ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಬ್ರಹ್ಮಾವರ ಸೆ.೧೭: ಕಳೆದ 25 ವರ್ಷಗಳಿಂದ ಯಕ್ಷಗಾನ ಪ್ರದರ್ಶನ ಮಾಡುತ್ತಿರುವ ಶ್ರೀ ಗುತ್ಯಮ್ಮ ಕೃಪಾಪೋಷಿತ ಯಕ್ಷಗಾನ ಮೇಳ 2025-26ನೇ ಸಾಲಿನಿಂದ ೬ ತಿಂಗಳ ಪೂರ್ಣಾವಧಿ ಮೇಳವಾಗಿ ತಿರುಗಾಟಕ್ಕೆ ಸಜ್ಜುಗೊಳಿಸಿದ್ದು ಈ ಬಾರಿ ನವಂಬರ್ ೨೧ ರಂದು ಪ್ರಥಮ ದೇವರ ಸೇವೆ ನಡೆಯಲಿದೆ ಎಂದು ಮೇಳದ ನೂತನ ಯಜಮಾನ, ಪ್ರಸಂಗಕರ್ತ ಬೇಳೂರು ವಿಷ್ಣುಮೂರ್ತಿ ನಾಯಕ್ ತಿಳಿಸಿದರು.

ಅವರು ಬ್ರಹ್ಮಾವರ ಹೋಟೆಲ್ ಗಜಾನನ ಭವನದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದರು.
ಒಂದಷ್ಟು ಯಕ್ಷಗಾನ ಪೋಷಕರ ಸಹಕಾರ ಹಾಗೂ ಮಾರ್ಗದರ್ಶನದಿಂದ ಈ ಬಾರಿ ಮೇಳದ ಯಜಮಾನನಾಗಿ ಮೇಳ ಮುನ್ನಡೆಸಲಿದ್ದೇನೆ. ಈ ಬಾರಿಯ ತಿರುಗಾಟಕ್ಕೆ ಪ್ರಸಿದ್ಧ ಕಲಾವಿದರುಗಳನ್ನು ಸೇರಿಸಿಕೊಂಡಿದ್ದೇವೆ. ಈ ವರ್ಷದ ಪ್ರದರ್ಶನಕ್ಕೆ ಎಂ.ಕೆ.ರಮೇಶ್ ಆಚಾರ್ಯರು ಬರೆದ ರಾಜಾ ಕರಂದಮ ಹಾಗೂ ಶ್ರೀ ಸೋಮವಾರ ಸಂತೆ ಕ್ಷೇತ್ರ ಮಹಾತ್ಮೆ, ಬೇಳೂರು ವಿಷ್ಣಮೂರ್ತಿ ನಾಯಕ್ ಬರೆದ ಕಲ್ಯಾಣ ದೀಪ ಯಕ್ಷಗಾನ ಪ್ರಸಂಗಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇದರೊಂದಿಗೆ ಎಲ್ಲಾ ಪೌರಾಣಿಕ ಪ್ರಸಂಗಗಳನ್ನು ಪ್ರದರ್ಶನ ಮಾಡಲಿದ್ದೇವೆ.. ನಮ್ಮ ಮೇಳದ ಯಕ್ಷಗಾನ ಪ್ರದರ್ಶನದ ಸಂದರ್ಭ ಕೋಲದ ವೇಷ ಮಾಡಿಸಲ್ಲ. ದೊಂದಿ ಹಿಡಿದು ಬರುವಂತಿಲ್ಲ, ಸಭೆಯ ನಡುವಿನಿಂದ ಮಹಿಷಾಸುರ ಸೇರಿದಂತೆ ಯಾವುದೇ ವೇಷವೂ ಬರುವಂತಿಲ್ಲ ಎಂದು ಎಲ್ಲಾ ಕಲಾವಿದರಿಗೆ ಸೂಚನೆ ನೀಡಿದ್ದೇವೆ. ಯಾವುದೇ ಬೇಂಡು ಸೆಟ್ಗಳನ್ನು ನಾವು ಬಳಸಲ್ಲ. ಚಂಡೆ, ಮದ್ದಳೆಯನ್ನು ಮಾತ್ರ ಬಳಸಿಕೊಳ್ಳಲಿದ್ದೇವೆ. ನಾವು ರಂಗಸ್ಥಳ ಹಾಗೂ ಚೌಕಿಯನ್ನು ದೇವಸ್ಥಾನವೆಂದು ಭಾವಿಸಿದ್ದೇವೆ.ಎಲ್ಲಾ ವೇಷಗಳು ಚೌಕಿಯಿಂದ ನೇರವಾಗಿ ರಂಗಸ್ಥಳಕ್ಕೆ ಪ್ರವೇಶ ಮಾಡಬೇಕು ಎಂಬ ನಿಬಂಧನೆ ಹಾಕಿಕೊಂಡಿದ್ದೇವೆ ಎಂದರು.
ಯಕ್ಷಗಾನ ಭಾಗವತ ರಾಘವೇಂದ್ರ ಮಯ್ಯ ಮಾತನಾಡಿ ಅತಿಥಿ ಕಲಾವಿದರಾಗಿ ಎಂ.ಕೆ.ರಮೇಶ್ ಆಚಾರ್ಯ, ನಿಟ್ಟೂರು ಸುಬ್ರಹ್ಮಣ್ಯ ಭಟ್, ಹಿರಿಯಣ್ಣ ಆಚಾರ್ಯ, ಲಂಬೋಧರ ಹೆಗ್ಡೆ ನಿಟ್ಟೂರು, ಚಂದ್ರಯ್ಯ ಆಚಾರ್ಯ ಹಾಲಾಡಿ, ಶಿವಾನಂದ ಕೋಟ, ಪ್ರಸನ್ನ ಕಲ್ಲುಕೊಪ್ಪ, ರಾಘವೇಂದ್ರ ನಾಗರಕೊಡಿಗೆ, ಅಂಬರೀಶ್ ಭಾರದ್ವಾಜ್ ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್, ವಡ್ಡರ್ಸೆ ಗುರುರಾಜ್ ಅಡಿಗ ಆಗುಂಬೆ, ವಡ್ಡರ್ಸೆ ನಾಗೇಂದ್ರ ಅಡಿಗ ಆಗುಂಬೆ, ಮೇಳದ ಮ್ಯಾನೇಜರ್ ಜಯಾನಂದ ಹೊಳೆಕೊಪ್ಪ ಭಾಗವಹಿಸಿದ್ದರು.



