ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಉಡುಪಿ, ಜು.೧೩: ಸಮಾಜದಲ್ಲಿ ಅಶಕ್ತರ ಕಷ್ಟಗಳನ್ನು ಗುರುತಿಸಿ ಸೇವೆ ಮಾಡುವುದು ಶ್ರೇಷ್ಠವಾದುದು. ನನಗೆ ಹಸಿವಾಗಿದೆ ಎಂದು ಗೊತ್ತಾದರೆ ನಾನು ಬದುಕಿದ್ದೇನೆ ಎಂದು ಅರ್ಥ. ಇನ್ನೊಬ್ಬರ ಹಸಿವು ನನಗೆ ಗೊತ್ತಾದರೆ ನಾನು ಮನುಷ್ಯನಾಗಿದ್ದೇನೆ ಎಂದು ಅರ್ಥ ಎಂದು ಶ್ರೀಮತ್ ವಿಶ್ವಕರ್ಮ ಜಗದ್ಗರು ಆನೆಗುಂದಿ ಮಹಾಸಂಸ್ಥಾನ ಮಠ ಪಡುಕುತ್ಯಾರು-ಕಟಪಾಡಿ ಇಲ್ಲಿನ ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ತಮ್ಮ ಆಶೀರ್ವಚನದಲ್ಲಿ ನುಡಿದರು. ಅವರು ಪುರೋಹಿತ್ ಶಶಿಧರ ಆಚಾರ್ಯ ಕಟಪಾಡಿ ಅವರ ನೇತೃತ್ವದ ಸಮಾನ ಮನಸ್ಕರ ತಂಡ ಬೋಳ ಮಡತಬೆಟ್ಟು ಶಶಿಕಲಾ ಗೋಪಾಲ ಆಚಾರ್ಯ ಅವರಿಗೆ
ನಿರ್ಮಿಸಿರುವ 41ನೇ ಮನೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಸಮಾಜ ಸೇವಕ ಶ್ರೀಕಾಂತ್ ಶೆಟ್ಟಿ ಕಾರ್ಕಳ ಸಮಾನ ಮನಸ್ಕರ ತಂಡದ ಸದಸ್ಯರನ್ನು ಅಭಿನಂದಿಸಿದರು. ೪೧ನೇ ಮನೆ ಹಸ್ತಾಂತರದ ಸಂದರ್ಭ ಪುತ್ತೂರಿನ ಶಿಲ್ಪಿ ಮಾಧವ
ಆಚಾರ್ಯ, ಶೇಖರ ಆಚಾರ್ಯ ಕುಕ್ಕೆಹಳ್ಳಿ, ವೈ.ಎ. ಬಾಳ್ಳಟ್ಟ ,
ತಾ.ಪಂ. ಮಾಜಿ ಅಧ್ಯಕ್ಷ ಬೋಳ ಜಯರಾಮ ಸಾಲಿಯಾನ್, ಗ್ರಾ.ಪಂ. ಮಾಜಿ ಅಧ್ಯಕ್ಷ ಸತೀಶ್ ಪೂಜಾರಿ, ಶ್ರೀನಿವಾಸ ಆಚಾರ್ಯ ಅರಸಿಕಟ್ಟೆ, ನಿವೃತ್ತ ಪ್ರಾಧ್ಯಾಪಕರಾದ ಶ್ರೀನಿವಾಸ್ ರಾವ್ ಕಾರ್ಕಳ ಮತ್ತು ಭಾಸ್ಕರ ಆಚಾರ್ಯ ಚೊಕ್ಕಾಡಿ, ಸುರೇಂದ್ರ ಆಚಾರ್ಯ ಬಾಳೆಕುದ್ರು, ಪರಶುರಾಮ ಭಟ್ ಸುಭಾಸ್ ನಗರ ಮತ್ತು ತಂಡದ ಸದಸ್ಯರು
ಉಪಸ್ಥಿತರಿದ್ದರು.

ಶಶಿಕಲಾ ಗೋಪಾಲ ಆಚಾರ್ಯ ಹಾಗೂ ಶ್ರಾವ್ಯಾ ಅವರು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ನಿವೃತ್ತ ಅಧ್ಯಾಪಕ ವಾಸುದೇವ ಆಚಾರ್ಯ ಪರ್ಕಳ ಸ್ವಾಗತಿಸಿ, ದಿವಾಕರ ವಿ. ಆಚಾರ್ಯ ವಳಕಾಡು ವಂದಿಸಿದರು. ವೈ.ಎ. ಬಾಳ್ಕಟ್ಟ ದಾನಿಗಳನ್ನು ಪರಿಚಯಿಸಿದರು. ಪ್ರಕಾಶ್ ಆಚಾರ್ಯ ಕುಕ್ಕೆಹಳ್ಳಿ ನಿರೂಪಿಸಿದರು.
ಪುರೋಹಿತ್ ಶಶಿಧರ ಆಚಾರ್ಯ ಕಟಪಾಡಿ ಉಡುಪಿ ಮಿತ್ರದೊಂದಿಗೆ ಮಾತನಾಡುತ್ತಾ ನಮ್ಮ ತಂಡ ಈಗಾಗಲೆ ಆರ್ಥಿಕ ಅಶಕ್ತರಿಗೆ ಒಟ್ಟು ೪೦ ಮನೆಯನ್ನು ಕಟ್ಟಿಕೊಟ್ಟಿದ್ದು ಇದೀಗ ೪೧ನೇ ಮನೆಯನ್ನು ಹಸ್ತಾಂತರಿಸಿದೆ. ೪೨ನೇ ಮನೆ ಬ್ರಹ್ಮಾವರದ ಬೈಕಾಡಿಯಲ್ಲಿ ನಿರ್ಮಾಣಗೊಳ್ಳುತ್ತಿದ್ದು ನಾಗರಪಂಚಮಿಯ ಸಂದರ್ಭ ಹಸ್ತಾಂತರಿಸಲಿದ್ದೇವೆ. ಉಳಿದಂತೆ ಮತ್ತೆ ಐದು ಮನೆಗಳು ನಿರ್ಮಾಣಗೊಳ್ಳುತ್ತಿವೆ. ಇದಕ್ಕೆ ಸಹಕರಿಸುತ್ತಿರುವ ಎಲ್ಲಾ ಸಮಾನ ಮನಸ್ಕರಿಗೆ ಕೃತಜ್ಞತೆ ಅರ್ಪಿಸಿಕೊಳ್ಳುತ್ತೇನೆ ಎಂದು ಎಂದು ತಿಳಿಸಿದ್ದಾರೆ.



