ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ದಿ:
ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಫೆ. ೨೫ರಿಂದ ಮಾ. ೫ರ ವರೆಗೆ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯಲಿದ್ದು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ| ಕೆ. ಪ್ರಕಾಶ್ ಶೆಟ್ಟಿ ತಿಳಿಸಿದ್ದಾರೆ.
ದೇವಸ್ಥಾನದ ಜೀರ್ಣೋದ್ಧಾರ ಕಚೇರಿಯಲ್ಲಿ ಫೆ.೨೪ರಂದು ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ಮಾರಿಯಮ್ಮನ ದೇವಸ್ಥಾನದ ಸುತ್ತ ೧ ಕಿ.ಮೀ.ವ್ಯಾಪ್ತಿಯಲ್ಲಿ ಯಾವುದೇ ಒಂದು ಕಸ ಕಡ್ಡಿ ಬೀಳದೇ ಇರಲಿ ಎಂದು ಪ್ರತ್ಯೇಕ ಸ್ವಚ್ಚತಾ ತಂಡ ರಚಿಸಿದ್ದೇವೆ. ಪ್ರತಿಷ್ಠಾ ಬ್ರಹ್ಮಕಲಶೋತ್ಸವದಲ್ಲಿ ಬೆಳಿಗ್ಗೆ ಗಂಟೆ ೫.೦೦ ರಿಂದ ಧಾರ್ಮಿಕ ಕಾರ್ಯಕ್ರಮಗಳು ಸಂಜೆ ೫.೦೦ರಿಂದ ಧಾರ್ಮಿಕ ಸಭಾ ಕಾರ್ಯಕ್ರಮಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಮೂಡಬಿದಿರೆ ಆಳ್ವಾಸ್ ಸಂಸ್ಥೆ, ಖ್ಯಾತ ಹಾಡುಗಾರ ವಿಜಯ ಪ್ರಕಾಶ್, ರಘು ದೀಕ್ಷಿತ್ ಸೇರಿದಂತೆ ವಿವಿಧ ಖ್ಯಾತ ಸಾಂಸ್ಕೃತಿಕ ತಂಡಗಳಿಂದ ೯ ದಿನಗಳಲ್ಲಿ ೯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಭಾ ಕಾರ್ಯಕ್ರಮಗಳಲ್ಲಿ ರಾಜಕಾರಣಿಗಳು, ಚಲನಚಿತ್ರನಟರು, ವಿವಿಧ ಮಠಾಧೀಶರು ಭಾಗವಹಿಸಲಿದ್ದಾರೆ ಎಂದು ನುಡಿದರು.
೬೫ ಕೋ. ರೂ. ವೆಚ್ಚದ ಯೋಜನೆ ಸಮರ್ಪಣೆ, ಬ್ರಹ್ಮಕಲಶೋತ್ಸವದಲ್ಲಿ ೧೧.೩೦ಕ್ಕೆ ಪ್ರತಿದಿನ ಸಂತರ್ಪಣೆ ಆರಂಭ : ವಾಸುದೇವ ಶೆಟ್ಟಿ
ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಮಾತನಾಡಿ ಪ್ರಥಮ ಹಂತದಲ್ಲಿ ಸುಮಾರು ೩೦ ಕೋಟಿ ರೂ.ವೆಚ್ಚದ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಿವೆ. ಸ್ವರ್ಣ ಗದ್ದುಗೆ, ರಜತ ರಥ, ಸ್ವರ್ಣ ಮುಖವಾಡ, ರಜತ ಸಿಂಹ, ರಾಜಗೋಪುರ, ನವದುರ್ಗಾ ಮಂಟಪ, ಬೃಹತ್ ಸ್ತಂಭಗಳು. ಮೇಲ್ಚಾವಣಿ ಸೇರಿದಂತೆ ಒಟ್ಟು ರೂ.೬೫ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕೆಲಸಗಳು ನಡೆದಿದ್ದು ಲೋಕಾರ್ಪಣೆಗೊಳ್ಳಲಿದೆ. ಮಾರಿಗುಡಿಯ ಜೀರ್ಣೋದ್ಧಾರದ ಸಂದರ್ಭ ದೇಗುಲದ ತಂತ್ರಿಗಳ ಮಾರ್ಗದರ್ಶನದಲ್ಲಿ ಪುರಾತನ ಪದ್ಧತಿಯ ಪೂಜಾ ವಿಧಾನಗಳನ್ನು ಅನುಷ್ಠಾನಿಸಿಕೊಂಡು ಬರಲಾಗುವುದು. ಸ್ತಂಭಗಳು ಸೇರಿದಂತೆ ಬೇರೆ ಬೇರೆ ರೀತಿಯ ಸೇವೆ ನೀಡಿದವರನ್ನು ಪೂಜೆಯ ಮುಖಾಂತರ ಗುರುತಿಸಲಾಗುವುದು. ಹರಿದ್ವಾರದಿಂದ ಗಂಗಾಜಲ ಬಂದಿದ್ದು ಜನಾರ್ದನ ದೇವಸ್ಥಾನದಲ್ಲಿ ಪೂಜಿಸಲ್ಪಡುತ್ತಿದೆ. ಅದನ್ನು ಬ್ರಹ್ಮಕಲಶದ ಹಿಂದಿನ ದಿನ ಅಂದರೆ ಮಾ.೪ರಂದು ಬೆಳಿಗ್ಗೆ ಕಾಲ್ನಡಿಗೆಯ ಶೋಭಾ ಯಾತ್ರೆಯ ಮೂಲಕ ಮಾರಿಗುಡಿಗೆ ತರಲಾಗುವುದು. ಅದೇ ದಿನ ೯ ಬಿಳಿ ಅಶ್ವಗಳನ್ನು ತಂದು ಪ್ರತ್ಯಕ್ಷ ಅಶ್ವ ಪೂಜೆ ನಡೆಸುವುದೆಂದು ತೀರ್ಮಾನಿಸಲಾಗಿದೆ. ಗಜ ಪೂಜೆ ಇದ್ದು ಕಟೀಲಿನ ಆಡಳಿತ ಮಂಡಳಿಗೆ ಮನವಿ ನೀಡಲಾಗಿದ್ದು ಅಲ್ಲಿಂದ ಗಜವನ್ನು ತರಿಸಿ ಪೂಜೆ ಮಾಡಲಾಗುವುದು. ಸಿಂಹ ಪೂಜೆಯೂ ಇದೆ. ಎಲ್ಲವನ್ನು ಶ್ರದ್ಧೆಯಿಂದ ಮಾಡಲಾಗುವುದು. ಐತಿಹಾಸಿಕ ದೇವಸ್ಥಾನವನ್ನು ಅಮ್ಮ ನಮ್ಮ ಭಕ್ತಾದಿಗಳ ಕೈಯಿಂದ ಪಡೆದುಕೊಳ್ಳುತ್ತಿದ್ದಾಳೆ. ಮುಂದೆ ಇದು ಸಾವಿರ ವರ್ಷಗಳ ಕಾಲ ಇತಿಹಾಸಕ್ಕೆ ಸೇರುವ ದೇವಸ್ಥಾನವಾಗಲಿದೆ. ಕೇವಲ ದೇವಸ್ಥಾನದ ಅಂದ ಚಂದ ನೋಡಿದರೆ ಸಾಲದು. ಗರ್ಭಗುಡಿಯ ಮುಂದೆ ನಿಂತು ಶ್ರದ್ದೆಯಿಂದ ಪ್ರಾರ್ಥಿಸಿದವರ ಪ್ರಾರ್ಥನೆ ನೆರವೇರುವ ರೀತಿಯಲ್ಲಿ ಧಾರ್ಮಿಕ ಪ್ರತಿಷ್ಠಾ ವಿಧಿಗಳನ್ನು ನೆರವೇರಿಸಲಾಗುವುದು ಎಂದು ಕೆ. ವಾಸುದೇವ ಶೆಟ್ಟಿ ನುಡಿದರು.
ಪಕ್ಷಾತೀತವಾಗಿ, ಧರ್ಮಾತೀತವಾಗಿ ಕಾರ್ಯಕ್ರಮಗಳು ನಡೆಯಲಿವೆ : ಶಾಸಕ ಗುರ್ಮೆ ಸುರೇಶ್ ಶೆಟ್ಟಿ
ಶಾಸಕ, ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಮಾರಿಗುಡಿಯ ಎಲ್ಲಾ ಕಾರ್ಯಕ್ರಮಗಳು ಪಕ್ಷ, ಧರ್ಮ, ಜಾತಿಯನ್ನು ಮೀರಿ ನಡೆಯಲಿದೆ. ದಾನಿಗಳನ್ನು, ಭಕ್ತಾದಿಗಳನ್ನು ತಾಯಿ ಕರೆಸಿಕೊಂಡು ಎಲ್ಲಾ ಅಭಿವೃಧ್ಧಿ ಕೆಲಸಗಳನ್ನು ಮಾಡಿಸಿಕೊಂಡಿದ್ದಾಳೆ. ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಪ್ರಯುಕ್ತ ಮಹಾದೇವಿ ಶಾಲಾ ಮೈದಾನದಲ್ಲಿ ೯ ದಿನಗಳ ಕಾಲ ಧಾರ್ಮಿಕ ಸಭೆ, ಸ್ಥಳೀಯ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಕೇಂದ್ರ ಹಾಗೂ ರಾಜ್ಯ ಸಚಿವರು, ಕರಾವಳಿ ಭಾಗದ ಜನಪ್ರತಿನಿಧಿಗಳು, ವಿವಿಧ ಮಠಾಧೀಶರು, ಧಾರ್ಮಿಕ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದರು.
೨೬,೦೦೦ ಜನರಿಗೆ ಒಮ್ಮೆಲೆ ಬಫೆ ವ್ಯವಸ್ಥೆ :
೩೫೦೦ ಕಾರುಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಪ್ರತಿ ದಿನ ವಿಶೇಷ ಊಟದ ವ್ಯವಸ್ಥೆ, ೨೬,೦೦೦ ಜನರಿಗೆ ಬಫೆ ವ್ಯವಸ್ಥೆ, ಅರ್ಧ ಗಂಟೆಯಲ್ಲಿ ೪,೫೦೦ ಜನರಿಗೆ ಕುಳಿತು ಊಟ ಮಾಡಲು ವ್ಯವಸ್ಥೆ, ದೂರದಲ್ಲಿ ವಾಹನ ಪಾರ್ಕಿಂಗ್ ಮಾಡುವವರಿಗೆ ರಿಕ್ಷಾದ ವ್ಯವಸ್ಥೆ, ಮಧ್ಯಾಹ್ನ ೧೧.೩೦ರಿಂದ ಸಂಜೆ ೪ರವರೆಗೆ ರಾತ್ರಿ ೭.೦೦ರಿಂದ ೧೧.೦೦ ಅನ್ನದಾನ ನಡೆಯಲಿದೆ. ಬೆಳಿಗ್ಗೆ ೭.೦೦ರಿಂದ ೧೦, ಸಂಜೆ ೪.೦೦ರಿಂದ ೭.೦೦ ರವರೆಗೆ ಉಪಾಹಾರ ವ್ಯವಸ್ಥೆ ಮಾಡಲಾಗಿದೆ. ಕುಡಿಯುವ ನೀರು, ಶೌಚಾಲಯ, ಮೂಲ ಸೌಕರ್ಯ, ಪಾರ್ಕಿಂಗ್, ಅನ್ನ ಸಂತರ್ಪಣೆ, ಸರತಿ ಸಾಲು, ಉಗ್ರಾಣ, ಸ್ವಯಂ ಸೇವಕರ ಜೋಡಣೆ ಸಹಿತ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಪತ್ರಿಕಾ ಗೋಷ್ಟಿಯಲ್ಲಿ ತಿಳಿಸಿದರು.
ದೇವಸ್ಥಾನದ ಹೊಸ ಮಾರಿಗುಡಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ ಕಾರ್ಯನಿರ್ವಹಣಾಧಿಕಾರಿ ರವಿಕಿರಣ್, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷರಾದ ಉದಯ ಸುಂದರ್ ಶೆಟ್ಟಿ ಯೋಗೀಶ್ ಶೆಟ್ಟಿ ಬಾಲಾಜಿ, ಪ್ರಧಾನ ಕಾರ್ಯದರ್ಶಿ ಸುಹಾಸ್ ಹೆಗ್ಡೆ ನಂದಳಿಕೆ, ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮಾಧವ ಪಾಲನ್, ಶ್ರೀಮತಿ ಗೀತಾಂಜಲಿ ಸುವರ್ಣ ಇನ್ನಿತರರು ಉಪಸ್ಥಿತರಿದ್ದರು.
