ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿ ಮಿತ್ರ ಪತ್ರಿಕೆ ಸುದ್ಧಿ:
ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ ಹಾಗೂ ಸ್ವರ್ಣ ಯಕ್ಷೀ ಸಾನ್ನಿಧ್ಯ ವಕ್ಕೇರಿ ಬಡಾಕೆರೆ ಇಲ್ಲಿ ಶಿಲಾಮಯ ದೇಗುಲದ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಮೇ 22ರಿಂದ 24ರ ವರೆಗೆ ನಡೆಯಲಿದೆ ಎಂದು ದೇವಸ್ಥಾನದ ಅರ್ಚಕ ಶ್ರೀ ಮಹಾಬಲೇಶ್ವರ ಕಾರಂತರು ತಿಳಿಸಿದ್ದಾರೆ.
ಶ್ರೀ ಅನ್ನಪೂರ್ಣೆಶ್ವರೀ ದೇವಸ್ಥಾನವು ಸುಮಾರು 700-800 ವರ್ಷಕ್ಕೂ ಹಿಂದೆಯೇ ಸ್ಥಾಪನೆಗೊಂಡ ದಿವ್ಯ ಸಾನಿಧ್ಯವಾಗಿದೆ. ಈ ದೇವಸ್ಥಾನದ ಕುರಿತು ತಾಳೆಗರಿಯು ಇದ್ದಿದ್ದು ಕಾಲನ ಸಂದರ್ಭಕ್ಕೆ ಅದು ನಶಿಸಿ ಹೋಗಿದೆ ಎನ್ನಲಾಗಿದೆ. ಈ ದೇವಸ್ಥಾನವನ್ನು ಸುಮಾರು ೫೦ ವರ್ಷದ ಮೊದಲು ಕೆಂಪು ಕಲ್ಲಿನ ಗೋಡೆಯಿಂದ ರಚನೆ ಮಾಡಿ ಕಾಂಕ್ರೀಟ್ ಮೇಲ್ಪಾವಣಿಯನ್ನು ನಿರ್ಮಿಸಿದ್ದರು. ಆದರೆ ದೇವರ ಗರ್ಭಗುಡಿಯು ಶಿಥಿಲಾವಸ್ಥೆ ತಲುಪಿದ್ದರಿಂದ ಜೀರ್ಣೋದ್ದಾರ ಮಾಡಲು ಊರಿನ ಹತ್ತು ಸಮಸ್ತರೆಲ್ಲ ಸೇರಿ ಪ್ರಯತ್ನ ಮಾಡಿದ್ದು ಇದೀಗ ಶಿಲಾಮಯ ದೇವಸ್ಥಾನವಾಗಿ ಜೀರ್ಣೋದ್ಧಾರ ಗೊಂಡಿದೆ.
ಮೇ 22ರಂದು ಬೆಳಿಗ್ಗೆಯಿಂದ ದೇವತಾ ಪ್ರಾರ್ಥನೆ, ಪುಣ್ಯಾಹವಾಚನ, ನಾಂದಿ, ಸಮಾರಾಧನೆ, ಗಣಯಾಗ ನವಗ್ರಹ ಯಾಗ, ಬಿಂಬಶುದ್ದಿ, ಶಯಾಕಲ್ಪನೆ ಯೊಂದಿಗೆ ಬ್ರಹ್ಮಕಲಶ ಧಾರ್ಮಿಕ ವಿಧಿ ವಿಧಾನಗಳು ಆರಂಭಗೊಳ್ಳಲಿವೆ. ಅಂದು ಸಂಜೆ 4 ಗಂಟೆಗೆ ಬಡಾಕೇರಿ ಶ್ರೀ ಲಕ್ಷ್ಮಿ ಜನಾರ್ಧನ ದೇವಸ್ಥಾನ ಸನ್ನಿಧಾನದಿಂದ ಪೂರ್ಣಕುಂಭ ಕಲಶ, ಕುಣಿತ ಭಜನೆ ಚಂಡೆ ವಾದ್ಯದ ನಡುವೆ ಬೃಹತ್ ಮೆರವಣಿಗೆ ನಡೆಯಲಿದೆ. ಸಂಜೆ ೫:೩೦ಕ್ಕೆ ಪುಣ್ಯಾಹವಾಚನ ಸ್ಥಾನಶುದ್ಧಿ, ಪ್ರಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಪೂಜೆ, ವಾಸ್ತು ಬಲಿ, ದಾನ, ಬಿಂಬಾಧಿವಾಸ ಪ್ರತಿಷ್ಠಾಹೋಮ, ಅಧಿವಾಸ ಹೋಮ ನಡೆಯಲಿದೆ.
ಮೇ 23ರಂದು ಬೆಳಿಗ್ಗೆ ಗಂಟೆ 10.05ಕ್ಕೆ ಒದಗುವ ಕರ್ಕಾಟಕ ಲಗ್ನ ಸುಮುಹೂರ್ತದಲ್ಲಿ ಶ್ರೀದೇವಿಯ ಪುನರ್ ಪ್ರತಿಷ್ಠಾಪನೆ, ಸ್ವರ್ಣಯಕ್ಷೆ ಪ್ರತಿಷ್ಠೆ, ಜೀವ ಕುಂಭಾಭಿಷೇಕ ತತ್ವ ಕಲಶಸ್ಥಾಪನೆ, ತತ್ವ ಹೋಮ, ಕಲಶಾಭಿಷೇಕ, ಮಹಾಪೂಜೆ ನಡೆಯಲಿದೆ ಸಂಜೆ ಅಷ್ಟೋತ್ತರ ಶತ ಪರಿಕಲಶ ಸಹಿತ ಬ್ರಹ್ಮಕಲಶ ಸ್ಥಾಪನೆ, ಪ್ರಾಯಶ್ಚಿತ್ತ ಹೋಮ, ಪರಿವಾರ ದೇವರಿಗೆ ಕಲಶಾಭಿಷೇಕ ಪೂಜೆ, ಅನ್ನ ಪ್ರಸಾದ ವಿತರಣೆ ನಡೆಯಲಿದೆ.
ಮೇ ೨೪ರಂದು ಬೆಳಿಗ್ಗೆ ಕಲಶಾಧಿ ವಾಸ ಹೋಮ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ಮಂತ್ರಾಕ್ಷತೆ ಹಾಗೂ ಅನ್ನ ಸಂತರ್ಪಣೆ ಜರುಗಲಿದೆ.
ಹೊರೆ ಕಾಣಿಕೆ :
ಬ್ರಹ್ಮಕಲಶೋತ್ಸವದ ಅಂಗವಾಗಿ ಹೊರ ಕಾಣಿಕೆ ಸಮರ್ಪಣೆ ಮೇ 20ರಂದು ಮಂಗಳವಾರ ಜರುಗಲಿದೆ. ಮಧ್ಯಾಹ್ನ ಗಂಟೆ ಮೂರಕ್ಕೆ ಸರಿಯಾಗಿ ಅನ್ನಪೂರ್ಣೇಶ್ವರಿ ದೇವಿಯ ಸನ್ನಿಧಾನದಿಂದ ಹೊರೆಕಾಣಿಕೆ ಮೆರವಣಿಗೆ ಹೊರಟು ಬಡಾಕೇರಿ ಲಕ್ಷ್ಮಿಜನಾದನ ದೇವಸ್ಥಾನದ ಮಾರ್ಗದಿಂದ ಮರವಂತೆಯ ವರಾಹ ಸ್ವಾಮಿಯ ಸನ್ನಿಧಾನದಿಂದ ಹೊರಟು ನಾಡಗುಡ್ಡೆ ಅಂಗಡಿಯ ಮಾರ್ಗವಾಗಿ ಗುಡ್ಡೆ ಹೋಟೆಲ್ನಿಂದ ಜಡ್ದಾಡಿಯ ಮಾರ್ಗವಾಗಿ ಕೊಣ್ಕಿ ಕಾಡ್ರಿಹಾಡಿಯಿಂದ ಕಡಿಕೆ ಮಾರ್ಗದಿಂದ ವಕ್ಕೇರಿಯ ಮುಖಾಂತರ ಪುನಃ ಸನ್ನಿಧಾನದಲ್ಲಿ ಬಂದು ಹೊರೆ ಕಾಣಿಕೆಯ ಸಂಗ್ರಹ ಕೊನೆಗೊಳ್ಳಲಿದೆ ಹೊರಕಾಣಿಕೆಗೂ ಭಕ್ತಾದಿಗಳೆಲ್ಲರೂ ಸಹಕರಿಸಬೇಕೆಂದು ಅವರು ಕೋರಿಕೊಂಡಿದ್ದಾರೆ.
ಧಾರ್ಮಿಕ ಸಭಾ ಕಾರ್ಯಕ್ರಮ :
ಧಾರ್ಮಿಕ ಸಭಾ ಕಾರ್ಯಕ್ರಮ ಮಧ್ಯಾಹ್ನ ಗಂಟೆ ೧೧ಕ್ಕೆ ನಡೆಯಲಿದ್ದು ಶ್ರೀ ಕ್ಷೇತ್ರ ಕೆ ಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಶ್ರೀ ಈಶ ವಿಠಲದಾಸ ಸ್ವಾಮೀಜಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ ಗುರುರಾಜ್ ಶೆಟ್ಟಿ ಗಂಟಿ ಹೊಳೆ ವಹಿಸಲಿದ್ದಾರೆ. ಶೃಂಗೇರಿ ಶಾರದಾ ಪೀಠದ ಪ್ರಾಂತೀಯ ಧರ್ಮಾಧಿಕಾರಿ ವೇದಮೂರ್ತಿ ಲೋಕೇಶ್ ಅಡಿಗ ಧಾರ್ಮಿಕ ಪ್ರವಚನ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ, ಹೈದರಾಬಾದಿನ ಹೋಟೆಲ್ ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಬು ಹೆಗ್ಡೆ ತಗ್ಗರ್ಸೆ, ಮಾಜಿ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಮುಂಬೈನ ಉದ್ಯಮಿ ಅಶೋಕ್ ಶೆಟ್ಟಿ ಬೆಳ್ಳಾಡಿ, ವನದುರ್ಗಾಪರಮೇಶ್ವರಿ ದೇವಸ್ಥಾನ ಆಡಳಿತ ಮೊಕ್ತೇಸರ ವಂಡಬಳ್ಳಿ ಜಯರಾಮ ಶೆಟ್ಟಿ, ಶಂಕರನಾರಾಯಣ ಕ್ಯಾಶ್ಯೂಸ್ ಮಾಲಕ ಶ್ರೀ ಶಶಿಧರ ಶೆಟ್ಟಿ, ಪುರೋಹಿತರಾದ ಎಂ. ಗಿರೀಶ್ ಐತಾಳ್, ಉದ್ಯಮಿ ವಿಜಯಶೆಟ್ಟಿ ರಾಮದುರ್ಗ, ಶ್ರೀ ಉಮಾಮಹೇಶ್ವರ ದೇವಸ್ಥಾನ ಗುಳಕೋಣಿ ನಾಡ ಇದರ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ ಕಡಿಕೆ, ನಾಡ ಗ್ರಾಮ ಪಂಚಾಯತ್ ಅಧ್ಯಕ್ಷ್ಷೆ ಶ್ರೀಮತಿ ಪಾರ್ವತಿ ಮೊಗವೀರ ಭಾಗವಹಿಸಲಿದ್ದಾರೆ.
ಇದೇ ಸಂದರ್ಭ ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ, ಎಂ ಗಿರೀಶ್ ಐತಾಳ್, ಶ್ರೀ ಮಹಾಬಲೇಶ್ವರ ಕಾರಂತ, ಶ್ರೀಮತಿ ಶಾಮಲಾ ಅಶೋಕ್ ಶೆಟ್ಟಿ ಬೆಳ್ಳಾಡಿ ಇವರನ್ನು ಸನ್ಮಾನಿಸಲಾಗುವುದು ಎಂದು ಆಡಳಿತ ಮಂಡಳಿ ಅಧ್ಯಕ್ಷರು ತಿಳಿಸಿರುತ್ತಾರೆ.
ಮಧ್ಯಾಹ್ನ ಗಂಟೆ ೨:೩೦ ಕ್ಕೆ ಮನು ಹಂದಾಡಿ ಹಾಗೂ ತಂಡದವರಿಂದ ‘ನಗೆಸುಗ್ಗಿ’ ಕಾರ್ಯಕ್ರಮ ನಂತರ ಎಂ. ವಿಶ್ವೇಶ್ವರ ಸೋಮಯಾಜಿ ಹಾಗು ತಂಡದವರಿಂದ ಯಕ್ಷಗಾನ ತಾಳಮದ್ದಲೆ ಸಂಜೆ ೭.೦೦ಕ್ಕೆ ಕಡಿಕೆ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಗಂಟೆ ೮.೦೦ಕ್ಕೆ ಸ್ನೇಹ ಸಮ್ಮಿಲನ ಸಭಾ ಕಾರ್ಯಕ್ರಮ, ‘ಬಿಡುವನೆ ಬ್ರಹ್ಮಲಿಂಗ’ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ.

