ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿ ಮಿತ್ರ ಪತ್ರಿಕೆ ಸುದ್ಧಿ :
ಕುಂದಾಪುರ ಎ.೧೧:
ಇಂದು ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಖಾಸಗಿ ಶಾಲೆಗಳೊಂದಿಗೆ ಸರ್ಕಾರಿ ಶಾಲೆಗಳು ಪೈಪೋಟಿಗೆ ಇಳಿಯಬೇಕಾಗುತ್ತದೆ. ಹಾಗೆ ಪೈಪೋಟಿಗೆ ಇಳಿದರೆ ಮಾತ್ರ ಸರಕಾರಿ ಶಾಲೆಗಳಲ್ಲೂ ಉತ್ತಮ ಫಲಿತಾಂಶ ಪಡೆಯಬಹುದಾಗಿದೆ ಎಂದು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ನುಡಿದರು.
ಅವರು ಶಂಕರನಾರಾಯಣ ಮದರ್ ತೆರೆಸಾ ಮೆಮೋರಿಯಲ್ ಎಜ್ಯುಕೇಶನ್ ಟ್ರಸ್ಟ್ ವತಿಯಿಂದ ಮದರ್ ತೆರಸಾ ಶಾಲೆಯ ರೌಪ್ಯ ಸಭಾಂಗಣದಲ್ಲಿ ನಡೆದ ಅಭ್ಯುದಯ ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮ ಉದ್ಧೇಶಿಸಿ ಮಾತನಾಡಿದರು.

ಪ್ರೀತಮ್ ಜಿ. ಪೂಜಾರಿ ೬೨೫ ಅಂಕಗಳನ್ನು ಪಡೆದು ಊರಿಗೆ, ಜಿಲ್ಲೆಗೆ ರಾಜ್ಯಕ್ಕೆ ಹೆಸರು ತಂದುಕೊಟ್ಟಿದ್ದಾನೆ ಎಂದರು.
ಉಡುಪಿ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ಲೋಕೇಶ್ ಸಿ ಮಾತನಾಡಿ 1988ರಲ್ಲಿ ಉಪನಿರ್ದೇಶಕ ಕಚೇರಿ ಆರಂಭಗೊಂಡಿದ್ದು ಇದುವರೆಗೂ 625 ಅಂಕಗಳ ಈ ಸಾಧನೆಯನ್ನು ಯಾರೂ ಮಾಡಿಲ್ಲ. ಪ್ರೀತಮ್ ಪೂಜಾರಿ ಈ ಸಾಧನೆ ಮಾಡಿದರು. ಉಡುಪಿ ಜಿಲ್ಲೆಯಲ್ಲಿ ಶಿಕ್ಷಕರು ಬಹಳ ಬದ್ಧತೆಯಲ್ಲಿ ಕೆಲಸ ಮಾಡಿದ್ದರಿಂದ ದ್ವಿತೀಯ ಸ್ಥಾನ ಪಡೆಯಲು

ಸಾಧ್ಯವಾಗಿದೆ. ಉತ್ತರ ಕನ್ನಡದವರು ನಮಗೆ ಸ್ಪರ್ಧೆ ನೀಡಲು ತಯಾರಾಗಿದ್ದಾರೆ. ನಾವು ಸ್ವಲ್ಪ ಮೈ ಮರೆತರೂ ನಮ್ಮನ್ನು ೩ನೇ ಸ್ಥಾನಕ್ಕೆ ತಳ್ಳುತ್ತಿದ್ದರು. ಮುಂದಿನ ವರ್ಷಕ್ಕೆ ನಮ್ಮ ಜಿಲ್ಲಾ ಎಲ್ಲಾ ಶಿಕ್ಷಕರು ಈಗಲೆ ಜಾಗೃತರಾಗಬೇಕೆಂದು ನುಡಿದರು.

ಅಧ್ಯಕ್ಷತೆಯನ್ನು ಸಂಸ್ಥೆಯ ಸಂಸ್ಥಾಪಕರು ಹಾಗೂ ಆಡಳಿತ ನಿರ್ದೇಶಕರಾದ ರೆನಿಟಾ ಲೋಬೋ ಹಾಗೂ ಕು.ಶಮಿತಾರಾವ್ ವಹಿಸಿದ್ದರು.
ಕು.ಶಮಿತಾರಾವ್ ಮಾತನಾಡಿ ೧೯೯೮ರಲ್ಲಿ ಕೇವಲ 12 ಮಕ್ಕಳಿಂದ ಮದರ್ ಥೆರೆಸಾ ಹೆಸರಲ್ಲಿ ಶಾಲೆ ಆರಂಭಿಸಿದೆವು. ನಾವು ಉತ್ತಮ ಧ್ಯೇಯದಿಂದ ಶಾಲೆಯನ್ನು ಬೆಳೆಸಲಾರಂಭಿಸಿದೆವು. 2007ರಲ್ಲಿ 7ನೇ ತರಗತಿಯಲ್ಲಿ ಕೇವಲ 14 ಮಕ್ಕಳಿದ್ದು ಹೈಸ್ಕೂಲು ಆರಂಭಿಸಲು 40 ಮಕ್ಕಳು ಬೇಕು ಅಂದರು. ಆಗ ಶಾಲೆಯ ಅವಧಿ ನಂತರ ಮನೆ ಮನೆಗೆ ತೆರಳಿ ಮಕ್ಕಳ ಸೇರ್ಪಡೆಗೆ ಪ್ರಯತ್ನಿಸಿ ಹೈಸ್ಕೂಲ್ ಆರಂಭಿಸಿದೆವು. ನಾವು ದುಡಿಯಬೇಕು. ದುಡಿದರೆ ಮಾತ್ರ ದೇವರು ನಮಗೆ ಯಶಸ್ಸು ಕೊಡುತ್ತಾನೆ ಎಂಬ ನಂಬಿಕೆ ನಮ್ಮದು. ಕಳೆದ 28 ವರ್ಷಗಳಿಂದ ನಮ್ಮ ಕಠಿಣ ಪರಿಶ್ರಮದ ದುಡಿಮೆಯಿಂದ ಈ ಯಶಸ್ಸು ಸಾಧ್ಯವಾಗಿದೆ. ನಿಷ್ಟೆ ಎಲ್ಲಿದೆಯೋ ಅಲ್ಲಿ ದೇವರೇ ತಲೆ ಬಾಗುತ್ತಾನೆ ಎಂಬುದಕ್ಕೆ ಈ ಫಲಿತಾಂಶ ಸಾಕ್ಷಿ ಎಂದು ಶಮಿತಾರಾವ್ ನುಡಿದರು. 625 ಅಂಕ ಪಡೆದ ಪ್ರೀತಮ್ ಜಿ. ಪೂಜಾರಿ, ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಹಾಗೂ ಫಲಿತಾಂಶಕ್ಕೆ ಶ್ರಮಿಸಿದ ಎಲ್ಲಾ ಶಿಕ್ಷಕರನ್ನು ಗುರುತಿ ಗೌರವಿಸಲಾಯಿತು.

ಉಡುಪಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲ ಅಶೋಕ್ ಕಾಮತ್, ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್. ಶೋಭಾ ಶೆಟ್ಟಿ, ಪ್ರಿನ್ಸಿಪಾಲ್ ಜಾಯ್ಸನ್ ಉಪಸ್ಥಿತರಿದ್ದರು.
ರಸಾಯನ ಶಾಸ್ತ್ರ ಶಿಕ್ಷಕ ಮಂಜುನಾಥ ಬಾಯರಿ ಸ್ವಾಗತಿಸಿದರು. ಸಂತೋಷ್ ಕುಮಾರ್ ಶೆಟ್ಟಿ ವಂದಿಸಿದರು. ಕನ್ನಡ ಶಿಕ್ಷಕಿ ವೈಶಾಲಿ ಶೆಟ್ಟಿ ಹಾಗೂ ಅಲಿಟಾ ಡೇಸಾ ನಿರೂಪಿಸಿದರು.



