ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ
ಬ್ರಹ್ಮಾವರ ಜು. 21 : ಕಟಪಾಡಿ ಪಡುಕುತ್ಯಾರಿನ ಆನೆಗುಂದಿ ಮಹಾಸಂಸ್ಥಾನದ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಜನ್ಮ ವರ್ಧಂತಿ ಮಹೋತ್ಸವವು ಜು. ೨೨ರಂದು ಪಡುಕುತ್ಯಾರಿನ ಆನೆಗುಂದಿ ಮಠದಲ್ಲಿ ನಡೆಯಲಿದೆ.

ಆ ಪ್ರಯುಕ್ತ ಬೆಳಗ್ಗೆ ಗಣೇಶ ಅಥರ್ವ ಶೀರ್ಷ ಹೋಮ, ಮಹಾಮೃತ್ಯುಂಜಯ ಹೋಮ, ನವಗ್ರಹ ಹೋಮ, ರುದ್ರ ಹೋಮ ಧನ್ವಂತರಿ ಹೋಮ, ಸರಸ್ವತೀ ಹೋಮ ನಡೆಯಲಿದೆ. ಬಳಿಕ ಶಿಷ್ಯ ವೃಂದದವರಿಂದ ಗುರುಗಳ ತುಲಾಭಾರ ಸೇವೆ ನಡೆಯಲಿದೆ. ಅನಂತರ ಮಹಾಸಂಸ್ಥಾನದ ಆಸ್ಥಾನ ವಿದ್ವಾಂಸರಾದ ವಿದ್ವಾನ್ ಪಂಜ ಭಾಸ್ಕರ ಭಟ್, ಅಂತರಾಷ್ಟ್ರೀಯ ಜ್ಯೋತಿಷ್ಯ ವಿದ್ವಾನ್ ಉಮೇಶ್ ಆಚಾರ್ಯ ಪಡೀಲು, ಮಹಾಸಂಸ್ಥಾನದ ವ್ಯಾಪ್ತಿಯ ಕಾಳಿಕಾಂಬಾ ದೇವಾಲಯಗಳ ಆಡಳಿತ ಮೊಕ್ತೇಸರರು, ಆನೆಗುಂದಿ ಪ್ರತಿಷ್ಠಾನದ ವಿಶ್ವಸ್ಥ ಮಂಡಳಿ, ಸಹ ಸಂಸ್ಥೆಗಳ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಆನೆಗುಂದಿ ಪ್ರತಿಷ್ಠಾನದ ಅಧ್ಯಕ್ಷ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್ ದಾಖಲೆಯ ವಿದ್ವಾನ್ ಎಂ.ಜಿ. ಯಶವಂತ ಶರ್ಮಾ ಅವರಿಗೆ ಗೌರವಾರ್ಪಣೆ ನಡೆಯಲಿದೆ ಎಂದು ಪ್ರತಿಷ್ಠಾನದ ಪ್ರಕಟಣೆಯು ತಿಳಿಸಿದೆ.
ಜು. 27ರಂದು ವಿದ್ಯಾರ್ಥಿ ಅಭಿನಂದನಾ ಸಮಾರಂಭ :
ಜು. 22ರಂದು ನಡೆಯಬೇಕಿದ್ದ ವಿದ್ಯಾರ್ಥಿ ಅಭಿನಂದನಾ ಸಮಾರಂಭವನ್ನು ವಿದ್ಯಾರ್ಥಿಗಳ ರಜಾದಿನಕ್ಕಾಗಿ ಜು. 27ರ ಭಾನುವಾರಕ್ಕೆ ಮುಂದೂಡಲಾಗಿದೆ. ಅಂದು ಮಧ್ಯಾಹ್ನ 11.3೦ಕ್ಕೆ ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ. 95ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳು, ಪದವಿ, ಸ್ನಾತಕೋತ್ತರ, ವೈದ್ಯಕೀಯ, ಇಂಜಿನಿಯರಿಂಗ್ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿ ಗಳಿಸಿದವರು ಹಾಗೂ ಪಿಎಚ್ಡಿ ಪದವೀಧರರನ್ನು ಅಭಿನಂದಿಸಲಾಗುವುದು.
ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಎಸ್.ಕೆ.ಎಫ್ ಎಲಿಕ್ಸರ್ ಇಂಡಿಯಾ ಪ್ರೈ.ಲಿ. ಮೂಡಬಿದ್ರೆ ಇದರ ಮ್ಯಾನೇಜಿಂಗ್ ಡೈರೆಕ್ಟರ್ ಡಾ| ಜಿ. ರಾಮಕೃಷ್ಣ ಆಚಾರ್ ಮೂಡಬಿದ್ರೆ, ಮಂಗಳೂರಿನ ಡಾ.ವಿಶ್ವಕರ್ಮ ಸಹಕಾರ ಬ್ಯಾಂಕ್ ಅಧ್ಯಕ್ಷ ಡಾ. ಹರೀಶ್ ಆಚಾರ್ಯ ಜಲಕದಕಟ್ಟೆ, ಎಸ್.ಕೆ.ಗೋಲ್ಡ್ಸ್ಮಿತ್ ಇಂಡಸ್ಟ್ರಿಯಲ್ ಕೋಆಪರೇಟಿವ್ ಸೊಸೈಟಿ ಮಂಗಳೂರು ಇದರ ಅಧ್ಯಕ್ಷ ಉಪೇಂದ್ರ ಆಚಾರ್ಯ ಪೆರ್ಡೂರು, ಕಾಸರಗೋಡು ಸರಕಾರಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ| ಬಾಲಕೃಷ್ಣ ಹೊಸಂಗಡಿ, ಮೂಡಬಿದ್ರೆಯ ಎಸ್.ಎನ್.ಎಮ್. ಪಾಲಿಟೆಕ್ನಿಕ್ನ ಉಪನ್ಯಾಸಕ ಡಾ. ಎಸ್. ಪಿ ಗುರುದಾಸ್ ಮಂಗಳೂರು ಮೊದಲಾದವರು ಭಾಗವಹಿಸಲಿದ್ದಾರೆ ಸಮಾರಂಭದಲ್ಲಿ ಪರಮಪೂಜ್ಯ ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಯವರು ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ. ಶ್ರೀಮತ್ ಜಗದ್ಗುರು ಆನೆಗುಂದಿ ಮಹಾ ಸಂಸ್ಥಾನ ಸರಸ್ವತೀಪೀಠ ಪ್ರತಿಷ್ಠಾನದ ಅಧ್ಯಕ್ಷ ವಡೇರಹೋಬಳಿ ಶ್ರೀಧರ ಆಚಾರ್ಯ ಅಧ್ಯಕ್ಷತೆ ವಹಿಸಲಿದ್ದಾರೆ



