ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ:
ಕೋಟ, ಜೂ.28: ಕೋಟ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ಜನವರಿಯಲ್ಲಿ ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾವಣೆ ನಡೆದಿದೆ. ಈ ಚುನಾವಣೆಯಲ್ಲಿ ಪಕ್ಷಾತೀತವಾಗಿ ‘ಸಹಕಾರಿ ಮಿತ್ರರು’ ಎಂಬ ತಂಡ ರಚಿಸಿಕೊಂಡು ನಿರ್ದೇಶಕ ಸ್ಥಾನಕ್ಕೆ ಸ್ಪರ್ಧೆ ಮಾಡಲಾಗಿತ್ತು. ನಮ್ಮ ಬಣದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ತಟಸ್ಥ ಬಣದವರನ್ನು ಸೇರಿಸಿಕೊಂಡು ಸ್ಪರ್ಧಿಸಲಾಗಿತ್ತು. ಚುನಾವಣೆಯ ಫಲಿತಾಂಶದಲ್ಲಿ ನಮಗೆ ೧೦ ಸ್ಥಾನಗಳಲ್ಲಿ ಗೆಲುವು ಲಭಿಸಿತ್ತು. ಬಿಜೆಪಿ ತಂಡದಲ್ಲ್ಲಿ ಗುರುತಿಸಿಕೊಂಡವರಲ್ಲಿ ಮೂವರು ಅಭ್ಯರ್ಥಿಗಳು ಜಯಗಳಿಸಿದ್ದರು. ನಮ್ಮ ತಂಡದಲ್ಲಿದ್ದ ಮಹಿಳಾ ಅಭ್ಯರ್ಥಿ ಪ್ರೇಮ ಗಣೇಶ್ ೨,೯೦೬ ಮತಗಳನ್ನು ಪಡೆದು ೧ ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಎದುರು ಸೋತಿದ್ದರು. ಈ ಸಂದರ್ಭ ಅವರು ಸ್ಥಳದಲ್ಲೇ ಚುನಾವಣಾ ಅಧಿಕಾರಿಯವರಲ್ಲಿ ಮರು ಎಣಿಕೆಗೆ ವಿನಂತಿಸಿದ್ದರು. ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಫಲಿತಾಂಶ ಘೋಷಣೆಯ ಅವಕಾಶವಿಲ್ಲ. ಆದ್ದರಿಂದ ಮರುಎಣಿಕೆಗೆ ಅವಕಾಶ ಕೊಡುವುದಿಲ್ಲ ಎಂದು ಚುನಾವಣಾಧಿಕಾರಿ ಅಂದು ತಿಳಿಸಿದ್ದರು. ಕೇವಲ ಒಂದು ಮತದ ಅಂತರದಲ್ಲಿ ಸೋತಿದ್ದರಿಂದ ಪ್ರೇಮಾ ಗಣೇಶ್ ಸಹಾಯಕ ನಿಬಂಧಕರ ನ್ಯಾಯಾಲಯದ ಮೆಟ್ಟಿಲೇರಿದ್ದರು. ಕಾರಣ 620 ಅಸಿಂಧು ಮತಗಳನ್ನು ಮತ್ತೊಮ್ಮೆ ಪರಿಶೀಲನೆ ಮಾಡಬೇಕಿತ್ತು. ಈ ನ್ಯಾಯಾಲಯದಲ್ಲಿ ಸುಮಾರು ೬ ತಿಂಗಳು ಸುದೀರ್ಘವಾಗಿ ವಿಚಾರಣೆ ನಡೆದಿದೆ. ವಿಚಾರಣೆ ನಡೆಸಿ ಮರು ಎಣಿಕೆಗೆ ಸಹಾಯಕ ನಿಬಂಧಕರು ಆದೇಶ ನೀಡಿದ್ದರು. ಈ ಆದೇಶದ ವಿರುದ್ಧ ಬಿಜೆಪಿ ಬೆಂಬಲಿತ ಅಭ್ಯರ್ಥಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಹೈಕೋರ್ಟ್ ನ್ಯಾಯಾಧೀಶರು ಸಹಾಯಕ ನಿಬಂಧಕರ ಆದೇಶವನ್ನು ಎತ್ತಿ ಹಿಡಿದಿದ್ದು ಜೂ.೨೯ರಂದು ಮರು ಎಣಿಕೆ ಕೋಟ ವಿವೇಕ ಹೈಸ್ಕೂಲಿನಲ್ಲಿ ನಡೆಯಲಿದೆ. ಇದರ ನಡುವೆ ಬಿಜೆಪಿಯವರು ಪ್ರತಿಭಟನೆ ನಡೆಸಿದ್ದಾರೆ. ನಾವು ಫಲಿತಾಂಶ ಯಾವುದೇ ಬರಲಿ ಅದನ್ನು ಸ್ವೀಕರಿಸಲಿದ್ದೇವೆ ಎಂದು ಕೋಟ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಡಾ.ಕೃಷ್ಣ ಕಾಂಚನ್ ಹೇಳಿದರು. ಅವರು ಜೂ.೨೮ರಂದು ಕೋಟ ಸಮುದ್ಯುತ ಸಭಾಂಗಣದಲ್ಲಿ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.
ಕಾಂಗ್ರೆಸ್ ಮುಖಂಡ ಮೊಳಹಳ್ಳಿ ದಿನೇಶ್ ಹೆಗ್ಡೆ ಮಾತನಾಡಿ ಬಿಜೆಪಿಯವರು ನ್ಯಾಯಾಲಯದ ಆದೇಶ ಧಿಕ್ಕರಿಸಿ ಪ್ರತಿಭಟನೆ ನಡೆಸಿದ್ದು ಸರಿಯಲ್ಲ ಎಂದರು.
ನ್ಯಾಯವಾದಿ ಹಾಗೂ ನಿರ್ದೇಶಕ ಮಂಜುನಾಥ ಗಿಳಿಯಾರ್ ಮಾತನಾಡಿ ಬಿಜೆಪಿಯವರು ಪ್ರತಿಭಟನೆ ನಡೆಸಿದ್ದಾರೆ. ಸಮಾಜಕ್ಕೆ ತಪ್ಪು ಸಂದೇಶ ಹೋಗುವುದು ಸರಿಯಲ್ಲ ಎಂಬ ಉದ್ದೇಶದಲ್ಲಿ ಸದಸ್ಯರಿಗೆ ಪತ್ರಿಕಾಗೋಷ್ಟಿ ನಡೆಸಿ ಸ್ಪಷ್ಟನೆ ನೀಡುತ್ತಿದ್ದೇವೆ,
ಅಭ್ಯರ್ಥಿ ಪ್ರೇಮ ಗಣೇಶ್ ಮಾತನಾಡಿ ರಿಕೌಂಟಿಂಗ್ಗೆ ಮನವಿ ಮಾಡಿದ್ದೇನೆ. ಮರುಎಣಿಕೆಗೆ ಆದೇಶವಾಗಿದ್ದು ಎನೇ ಫಲಿತಾಂಶ ಬಂದರೂ ನಾನು ಸ್ವೀಕರಿಸುತ್ತೇನೆ ಎಂದರು.
ಕೋಟ ಬ್ಲಾಕ್ ಕಾಂಗ್ರೆಸ್ ಮುಖಂಡ ಶಂಕರ ಕುಂದರ್ ಮಾತನಾಡಿ ಬಿಜೆಪಿಯವರ ಪ್ರತಿಭಟನೆ ಸರಿಯಲ್ಲ. ಮರುಎಣಿಕೆಯಲ್ಲಿ ಯಾವುದೇ ಫಲಿತಾಂಶ ಬಂದರೂ ಅದಕ್ಕೆ ಬದ್ದರಾಗಿದ್ದೇವೆ ಎಂದರು
ಸಹಕಾರಿ ಸಂಘದ ಉಪಾಧ್ಯಕ್ಷ ನಾಗರಾಜ ಹಂದೆ, ನಿರ್ದೇಶಕರಾದ ತಿಮ್ಮ ಪೂಜಾರಿ, ಚಂದ್ರ ಪೂಜಾರಿ, ಪ್ರೇಮ ಬೆಟ್ಲಕ್ಜಿ, ರವೀಂದ್ರ ಕಾಮತ್, ಶ್ರೀಮತಿ ವಸಂತಿ, ಮಹೇಶ್ ಶೆಟ್ಟಿ, ನ್ಯಾಯವಾದಿ ರಶ್ಮಿ, ನಾಮ ನಿರ್ದೇಶಕ ಸದಸ್ಯರಾದ ಶೇಖರ ಮರಕಾಲ, ದಿನಕರ ಶೆಟ್ಟಿ, ಮಾಜಿ ನಿರ್ದೇಶಕರಾದ ಅಚ್ಯುತ ಪೂಜಾರಿ, ಭಾಸ್ಕರ್ ಶೆಟ್ಟಿ ಉಪಸ್ಥಿತರಿದ್ದರು.
ಮಂಜುನಾಥ ಗಿಳಿಯಾರ್ ಸ್ವಾಗತಿಸಿ ವಂದಿಸಿದರು.
