• June 29, 2025
  • Last Update June 29, 2025 10:13 am
  • Brahmavara

ಹಂಗಾರಕಟ್ಟೆ ಯಕ್ಷಗಾನ ಕೇಂದ್ರ ನಡೆದು ಬಂದ ದಾರಿ

ಹಂಗಾರಕಟ್ಟೆ ಯಕ್ಷಗಾನ ಕೇಂದ್ರ ನಡೆದು ಬಂದ ದಾರಿ
  • ಚಿತ್ತೂರು ಪ್ರಭಾಕರ ಆಚಾರ್ಯ
    ಉಡುಪಿಮಿತ್ರ ಪತ್ರಿಕೆಯ ಸುದ್ಧಿ :
    ಇದು ಐವತ್ತಮೂರು ವರ್ಷಗಳ ಹಿಂದಿನ ಮಾತು. ಆಗ ಡೇರೆಮೇಳಗಳು ಮೆರೆಯುತ್ತಿದ್ದ ಕಾಲ. ಡೇರೆ ಮೇಳಗಳೇ ಶ್ರೇಷ್ಠ, ಅವುಗಳೇ ಕಲಾವಿದರ ಅಂತಿಮ ಗುರಿ ಎಂಬ ಭಾವನೆ ಬೇರೂರಿತ್ತು. ಆದರೆ ಆಗಿನ ಬೇಡಿಕೆಗಳಿಗೆ ತಕ್ಕಂತೆ ಭಾಗವತರು, ಮದ್ದಲೆ- ಚಂಡೆಯವರು ಲಭ್ಯವಿರಲಿಲ್ಲ. ಕಾರಣ, ಬಡಗು ತಿಟ್ಟಿನ ಯಕ್ಷಗಾನದಲ್ಲಿ ಹಿರಿಯ ಭಾಗವತರುಗಳಲ್ಲಿ ಹೆಚ್ಚಿನವರು ನಿವೃತ್ತರಾಗಿದ್ದರು ಮತ್ತು ಕೆಲವರು ನಿಧನರಾಗಿದ್ದರು. ಕುಂಜಾಲು ಶೇಷಗಿರಿ ಕಿಣಿ ಮತ್ತು ವೆಂಕಟರಮಣ ಯಾಜಿಯವರು ತೀರಿಕೊಂಡಿದ್ದರು. ಜಾನುವಾರುಕಟ್ಟೆ ಗೋಪಾಲಕೃಷ್ಣ ಕಾಮತ್, ಗುಂಡ್ಮಿ ರಾಮಚಂದ್ರ ನಾವಡರು ನಿವೃತ್ತರಾಗಿದ್ದರು. ಕಡತೋಕ ಮಂಜುನಾಥ ಭಾಗವತರು ತೆಂಕಿನ ಮೇಳಕ್ಕೆ ಹೋಗಿದ್ದರು. ಮರವಂತೆ ನರಸಿಂಹ ದಾಸರಿಗೆ ಸ್ವರ ಕೆಟ್ಟಿದ್ದು, ಪ್ರತಿಭೆ ಇದ್ದೂ ಅಸಹಾಯಕರಾಗಿದ್ದರು. ಆಗ ಬಡಗುತಿಟ್ಟಿನ ಹಿಮ್ಮೇಳ ವಿಭಾಗದಲ್ಲಿ ಒಂದು ಬಗೆಯ ಶೂನ್ಯ ಸೃಷ್ಟಿಯಾಗಿತ್ತು. ಬಡಗಿನ ಹಿಮ್ಮೇಳ ಕುರಿತಾಗಿ ದೊಡ್ಡ ಪ್ರಶ್ನಾರ್ಥಕ ಚಿಹ್ನೆ ಕಾಣಿಸಿಕೊಂಡ ಸಂಕ್ರಮಣ ಕಾಲದಲ್ಲಿ ಉದಯವಾದುದೇ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ. ಪ್ರೌಢಶಾಲಾ ಮುಖ್ಯೋಪಾಧ್ಯಾಯರೂ, ಸಹಕಾರಿ ಧುರೀಣ, ಯಕ್ಷಗಾನ ಚಿಂತಕ, ವಿದ್ವಾಂಸ, ಸ್ವತಃ ಭಾಗವತತರೂ ಆಗಿದ್ದ ಐರೋಡಿ ಸದಾನಂದ ಹೆಬ್ಬಾರರು ತಮ್ಮ ಸಮಾನ ಮನಸ್ಕ ಮಿತ್ರರೊಂದಿಗೆ ೧೯೭೨ನೇ ಜುಲೈ ತಿಂಗಳಲ್ಲಿ ಹಿಮ್ಮೇಳ ತರಬೇತಿ ಕೇಂದ್ರವನ್ನು ಸ್ಥಾಪಿಸಿದರು. ಶ್ರೀ ಹೆಬ್ಬಾರರೇ ಕೇಂದ್ರದ ಮಹಾಕಾರ್ಯದರ್ಶಿಯಾಗಿ ನೇಮಕಗೊಂಡರು. ಪ್ರಸಿದ್ದ ಭಾಗವತ ಮಾರ್ವಿ ನಾರ್ಣಪ್ಪ ಉಪ್ಪೂರರು ಹಾಗೂ ಖ್ಯಾತ ಮದ್ದಲೆಗಾರ ಬೇಳಂಜೆ ತಿಮ್ಮಪ್ಪ ನಾಯಕರನ್ನು, ಕ್ರಮವಾಗಿ ‘ಪ್ರಾಚಾರ್ಯ ಮತ್ತು ಆಚಾರ್ಯ ಎಂಬ ಉಪಾಧಿಗಳೊಂದಿಗೆ ಕೇಂದ್ರದ ಗುರುಗಳನ್ನಾಗಿ ನೇಮಿಸಲಾಯಿತು. ೧೯೭೨ ರಿಂದ ಇಂದಿನ ತನಕವೂ ಉಚಿತವಾಗಿ ಈ ತರಗತಿ ನಡೆಯುತ್ತಿದೆ ಎಂಬುದು ಹೆಗ್ಗಳಿಕೆ ವಿಚಾರ.
    ಹೆಬ್ಬಾರ, ಉಪ್ಪೂರ ಜೋಡಿಯು ಹಿಮ್ಮೇಳ ತರಬೇತಿಯಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡಿತೆನ್ನಬಹುದು. ಗುರು ಶ್ರೀ ಉಪ್ಪೂರರು ಉತ್ತರ ಕನ್ನಡ ಜಿಲ್ಲೆಯಾದ್ಯಂತ ಚಿರಪರಿಚಿತರೂ, ಗೌರವಾನ್ವಿತರೂ ಆಗಿದ್ದರಿಂದ ಆ ಸೀಮೆಯಿಂದ ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಕಲಿಯಲು ಬಂದರು. ಆಗ ಸಂಸ್ಥೆಗೆ ಸ್ವಂತ ಕಟ್ಟಡವಿರಲಿಲ್ಲ. ಕೋಟದ ಹಿರೇಮಹಾಲಿಂಗೇಶ್ವರ ದೇವಳದ ಮಹಡಿಯ ಮೇಲೆ ಕಾರ್ಯಾಲಯವಿತ್ತು. ದಿ| ಉಪ್ಪೂರರು, ತಿಮ್ಮಪ್ಪ ನಾಯಕರಿಬ್ಬರೂ ಬಹು ಬೇಡಿಕೆಯ ಕಲಾವಿದರಾಗಿ ವೃತ್ತಿಮೇಳದಲ್ಲಿ ದುಡಿಯುತ್ತಿದ್ದುದರಿಂದ ಕೇಂದ್ರದ ತರಬೇತಿಯ ಅವಧಿಯು ಕೇವಲ ನಾಲ್ಕು ತಿಂಗಳಷ್ಟೆ ಆಗಿತ್ತು. ಶುಭಮುಹೂರ್ತದಲ್ಲಿ ಆರಂಭವಾದ ಕೇಂದ್ರವು ಎಂದೂ ಹಿಂದೆ ತಿರುಗಿ ನೋಡಿದ್ದೇ ಇಲ್ಲ. ಕೇಂದ್ರದಿಂದ ಉತ್ತಮ ಗುಣಮಟ್ಟದ ಭಾಗವತರುಗಳ ಪರಂಪರೆಯೇ ಆರಂಭವಾಯಿತು. ಯಕ್ಷಗಾನದಲ್ಲಿ ಹೊಸ ಶಕೆಯನ್ನೇ ಆರಂಭಿಸಿದ ದಿ| ಕಾಳಿಂಗ ನಾವಡ, ಕೆ.ಪಿ.ಹೆಗಡೆ, ಸುಬ್ರಹ್ಮಣ್ಯ ಧಾರೇಶ್ವರ, ಸದಾನಂದ ಐತಾಳ, ಶಂಕರ ಭಾಗ್ವತ್ ಹೀಗೆ ಶ್ರೇಷ್ಟ ಕಲಾವಿದರು ಈ ಕೇಂದ್ರದಿಂದ ಹೊರಬಂದಿದ್ದಾರೆ.
    ಹೀಗಿರುತ್ತಾ ಕೇಂದ್ರದ ಗುರುಗಳಾದ ತಿಮ್ಮಪ್ಪ ನಾಯಕ್ (೧೯೭೬) ಮತ್ತು ನಾರ್ಣಪ್ಪ ಉಪ್ಪೂರರು (೧೯೮೪) ಇಬ್ಬರೂ ಕಾಲವಶವಾದರು. ಆಗ ಕೆ.ಸದಾನಂದ ಐತಾಳರನ್ನು ಪ್ರಾಚಾರ್ಯರನ್ನಾಗಿ ನೇಮಿಸಲಾಯಿತು. ಮೂರು ವರ್ಷಗಳ ಬಳಿಕ ಶ್ರೀ ಕೆ.ಪಿ.ಹೆಗಡೆಯವರು ಪ್ರಾಚಾರ್ಯರಾಗಿ ೨೦೦೭ ರವರೆಗೆ ಸೇವೆ ಸಲ್ಲಿಸಿದರು. ಅಲ್ಲದೆ ಮುಂದೆ ಇಂದಿನವರೆಗೂ ಪುನಃ ಸದಾನಂದ ಐತಾಳರೇ ಗುರುವಾಗಿದ್ದಾರೆ. ಈ ನಡುವೆ ಕೇಂದ್ರದ ಸಂಸ್ಥಾಪಕರಾಗಿದ್ದ ಸದಾನಂದ ಹೆಬ್ಬಾರರು ವಿಧಿವಶರಾದರು. ಮುಂದೇನು? ಎಂಬ ಹಂತದಲ್ಲಿ ಕಲಾಕೇಂದ್ರದ ಆಡಳಿತದ ಚುಕ್ಕಾಣಿ ಹಿಡಿದವರು ಸದಾನಂದ ಹೆಬ್ಬಾರರ ಸುಪುತ್ರ ಐರೋಡಿ ಶ್ರೀ ರಾಜಶೇಖರ ಹೆಬ್ಬಾರರು.
    ಶ್ರೀ ರಾಜಶೇಖರ ಹೆಬ್ಬಾರರು ತಂದೆಯನ್ನೂ ಮೀರಿಸಿದ ವ್ಯವಹಾರಿಕ ಜಾಣ್ಮೆಯುಳ್ಳವರಾಗಿದ್ದು ಕೇಂದ್ರದ ದಿಕ್ಕನ್ನೇ ಬದಲಿಸಿದರು. ಸದಾನಂದ ಹೆಬ್ಬಾರರ ಕಾಲದಲ್ಲೇ ಸಾಲಿಗ್ರಾಮದ ಹಳೆಕೋಟೆ ಮೈದಾನದ ಪಾರ್ಶ್ವದಲ್ಲಿ ಕೇಂದ್ರಕ್ಕೆ ಸ್ಥಳ ಮಂಜೂರಾಗಿತ್ತಾದರೂ ಕಟ್ಟಡ ನಿರ್ಮಾಣವಾಗಿರಲಿಲ್ಲ. ರಾಜಶೇಖರ ಹೆಬ್ಬಾರರು ಊರ-ಪರವೂರ ಮಹನೀಯರುಗಳ ಸಹಾಯ-ಸಹಕಾರಗಳಿಂದ ಭವ್ಯವಾದ ಕಲಾಮಂದಿರವನ್ನು ಕಟ್ಟಿದರು. ಕಲಾಭವನದ ವೇದಿಕೆಗೆ ‘ಸದಾನಂದ ರಂಗ ಮಂಟಪ’ ಎಂದು ನಾಮಕರಣ ಮಾಡಿದರು. ಕೇಂದ್ರದ ಕಾರ್ಯವೈಖರಿಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಿದರು. ಅದು ತನಕ ವರ್ಷದಲ್ಲಿ ನಾಲ್ಕು ತಿಂಗಳು ಮಾತ್ರ ನಡೆಯುತ್ತಿದ್ದ ತರಬೇತಿಯನ್ನು ಇಡೀ ವರ್ಷಕ್ಕೆ ವಿಸ್ತರಿಸಿದರು. ಹಿಮ್ಮೇಳ ಶಿಕ್ಷಣದೊಂದಿಗೆ ನರ್ತನ, ಅಭಿನಯ ತರಗತಿಗಳನ್ನೂ ಆರಂಭಿಸಿದರು. ಕೆಲವು ಮಹಿಳಾ ಭಾಗವತರೂ ತಯಾರಾದರು. ಸಂಸ್ಕೃತಿ ಸಂಭ್ರಮದಲ್ಲಿ ಯಕ್ಷವರ್ಷ ಎಂಬ ಎಂಬ ಯೋಜನೆಯಡಿಯಲ್ಲಿ ಪ್ರತೀ ತಿಂಗಳಾಂತ್ಯದಲ್ಲೂ ಒಂದು ಯಕ್ಷಗಾನ ಪ್ರದರ್ಶನವನ್ನು ಆಯೋಜಿಸಿದರು. ಯಕ್ಷಗಾನಾಸಕ್ತ ವಿದ್ಯಾರ್ಥಿಗಳನ್ನು ದತ್ತು ಪಡೆದು, ಅವರ ಊಟ-ವಸತಿಗಳ ವ್ಯವಸ್ಥೆಯೊಂದಿಗೆ ಶಾಲಾ ವಿದ್ಯಾಭ್ಯಾಸವನ್ನೂ ಕೊಡಿಸಿ, ‘ಶಿಕ್ಷಣದೊಂದಿಗೆ ಯಕ್ಷಗಾನ’ ಎಂಬ ಕಲ್ಪನೆಯನ್ನು ಸಾಕಾರಗೊಳಿಸಿದರು. ತಮ್ಮ ತಂದೆಯವರ ನೆನಪಿನಲ್ಲಿ ‘ಐರೋಡಿ ಸದಾನಂದ ಹೆಬ್ಬಾರ ಪ್ರಶಸ್ತಿ’ಯನ್ನು ಸ್ಥಾಪಿಸಿ, ವರ್ಷವೂ ಯಕ್ಷಗಾನಕ್ಕಾಗಿ ದುಡಿದವರಿಗೆ ನೀಡುತ್ತಾ ಬಂದರು. ಹಲವು ವಿಚಾರ ಗೋಷ್ಠಿಗಳು, ಕಮ್ಮಟ, ಶಿಬಿರಗಳ ಮೂಲಕ, ಕಲೆಯ ವಿವಿಧ ಅಂಗಗಳ ಕುರಿತು ಜಾಗೃತಿಯನ್ನು ಮೂಡಿಸಿದರು. ಅಂತವುಗಳಲ್ಲಿ ‘ಗಾನಪರಂಪರಾ’ , ‘ಛಂದಸ್ಸಿನ ಕಾರ್ಯಗಾರ’, ‘ಯಕ್ಷಗಾನ ಹಸ್ತಾಭಿನಯ’ ಗೋಷ್ಠಿ, ಹೂವಿನಕೋಲು ಇತ್ಯಾದಿ ಕಾರ್ಯಕ್ರಮ ನಡೆಸಿದರು. ಸದಾನಂದ ಐತಾಳರ ನಿರ್ದೇಶನದಲ್ಲಿ ಆರಂಭಿಸಿದ ಉಚಿತವಾದ ‘ನಲಿ-ಕುಣಿ’ ಮಕ್ಕಳ ಯಕ್ಷಗಾನ ಬೇಸಿಗೆ ಶಿಬಿರ ನಡೆಸುತ್ತಾ ಬಂದಿದ್ದು ಮಕ್ಕಳು ನಲಿಯುತ್ತಾ, ಕುಣಿಯುತ್ತಾ ಈ ಕಲಿಕೆಯನ್ನು ಆನಂದಿಸುತ್ತಾ ಬಂದಿದ್ದಾರೆ.

  • ಈ ವರ್ಷ ಹದಿಮೂರನೇ ಆವೃತ್ತಿಯ ‘ನಲಿ-ಕುಣಿ’ ಏಪ್ರಿಲ್ ೧೩ರಿಂದ ಮೇ ೩ ತನಕ ನಡೆಯಿತು. ಆರು ವರ್ಷದಿಂದ ಹದಿನಾರು ವರ್ಷದವರೆಗಿನ ಅರವತ್ತಕ್ಕೂ ಮಿಕ್ಕಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಶಿಬಿರ ನಿರ್ದೇಶಕರ ಜೊತೆಗೆ ಸಹ ಶಿಕ್ಷಕರಾಗಿ ಶ್ರೀ ಕೇಶವ ಆಚಾರ್, ರೋಹಿತ್ ತೀರ್ಥಹಳ್ಳಿ, ಬಾರ್ಕೂರು ಶ್ರೀಶ ಆಚಾರ್ ಇದ್ದರು. ಶಿಬಿರವು ಬೆಳಿಗ್ಗೆ ೯-೦೦ ಗಂಟೆಗೆ ಪ್ರಾರ್ಥನೆಯೊಂದಿಗೆ ಆರಂಭವಾಗಿ ಮಧ್ಯಾಹ್ನ ೧-೦೦ ಗಂಟೆಯವರೆಗೆ ನಡೆಯುತ್ತದೆ. ನಡುವೆ ೧೧-೦೦ ಗಂಟೆಗೆ ಕಿರು ವಿರಾಮದ ಅವಧಿಯಲ್ಲಿ ಮಕ್ಕಳಿಗೆ ಉಪಹಾರದ ವ್ಯವಸ್ಥೆಯೂ ಇದೆ. ಈ ಹೊತ್ತಿನಲ್ಲೆ ನಿರ್ದೇಶಕರಿಂದ ದಿನಕ್ಕೊಂದು ಪುರಾಣದ ಕಥೆಯನ್ನು ಹೇಳಲಾಗುತ್ತದೆ. ದಿನಕ್ಕೊಬ್ಬರು ಯಾರಾದರೂ ಗಣ್ಯರು ಶಿಬಿರದ ಚಟುವಟಿಕೆಗಳನ್ನು ವೀಕ್ಷಿಸಿ, ಮಕ್ಕಳೊಂದಿಗೆ ಸಂವಾದ ರೂಪದಲ್ಲಿ ಹಿತವಚನಗಳನ್ನು ನುಡಿಯುತ್ತಾರೆ. ಮೇ ೩ನೇ ತಾರೀಕಿನಂದು ಶಿಬಿರದ ಸಮಾರೋಪ ಸಮಾರಂಭದಂದು ಮಕ್ಕಳ ಯಕ್ಷ ಪ್ರತಿಭಾ ಪ್ರದರ್ಶನ ನಡೆಯಿತು. ಕೋಡಂಗಿ, ಬಾಲಗೋಪಾಲ, ಕಸೆ ಸ್ತ್ರೀ ವೇಷದ ಒಡ್ಡೋಲಗ, ಗಣಪತಿ ಕೌತುಕ, ಕೃಷ್ಣನ ಒಡ್ಡೋಲಗ, ವೀರ, ಕರುಣ.ರೌದ್ರ, ಹಾಸ್ಯ ಮೊದಲಾದ ರಸಗಳ ಅಭಿನಯ ಗೀತೆಗಳು, ತಾಳಗಳು- ಅವುಗಳಿಗೊಪ್ಪುವ ನೃತ್ಯಗಳು, ಮುಂತಾದ ಹದಿನೆಂಟು ಕಾರ್ಯಕ್ರಮಗಳು ಪ್ರೇಕ್ಷಕರನ್ನು ಬಹುವಾಗಿ ರಂಜಿಸಿದವು.
    ಅದರಲ್ಲೂ ಕೃಷ್ಣ-ಗೋಪಿಕೆಯರ ರೂಪಕ, ವಿಶ್ವರೂಪ ದರ್ಶನ, ಗಯನ ಅಲೆತ, ದ್ರೌಪದಿ-ಅರ್ಜುನರ ಸಂಘರ್ಷ ಸಂವಾದ ಮತ್ತು ಆರು -ಏಳು ವರ್ಷದ ಚಿಣ್ಣರ ಪಾಂಡವ – ಕೌರವರ ಬಾಲ್ಯ ವಿದ್ಯಾಭ್ಯಾಸ ಮುಂತಾದವುಗಳು ವಿಶೇಷ ಮೆಚ್ಚುಗೆಗೆ ಪಾತ್ರವಾದವು.
    ಹೀಗೆ ಯಕ್ಷ ಶಿಬಿರವು ಒಂದು ಉತ್ತಮ ಪರಂಪರೆಯನ್ನೇ ಹುಟ್ಟು ಹಾಕಿದೆ. ಶಿಬಿರದ ಆರಂಭಿಕ ವರ್ಷಗಳಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಇಂದು ಇಂಜಿನಿಯರ್, ಡಾಕ್ಟರ್, ಸಿ.ಎ., ಎಂ.ಬಿ.ಎ. ಮೊದಲಾದ ಪದವಿಗಳನ್ನು ಪಡೆದು ಉನ್ನತ ಉದ್ಯೋಗದಲ್ಲಿದ್ದು, ಈಗಲೂ ಕಾಲ-ಕಾಲಕ್ಕೆ ಭೇಟಿ ನೀಡಿ, ಕೇಂದ್ರದ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿರುವುದು ಹೆಮ್ಮೆಯ ಸಂಗತಿ. ಪ್ರತಿ ವರ್ಷ ಆಗಷ್ಟ್ ತಿಂಗಳಲ್ಲಿ ಹಿಂದಿನ-ಇಂದಿನ ವಿದ್ಯಾರ್ಥಿಗಳ ಸಮಾವೇಶ ನಡೆದು, ಹಿರಿಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುತ್ತಿದೆ. ಸಂಸ್ಥೆಯ ಸಾಧನೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಪ್ರಶಸ್ತಿ, ಸಮ್ಮಾನಗಳಿಂದ ಗೌರವಿಸಿವೆ. ಅವುಗಳಲ್ಲಿ ಉಡುಪಿಯ ಶ್ರೀ ಪೇಜಾವರ ಮಠದ ಯತೀಶ್ವರ ಸ್ವರ್ಗೈಕ್ಯ, ಪೂಜ್ಯ ‘ವಿಶ್ವೇಶ್ವರ ಪ್ರಶಸ್ತಿ’ ಯೂ ಒಂದು. ನಮ್ಮ ಹಿರಿಯ ವಿದ್ಯಾರ್ಥಿಗಳು ಅನೇಕ ಸರಕಾರಿ-ಖಾಸಗಿ ಪ್ರಶಸ್ತಿಗಳನ್ನು ಗಳಿಸಿರುತ್ತಾರೆ. ದಿ| ಕಾಳಿಂಗ ನಾವಡರು ಮರಣೋತ್ತರ ರಾಜ್ಯೋತ್ಸವ ಪ್ರಶಸ್ತಿ, ಸುಬ್ರಹ್ಮಣ್ಯ ಧಾರೇಶ್ವರ, ಹಿರಿಯಣ್ಣ ಶೆಟ್ಟಿಗಾರ್, ಕೇಶವ ಕೊಳಗಿ, ಕೆ.ಪಿ.ಹೆಗಡೆ, ರಾಜ್ಯೋತ್ಸವ ಪ್ರಶಸ್ತಿ, ಸದಾನಂದ ಐತಾಳ, ಶಂಕರ ಭಾಗವತ ಯಕ್ಷಗಾನ ಅಕಾಡೆಮಿ ಗೌರವ ಪ್ರಶಸ್ತಿ, ನಾರಾಯಣ ಶಬರಾಯ, ರಾಘವೇಂದ್ರ ಮಯ್ಯ, ಸುರೇಶ ಶೆಟ್ಟಿ, ನಿತ್ಯಾನಂದ ಹೆಬ್ಬಾರ್, ಉದಯಕುಮಾರ್ ಹೊಸಾಳ, ಶ್ರೀಮತಿ ಶಶಿಕಲಾ ಹೆಗಡೆ, ಶ್ರೀಮತಿ ಭಾಗೀರಥಿ ಎಮ್. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದು ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ. ಕೇಂದ್ರದ ಆಡಳಿತ ಉಸ್ತುವಾರಿಯಲ್ಲಿ ಹೆಬ್ಬಾರರೊಂದಿಗೆ ಕೈ ಜೋಡಿಸುವ ಈ ಭಾಗದ ಕೊಡುಗೈ ದಾನಿಗಳೂ, ಕಲಾಕೇಂದ್ರದ ಅಧ್ಯಕ್ಷರೂ ಆದ ಶ್ರೀ ಆನಂದ.ಸಿ.ಕುಂದರ್ ಅವರು ಮಹಾಪೋಷಕರು ಆಗಿ ತನು-ಮನ-ಧನಗಳಿಂದ ಪ್ರೋತ್ಸಾಹಿಸುತ್ತಿರುವುದು ಅಭಿಮಾನದ ಸಂಗತಿ. ಅರ್ಧ ಶತಮಾನಕ್ಕೂ ಮಿಕ್ಕಿದ ಹಂಗಾರಕಟ್ಟೆ ಯಕ್ಷಗಾನ ಕೇಂದ್ರದ ಕಲಾಯಾನವು ಇನ್ನೂ ಎಷ್ಟೋ ಕಾಲ ಮುಂದುವರಿದು, ಯಕ್ಷಗಾನದ ಸ್ವರೂಪ, ಬೆಳವಣಿಗೆ, ಪ್ರಸಾರಗಳಲ್ಲಿ ಮಹತ್ವದ ಪಾತ್ರವನ್ನು ವಹಿಸಲಿ ಎಂಬುದು ಪತ್ರಿಕೆಯ ಆಶಯವಾಗಿದೆ.
administrator

Leave a Reply

Your email address will not be published. Required fields are marked *