ಗುಡ್ಡೆಯಂಗಡಿಯಲ್ಲಿ Sಏಈ ಇಂಡಸ್ಟ್ರೀಯಲ್ ಟ್ರೈನಿಂಗ್ ಸೆಂಟರ್ ಉದ್ಘಾಟನೆ
ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಕುಂದಾಪುರ, ಮೇ.೨೫: ಡಾ.ಜಿ.ರಾಮಕೃಷ್ಣ ಆಚಾರ್ ಅವರು ಮೂಡಬಿದ್ರೆಯಲ್ಲಿ ಉದ್ಯಮ ಆರಂಭಿಸಿ ಇಂದು ರಾಜ್ಯ, ದೇಶ ಹಾಗೂ ೨೧ ಹೊರ ದೇಶಗಳಿಗೂ ತಮ್ಮ ಉದ್ಯಮ ವಿಸ್ತರಿಸಿ ಯುವ ಉದ್ಯಮಿಗಳಿಗೆ ಮಾದರಿಯಾಗಿದ್ದಾರೆ. ತಾಂತ್ರಿಕ ಶಿಕ್ಷಣದ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಲ್ಲಿ ಹುಟ್ಟೂರಿನಲ್ಲಿ ಇಂದಿನ ಕಾಲಕ್ಕೆ ಜಾಗತಿಕವಾಗಿ ಬೇಕಾದ ಸ್ಕಿಲ್ ಒರಿಯಂಟೆಡ್ ಎಸ್.ಕೆ.ಎಫ್ ಇಂಡಸ್ಟ್ರಿಯಲ್ ಟ್ರೈನಿಂಗ್ ಸೆಂಟರ್ ಆರಂಭಿಸಿದ್ದಾರೆ. ಈ ಸಂಸ್ಥೆಯಿಂದ ತರಬೇತಿ ಪಡೆಯುವ ವಿದ್ಯಾರ್ಥಿಗಳ ಬದುಕು ಖಂಡಿತವಾಗಿಯೂ ಯಶಸ್ಸಿನತ್ತ ಸಾಗಲಿದೆ ಎಂದು ಮೂಡಬಿದ್ರೆಯ ಆಳ್ವಾಸ್ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಡಾ.ಮೋಹನ್ ಆಳ್ವಾ ನುಡಿದರು. ಅವರು ಯಡಾಡಿಮತ್ಯಾಡಿ ಸಮೀಪದ ಗುಡ್ಡೆಯಂಗಡಿಯಲ್ಲಿ ಗ್ರಾಮೀಣ ಯುವಕ-ಯುವತಿಯರಿಗೆ ಉದ್ಯೋಗಾಧಾರಿತ ತಾಂತ್ರಿಕ ತರಬೇತಿ, ಮಹಿಳೆಯರಿಗೆ ಕೌಶಲ್ಯ ಆಧಾರಿತ ಫ್ಯಾಷನ್ ಡಿಸೈನ್ ಕೋರ್ಸ್ ಒಳಗೊಂಡ ಎಸ್ಕೆಎಫ್ ಇಂಡಸ್ಟ್ರಿಯಲ್ ಟ್ರೈನಿಂಗ್ ಸೆಂಟರ್ನ್ನು ಮೇ೨೫ರಂದು ಉದ್ಘಾಟಿಸಿ ಮಾತನಾಡಿದರು.

ಎಸ್ಕೆಎಫ್ ಎಲಿಕ್ಸರ್ ಸಂಸ್ಥೆಯಲ್ಲಿ ಸಾವಿರಾರು ಮಂದಿಗೆ ಉದ್ಯೋಗ ನೀಡಿರುವ ಡಾ.ಜಿ.ರಾಮಕೃಷ್ಣ ಆಚಾರ್ಯರು ಹೊಸದಾಗಿ ಆರಂಭಿಸುತ್ತಿರುವ ತಮ್ಮ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ತರಬೇತಿ ನೀಡಿದ ನಂತರ ತಮ್ಮದೇ ಸಂಸ್ಥೆಗಳಲ್ಲಿ ಉದ್ಯೋಗ ನೀಡಲು ಹೊರಟಿದ್ದು ಯುವಕರು ಈ ಅವಕಾಶವನ್ನು ಬಳಸಿಕೊಳ್ಳಬೇಕೆಂದು ಡಾ. ಆಳ್ವಾ ನುಡಿದರು.
ಉದ್ಯೋಗಾಧಾರಿತ ತಾಂತ್ರಿಕ ತರಬೇತಿ ನೀಡಲಾಗುವುದು – ಡಾ.ರಾಮಕೃಷ್ಣ ಆಚಾರ್
ಅಧ್ಯಕ್ಷತೆ ವಹಿಸಿದ್ದ ಎಸ್.ಕೆ.ಎಫ್ ಎಲಿಕ್ಸರ್ ಇಂಡಿಯಾ ಪ್ರೈ.ಲಿ. ಚೇರ್ಮನ್ ಡಾ. ಜಿ.ರಾಮಕೃಷ್ಣ ಆಚಾರ್ ಮಾತನಾಡಿ ನಾನು ಹುಟ್ಟಿದ ಊರಿನಲ್ಲಿ ಇಲ್ಲಿನ ಯುವಕ ಯುವತಿಯರಿಗೆ ಅನುಕೂಲವಾಗಲಿ ಎಂಬ ಉದ್ದೇಶದಲ್ಲಿ ಇಂತಹ ತಾಂತ್ರಿಕ ತರಬೇತಿಯ ಸಂಸ್ಥೆ ಆರಂಭಿಸಿದ್ದೇವೆ. ಈ ಭಾಗದ ಎಸ್ಎಸ್ಎಲ್ಸಿ, ಪಿಯುಸಿ ಫೇಲ್ ಆಗಿರುವ ವಿದ್ಯಾರ್ಥಿಗಳಿಗೆ ಕೇವಲ ಒಂದು ವರ್ಷದ ತರಬೇತಿ ಹಾಗೂ ಇಂಟೆನ್ಶಿಪ್ ಮುಗಿಸಿ ಉದ್ಯೋಗಕ್ಕೆ ಅವಕಾಶ ನೀಡಲಾಗುವುದು. ಇದಕ್ಕೆ ಬೇರೆಡೆ ಮೂರು ವರ್ಷದ ತರಬೇತಿ ಇರುತ್ತದೆ. ನಮ್ಮಲ್ಲಿ ಈ ವಿದ್ಯಾರ್ಥಿಗಳು ಕೇವಲ ಒಂದೇ ವರ್ಷದಲ್ಲಿ ಉದ್ಯೋಗ ಪಡೆಯಬಹುದಾಗಿದೆ. ಅಲ್ಲದೆ ನಮ್ಮದೇ ಸಂಸ್ಥೆಗಳಲ್ಲೂ ಅವರಿಗೆ ಉದ್ಯೋಗಕ್ಕೆ ಅವಕಾಶ ನೀಡಲಾಗುವುದು. ನಮ್ಮ ನೂತನ ತಾಂತ್ರಿಕ ತರಬೇತಿ ಸಂಸ್ಥೆಯಲ್ಲಿ ವೆಲ್ಡಿಂಗ್ & ಫಿಟ್ಟಿಂಗ್, ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್, ಎಸಿ ಮತ್ತು ಪ್ಲಂಬಿಂಗ್ ತರಬೇತಿಗಳನ್ನು ಕ್ಲಬ್ ಮಾಡಲಾಗಿದೆ. ನಾವು ಹೊರ ದೇಶಕ್ಕೆ ದಿನಕ್ಕೆ ೧-೨ ಸಾವಿರ ಟನ್ ಅಕ್ಕಿ ಉತ್ಪಾದಿಸುವ ಪ್ಲಾಂಟ್ಗಳನ್ನು ಕೊಡುತ್ತೇವೆ. ಆದರೆ ಇಂತಹ ಪ್ಲಾಂಟ್ ಆಪರೇಟ್ ಮಾಡುವ ಸಿಬ್ಬಂದಿಗಳು ನಮಗೆ ಸಿಗುತ್ತಿಲ್ಲ. ನಾವು ಇಲ್ಲಿ ತರಬೇತಿ ಪಡೆದಿರುವ ವಿದ್ಯಾರ್ಥಿಗಳನ್ನು ಅಲ್ಲಿಗೆ ಕಳುಹಿಸಿದರೆ ಅಲ್ಲಿ ಸುಮಾರು ೩ ಲಕ್ಷದವರೆಗೆ ಸಂಬಳ ಪಡೆಯುವ ಅವಕಾಶವಿದೆ. ಫ್ಯಾಶನ್ ಡಿಸೈನಿಂಗ್ ಕೋರ್ಸ್ನಲ್ಲೂ ಸಾಕಷ್ಟು ಅವಕಾಶವಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ದೂರಗಾಮಿ ಯೋಜನೆ ಹಾಗೂ ವಿದೇಶದೊಂದಿಗೆ ಮಾಡಿಕೊಂಡಿರುವ ಒಪ್ಪಂದಗಳಿಂದ ನಮ್ಮ ದೇಶದ ತಾಂತ್ರಿಕ ತರಬೇತಿ ಹೊಂದಿರುವ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉತ್ತಮ ಬೇಡಿಕೆ ಇದೆ. ತಾಂತ್ರಿಕ ತರಬೇತಿ ಪಡೆದವರಿಗೆ ಪ್ರತಿಯೊಂದು ಹಳ್ಳಿಯಲ್ಲೂ ಬದುಕು ಕಟ್ಟಿಕೊಳ್ಳಲು ಅವಕಾಶವಿದೆ. ಅಂತಹ ತರಬೇತಿಯನ್ನು ನೂತನವಾಗಿ ಆರಂಭಿಸಿರುವ ಎಸ್ಕೆಎಫ್ ಇಂಡಸ್ಟ್ರಿಯಲ್ ತರಬೇತಿ ಸಂಸ್ಥೆಯಲ್ಲಿ ಉದ್ಯೋಗಾಧಾರಿತ ತಾಂತ್ರಿಕ ತರಬೇತಿ ನೀಡಲಾಗುವುದು ಎಂದು ಡಾ.ರಾಮಕೃಷ್ಣ ಆಚಾರ್ ನುಡಿದರು.

ಶಾಸಕ ಕಿರಣ್ ಕುಮಾರ್ ಕೊಡ್ಗಿ ಕಚೇರಿ ಉದ್ಘಾಟಿಸಿದರು. ಉದ್ಯಮಿ ಮೊಳಹಳ್ಳಿ ದಿನೇಶ್ ಹೆಗ್ಡೆ ಇಲೆಕ್ಟ್ರಿಕಲ್ಸ್ & ಇಲೆಕ್ಟ್ರಾನಿಕ್ಸ್ ವಿಭಾಗವನ್ನು, ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ಚೇರ್ಮನ್ ಡಾ.ಸುಧಾಕರ ಶೆಟ್ಟಿ ಕಂಪ್ಯೂಟರ್ ವಿಭಾಗವನ್ನು, ಫ್ಯಾಶನ್ ಡಿಸೈನಿಂಗ್ ವಿಭಾಗವನ್ನು ಲೆಕ್ಕಪರಿಶೋಧಕ ಸಿಎ ಎಸ್.ಎಸ್.ನಾಯಕ್, ಫಿಟ್ಟಿಂಗ್ & ಪ್ಲಂಬಿಂಗ್ ವಿಭಾಗವನ್ನು ಪ್ರಥಮ ದರ್ಜೆ ಗುತ್ತಿಗೆದಾರ ಬಿ.ಅರುಣ್ ಕುಮಾರ್ ಹೆಗ್ಡೆ, ತರಗತಿ ಕೊಠಡಿಯನ್ನು ಸುಜ್ಞಾನ ಎಜುಕೇಶನ್ ಟ್ರಸ್ಟ್ ಚೇರ್ಮನ್ ಡಾ. ರಮೇಶ್ ಶೆಟ್ಟಿ ಹಾಗೂ ಮೊಳಹಳ್ಳಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ ಉದ್ಘಾಟಿಸಿ ಶುಭ ಹಾರೈಸಿದರು.

ಎಸ್ ಕೆ ಎಫ್ ಇಂಡಸ್ಟಿಯಲ್ ಟ್ರೈನಿಂಗ್ ಸೆಂಟರ್ ತಾಂತ್ರಿಕ ಸಲಹೆಗಾರ ಎ.ಬಾಲಕೃಷ್ಣ ಮಾತನಾಡಿ ನಾವು ಮೂರು ವರ್ಷದ ತರಬೇತಿಯನ್ನು ಕೇವಲ ಒಂದು ವರ್ಷಕ್ಕೆ ಕಡಿತಗೊಳಿಸಿದ್ದೇವೆ. ಅದರಲ್ಲೂ9 ತಿಂಗಳು ಮಾತ್ರ ಟ್ರೈನಿಂಗ್ ನೀಡಿ ನಂತರ ಅವರಿಗೆ ೩ ತಿಂಗಳು ಮೂಡಬಿದ್ರೆಯಲ್ಲಿ ಇಂಟರ್ನಶಿಪ್ ನೀಡಲಾಗುವುದು. ನಂತರ ವಿದೇಶಗಳಿಗೂ ಕಳಿಸಲು ಸಹಕಾರ ನೀಡಲಾಗುವುದು ಎಂದರು.
ಫ್ಯಾಶನ್ ಡಿಸೈನ್ ತರಬೇತಿ ಬಗ್ಗೆ ಶ್ರೀಮತಿ ವಿದ್ಯಾ ಮಾತನಾಡಿದರು.

ಇದೇ ಸಂದರ್ಭದಲ್ಲಿ ಸಂಸ್ಥೆಯ ಪ್ರಗತಿಗೆ ಶ್ರಮಿಸಿದ ಚಾರಿಟೆಬಲ್ ಟ್ರಸ್ಟ್ ಗೌರವ ಟ್ರಸ್ಟಿ ಪ್ರೊ. ಎಂ. ಬಾಲಕೃಷ್ಣ ಶೆಟ್ಟಿ, ತಾಂತ್ರಿಕ ಸಲಹೆಗಾರ ಎ. ಬಾಲಕೃಷ್ಣ ಮತ್ತು ಫ್ಯಾಶನ್ ಡಿಸೈನ್ ವಿಭಾಗದ ಮುಖ್ಯಸ್ಥೆ ಶ್ರೀವಿದ್ಯಾ ಅವರನ್ನು ಸಂಸ್ಥೆಯ ವತಿಯಿಂದ ಗೌರವಿಸಿಲಾಯಿತು.

ಎಸ್ಕೆಎಫ್ ಎಲಿಕ್ಸರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ನ ಪ್ರಜ್ವಲ್ ಆರ್. ಆಚಾರ್, ತೇಜಸ್ ಆರ್. ಆಚಾರ್ ಹಾಗೂ ರಕ್ಷಿತ್ ಆರ್. ಆಚಾರ್ ಉಪಸ್ಥಿತರಿದ್ದು ಅತಿಥಿಗಳನ್ನು ಸ್ವಾಗತಿಸಿಕೊಂಡರು.

ಸುಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿದ್ದು ಪ್ರೊ. ಎಂ. ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ಪುರೋಹಿತ್ ದಾಮೋದರ ಆಚಾರ್ಯರು ನಿರೂಪಿಸಿ ವಂದಿಸಿದರು.





