• June 29, 2025
  • Last Update June 29, 2025 10:13 am
  • Brahmavara

3 ಕೋಟಿ ವೆಚ್ಚದಲ್ಲಿ ಹಾಲಾಡಿ ಮಾರಿಕಾನು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಜೀರ್ಣೋದ್ಧಾರಕ್ಕೆ ನಿರ್ಧಾರ

3 ಕೋಟಿ ವೆಚ್ಚದಲ್ಲಿ ಹಾಲಾಡಿ ಮಾರಿಕಾನು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಜೀರ್ಣೋದ್ಧಾರಕ್ಕೆ ನಿರ್ಧಾರ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿ ಮಿತ್ರ ಪತ್ರಿಕೆ ಸುದ್ಧಿ :

ಹಾಲಾಡಿ, ಎ.27: ಹಾಲಾಡಿ ಮಾರಿಕಾನು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಭಕ್ತರ ಇಷ್ಟಾರ್ಥ ಈಡೇರಿಸುವ ಈ ದೇವಸ್ಥಾನದಲ್ಲಿ ಹಿಂದೆ ರಥೋತ್ಸವ ನಡೆಯುತ್ತಿತ್ತು ಎನ್ನಲಾಗಿದೆ. ಇಂತಹ ದೇವಸ್ಥಾನ ಜೀರ್ಣಾವಸ್ಥೆಯಲ್ಲಿರುವುದರಿಂದ ಜೀರ್ಣೋದ್ಧಾರಕ್ಕೆ ನಿರ್ಧರಿಸಲಾಗಿದೆ. ಪರಿಪೂರ್ಣ ದೇವಾಲಯಕ್ಕೇ ಬೇಕಾದ ಎಲ್ಲಾ ಜೀರ್ಣೋದ್ಧಾರ ಕಾರ್ಯಗಳು ಇಲ್ಲಿ ನೆರವೇರಬೇಕು. ಗರ್ಭಗುಡಿ ನಿರ್ಮಾಣ ಮಾಡಬೇಕು ಎಂಬ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ೩ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ ಕೆಲಸಗಳು ನಡೆಯಬೇಕಾಗಿದೆ ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹಾಲಾಡಿ ಸರ್ವೋತ್ತಮ ಹೆಗ್ಡೆ ನುಡಿದರು. ಅವರು ಹಾಲಾಡಿ ಶ್ರೀ ಮಾರಿಕಾನು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಸಮಿತಿಯ ನೇತೃತ್ವದಲ್ಲಿ ದೇವಸ್ಥಾನದ ಜೀರ್ಣೋದ್ಧಾರದ ಬಗ್ಗೆ ಏಪ್ರಿಲ್ ೨೭ರಂದು ದೇವಸ್ಥಾನದಲ್ಲಿ ನಡೆದ ಸಮಾಲೋಚನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಹಾಲಾಡಿ ಸುತ್ತಮುತ್ತ ೧ವರೆ ಕೋಟಿಗೂ ಮಿಕ್ಕಿ ಹಣ ಸಂಗ್ರಹವಾಗಬೇಕು. ಉಳಿದ ಮೊತ್ತವನ್ನು ಹೊರಗಿನ ಭಕ್ತಾದಿಗಳಿಂದ ಸಂಗ್ರಹಿಸಬೇಕಾಗಿರುವುದರಿಂದ ಸರ್ವರೂ ಹಣ ನೀಡಿ ಬೆಂಬಲಿಸಬೇಕು. ಹಾಲಾಡಿ ಸುತ್ತಮುತ್ತ ಈಗಾಗಲೆ ಸುಮಾರು ೯೦೦ ಮನೆಗಳಿಗೆ ಮನವಿ ಪತ್ರಗಳನ್ನು ನೀಡಲಾಗಿದ್ದು ಎಲ್ಲರೂ ಸಹಕಾರ ನೀಡಬೇಕು. ದೇವಸ್ಥಾನ ಅಭಿವೃದ್ಧಿ ಆದಲ್ಲಿ ಹಾಲಾಡಿಯೂ ಇನ್ನಷ್ಟು ಅಭಿವೃದ್ಧಿಯಾಗಲಿದೆ. ಆದ್ದರಿಂದ ನವರಾತ್ರಿಯ ನಂತರ ಕರಸೇವೆಯೊಂದಿಗೆ ಜೀರ್ಣೋದ್ಧಾರ ಕೆಲಸ ಆರಂಭಿಸಲಾಗುವುದು ಎಂದರು.
ದೇವಸ್ಥಾನದ ಪ್ರಧಾನ ಅರ್ಚಕ ವಿಘ್ನರಾಜ ಅಡಿಗ ಮಾತನಾಡಿ ದೇವಸ್ಥಾನ ಜೀರ್ಣೋದ್ಧಾರ ಮಾಡುವುದು ದೇವರಿಗಾಗಿ ಅಲ್ಲ. ನಮ್ಮ ಅಭಿವೃದ್ಧಿಗಾಗಿ ಮಾಡಬೇಕು. ದೇವರಿಗೆ ಯಾವುದೇ ಒಂದು ವಸ್ತು ನೀಡಿದರೂ ದೇವರು ಅದಕ್ಕೆ ಹತ್ತು ಪಟ್ಟು ನಮಗೆ ಹಿಂದಕ್ಕೆ ನೀಡುತ್ತಾನೆ. ನಾವು ಎಷ್ಟೇ ಸಂಪತ್ತು ಮಾಡಿದರೂ ಕೊಂಡು ಹೋಗಲು ಸಾಧ್ಯವಿಲ್ಲ. ಅದು ಇಲ್ಲಿಯೇ ಉಳಿಯಲಿದೆ. ಭೂಮಿ ಬಿಟ್ಟು ತೆರಳುವಾಗ ಯಾರೂ ಬರಲ್ಲ. ಬಂಧುಗಳು ಬಂದರೂ ಸ್ಮಶಾನದವರೆಗೆ ಮಾತ್ರ ಬರುತ್ತಾರೆ. ಸತ್ಕಾರ್ಯಕ್ಜೆ ನಮ್ಮ ಸಂಪತ್ತು ವಿನಿಯೋಗವಾದರೆ ಭಗವಂತ ಸದಾ ಅನುಗ್ರಹಿಸುತ್ತಾನೆ ಎಂದರು.
ಪ್ರತಿ ಮನೆಯ ಸದಸ್ಯರಿಗೊಂದರಂತೆ ಶಿಲಾಕಲ್ಲು :
ಸಭೆಯನ್ನುದ್ದೇಶಿಸಿ ಹಾಲಾಡಿ ನಟರಾಜ ಹೆಗ್ಡೆ ಮಾತನಾಡಿ ಸುಮಾರು ೯ ತಂಡಗಳನ್ನು ಈಗಾಗಲೆ ರಚಿಸಿದ್ದು ಈ ತಂಡಗಳ ಸದಸ್ಯರು ಪ್ರತೀ ಮನೆಗೆ ಭೇಟಿ ನೀಡಿ ಮನೆಯಲ್ಲಿರುವ ಸದಸ್ಯರಿಗೊಬ್ಬರಂತೆ ಒಂದೊಂದು ಶಿಲೆಯನ್ನು ಸಂಗ್ರಹಿಸಬೇಕು. ಈ ಶಿಲೆಗಳನ್ನು ಒಟ್ಟುಗೂಡಿಸಿ ಜೂನ್ ೨ರಂದು ಶಿಲಾ ಪೂಜೆ ನೆರವೇರಿಸಲಾಗುವುದು. ಪ್ರತಿಯೊಂದು ಮನೆಯ ಸದಸ್ಯರು ತಲಾ ಒಂದೊಂದು ಶಿಲೆಯನ್ನು ನೀಡುವಂತೆ ಕೋರಿಕೊಂಡರು.
ಹಾಲಾಡಿ ವಿಜಯ ಶೆಟ್ಟಿ ಮಾತನಾಡಿ ಮೇ ಕೊನೆಯ ವಾರದಲ್ಲಿ ಬೆಂಗಳೂರಿನಲ್ಲಿರುವ ಭಕ್ತಾದಿಗಳ ಸಭೆಯನ್ನು ನಡೆಸಲಾಗುವುದು ಎಂದರು.
ಸಭೆಯನ್ನುದ್ದೇಶಿಸಿ ಶಿಕ್ಷಕ ಉದಯ ಶೆಟ್ಟಿ ಹಾಲಾಡಿ ಮಾತನಾಡಿದರು.
ಆಡಳಿತ ಮೊಕ್ತೇಸರ ಹಾಲಾಡಿ ಶರತ್ ಚಂದ್ರ ಶೆಟ್ಟಿ, ಹಿರಿಯರಾದ ರಾಮಣ್ಣ ಶೆಟ್ಟಿ, ಸಹ ಮೊಕ್ತೇಸರ ದಿವಾಕರ ಶೆಟ್ಟಿ, ಚಂದ್ರಕಾಂತ ಶೆಣೈ, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಜಾನಕಿ, ಜನಾರ್ದನ ಹಾಲಾಡಿ ಹಾಗು ಗುರುಪ್ರಸಾದ್ ಶೆಟ್ಟಿ ಹಾಲಾಡಿ, ಹಾಲಾಡಿ ಮರ್ಲಚಿಕ್ಕು ದೈವಸ್ಥಾನದ ಮೊಕ್ತೇಸರ ಅಮರನಾಥ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಖಜಾಂಚಿ ನಿತ್ಯಾನಂದ ಎಚ್. ಉಪಸ್ಥಿತರಿದ್ದರು.
ಕಾರ್ಯದರ್ಶಿ ಜ್ಞಾನೇಶ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

administrator

Related Articles

Leave a Reply

Your email address will not be published. Required fields are marked *