• June 29, 2025
  • Last Update June 29, 2025 10:13 am
  • Brahmavara

ಸುಸಜ್ಜಿತ ಸೂರು ನಿರ್ಮಿಸಿಕೊಟ್ಟ ಎಚ್.ಎಸ್.ಶೆಟ್ಟಿ

ಸುಸಜ್ಜಿತ ಸೂರು ನಿರ್ಮಿಸಿಕೊಟ್ಟ ಎಚ್.ಎಸ್.ಶೆಟ್ಟಿ

ಉಡುಪಿಮಿತ್ರ ಪತ್ರಿಕೆ ಸುದ್ದಿ.
ಹೆಗ್ಗುಂಜೆ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ, ಮರ್‍ಕಂಟೈಲ್ ಕಂಪೆನಿ ಲಿ. ಕಾರ್ಯನಿರ್ವಾಹಕ ನಿರ್ದೇಶಕ ಶ್ರೀ ಎಚ್.ಎಸ್. ಶೆಟ್ಟಿಯವರು ಬಿದ್ಕಲ್‌ಕಟ್ಟೆ ಸಮೀಪದ ಜನ್ಯಾಡಿ ಪರಿಸರದ ಸುಮಾರು ೧೪ ಕೊರಗ ಕುಟುಂಬಗಳಿಗೆ ಸುಸಜ್ಜಿತ ೧೪ ಕಾಂಕ್ರಿಟ್ ಮನೆಗಳನ್ನು ನಿರ್ಮಿಸಿ ಕೊಟ್ಟಿದ್ದಾರೆ. ಒಂದೊಂದು ಮನೆಗೆ ಕನಿಷ್ಟ ೧೪ ಲಕ್ಷ ರೂ.ಗಳನ್ನು ವಿನಿಯೋಗಿಸಿ ಹಾಲ್, ಕಿಚನ್, ಬೆಡ್ ರೂಮ್, ಟಾಯ್ಲೆಟ್, ಸಿಟ್ ಔಟ್ ಸೌಲಭ್ಯಗಳನ್ನು ಹೊಂದಿರುವ ಮನೆಗಳನ್ನು ಕಟ್ಟಿಕೊಟ್ಟಿದ್ದಾರೆ. ಮನೆಗಳಿಗೆ ರಘುರಾಮ, ದಶರಥ ರಾಮ, ಬಾಲರಾಮ, ಕೋದಂಡ ರಾಮ, ಸೀತಾರಾಮ, ಪಟ್ಟಾಭಿರಾಮ, ಅನಂತರಾಮ, ಕೌಸಲ್ಯರಾಮ, ರಾಜಾರಾಮ, ಅಯೋಧ್ಯರಾಮ ಹೀಗೆ ಎಲ್ಲಾ ೧೪ ಮನೆಗಳಿಗೂ ಶ್ರೀ ರಾಮಚಂದ್ರನ ಹೆಸರನ್ನು ಇರಿಸಿದ್ದಾರೆ. ಎಚ್.ಎಸ್.ಶೆಟ್ಟರು ನ.೧೭ರಂದು ಈ ಮನೆಗಳನ್ನು ಲೋಕಾರ್ಪಣೆಗೊಳಿಸಿದ್ದು ಉಡುಪಿ ಪೇಜಾವರ ಮಠ ಶ್ರೀ ಅಧೋಕ್ಷಜ ತೀರ್ಥ ಸಂಸ್ಥಾನದ ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಎಲ್ಲಾ ಮನೆಗಳಿಗೆ ತೆರಳಿ ದೇವರಿಗೆ ಆರತಿ ಬೆಳಗಿಸಿ ಮನೆಯವರನ್ನು ಹರಸಿ ಆಶೀರ್ವಚಿಸಿದ್ದಾರೆ. ಬಿದ್ದು ಹೋಗುವ ಅತ್ಯಂತ ಶೋಚನೀಯ ಸ್ಥಿತಿಯಲ್ಲಿದ್ದ ಮನೆಗಳಲ್ಲಿ ವಾಸಿಸುತ್ತಿದ್ದ ಕೊರಗ ಕುಟುಂಬದ ಸದಸ್ಯರಿಗೆ ಬೇಸಿಗೆ ಹಾಗೂ ಮಳೆಗಾಲದಲ್ಲಿ ಬೆಚ್ಚಗೆ ವಾಸಮಾಡಲು ವ್ಯವಸ್ಥೆ ಕಲ್ಪಿಸಿದ ಎಚ್.ಎಸ್.ಶೆಟ್ಟರ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ.

ರಾಮರಾಜ್ಯದ ಕನಸು ನನಸಾಗಬೇಕಾದಲ್ಲಿ ಒಂದು ರಾಮ ಮಂದಿರ ನಿರ್ಮಾಣವಾದಂತೆ ಊರಲ್ಲಿ ಯಾರಾದರೂ ಮನೆ ಇಲ್ಲದೆ ದುಃಖದಲ್ಲಿದ್ದರೆ ಅವರಿಗೂ ಮನೆ ಕಟ್ಟಿಕೊಡುವ ಕೆಲಸವಾಗಬೇಕು. ರಾಮಭಕ್ತಿ ಬೇರೆ ಅಲ್ಲ, ದೇಶಭಕ್ತಿ ಬೇರೆ ಅಲ್ಲ. ದೇಶಸೇವೆ ಬೇರೆ ಅಲ್ಲ, ರಾಮದೇವರ ಸೇವೆ ಬೇರೆ ಅಲ್ಲ, ಯಾರು ರಾಮ ಸೇವೆ ಮಾಡುತ್ತಿದ್ದಾರೋ ಅದು ದೇಶ ಸೇವೆ ಅನ್ನಿಸಿಕೊಂಡಿದೆ. ತಾಯ್ನೆಲ ಹಾಗೂ ತಾಯಿ ನಮಗೆ ಸ್ವರ್ಗಕ್ಕಿಂತಲೂ ಮಿಗಿಲು. ಎಚ್.ಎಸ್. ಶೆಟ್ಟರು ತಮ್ಮ ಆದಾಯದಲ್ಲಿ ಶ್ರೇಷ್ಟ ಕೆಲಸ ಮಾಡುತ್ತಿದ್ದಾರೆ. ಉಳ್ಳವರು ಸೇವಾ ಕೈಂಕರ್ಯವನ್ನು ಸದಾ ಮಾಡುತ್ತಾ ಇರಬೇಕು. ನಮ್ಮ ಹಣ ಸತ್ಕಾರ್ಯಕ್ಕೆ ವಿನಿಯೋಗವಾದಾಗ ದೇವರಿಗೂ ತೃಪ್ತಿ ಸಿಗಲಿದೆ. ನಾವು ಮಕ್ಕಳ ಮದುವೆ ಎಂದು ಕೋಟ್ಯಂತರ ರೂಪಾಯಿ ವ್ಯಯಿಸುತ್ತೇವೆ. ಬದಲಾಗಿ ನಮ್ಮ ಸಮಾಜದ ಒಬ್ಬರಿಗೆ ಮನೆ ನಿರ್ಮಾಣ ಮಾಡಿಕೊಟ್ಟರೆ ಅವರೂ ನಮ್ಮನ್ನು ಹರಸುತ್ತಾರೆ. ಎಚ್.ಎಸ್.ಶೆಟ್ಟರು ಈ ಭಾಗದ ೧೪ ಕೊರಗ ಕುಟುಂಬಗಳಿಗೆ ಸುಂದರ, ಸುಸಜ್ಜಿತ ಮನೆಯನ್ನು ಕಟ್ಟಿಕೊಟ್ಟು ದೇವರು ಮೆಚ್ಚುವ ಕೆಲಸಮಾಡಿದ್ದಾರೆ. ಹೀಗೆ ಸಮಾಜದೊಂದಿಗೆ ಎಲ್ಲರೂ ಕೈಜೋಡಿಸಿದಾಗ ರಾಮ ರಾಜ್ಯದ ಕನಸು ನನಸಾಗಲು ಏನೂ ದೂರವಿಲ್ಲ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ನುಡಿದರು.
ಅವರು ನ. ೧೭ರಂದು ಜನ್ಯಾಡಿ ಕೊರಗರ ಕಾಲನಿಯಲ್ಲಿ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ ಬೆಂಗಳೂರು ಇವರಿಂದ ಪ್ರಾಯೋಜಿತ ಉಡುಪಿ ಜಿಲ್ಲೆಯ ಹಾರ್ದಳ್ಳಿ ಮಂಡಳ್ಳಿ ಗ್ರಾ.ಪಂ. ವ್ಯಾಪ್ತಿಯ ಜನ್ನಾಡಿ ಮತ್ತು ಮಣಿಗೇರಿ ಕೊರಗರ ಕಾಲನಿಯಲ್ಲಿ ಸುಮಾರು ೨ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ೧೪ ಉಚಿತ ಮನೆಗಳ ಗೃಹ ಪೂಜೆ ಮತ್ತು ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚಿಸಿದರು.
ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್.ಮುನಿಯಪ್ಪ ಕಾರ್ಯಕ್ರಮ ಉದ್ಘಾಟಿಸಿ, ೧೨ನೇ ಶತಮಾನದಲ್ಲೇ ಬಸವಣ್ಣನವರು ಸಮಾಜ ಸುಧಾರಣೆಗೆ ಅಡಿಗಲ್ಲು ಹಾಕಿದ್ದಾರೆ. ಆದರೂ ಇಂದಿಗೂ ದೇಶದಲ್ಲಿ ವರ್ಣ ವ್ಯವಸ್ಥೆ ಉಳಿದಿದೆ. ಇದನ್ನು ಬದಲಾವಣೆ ಮಾಡಬೇಕಾಗಿದೆ. ಈ ರಾಷ್ಟ್ರದಲ್ಲಿ ಅಸಮಾನತೆ ಹೋಗದೆ ರಾಮ ರಾಜ್ಯ ಅಂತ ಅನಿಸಿಕೊಳ್ಳಲು ಸಾಧ್ಯವಿಲ್ಲ. ನಂಬಿಕೆ ಇರುವ ಕಡೆ ಸಮಾಜ ಪರಿವರ್ತನೆ ಕಾಣುವುದು. ಈ ನಿಟ್ಟಿನಲ್ಲಿ ಈ ವರ್ಣ ಸಂಕೀರ್ಣಗಳು ಕಡಿಮೆಯಾಗ ಬೇಕಾದರೆ ಈ ಮಠಗಳು ಮಾದರಿಯಾಗಬೇಕಾಗಿದೆ ಎಂದು ಹೇಳಿದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಹಕ್ಕು ಪತ್ರ ಮತ್ತು ಕೀಲಿಕೈಯನ್ನು ಹಾರ್ದಳ್ಳಿ ಮಂಡಳ್ಳಿ ಗ್ರಾ.ಪಂ. ಅಧ್ಯಕ್ಷೆ ದೀಪಾ ಶೆಟ್ಟಿ ಹಾಗೂ ಪಿಡಿಒ ರೇಖಾ ಅವರಿಗೆ ಹಸ್ತಾಂತರಿಸಿ ಮಾತನಾಡಿದರು.
ಸುಮಾರು ೫ ತಿಂಗಳ ಒಳಗೆ ಮನೆ ನಿರ್ಮಾಣಕ್ಕೆ ಸಹಕರಿಸಿದ ಉದಯ ಕುಮಾರ್ ಶೆಟ್ಟಿ ಕೊಕಾಡಿ’ ಹಾಗೂ ಹರಿಪ್ರಸಾದ್ ಶೆಟ್ಟಿ ಅವರನ್ನು ಗೌರವಿಸಲಾಯಿತು.
ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಎ. ಕಿರಣ್ ಕುಮಾರ್ ಕೊಡ್ಲಿ ಅಧ್ಯಕ್ಷತೆ ವಹಿಸಿದ್ದು ಅವರು ಮಾತನಾಡುತ್ತಾ ಸಮಾಜದಲ್ಲಿ ಎಚ್.ಎಸ್.ಶೆಟ್ಟರಂತಹ ಸಮಾಜಸೇವಕರು ಹೆಚ್ಚಿದಾಗ ಶೋಷಿತರ ಬದುಕಲ್ಲೂ ನೆಮ್ಮದಿ ಕಾಣುವ ಸಂದರ್ಭ ಏರ್ಪಡಲಿದೆ. ನಮ್ಮ ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯೊಳಗಡೆ ಅವರು ಈ ಮನೆಗಳನ್ನು ಕಟ್ಟಿಕೊಟ್ಟಿದ್ದಕ್ಕೆ ಅವರಿಗೆ ಕೊರಗ ಕುಟುಂಬಗಳ ಪರವಾಗಿ ಕೃತಜ್ಞತೆ ಅರ್ಪಿಸುತ್ತೇನೆ ಎಂದರು.
ಬಸ್ರೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕೇಸರ ಬಿ. ಅಪ್ಪಣ ಹೆಗ್ಡೆ, ಮಾಜಿ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೆಬಲ್ ಟ್ರಸ್ಟ್, ಬೆಂಗಳೂರು ಇದರ ಅಧ್ಯಕ್ಷ ಡಾ| ಎಚ್.ಎಸ್. ಶೆಟ್ಟಿ ಕೊರಗಾಭಿವೃದ್ಧಿ ಸಂಸ್ಥೆಯ(ಕರ್ನಾಟಕ ಮತ್ತು ಕೇರಳ ರಾಜ್ಯ) ಇದರ ಅಧ್ಯಕ್ಷೆ ಸುಶೀಲಾ ನಾಡ, ಸಮಾಜ ಸೇವಕರು ಹಾಗೂ ಕಾಂಗ್ರೆಸ್ ಮುಖಂಡ ಎಂ. ದಿನೇಶ್ ಹೆಗ್ಡೆ ಮೊಳಹಳ್ಳಿ ಗುರುನಾಥ ಹಿರಹಟ್ಟ ಮೊಳಹಳ್ಳಿ ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ ದ್ಯಾವಲಬೆಟ್ಟು ಹಾಲಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಸರ್ವೋತ್ತಮ ಹೆಗ್ಡೆ ಜನ್ನಾಡಿ ಫೇವರಿಟ್ ಕ್ಯಾಶೂಸ್ ಇದರ ಮಾಲಕ ಎಚ್. ಶಂಕರ ಹೆಗ್ಡೆ ಕೊರಗಾಭಿವೃದ್ಧಿ ಸಂಸ್ಥೆಗಳು, ಕುಂದಾಪುರ ವಲಯ ಅಧ್ಯಕ್ಷ ಕುಮಾರ್‌ದಾಸ್ ಟ್ರಸ್ಟ್ ಉಪಾಧ್ಯಕ್ಷ ಹಾಲಾಡಿ ನಾಗರಾಜ ಶೆಟ್ಟಿ ಟ್ರಸ್ಟ್ ಕಾರ್ಯದರ್ಶಿ ಡಾ| ಸುಮನಾ ಶೆಟ್ಟಿ ಉಪಸ್ಥಿತರಿದ್ದರು.
ಮುರಳಿ ಕಡೆಕಾರ್ ಸ್ವಾಗತಿಸಿದರು. ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ ಬೆಂಗಳೂರು ಇದರ ಅಧ್ಯಕ್ಷ ಡಾ. ಎಚ್.ಎಸ್. ಶೆಟ್ಟಿ ಪ್ರಸ್ತಾವನೆಗೈದು, ಅಕ್ಷಯ್ ಹೆಗ್ಡೆ ಮೊಳಹಳ್ಳಿ ನಿರೂಪಿಸಿ, ವಂದಿಸಿದರು.
ನಾನು ಮಾಡಿದ ಎಲ್ಲಾ ಯೋಜನೆಗಳಿಗಿಂತ ಮನೆ ಕಟ್ಟಿಕೊಟ್ಟಿದ್ದು ಹೆಚ್ಚು ಸಂತೋಷ ತಂದಿದೆ -ಎಚ್.ಎಸ್. ಶೆಟ್ಟಿ
ಸಮಾಜಸೇವೆಯ ಸಂದರ್ಭ ನಾನು ಅನೇಕ ದೊಡ್ಡ ದೊಡ್ಡ ಯೋಜನೆಗಳನ್ನು ನೀಡಿದ್ದೆ. ಆದರೆ ನನಗೆ ಅತಿ ಹೆಚ್ಚು ಸಂತೋಷ ನೀಡಿರುವ ಯೋಜನೆ ಅಂದರೆ ಅದು ಜನ್ಯಾಡಿಯ ಕೊರಗರಿಗೆ ೧೪ ಮನೆಗಳನ್ನು ಕಟ್ಟಿಕೊಟ್ಟಿದ್ದು. ಈ ಮನೆಗಳನ್ನು ಇಂದು ಲೋಕಾರ್ಪಣೆ ಮಾಡುತ್ತಿರುವುದು ನನಗೆ ಅತಿ ಹೆಚ್ಚು ಸಂತೋಷ ನೀಡಿದೆ. ಕೊರಗರು ಅತ್ಯಂತ ಮುಗ್ಧರು. ಅವರು ಇಂದಿಗೂ ಮುಗ್ಧರಾಗಿಯೇ ಉಳಿದಿದ್ದಾರೆ. ಈ ಸಮಾಜದ ಬಗ್ಗೆ ಸರಕಾರ ಕೂಡ ಸರಿಯಾಗಿ ಅಧ್ಯಯನ ಮಾಡಿಲ್ಲ. ಈ ಸಮುದಾಯದ ಅಭಿವೃದ್ಧಿ ಮಾಡುವ ಬಗ್ಗೆ ಸರಕಾರ ಸರಿಯಾದ ಚಿಂತನೆ ನಡೆಸಬೇಕು. ಮನೆ ಕಟ್ಟಿಕೊಡುವುದು ಅತ್ಯುತ್ತಮ ಕೆಲಸ. ನಾನು ಅಯೋಧ್ಯೆಗೆ ಹೋಗಿದ್ದ ಸಂದರ್ಭ ಅಲ್ಲಿ ಸ್ವಾಮೀಜಿಯವರಲ್ಲಿ ರಾಮನ ಹೆಸgಲ್ಲಿ ಯಾವುದಾದರೂ ಸಮಾಜಸೇವೆಯ ಕೆಲಸ ಮಾಡಲು ಅನುಮತಿ ಕೇಳಿದ್ದೆ. ಆದ್ದರಿಂದಲೇ ೧೪ ಮನೆಗಳನ್ನು ರಾಮನ ಹೆಸರಲ್ಲೇ ಕಟ್ಟಿಕೊಟ್ಟಿದ್ದೇನೆ. ಕುಂದಾಪುರ ಶಾಸಕರು ಹಾಗೂ ಬೈಂದೂರಿನ ಶಾಸಕರು ಆಯಾಯ ಕ್ಷೇತ್ರದ ಕೊರಗ ಕುಟುಂಬಗಳಿಗೆ ಮನೆಕಟ್ಟಿಕೊಡಲು ಕೇಳಿಕೊಂಡಿದ್ದಾರೆ. ಖಂಡಿತಾ ಕಟ್ಟಿಕೊಡಲಿದ್ದೇವೆ. ನಾವು ಒಟ್ಟು ನೂರು ಮನೆಗಳನ್ನು ಕಟ್ಟಿಕೊಡುವ ಗುರಿ ಇರಿಸಿಕೊಂಡಿದ್ದು ಮುಂದೆ ಆ ಗುರಿ ತಲುಪಲಿದ್ದೇವೆ ಎಂದು ಎಚ್.ಎಸ್.ಶೆಟ್ಟಿಯವರು ಹೇಳಿದ್ದಾರೆ.
ವರದಿ : ಚಿತ್ತೂರು ಪ್ರಭಾಕರ ಆಚಾರ್ಯ

administrator

Related Articles

Leave a Reply

Your email address will not be published. Required fields are marked *