• June 29, 2025
  • Last Update June 28, 2025 1:20 pm
  • Brahmavara

ಹಿಲಿಯಾಣ ಶಾಲೆಯಲ್ಲಿ ಅಮೃತ ಮಹೋತ್ಸವ

ಹಿಲಿಯಾಣ ಶಾಲೆಯಲ್ಲಿ ಅಮೃತ ಮಹೋತ್ಸವ

ಕನ್ನಡ ಮೀಡಿಯಂನಲ್ಲಿ ಓದಿದವರು ಸಾಧನೆ ಮಾಡಿದ್ದಾರೆ, ಸಾಧನೆಗೆ ಭಾಷೆ ಅಡ್ಡಿ ಮಾಡಲ್ಲ – ಆನಗಳ್ಳಿ ಕರುಣಾಕರ ಹೆಗ್ಡೆ

ಉಡುಪಿಮಿತ್ರ ಸುದ್ದಿ ;
ಮಂದಾರ್ತಿ, ಡಿ.21: ಜೀವಿಗಳ ಪ್ರಪಂಚದಲ್ಲಿ ದೇವರು ಮನುಷ್ಯನಿಗೆ ಕಲಿಯುವ, ವಿದ್ಯಾರ್ಜನೆಯ ಅವಕಾಶವನ್ನು ನೀಡಿದ್ದಾನೆ. ಈ ಅವಕಾಶ ಬೇರೆ ಜೀವಿಗಳಿಗಿಲ್ಲ. ಈ ಅವಕಾಶವನ್ನು ಪಡೆದ ಮಾನವ ತಾನು ಕಲಿತ ಶಿಕ್ಷಣದಿಂದ ಸಾಧನೆಯನ್ನು ಮಾಡಬೇಕು. ಅಂದು ನಾವೆಲ್ಲ ಓದುವಾಗ ಉತ್ತಮ ಶಿಕ್ಷಕರಿದ್ದರು. ಅವಗೆ ವಿದ್ಯಾರ್ಥಿಗಳ ಭವಿಷ್ಯದ ಚಿಂತನೆ ಇತ್ತು. ನಮ್ಮ ಶಿಕ್ಷಕರು ಕಲಿಸಿದ ಮಗ್ಗಿ ಹಾಗೂ ಗಣಿತ ನನ್ನ ಜೀವನದಲ್ಲಿ ಇಂಡಸ್ಟ್ರಿ ಮಾಡಲು ಸಹಾಯ ಮಾಡಿತು. ಆ ದಿನಗಳಲ್ಲಿ ಸರಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮೀಡಿಯಂ ಇಲ್ಲದೇ ಇರಬಹುದು. ಆದರೆ ಕನ್ನಡ ಮೀಡಿಯಂನಲ್ಲಿ ಕಲಿತವರು ಮಹತ್ಸಾಧನೆ ಮಾಡಿದ್ದಾರೆ. ಕನ್ನಡ ಮೀಡಿಯಂನಲ್ಲಿ ಓದಿದವರು ಒಳ್ಳೆಯ ಡಾಕ್ಟರ್, ಇಂಜೀನಿಯರ್, ಇಂಡಸ್ಟ್ರಿಯಲಿಸ್ಟ್, ಸೈಂಟಿಸ್ಟ್ ಆಗಿದ್ದಾರೆ. ಇಂದು ಅಮೇರಿಕಾದಲ್ಲಿ ಅತ್ಯುತ್ತಮ ಹುದ್ದೆಯಲ್ಲಿರುವ ನಮ್ಮವರು ಇದೇ ಕನ್ನಡ ಮೀಡಿಯಂನಲ್ಲಿ ಓದಿ ಹೋದವರೇ ಆಗಿದ್ದಾರೆ. ನಾನು ಚೈನಾ ಮತ್ತು ಜಪಾನ್ ದೇಶಗಳಿಗೆ ಹೋದಾಗ ಅಲ್ಲಿಯ ಜನರು ಇಂಗ್ಲೀಷ್ ಮಾತನ್ನೇ ಆಡದೆ ಇರುವುದನ್ನು ಗಮನಿಸಿದ್ದೇನೆ. ಸಾಧನೆಗೆ ಭಾಷೆ ಅಡ್ಡಿ ಮಾಡುತ್ತೆ ಅನ್ನೋದನ್ನು ನಾನು ಒಪ್ಪಲ್ಲ ಎಂದು ಬೆಂಗಳೂರಿನ ಭವಾನಿ ಅಟೋಮ್ಯಾಟ್ಸ್ ಮಾಲಕ ಎ.ಕರುಣಾಕರ ಹೆಗ್ಡೆ ನುಡಿದರು ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿಲಿಯಾಣ ಇಲ್ಲಿ ಡಿ. 21ರಂದು ನಡೆದ ಅಮೃತ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸರಕಾರದ ನಿರ್ಲಕ್ಷದಿಂದ ಅನೇಕ ಸರಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪುತ್ತಿವೆ. ಇಂದಿನ ಪೋಷಕರಿಗೆ ಇಂಗ್ಲೀಷ್ ಮೀಡಿಯಂನಲ್ಲಿ ಮಕ್ಕಳನ್ನು ಓದಿಸಬೇಕೆಂಬ ಬಯಕೆ ಹೆಚ್ಚಿದೆ. ಪೋಷಕರ ಬೇಡಿಕೆಯಂತೆ ಅಂದೇ ನಮ್ಮನ್ನಾಳುವ ಸರಕಾರ ಸರಕಾರಿ ಶಾಲೆಗಳಿಗೆ ಯೋಗ್ಯ ಶಿಕ್ಷಕರನ್ನು ನೇಮಿಸಿ ಇಂಗ್ಲೀಷ್ ಮೀಡಿಯಂ ಆರಂಭಿಸಿದ್ದರೆ ಈ ಪರಿಸ್ಥಿತಿ ಬರುತ್ತ್ತಿಲ್ಲ. ಹಿಲಿಯಾಣ ಶಾಲೆಯಲ್ಲಿ ಇಂಗ್ಲೀಷ್ ಮೀಡಿಯಂಗಾಗಿ ಶಿಕ್ಷಣ ಟ್ರಸ್ಟ್ ಆರಂಭಿಸಿದ್ದು ಈ ಟ್ರಸ್ಟ್‌ಗೆ ನಾನು ರೂ.೧ ಲಕ್ಷ ಹಣ ನೀಡುತ್ತೇನೆ. ಈ ಶಿಕ್ಷಣ ಸಂಸ್ಥೆಯನ್ನು ಇಲ್ಲಿನ ಜನತೆ ಉಳಿಸಿ ಬೆಳೆಸಿಕೊಂಡು ಹೋಗಬೇಕೆಂದು ಉದ್ಯಮಿ ಆನಗಳ್ಳಿ ಕರುಣಾಕರ ಹೆಗ್ಡೆ ನುಡಿದರು.
ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಎ.ಕಿರಣ್ ಕುಮಾರ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದು ಅವರು ಮಾತನಾಡಿ ಊರಿನ ಶಾಲೆಯ ಅಭಿವೃದ್ಧಿಗಾಗಿ ಟ್ರಸ್ಟ್ ಆರಂಭಿಸಿದ್ದು ಈ ಟ್ರಸ್ಟ್‌ನ್ನು ಸರ್ವರೂ ಬೆಂಬಲಿಸಬೇಕೆಂದು ನುಡಿದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ಅಂದು ೧೯೬೭-೬೮ರಲ್ಲಿ ನಾವೆಲ್ಲ ಪ್ರಾಥಮಿಕ ಶಾಲೆಯಲ್ಲಿ ಓದುವಾಗ ಪುಸ್ತಕಗಳಲ್ಲಿ ಗಣಪತಿ, ಈಶ್ವರನ ಚಿತ್ರಗಳನ್ನು ಪ್ರಕಟಿಸಿ ಗಣಪ ಈಶನ ಮಗ ಅಂತ ಓದಿಸುತ್ತಿದ್ದರು. ಇಂದು ಯಾವ ಪುಸ್ತಕಗಳಲ್ಲೂ ಗಣಪತಿ ಹಾಗೂ ಈಶ್ವರನ ಚಿತ್ರಗಳೇ ಇಲ್ಲ. ಎಲ್ಲಿಯಾದರೂ ಈಶ್ವರನ ಚಿತ್ರ ಬಂದರೆ ಕೇಸರಿಕರಣ ಎಂದು ಬೊಬ್ಬೆ ಹಾಕುವವರ ನಡುವೆ ಅಂತಹ ಚಿತ್ರಗಳೇ ಇಲ್ಲ ಎಂಬಂತಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನೂತನ ಶಿಕ್ಷಣ ನೀತಿ ರಾಜ್ಯದಲ್ಲಿ ಅನುಷ್ಟಾನ ಮಾಡಲು ಯೋಚನೆ ಮಾಡಿದೆ. ಬೇರೆ ಬೇರೆ ಕಾರಣಗಳಿಂದ ರಾಜ್ಯ ಸರ್ಕಾರ ಮತ್ತೊಂದು ರೀತಿಯಲ್ಲಿ ಯೋಚನೆ ಮಾಡುತ್ತಿದೆ. ಒಬ್ಬ ವಿದ್ಯಾರ್ಥಿಗೆ ಶಿಕ್ಷಣ ಪಡೆದ ನಂತರ ತನ್ನ ಜಾತಿ, ಧರ್ಮಕ್ಕಿಂತ ತನ್ನ ದೇಶ ದೊಡ್ಡದು ಎಂಬ ಭಾವನೆ ಬರಬೇಕು. ರಾಷ್ಟ್ರಭಕ್ತಿ ಮೂಡಬೇಕೆಂಬುದು ಸಂವಿಧಾನದ ಆಶಯ. ಆದರೆ ದುರಾದೃಷ್ಟಕ್ಕೆ ಇದ್ಯಾವುದರ ಬಗ್ಗೆಯೂ ಯೋಚನೆ ಮಾಡದ ಸ್ಥಿತಿಯಲ್ಲಿ ನಾಯಕರಿದ್ದಾರೆ ಎಂದು ನುಡಿದರು.
ಕುಂದಾಪುರ ಸರಕಾರಿ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎಚ್. ಬಾಲಕೃಷ್ಣ ಶೆಟ್ಟಿ ಶಿಕ್ಷಣ ಟ್ರಸ್ಟ್ ನ್ನು ಅನಾವರಣಗೊಳಿಸಿದರು. ಮುಖ್ಯ ಅತಿಥಿಗಳಾಗಿ ಹಿಲಿಯಾಣ ದೊಡ್ಮನೆಯ ಹೆಚ್.ತಾರನಾಥ ಶೆಟ್ಟಿ, ವಿನಯ ಕುಮಾರ್ ಶೆಟ್ಟಿ ಇಸಾರಮಕ್ಕಿ, ಆವರ್ಸೆ ಗ್ರಾಮ ಪಂಚಾಯತ್ ಸದಸ್ಯ ಚಿತ್ತರಂಜನ್ ದಾಸ್ ಶೆಟ್ಟಿ, ಮಾಜಿ ಸೈನಿಕ ಆನಂದ ಶೆಟ್ಟಿ ಆವರ್ಸೆ ಕಲ್ಮನೆ, ಆವರ್ಸೆ ಗ್ರಾಮ ಪಂಚಾಯತ್ ಸದಸ್ಯರಾದ ಪ್ರಮೋದ್ ಹೆಗ್ಡೆ, ನಾಗರಾಜ ವೈದ್ಯ, ಉದಯಕುಮಾರ್ ಶೆಟ್ಟಿ ಹುಂತ್ರಿಕೆ, ಕೃಷ್ಣಮೂರ್ತಿ ಶೆಟ್ಟಿ ಹಿಲಿಯಾಣ, ಕುಂದಾಪುರದ ಪದ್ಮಶ್ರೀ ಪ್ರಿಂಟರ್ಸ್ ಮಾಲಕ ಸುಧಾಕರ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಉಷಾ ಸಿದ್ಧಾರ್ಥ ನಾಯ್ಕ, ಎಸ್.ಡಿ.ಎಂ.ಸಿ.ಅಧ್ಯಕ್ಷ ರಾಘವೇಂದ್ರ ನಾಯ್ಕ, ನಿವೃತ್ತ ಮ್ಯಾನೇಜರ್ ಸಂತೋಷ್ ಶೆಟ್ಟಿ ಉಪಸ್ಥಿತರಿದ್ದರು.
ನಿವೃತ್ತ ಮುಖ್ಯ ಶಿಕ್ಷಕರಾದ ಶೇಖರ ಶೆಟ್ಟಿ ಆವರ್ಸೆ ಪಡುಮನೆ, ಸೀತಾರಾಮ ಶೆಟ್ಟಿ ಆವರ್ಸೆ, ಶ್ರೀಮತಿ ತಿಲೋತ್ತಮ ಬೆಣ್ಣೆಕುದ್ರು, ಹಿಲಿಯಾಣ ಶಾಲೆಯಲ್ಲಿ ಸುದೀರ್ಘವಾಗಿ ಸೇವೆ ಸಲ್ಲಿಸಿದ ಶಿಕ್ಷಕಿ ಶ್ರೀಮತಿ ಅನಿತಾ, ದೈಹಿಕ ಶಿಕ್ಷಕಿ ಶ್ರೀಮತಿ ಸುಗಂಧಿಯವರನ್ನು ಸನ್ಮಾನಿಸಲಾಯಿತು. ಶಿಕ್ಷಕರಾದ ಶ್ರೀಮತಿ ತೀರ್ಥ, ಪ್ರಕಾಶ್, ಪದ್ಮಶ್ರೀ ಸನ್ಮಾನ ಪತ್ರಗಳನ್ನು ವಾಚಿಸಿದರು.
ಶಿಕ್ಷಕಿ ಶ್ರೀಮತಿ ಮಲ್ಲಿಕಾ ಶಾಲಾ ವರದಿ ವಾಚಿಸಿದರು. ಶಿಕ್ಷಕ ಪ್ರಕಾಶ್ ಸಂದೇಶ ವಾಚಿಸಿದರು. ಮುಖ್ಯ ಶಿಕ್ಷಕಿ ಶ್ರೀಮತಿ ವಿಜಯಲಕ್ಷ್ಮಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕ ನಂಚಾರು ಶಶಿಧರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಶ್ರೀಮತಿ ಮಲ್ಲಿಕಾ ವಂದಿಸಿದರು.

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ

administrator

Related Articles

Leave a Reply

Your email address will not be published. Required fields are marked *