ಉಡುಪಿ ಮಿತ್ರ ಪತ್ರಿಕೆ ಸುದ್ಧಿ : ಕುಂದಾಪುರ: ಫೇಸ್ಬುಕ್ ವಿಷಯ ಹಾಗೂ ಕುಟುಂಬದ ಕುರಿತು ಅಪಪ್ರಚಾರ ನಡೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳ ನಡುವೆ ಜಗಳ ನಡೆದು, ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ಮತ್ತು ಪ್ರತಿದೂರು ದಾಖಲಾಗಿವೆ.
ಕೋಡಿ ಕಸಬಾ ನಿವಾಸಿ ದೀಪಕ್ (೩೫) ಹಾಗೂ ಹಳೆ ಅಳಿವೆ ಕೋಟೇಶ್ವರ ನಿವಾಸಿ ಪ್ರಸಾದ್ (೩೨) ದೂರು ನೀಡಿದವರಾಗಿದ್ದಾರೆ.

ದೀಪಕ್ ನೀಡಿದ ದೂರಿನ ವಿವರ:
ದೀಪಕ್ ಅವರು ನೀಡಿದ ದೂರಿನ ಪ್ರಕಾರ, ಜುಲೈ ೨೨ ರಂದು ರಾತ್ರಿ ಸುಮಾರು ೮:೧೦ ಕ್ಕೆ ಪರಿಚಯದ ಪ್ರಸಾದ್ ಎಂಬಾತ ಕರೆ ಮಾಡಿ ಫೇಸ್ಬುಕ್ ವಿಷಯದ ಬಗ್ಗೆ ಮಾತನಾಡಬೇಕೆಂದು ತಿಳಿಸಿದ್ದನು. ಅದಕ್ಕೆ ದೀಪಕ್ ಬೆಳಿಗ್ಗೆ ಅಂಗಡಿಗೆ ಬರುವಂತೆ ತಿಳಿಸಿದ್ದರು. ಆದರೆ, ರಾತ್ರಿ 8.30 ರ ಸುಮಾರಿಗೆ ಪ್ರಸಾದ್ ಸ್ಕೂಟರ್ನಲ್ಲಿ ದೀಪಕ್ ಅವರ ಮನೆಯ ಅಂಗಳಕ್ಕೆ ಅಕ್ರಮವಾಗಿ ಪ್ರವೇಶಿಸಿ, ಮನೆಯಲ್ಲಿದ್ದ ದೀಪಕ್ ಅವರ ತಾಯಿ ಹಾಗೂ ಹೆಂಡತಿಗೆ ಬೆದರಿಕೆ ಹಾಕಿ ಬೈದಿದ್ದಾನೆ.
ವಿಷಯ ತಿಳಿದು ರಾತ್ರಿ ೮:೫೦ ಕ್ಕೆ ದೀಪಕ್ ಮನೆಗೆ ಬಂದು ವಿಚಾರಿಸಿದಾಗ, ನಿನ್ನ ಸ್ಟೋರಿ ಬಿಡಿಸುತ್ತೇನೆ, ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಪ್ರಸಾದ್ ಜೀವ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ದೀಪಕ್ ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಸಾದ್ ನೀಡಿದ ಪ್ರತಿದೂರಿನ ವಿವರ:
ಪ್ರಸಾದ್ ನೀಡಿದ ಪ್ರತಿದೂರಿನ ಪ್ರಕಾರ, ದೀಪಕ್ ತನ್ನ ಮತ್ತು ತನ್ನ ಕುಟುಂಬದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾನೆ ಎಂದು ಜುಲೈ ೨೨ ರಂದು ಸಂಜೆ ೮:೦೦ ಗಂಟೆಗೆ ಕರೆ ಮಾಡಿ ಪ್ರಶ್ನಿಸಿದ್ದರು. ಬಳಿಕ ವಿಷಯವನ್ನು ಸ್ಪಷ್ಟಪಡಿಸಿಕೊಳ್ಳಲು ದೀಪಕ್ ಅವರ ಮನೆಯ ಬಳಿ ತೆರಳಿದ್ದರು. ರಾತ್ರಿ ೮:೩೦ ರ ಸುಮಾರಿಗೆ ದೀಪಕ್ ಮನೆಗೆ ಬಂದು ನಮ್ಮ ಮನೆಗೆ ಯಾಕೆ ಬಂದೆ? ಎಂದು ಬೈದು, ಬೈಕ್ನಲ್ಲಿದ್ದ ಹೆಲ್ಮೆಟ್ನಿಂದ ಪ್ರಸಾದ್ ಅವರ ಬಲ ಹಣೆಗೆ ಹೊಡೆದು ಗಾಯಗೊಳಿಸಿದ್ದಾನೆ. ಅಲ್ಲದೆ, ಇನ್ನು ಮುಂದೆ ಮನೆಗೆ ಬಂದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಪ್ರಸಾದ್ ನೀಡಿದ ದೂರಿನಂತೆ ಪ್ರತಿದೂರು ದಾಖಲಾಗಿದೆ.
ಕುಂದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.



