ಉಡುಪಿ ಮಿತ್ರ ಪತ್ರಿಕೆ ಸುದ್ದಿ
ಸಿದ್ದಾಪುರ, ಎ. ೭: ಸಮಾಜದ ಕಟ್ಟ ಕಡೆಯ ಪ್ರಜೆಗಳು ಎಂದು ಕರೆಸಿಕೊಳ್ಳುವ, ತೀರ ಹಿಂದುಳಿದ ಕೊರಗ ಜನಾಂಗಕ್ಕೆ ಮನೆ ನಿರ್ಮಸಿ ಕೊಡುವ ಕಾರ್ಯ ಶ್ರೇಷ್ಠ ಕಾರ್ಯವಾಗಿದೆ. ಜನ್ನಾಡಿಯಲ್ಲಿ ಸುಸಜ್ಜಿತವಾದ ೧೪ ಮನೆಗಳನ್ನು ನಿರ್ಮಿಸಿಕೊಟ್ಟು, ಇಂದು ಉಳ್ಳೂರು-೭೪ ಗ್ರಾಮದಲ್ಲಿ ಮತ್ತೆ ೧೪ ಮನೆಗಳ ನಿರ್ಮಾಣಕ್ಕೆ ಮುಂದಾಗಿರುವ ಡಾ| ಎಚ್.ಎಸ್ ಶೆಟ್ಟಿ ಅವರ ಕಾರ್ಯ ಮೇಲ್ಪಂಕ್ತಿಯಾಗಬೇಕು ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರು ಆಶೀರ್ವದಿಸಿದರು.
ಅವರು ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಇವರವತಿಯಿಂದ ೨.೫ ಕೋಟಿ ರೂ.ವೆಚ್ಚದಲ್ಲಿ ಉಳ್ಳೂರು-೭೪ ಗ್ರಾಮದ ೧೪ ಕೊರಗರ ಮನೆಗಳ ನಿರ್ಮಾಣಕ್ಕೆ ಗೃಹ ಪೂಜೆ ಮತ್ತು ಶಿಲಾನ್ಯಾಸ ಕಾರ್ಯಕ್ರಮ ಸೋಮವಾರ ನೆರವೇರಿಸಿ, ಆಶೀರ್ವದಿಸಿದರು.
ಉಳ್ಳೂರು-೭೪ ಗ್ರಾಮದ ಕೊರಗರ ಮನೆ ನಿರ್ಮಾಣಕ್ಕೆ ಗೃಹ ಪೂಜೆ ಮತ್ತು ಶಿಲಾನ್ಯಾಸ ಕಾರ್ಯಕ್ರಮ, ರಾಮ ನವಮಿಯ ಕಾರ್ಯಕ್ರಮವಾಗಿದೆ. ಹುಟ್ಟುಹಬ್ಬ ಹಾಗೂ ಮದುವೆ ವಾರ್ಷಿಕೋತ್ಸವ ಸೇರಿದಂತೆ ಇತರ ಕಾರ್ಯಕ್ರಮಗಳಿಗೆ ದುಂದುವೆಚ್ಚ ಕರ್ಚು ಮಾಡುವ ಬದಲು, ಇತಂಹ ಕುಟುಂಬಗಳಿಗೆ ಮನೆ ನಿರ್ಮಿಸಿಕೊಟ್ಟಾಗ ಪುಣ್ಯ ಪ್ರಾಪ್ತಿಯಾಗುತ್ತದೆ. ಸಂಪತ್ತು ಬಂದಾಗ ಸಮಾಜಕ್ಕೆ ಸ್ವಲ್ಪ ಕರ್ಚು ಮಾಡಿದ್ದಾಗ ಸಮಾಜ ಪರಿವರ್ತನೆಯಾಗುತ್ತದೆ ಎಂದು ಆಶೀರ್ವದಿಸಿದರು.
ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ| ಎಚ್.ಎಸ್ ಶೆಟ್ಟಿ ಅವರು ಪ್ರಾಸ್ತವಿಕವಾಗಿ ಮಾತನಾಡಿ, ಸಮಾಜದಲ್ಲಿ ನೊಂದ ಹಾಗೂ ಆತ್ಯಂತ ಹಿಂದುಳಿದವರು ಕೊರಗರು. ಕೊರಗ ಜನಾಂಗ ಮುಖ್ಯವಾಹಿನಿಗೆ ಬರಬೇಕು ಎನ್ನುವ ದೃಷ್ಠಿಯಲ್ಲಿ ೧೦೦ ಮನೆ ನಿರ್ಮಾಣ ಮಾಡಿ ಕೊಡುತ್ತಿದ್ದೇವೆ. ಕೊರಗರ ಮನೆ ನಿರ್ಮಾಣ ಕಾರ್ಯಕ್ಕೆ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರು ಪ್ರೇರಣೆ ಎಂದು ಹೇಳಿದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಶುಭಶಂಸನೆಗೈದರು.
ಬಂದೂರು ಶಾಸಕ ಗುರುರಾಜ ಗಂಟಿಹೊಳೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಮುಖ್ಯ ಅತಿಥಿಗಳಾಗಿ ಶಾಸಕ ಕಿರಣ್ಕುಮಾರ ಕೊಡ್ಗಿ, ಉಡುಪಿ ಯಕ್ಷಗಾನ ಕಲಾ ರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್, ಉಳ್ಳೂರು-೭೪ ಶ್ರೀ ಬನಶಂಕರಿ ದೇವಸ್ಥಾನದ ಆಡಳಿತ ಮೊಕ್ತೇಸರ ಎಸ್. ಸಂಜೀವ ಶೆಟ್ಟಿ ಸಂಪಿಗೇಡಿ, ಕರ್ನಾಟಕ-ಕೇರಳ ಕೊರಗಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷೆ ಸುಶೀಲ ನಾಡ, ಉಳ್ಳೂರು-೭೪ ಗ್ರಾ.ಪಂ. ಅಧ್ಯಕ್ಷೆ ಕುಸುಮ ಶೆಟ್ಟಿ, ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಹಾಲಾಡಿ ನಾಗರಾಜ ಶೆಟ್ಟಿ ಮೊದಲಾದವರು ಭಾಗವಹಿಸಿದರು.
ವೇ|ಮೂ| ದಾಮೋದರ ಶರ್ಮ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.


