾಲಯದ ನಿರ್ದೇಶಕ ಡಾ.ರಾಜೇಶ್ ಬಾಯರಿ ಅವರು ತಿಳಿಸಿದ್ದಾರೆ.
ಶಾಲಾ ಮಕ್ಕಳಿಗೆ ಆಯುರ್ವೇದಿಯ ದಿನಚರ್ಯೆ ಕುರಿತು ಪ್ರಬಂಧ ಸ್ಪರ್ಧೆ ಹಾಗೂ ಆಧುನಿಕ ಜೀವನ ಶೈಲಿ ಮತ್ತು ಆಯುರ್ವೇದ ಎಂಬ ವಿಷಯದಲ್ಲಿ ಭಾಷಣ ಸ್ಪರ್ಧೆ ನಡೆಯಲಿದೆ. ಸಾರ್ವಜನಿಕರಿಗೆ ಆಯುರ್ವೇದ ವಿಷಯದಲ್ಲಿ ಕವನ ಸ್ಪರ್ಧೆ ನಡೆಯಲಿದೆ. ಕಿರಿಯ ವಿಭಾಗ ಹಾಗೂ ಹಿರಿಯ ವಿಭಾಗ ಮಾಡಲಾಗಿದ್ದು ಕಿರಿಯ ವಿಭಾಗದಲ್ಲಿ 5ರಿಂದ 7ನೇ ತರಗತಿ ಮಕ್ಕಳು ಹಾಗೂ ಹಿರಿಯ ವಿಭಾಗದಲ್ಲಿ 8ರಿಂದ 10ನೇ ತರಗತಿ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ. ಪ್ರಥಮ ಬಹುಮಾನ ರೂ.3000 ಹಾಗೂ ದ್ವಿತೀಯ ಬಹುಮಾನ ರೂ.2000 ನೀಡುತ್ತಿದ್ದು ಪ್ರಬಂಧ 800 ಶಬ್ದಗಳನ್ನು ಮೀರಬಾರದು. ಭಾಷಣ ಸ್ಪರ್ಧೆ 4 ನಿಮಿಷಕ್ಕೆ ಸೀಮಿತಗೊಳಿಸಲಾಗಿದೆ.
ಪೂರ್ವಾಹ್ನ ಉದ್ಘಾಟನಾ ಸಮಾರಂಭ ನಡೆಯಲಿದ್ದು ಸಮಾರಂಭದಲ್ಲಿ ಹಟ್ಟಿಯಂಗಡಿ ಸಿದ್ದಿವಿನಾಯಕ ಇಂಗ್ಲೀಷ್ ಮೀಡಿಯಂ ಸ್ಕೂಲಿನ ಪ್ರಿನ್ಸಿಪಾಲ್ ಶರಣ್ಕುಮಾರ್, ಆಲೂರು ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ದೇವಾಡಿಗ, ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್ ಭಾಗವಹಿಸಲಿದ್ದಾರೆ.
ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ, ಕರ್ನಾಟಕ ಬ್ಯಾಂಕ್ ರಿಜನಲ್ ಮ್ಯಾನೇಜರ್ ವಾದಿರಾಜ ಭಟ್, ಸಚಿನ್ ನಕ್ಕತ್ತಾಯ, ಉದ್ಯಮಿ ಕೆರಾಡಿ ಚಂದ್ರಶೇಖರ ಶೆಟ್ಟಿ ಭಾಗವಹಿಸಲಿದ್ದಾರೆ ಎಂದು ಡಾ. ರಾಜೇಶ್ ಬಾಯರಿ ತಿಳಿಸಿದ್ದಾರೆ.




