• June 29, 2025
  • Last Update June 28, 2025 1:20 pm
  • Brahmavara

90 ದಿನಗಳಲ್ಲಿ ಬ್ರಹ್ಮಾವರ ಹೆದ್ದಾರಿ ಸಮಸ್ಯೆ ಬಗೆ ಹರಿಯದಿದ್ದಲ್ಲಿ ಉಗ್ರ ಹೋರಾಟ – ಗೋವಿಂದರಾಜ್ ಹೆಗ್ಡೆ

90 ದಿನಗಳಲ್ಲಿ ಬ್ರಹ್ಮಾವರ ಹೆದ್ದಾರಿ ಸಮಸ್ಯೆ ಬಗೆ ಹರಿಯದಿದ್ದಲ್ಲಿ ಉಗ್ರ ಹೋರಾಟ – ಗೋವಿಂದರಾಜ್ ಹೆಗ್ಡೆ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ

ಬ್ರಹ್ಮಾವರ, ಎ.9: ಬ್ರಹ್ಮಾವರದ ರಸ್ತೆಯ ಸಮಸ್ಯೆ ಬಗ್ಗೆ ಜಿಲ್ಲಾಡಳಿತ ಎ.8ರಂದು ನಡೆದ ಸಭೆಯಲ್ಲಿ ಬ್ರಹ್ಮಾವರದಲ್ಲಿ ಪ್ಲೈಓವರ್ ರಚಿಸುವ ಕುರಿತು ಮತ್ತು ಭದ್ರಗಿರಿಯಿಂದ ಉಪ್ಪಿನಕೋಟೆ ತನಕ ಸರ್ವಿಸ್ ರಸ್ತೆಗಳನ್ನು ರಚಿಸುವ ಕುರಿತು ತೀರ್ಮಾನ ತೆಗೆದುಕೊಂಡಿರುವುದನ್ನು ರಾಷ್ಟ್ರೀಯ ಹೆದ್ದಾರಿ -66 ಉಳಿಸಿ ಸಮಿತಿ ಶರ್ತಬದ್ಧವಾಗಿ ಸ್ವಾಗತಿಸುತ್ತಿದ್ದು ಸಮಿತಿ ವತಿಯಿಂದ ಘೋಷಿಸಬೇಕಾಗಿದ್ದ ಉದ್ದೇಶಿತ ಹೋರಾಟವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದುಹೋರಾಟವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ -66 ಉಳಿಸಿ ಸಮಿತಿ ಸಂಚಾಲಕ ಗೋವಿಂದರಾಜ್ ಹೆಗ್ಡೆ ತಿಳಿಸಿದರು. ಅವರು ಬ್ರಹ್ಮಾವರದ ಉಪ್ಪಿನಕೋಟೆಯಲ್ಲಿ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.
ತುರ್ತಾಗಿ ಸರ್ವಿಸ್ ರಸ್ತೆಯನ್ನು ಭದ್ರಗಿರಿಯಿಂದ ಮಾಬುಕಳದ ವರೆಗೆ ಹೆದ್ದಾರಿಯ ಎಡ ಮತ್ತು ಬಲ ಭಾಗದಲ್ಲಿ ರಚಿಸಲೇಬೇಕು. ಕಾಲಮಿತಿಯೊಳಗೆ ಮೇಲ್‌ಸೇತುವೆ (ಪ್ಲೈಓವರ್) ರಚಿಸಬೇಕು. ಸಮಿತಿ ವತಿಯಿಂದ 2013ರಿಂದಲೇ ಸಂಬಂಧಪಟ್ಟವರಿಗೆ ಮನವಿಗಳನ್ನು ನೀಡುತ್ತಾ ಬಂದಿದ್ದರೂ ಕೂಡಾ ಸೂಕ್ತ ಕ್ರಮ ಕೈಗೊಳ್ಳದ ಹೆದ್ದಾರಿ ಇಲಾಖೆಯ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. 90 ದಿವಸಗಳ ಕಾಲಮಿತಿಯಲ್ಲಿ ಈ ಮೂರು ಬೇಡಿಕೆಗಳನ್ನು ಈಡೇರಿಸಲು ಕೋರುತ್ತಿದ್ದೇವೆ. ಬೇಡಿಕೆ ಈಡೇರುವ ಸೂಚನೆ ಕಾಣದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟದ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಿದ್ದೇವೆ. ಕಳೆದ 5 ವರ್ಷಗಳಿಂದ ಮಹೇಶ್ ಹಾಸ್ಪಿಟಲ್ ಜಂಕ್ಷನ್, ಬಸ್‌ಸ್ಟ್ಯಾಂಡ್ ಮತ್ತು ಆಕಾಶವಾಣಿ ಜಂಕ್ಷನ್‌ಗಳಲ್ಲಿ 50 ಕ್ಕೂ ಮಿಕ್ಕಿದ ಅಪಘಾತಗಳಾಗಿವೆ. ಹೀಗಿದ್ದರೂ ಹೆದ್ದಾರಿ ಇಲಾಖೆ ಸಮಸ್ಯೆ ಬಗೆಹರಿಸದೆ ನಿರ್ಲಕ್ಷ ವಹಿಸಿದೆ. ಆದ್ದರಿಂದ ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯತೆಗಳನ್ನು ನಾವು ಕೂಡ ಪರಿಶೀಲಿಸಲಿದ್ದೇವೆ ಎಂದರು.
ರಾಷ್ಟ್ರೀಯ ಹೆದ್ದಾರಿ-66 ಉಳಿಸಿ ಸಮಿತಿ 2007 ರಿಂದ ಉಡುಪಿ ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿದ್ದು, ಹೆದ್ದಾರಿ ದುರಸ್ತಿ ಮತ್ತು ಅಗಲೀಕರಣಕ್ಕಾಗಿ ಪಕ್ಷಾತೀತವಾಗಿ ಹೆದ್ದಾರಿ ಬಂದ್ ಮತ್ತು ಇನ್ನಿತರ ವಿಧಾನಗಳ ಮೂಲಕ ಸಮಿತಿ ಹೋರಾಟ ಮಾಡಿದೆ. ಈ ಜಿಲ್ಲೆಯ ಜನತೆ ಕುಂದಾಪುರದಿಂದ ಸುರತ್ಕಲ್‌ವರೆಗೆ ನಾಲ್ಕು ಪಥದ ರಸ್ತೆ ರಚನೆಯ ಬೇಡಿಕೆ ಇರಿಸಿಕೊಂಡಿದ್ದು ಇದಕ್ಕಾಗಿ 2007 ಮತ್ತು 2010 ರಲ್ಲಿ ಹೆದ್ದಾರಿ ದುರಸ್ತಿ ಮತ್ತು ಅಗಲೀಕರಣಕ್ಕೆ ಸಂಬಂಧಿಸಿ
ಶಿರೂರಿನಿಂದ ಹೆಜಮಾಡಿ ತನಕ ಬೆಳಿಗ್ಗೆ 6.00 ರಿಂದ ಸಂಜೆ 6.00 ರ ವರೆಗೆ ಜಿಲ್ಲೆಯ ಸಂಘ ಸಂಸ್ಥೆಗಳ ನೆರವಿನಿಂದ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದೆ.
ಹೆದ್ದಾರಿ ರಚನೆ ಸಂದರ್ಭ ಬ್ರಹ್ಮಾವರ ಪ್ರದೇಶದಲ್ಲಿ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರ ಸ್ಥಳೀಯ ಜನಪ್ರತಿನಿಧಿಗಳು, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನವದೆಹಲಿ, ಬೆಂಗಳೂರು, ಮಂಗಳೂರು ಜಿಲ್ಲೆಯ ಜಿಲ್ಲಾಧಿಕಾರಿಯವರು, ಜಿಲ್ಲಾ ಪೊಲೀಸು ಅಧೀಕ್ಷಕರು ಮತ್ತು ಸಂಬಂಧಿಸಿದ ಇತರ ಅಧಿಕಾರಿಗಳಿಗೆ ೨೦೧೩ರಿಂದ ಸಾಕಷ್ಟು ಮನವಿಗಳನ್ನು ನೀಡಿದ್ದರೂ, ಹೋರಾಟ ಮಾಡಿದ್ದರೂ, ಹೆದ್ದಾರಿ ಪ್ರಾಧಿಕಾರ ಯಾವುದೇ ತೀರ್ಮಾನ ತೆಗೆದುಕೊಳ್ಳದೇ ಇರುವುದರಿಂದ ಇತ್ತೀಚೆಗಿನ ವರ್ಷಗಳಲ್ಲಿ ಸಾಕಷ್ಟು ಅಪಘಾತಗಳಾಗಿ ಸಾವು, ನೋವುಗಳು ಸಂಭವಿಸಿದೆ.
ಕೌ ಪಾಸ್ ರಚನೆ ಆಗುತ್ತಿದ್ದ ಸಂದರ್ಭದಲ್ಲಿ ಅಂದಿನ ಲೋಕಸಭಾ ಸದಸ್ಯ ಶ್ರೀ ಕೆ. ಜಯಪ್ರಕಾಶ್ ಹೆಗ್ಡೆ ಯವರಿಗೆ, ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ವಿನಯ್ ಕುಮಾರ್ ಸೊರಕೆಯವರಿಗೆ ಮತ್ತು ಅಂದಿನ ಉಡುಪಿ ಶಾಸಕರಾದ ಶ್ರೀ ಪ್ರಮೋದ್ ಮಧ್ವರಾಜ್ ರವರಿಗೆ ರಾಷ್ಟ್ರೀಯ ಹೆದ್ದಾರಿ ಉಳಿಸಿ ಸಮಿತಿಯಿಂದ ಮನವಿ ನೀಡಲಾಗಿತ್ತು. ಅವರೆಲ್ಲರೂ ಅಂದಿನ ಹೆದ್ದಾರಿ ಸಚಿವರಾಗಿದ್ದ ದಿ. ಆಸ್ಕರ್ ಫೆರ್ನಾಂಡೀಸ್‌ರವರಿಗೆ ಪತ್ರವೊಂದನ್ನು ಬರೆದು 7 ಪಿಲ್ಲರ್‌ಗಳ ಪ್ಲೈಓವರ್‌ನ್ನು ಬ್ರಹ್ಮಾವರದಲ್ಲಿ ರಚಿಸಲು ವಿನಂತಿಸಿದ್ದರು. ಹೀಗಿದ್ದರೂ 2011 ರಲ್ಲಿ ಬ್ರಹ್ಮಾವರದ ಉದ್ದೇಶಿತ ಎಂಬ್ಯಾಕ್‌ಮೆಂಟ್ ಬದಲಾವಣೆಯಾಗಿ ಕೌ ಪಾಸ್ ರಚನೆಯಾಯಿತು. ಇದು ಯಾರಿಂದ ಆಯಿತು ಎಂಬುದು ನಮಗೆ ತಿಳಿದಿದ್ದು ನಾವು ಬಹಿರಂಗ ಪಡಿಸಲು ಇಚ್ಚಿಸುವುದಿಲ್ಲ. ನಮಗೆ ಬ್ರಹ್ಮಾವರದ ಸಮಸ್ಯೆ ಬಗೆಹರಿಯಬೇಕು. ಬ್ರಹ್ಮಾವರದ ಹೆದ್ದಾರಿ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಯವರು ನಡೆಸಿದ ಸಭೆಯಲ್ಲಿ ಸಮಿತಿಯ ವತಿಯಿಂದ ಭಾಗವಹಿಸಿ ಮನವಿ ನೀಡುತ್ತಾ ಬಂದಿದ್ದೇವೆ. ನಾವು ನೀಡಿದ ಮನವಿಯ ಆಧಾರದ ಮೇಲೆ 2024ರಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ ಜಿಲ್ಲಾಧಿಕಾರಿಯವರು ಸೂಕ್ತ ಕ್ರಮ ಕೈಗೊಳ್ಳಿ ಎಂದು ಸಭೆಯಲ್ಲಿ ತಿಳಿಸಿದ್ದರು. 2013ರಿಂದ ಪ್ಲೈ ಓವರ್ ಬಗ್ಗೆ ಸಮಿತಿ ಒತ್ತಾಯಿಸುತ್ತಾ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ನೀಡುತ್ತಾ ಬಂದಿದ್ದರೂ ಕೆಲವು ವ್ಯಕ್ತಿಗಳು ಹೆದ್ದಾರಿ ಸಮಿತಿಯವರು ಪ್ಲೈಓವರ್ ಬೇಡ ಅಂತ ಹೇಳಿದ್ದರು ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಕೆಲವೊಂದು ಊಹಾಪೋಹಗಳು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದ್ದು, ಸ್ಪಷ್ಟ ಪಡಿಸುವ ಉದ್ದೇಶದಿಂದ ಈ ಮಾಹಿತಿಗಳನ್ನು ಬ್ರಹ್ಮಾವರ ಜನತೆಯ ಗಮನಕ್ಕಾಗಿ ನೀಡುತ್ತಿದ್ದೇನೆ. ಬ್ರಹ್ಮಾವರದ ರಾಷ್ಟ್ರೀಯ ಹೆದ್ದಾರಿ ಸಮಸ್ಯೆ 90 ದಿವಸಗಳ ಕಾಲಮಿತಿಯಲ್ಲಿ ಬಗೆ ಹರಿಯದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಗೋವಿಂದರಾಜ್ ಹೆಗ್ಡೆ ತಿಳಿಸಿ ಪತ್ರಿಕಾಗೋಷ್ಟಿಯಲ್ಲಿ ಪಸ್ತುಪಡಿಸಿದ ವಿಷಯಗಳ ಕುರಿತು ದಾಖಲೆಗಳನ್ನು ನೀಡಿದರು.
ಪತ್ರಿಕಾಗೋಷ್ಟಿಯಲ್ಲಿ ಸಿಐಟಿಯು ಉಪಾಧ್ಯಕ್ಷ, ಹೆದ್ದಾರಿ ಉಳಿಸಿ ಸಮಿತಿ ಬ್ರಹ್ಮಾವರ ಘಟಕದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯ ನಿರಂಜನ ಶೆಟ್ಟಿ, ಹೆದ್ದಾರಿ ಉಳಿಸಿ ಸಮಿತಿ ಬ್ರಹ್ಮಾವರ ಘಟಕದ ಕಾರ್ಯದರ್ಶಿ ಗಣೇಶ್ ಶ್ರೀಯಾನ್, ಸಿವಿಲ್ ಇಂಜೀನಿಯರ್ ಪ್ರತೀಕ್ ಹೆಗ್ಡೆ, ಯುತ್ ಕಾಂಗ್ರೆಸ್ ಅಧ್ಯಕ್ಷ ಜೋಯ್ಸನ್ ವೆರೋನ್ ಬಾಂಜ್ ಉಪಸ್ಥಿತರಿದ್ದರು.

administrator

Related Articles

Leave a Reply

Your email address will not be published. Required fields are marked *