ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ದಿ :
ಬ್ರಹ್ಮಾವರ,ಅ.೧೫: ಎಲ್ಲಾ ದಾನಕ್ಕಿಂತ ರಕ್ತದಾನ ಶ್ರೇಷ್ಟವಾದುದು. ರಕ್ತದಾನಿಗಳು ನೀಡುವ ಒಂದು ಯುನಿಟ್ ರಕ್ತದಿಂದ ಮೂರು ಜೀವ ಉಳಿಸಬಹುದು. ಆದ್ದರಿಂದ ಈ ಬಾರಿ ನಮ್ಮ ಸಂಘಟನೆಗಳಿಗೆ ೫೦೦೦ ಯುನಿಟ್ ರಕ್ತದಾನ ಮಾಡುವ ಗುರಿ ನೀಡಿದ್ದೇನೆ ಎಂದು ಡಾ. ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ ಇದರ ಪ್ರವರ್ತಕ ಡಾ.ಜಿ.ಶಂಕರ್ ನುಡಿದರು. ಅವರು ಮೊಗವೀರ ಯುವ ಸಂಘಟನೆ ರಿ. ಉಪ್ಪೂರು ಇದರ ನೇತೃತ್ವದಲ್ಲಿ ನಡೆದ 18ನೇ ವರ್ಷದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.

ಸ್ವಾತಂತ್ರೋತ್ಸವದ ಅಂಗವಾಗಿ ಮೊಗವೀರ ಯುವ ಸಂಘಟನೆ ಉಪ್ಪೂರು ಘಟಕ , ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ ರಿ. ಅಂಬಲಪಾಡಿ, ಉಡುಪಿ ರಕ್ತ ನಿಧಿ ಕೆಎಂಸಿ ಮಣಿಪಾಲ, ಜಿಲ್ಲಾಡಳಿತ ಉಡುಪಿ ಜಿಲ್ಲೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಉಪ್ಪೂರು ಜ್ಞಾನೇಶ್ವರೀ ಸಭಾಂಗಣದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಕೆಎಂಸಿ ಮಣಿಪಾಲ ರಕ್ತನಿಧಿ ನಿರ್ದೇಶಕಿ ಡಾ. ದೀಪಿಕಾ ಮಾತನಾಡಿ ರಕ್ತವನ್ನು ಪುರುಷರು ಪ್ರತಿ ಮೂರು ತಿಂಗಳಿಗೊಮ್ಮೆ, ಮಹಿಳೆಯರಾದರೆ ನಾಲ್ಕು ತಿಂಗಳಿಗೊಮ್ಮೆ ರಕ್ತ ಕೊಡಬಹುದು. ಬ್ಲಡ್ಬ್ಯಾಂಕ್ನಿಂದ ಮೂರು ತಿಂಗಳು ಕಳೆದ ನಂತರ ನೆನಪಿಸಲು ಮೆಸೆಜ್ ಕಳುಹಿಸುವ ವ್ಯವಸ್ಥೆ ಮಾಡಿದ್ದೇವೆ ಎಂದರು.

ಉಪ್ಪೂರು ಮೊಗವೀರ ಯುವ ಸಂಘಟನೆಯ ಸ್ಥಾಪಕ ಅಧ್ಯಕ್ಷ ಲೋಕೇಶ್ ಜಿ ಮೆಂಡನ್ ಅಧ್ಯಕ್ಷತೆ ವಹಿಸಿದ್ದರು..
ಮುಖ್ಯ ಅತಿಥಿಗಳಾಗಿ ದ.ಕ.ಜಿಲ್ಲಾ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಜಯ ಸಿ ಕೋಟ್ಯಾನ್, ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ ಇದರ ಅಧ್ಯಕ್ಷ ಜಯಂತ್ ಅಮೀನ್ ಕೋಡಿ, ಬ್ರಹ್ಮಾವರ ರುಡ್ಸೆಟ್ ಸಂಸ್ಥೆಯ ಉಪನ್ಯಾಸಕ ಸಂತೋಷ್ ಶೆಟ್ಟಿ, ಕೆಎಂಸಿ ಮಣಿಪಾಲ ರಕ್ತನಿಧಿ ನಿರ್ದೇಶಕಿ ಡಾ. ದೀಪಿಕಾ, ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ ಇದರ ನಿಕಟಪೂರ್ವ ಅಧ್ಯಕ್ಷ ರಾಜೇಂದ್ರ ಸುವರ್ಣ ಹಿರಿಯಡಕ, ಮೊಗವೀರ ಸಂಘಟನೆಯ ಮಾಜಿ ಅಧ್ಯಕ್ಷ ಶಿವರಾಮ ಕೆ., ಕೋಟ ಭಾಗವಹಿಸಿದ್ದರು. ಈ ಸಂದರ್ಭ ನಿವೃತ್ತ ಯೋಧರಾದ ಚಂದ್ರ ಅಮೀನ್ ಬಾರಕೂರು ಹಾಗೂ ಮುರಳೀಧರ ಕೆ. ಇವರನ್ನು ಸನ್ಮಾನಿಸಲಾಯಿತು.
ಮೊಗವೀರ ಯುವ ಸಂಘಟನೆಯ ಗೌರವ ಸಲಹೆಗಾರ ಕೆ.ಸಿ. ಅಮೀನ್ ಸ್ವಾಗತಿಸಿದರು. ರತ್ನಾಕರ ಮೊಗವೀರ ವಂದಿಸಿದ್ದು ದಯಾನಂದ ಕರ್ಕೇರ ನಿರೂಪಿಸಿದರು. ವಿವಿಧ ಸಂಘಟನೆಗಳ ಸದಸ್ಯರು ಹಾಗೂ ಸಾರ್ವಜನಿಕರಿಂದ ರಕ್ತದಾನ ಶಿಬಿರ ನಡೆಯಿತು.



