ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ :
ವಂಡ್ಸೆ, ಅ.೨೩: ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ, ನಿಟ್ಟೆ ಯುನಿವರ್ಸಿಟಿ (ಸ್ಯಾಟಲೈಟ್ ಸೆಂಟರ್) ಚಿತ್ತೂರು, ಮಂಜಯ್ಯ ಶೆಟ್ಟಿ ಸ್ಮಾರಕ ವೈದ್ಯಕೀಯ ಮತ್ತು ದಂತ ಚಿಕಿತ್ಸಾಲಯ ಚಿತ್ತೂರು ಇದರ ವೈದ್ಯಕೀಯ ಪ್ರಯೋಗಾಲಯ ಕೊಠಡಿ ಉದ್ಘಾಟನೆ ಹಾಗೂ ವೈದ್ಯಕೀಯ ಉಪಕರಣಗಳ ಹಸ್ತಾಂತರ ಕಾರ್ಯಕ್ರಮ ಮಾರಣಕಟ್ಟೆಯಲ್ಲಿ ನಡೆಯಿತು.

ನಿಟ್ಟೆ ವಿಶ್ವ ವಿದ್ಯಾಲಯದ ಉಪಾಧ್ಯಕ್ಷ ಡಾ.ಸತೀಶ್ ಕುಮಾರ ಭಂಡಾರಿ ಮಾತನಾಡಿ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ೩೦ ವರ್ಷಗಳಿಂದ ನಡೆಯುತ್ತಾ ಬಂದಿರುವ ದಂತ ಚಿಕಿತ್ಸಾಲಯ ಈಗ ಸುಸಜ್ಜಿತ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಜನರ ಕೋರಿಕೆ ಮೇರೆಗೆ ಇತ್ತೀಚೆಗೆ ವೈದ್ಯಕೀಯ ವಿಭಾಗವನ್ನು ಇಲ್ಲಿ ಆರಂಭಿಸಲಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಎಂ.ಬಿ.ಬಿ.ಎಸ್ ವೈದ್ಯರು ಸಿಗುವುದೇ ಕಷ್ಟ. ಹಾಗಿದ್ದರೂ ಇಲ್ಲಿ ವೈದ್ಯರನ್ನು ನೇಮಿಸಿ ಉತ್ತಮ ಚಿಕಿತ್ಸೆ ನೀಡುತ್ತಾ ಬಂದಿದ್ದೇವೆ. ಸಂಸ್ಥೆ ಯಾವುದೇ ಲಾಭಕ್ಕಾಗಿ ಈ ಸೇವೆ ಮಾಡುತ್ತಿಲ್ಲ. ಜನರಿಗೆ ಉತ್ತಮ ಸೇವೆ ದೊರಕಲಿ ಎಂಬ ಉದ್ದೇಶದಲ್ಲಿ ಸೇವೆ ನೀಡುತ್ತಿದ್ದು ಇದೀಗ ಕ್ವಾಲಿಟಿಯ ಲ್ಯಾಬ್ ತೆರೆಯಲಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಸಿ.ಸದಾಶಿವ ಶೆಟ್ಟಿ ವಹಿಸಿದ್ದರು.
ಮಂಗಳೂರು ಎ.ಬಿ.ಶೆಟ್ಟಿ ಡೆಂಟಲ್ ವೈದ್ಯಕೀಯ ಕಾಲೇಜಿನ ನಿವೃತ್ತ ಡೀನ್ ಡಾ.ಶ್ರೀಧರ ಶೆಟ್ಟಿ ಮಾತನಾಡಿ ಬಡವರಿಗೆ, ಸಾರ್ವಜನಿಕರಿಗೆ ಉಚಿತ ಚಿಕಿತ್ಸೆಯ ಉದ್ದೇಶದಲ್ಲಿ ದಂತ ವೈದ್ಯಕೀಯ ಸೆಂಟರ್ ಸ್ಥಾಪಿಸಿದ್ದು ನಿಟ್ಟೆ ಸಂಸ್ಥೆಯಿಂದ ಇಂತಹ ಸುಮಾರು ೩೦ ಸೆಂಟರ್ ಗಳು ನಡೆಯುತ್ತಿದ್ದು ಮಾರಣಕಟ್ಟೆ ಸೆಂಟರ್ ಪ್ರಥಮ ಸ್ಥಾನದಲ್ಲಿದೆ ಎಂದರು.
ಹೈದರಬಾದ್ನ ಸುಪ್ರಭಾತ್ ಗ್ರೂಫ್ ಆಫ್ ಹೋಟೆಲ್ ಮಾಲಕ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ಮಾತನಾಡಿ ಒಂದು ಕಾಲದಲ್ಲಿ ಆಹಾರಕ್ಕೂ ಕಷ್ಟದ ಕಾಲವಿತ್ತು. ಇಂದು ಎಲ್ಲರಿಗೂ ಬಹುತೇಕ ಅನ್ನ ಸಿಗುತ್ತಿದೆ. ಆರೋಗ್ಯ ಹಾಗೂ ಶೈಕ್ಷಣಿಕ ಕ್ಷೇತ್ರಕ್ಕೆ ಸಹಕಾರ ಬೇಕಾಗಿದೆ ಎಂದರು.

ಅತಿಥಿಗಳಾಗಿ ಕೆ.ಎಸ್.ಹೆಗ್ಡೆ ವೈದ್ಯಕೀಯ ಮಹಾವಿದ್ಯಾಲಯದ ಡಾ.ರಾಘವೇಂದ್ರ, ಕುಂದಾಪುರ ನ್ಯೂ ಮೆಡಿಕಲ್ ಸೆಂಟರ್ ನ ವೈದ್ಯಕೀಯ ನಿರ್ದೇಶಕ ಡಾ.ರಂಜನ್ ಶೆಟ್ಟಿ, ನಿಟ್ಟೆ ಯುನಿವರ್ಸಿಟಿಯ ಚಿತ್ತೂರು ಸ್ಯಾಟಲೈಟ್ ಸೆಂಟರ್ನ ಡಾ.ಪ್ರತಾಪ್ ಕುಮಾರ್, ಒಡೆಯ ಗ್ರೂಫ್ ಹೋಟೆಲ್ ಮಾಲಕ ಎಸ್.ನವೀನ್ ಶೆಟ್ಟಿ ಆಲೂರು ಅತಿಥಿಗಳಾಗಿ ಭಾಗವಹಿಸಿದ್ದರು.

ಸಮಾರಂಭದಲ್ಲಿ ಡಾ.ಅತುಲ್ ಕುಮಾರ್ ಶೆಟ್ಟಿ, ವಂಡಬಳ್ಳಿ ಜಯರಾಮ ಶೆಟ್ಟಿ, ರವೀಂದ್ರ ಶೆಟ್ಟಿ ಚಿತ್ತೂರು, ಜಯಂತ ಶೆಟ್ಟಿ, ದಿನಕರ ಶೆಟ್ಟಿ, ಗೋವರ್ದನ ಶೆಟ್ಟಿ, ಸರ್ವೋತ್ಯಮ ಶೆಟ್ಟಿ, ನಿತ್ಯಾನಂದ ಶೆಟ್ಟಿ, ನಾರಾಯಣ ಶೆಟ್ಟಿ ಚಿತ್ತೂರು,ನ್ಯಾಯವಾದಿ ಕುಸುಮಾಕರ ಶೆಟ್ಟಿ, ನ್ಯಾಯವಾದಿ ಪ್ರಸನ್ನಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಪ್ರಯೋಗಾಲಯದಲ್ಲಿ ದೇವಸ್ಥಾನದ ಹಿರಿಯ ಅರ್ಚಕ ನಾರಾಯಣ ಮಂಜ ಪೂಜೆ ನೆರವೇರಿಸಿದರು.
ಪ್ರಯೋಗಾಲಯಕ್ಕೆ ಸಹಕಾರ ನೀಡಿದ ಉದ್ಯಮಿಗಳಾದ ಕೃಷ್ಣಮೂರ್ತಿ ಮಂಜ ಹಾಗೂ ನವೀನ್ ಶೆಟ್ಟಿ ಆಲೂರು ಇವರನ್ನು ಸನ್ಮಾನಿಸಲಾಯಿತು.

ರಘುರಾಮ ಶೆಟ್ಟಿ ಸ್ವಾಗತಿಸುತ್ತಾ ಪ್ರಾಸ್ತಾವಿಕ ಮಾತುಗಳನ್ನಾಡಿ ಸೆ.೨೦ ರಂದು ಮಾರಣಕಟ್ಟೆಯಲ್ಲಿ ಉಚಿತ ಆರೋಗ್ಯ ಚಿಕಿತ್ಸಾ ಶಿಬಿರ, ರಕ್ತದಾನ ಶಿಬಿರ, ನೇತ್ರ ಚಿಕಿತ್ಸಾ ಶಿಬಿರ ನಡೆಸಲಾಗುವುದು ಎಂದರು.
ದೇವಸ್ಥಾನದ ಮಾಜಿ ಧರ್ಮದರ್ಶಿ ಮಂಜಯ್ಯ ಶೆಟ್ಟಿ ವಂದಿಸಿದರು.
ಶಿಕ್ಷಕ ಗುರುರಾಜ್ ದೇವಾಡಿಗ ನಿರೂಪಿಸಿದರು. ಚಿತ್ತೂರು ಗುಡಿಕೇರಿ ಕುಟುಂಬದ ಸದಸ್ಯರು, ದೇವಸ್ಥಾನದ ಅರ್ಚಕ ವೃಂದ, ಸಿಬ್ಬಂದಿಗಳು, ಊರಿನ ಪ್ರಮುಖರು ಭಾಗವಹಿಸಿದ್ದರು.



