• June 29, 2025
  • Last Update June 29, 2025 10:13 am
  • Brahmavara

ಜನವರಿ 12 ರಂದು ಕೋಟ ಮೂರ್ತೆದಾರರ ಸೇವಾಸಹಕಾರಿ ಸಂಘದ ಸ್ವಂತ ಕಟ್ಟಡ ಉದ್ಘಾಟನೆ

ಜನವರಿ 12 ರಂದು ಕೋಟ ಮೂರ್ತೆದಾರರ ಸೇವಾಸಹಕಾರಿ ಸಂಘದ ಸ್ವಂತ ಕಟ್ಟಡ ಉದ್ಘಾಟನೆ

ಕೋಟ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಸ್ವಂತ ಕಟ್ಟಡ ಹಾಗೂ ಎಸ್. ಬಂಗಾರಪ್ಪ ಸಭಾಭವನ ಜನವರಿ ೧೨ ರಂದು ಉದ್ಘಾಟನೆಗೊಳ್ಳಲಿದೆ. ಬೆಳಿಗ್ಗೆ ೮.೩೦ಕ್ಕೆ ಕೋಟ ಅಮೃತೇಶ್ವರೀ ದೇವಸ್ಥಾನದಿಂದ ಸಹಕಾರ ಜಾಥಾ ಹೊರಡಲಿದ್ದು, ಅಮೃತೇಶ್ವರೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಆನಂದ ಸಿ. ಕುಂದರ್ ಹಾಗೂ ಶ್ರೀ ಗುರುನರಸಿಂಹ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಕೆ. ಎಸ್. ಕಾರಂತರವರು ಸಹಕಾರ ಜಾಥಾಕ್ಕೆ ಚಾಲನೆ ನೀಡಲಿದ್ದಾರೆ. ತದನಂತರ ಸಹಕಾರಿ ಸಚಿವ ಕೆ. ಎನ್. ರಾಜಣ್ಣ ಸಂಘದ ಸ್ವಂತ ಕಟ್ಟಡವನ್ನು ಉದ್ಘಾಟಿಸಲಿದ್ದು, ಎಸ್. ಬಂಗಾರಪ್ಪ ಸಭಾಭವನವನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವ ಎಸ್. ಮಧು ಬಂಗಾರಪ್ಪ, ಕೇಂದ್ರ ಕಛೇರಿಯ ಉದ್ಘಾಟನೆಯನ್ನು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಡಾ| ಎಂ.ಎಸ್. ರಾಜೇಂದ್ರ ಕುಮಾರ್, ಶಾಖಾ ಕಛೇರಿಯನ್ನು ನಾಡೋಜ ಡಾ| ಜಿ. ಶಂಕರ್, ಆಡಳಿತ ಮಂಡಳಿ ಸಭಾಂಗಣವನ್ನು ಸಂಸದ ಶ್ರೀ ಕೆ. ಕೋಟ ಶ್ರೀನಿವಾಸ ಪೂಜಾರಿ, ಗ್ರಾಹಕರ ಭದ್ರತಾ ಕೋಶದ ಉದ್ಘಾಟನೆಯನ್ನು ಮಾಜಿ ಸಚಿವ ಶ್ರೀ ವಿನಯ ಕುಮಾರ್ ಸೊರಕೆ, ವಾಣಿಜ್ಯ ಸಂಕೀರ್ಣದ ಉದ್ಘಾಟನೆಯನ್ನು ಮಾಜಿ ಸಚಿವ ಶ್ರೀ ಕೆ. ಜಯಪ್ರಕಾಶ್ ಹೆಗ್ಡೆ, ಭದ್ರತಾ ಕೊಠಡಿಯ ಉದ್ಘಾಟನೆಯನ್ನು ಶಾಸಕ ಕಿರಣ್‌ಕುಮಾರ್ ಕೊಡ್ಗಿ ನೆರವೇರಿಸಲಿದ್ದಾರೆ. ಸಂಭ್ರಮ ನಗದು ಪತ್ರವನ್ನು ಉಡುಪಿ ಜಿಲ್ಲಾ ಸಹಕಾರ ಯೂನಿಯನ್‌ನ ಅಧ್ಯಕ್ಷ ಶ್ರೀ ಬಿ. ಜಯಕರ ಶೆಟ್ಟಿ ಇಂದ್ರಾಳಿ ಬಿಡುಗಡೆಗೊಳಿಸಲಿದ್ದಾರೆ.
ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ ನೆರವೇರಿಸಲಿದ್ದಾರೆ. ಸಭಾಧ್ಯಕ್ಷತೆಯನ್ನು ಕೋಟ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಶ್ರೀ ಕೆ. ಕೊರಗ ಪೂಜಾರಿ ವಹಿಸಲಿದ್ದಾರೆ. ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಡುಪಿ ಶಾಸಕ ಶ್ರೀ ಯಶ್‌ಪಾಲ್ ಎ. ಸುವರ್ಣ, ಕಾರ್ಕಳ ಶಾಸಕ ಶ್ರೀ ವಿ. ಸುನೀಲ್ ಕುಮಾರ್, ವಿಧಾನ ಪರಿಷತ್ ಸದಸ್ಯ ಶ್ರೀ ಮಂಜುನಾಥ ಭಂಡಾರಿ ಹಾಗೂ ಕಿಶೋರ್ ಕುಮಾರ್, ಮಾಜಿ ಸಚಿವ ಶ್ರೀ ಪ್ರಮೋದ್ ಮಧ್ವರಾಜ್, ಬೈಂದೂರು ಕ್ಷೇತ್ರದ ಮಾಜಿ ಶಾಸಕ ಶ್ರೀ ಕೆ. ಗೋಪಾಲ ಪೂಜಾರಿ, ಉಡುಪಿ ಜಿಲ್ಲಾ ಮೂರ್ತೆದಾರರ ಮಹಾಮಂಡಳದ ಅಧ್ಯಕ್ಷ ಸತೀಶ್ ಉಪ್ಪೂರು, ರಾಷ್ಟ್ರೀಯ ಬಿಲ್ಲವರ ಮಹಾಮಂಡಳ (ರಿ.) ಮೂಲ್ಕಿ ಇದರ ಅಧ್ಯಕ್ಷ ರಾಜಶೇಖರ್ ಕೋಟ್ಯಾನ್, ಅಖಿಲ ಭಾರತ ಬಿಲ್ಲವರ ಅಸೋಸಿಯೇಶನ್ ಮಂಗಳೂರು ಇದರ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ, ಶ್ರೀ ವಿಶ್ವನಾಥ ಕ್ಷೇತ್ರ ಕಟಪಾಡಿ ಅಧ್ಯಕ್ಷ ಬಿ. ಎನ್. ಶಂಕರ ಪೂಜಾರಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ ದಿನಕರ ಹೇರೂರು, ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಾದ ಶ್ರೀಮತಿ ಕೆ. ಆರ್ ಲಾವಣ್ಯ, ಕುಂದಾಪುರ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಶ್ರೀಮತಿ ಸುಕನ್ಯ, ದಕ್ಷಿಣ ಕನ್ನಡ ಜಿಲ್ಲಾ ಮೂರ್ತೆದಾರರ ಸಹಕಾರಿ ಮಹಾಮಂಡಲ ನಿ. ಮಂಗಳೂರು ಇದರ ಅಧ್ಯಕ್ಷ ಸಂಜೀವ ಪೂಜಾರಿ ಬೊಳ್ಳಾಯಿ, ಕೋಟ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಮತಿ ಜ್ಯೋತಿ ಭರತ್‌ಕುಮಾರ್ ಶೆಟ್ಟಿ ಭಾಗವಹಿಸಲಿದ್ದು, ಸಹಕಾರ ಸಂಘಗಳ ನಿವೃತ್ತ ಸಹಾಯಕ ನಿಬಂಧಕ ಅರುಣ್ ಕುಮಾರ್ ಎಸ್. ವಿ. ಯವರಿಗೆ ಗೌರವಾರ್ಪಣೆ ನೀಡಲಾಗುವುದು.
ಈ ಸಮಾರಂಭದಲ್ಲಿ ಶ್ರೀಮತಿ ಸುಕನ್ಯ ಶೆಟ್ಟಿ, ಅಧ್ಯಕ್ಷರು ಪಟ್ಟಣ ಪಂಚಾಯತ್ ಸಾಲಿಗ್ರಾಮ, ಸತೀಶ್ ಕುಂದರ್, ಅಧ್ಯಕ್ಷರು ಗ್ರಾಮ ಪಂಚಾಯತ್ ಕೋಟತಟ್ಟು, ಶ್ರೀ ಸದಾನಂದ ಜಿ., ಅಧ್ಯಕ್ಷರು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಕೋಟ, ಶ್ರೀ ಡಾ| ಕೃಷ್ಣ ಕಾಂಚನ್, ಅಧ್ಯಕ್ಷರು ಕೋಟ ಸಹಕಾರಿ ವ್ಯವಸಾಯಕ ಬ್ಯಾಂಕ್, ಶ್ರೀ ಶ್ರೀನಿವಾಸ ಪೂಜಾರಿ (ಸಿದ್ಧಿ), ಅಧ್ಯಕ್ಷರು ಕೋಟಿ ಚೆನ್ನಯ್ಯ ಸೌಹಾರ್ದ ಸಹಕಾರಿ ಸಂಘ ನಿ., ಕೋಟ, ಶ್ರೀಮತಿ ಸುಧಾ ಎ. ಪೂಜಾರಿ, ಅಧ್ಯಕ್ಷರು ಬ್ರಹ್ಮಶ್ರೀ ನಾರಾಯಣಗುರು ಮಹಿಳಾ ಸ್ವ-ಸಹಾಯ ವಿವಿಧೋದ್ದೇಶ ಸಹಕಾರಿ ಸಂಘ ನಿ. ಕೋಟ, ಉದ್ಯಮಿಗಳಾದ ಶ್ರೀ ಕೋಟ ಇಬ್ರಾಹಿಂ ಸಾಹೇಬ್, ಶ್ರೀ ಮಾಣಿಗೋಪಾಲ್, ಮಾಜಿ ಅಧ್ಯಕ್ಷರು ನಗರಾಭಿವೃದ್ಧಿ ಪ್ರಾಧಿಕಾರ, ಕುಂದಾಪುರ, ಶ್ರೀ ಪಿ.ಕೆ. ಸದಾನಂದ, ಮಾಜಿ ಅಧ್ಯಕ್ಷರು ಉಡುಪಿ ಜಿಲ್ಲಾ ಮೂರ್ತೆದಾರರ ಸಹಕಾರಿ ಮಹಾಮಂಡಲ ನಿ. ಬ್ರಹ್ಮಾವರ, ಶ್ರೀ ಪ್ರವೀಣ್ ಪೂಜಾರಿ, ಅಧ್ಯಕ್ಷರು ಬಿಲ್ಲವರ ಯುವವೇದಿಕೆ (ರಿ.) ಉಡುಪಿ, ಶ್ರೀ ಅಶೋಕ್ ಪೂಜಾರಿ ಬೀಜಾಡಿ, ಅಧ್ಯಕ್ಷರು ಬಿಲ್ಲವರ ಸೇವಾ ಸಂಘ (ರಿ.) ಕುಂದಾಪುರ ಹಾಗೂ ಶ್ರೀ ನರಸಿಂಹ ಪ್ರಭು, ಅಧ್ಯಕ್ಷರು ಜಿ.ಎಸ್.ಬಿ ಸೇವಾ ಸಂಘ (ರಿ.), ಕಾಶೀಮಠ ಕೋಟ ಇವರು ಉಪಸ್ಥಿತರಿರುವರು. ವೇದಿಕೆಯಲ್ಲಿ ಸಭಾ ಕಾರ್ಯಕ್ರಮದ ಮುಂಚಿತವಾಗಿ ಹಾಗೂ ನಂತರ ಸಂಗೀತ ಕಾರ್ಯಕ್ರಮ ಜರಗಲಿದೆ ಎಂದು ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀ ಜಗದೀಶ್ ಕೆಮ್ಮಣ್ಣುಯವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.
ಮೂರ್ತೆದಾರರ ಸಹಕಾರಿ ಸಂಘದ ಹಿನ್ನೆಲೆ :
1989-90 ರಲ್ಲಿ ವೀರೇಂದ್ರ ಪಾಟೀಲರ ಸರಕಾರ ಶೇಂದಿ ನಿಷೇದ ಜಾರಿಗೊಳಿಸಿದಾಗ ಸರಕಾರದ ವಿರುದ್ಧ ಶೇಂದಿ ಮಾರಾಟದ ಚಳುವಳಿಯನ್ನು ನಡೆಸಿ, ಆ ಚಳುವಳಿಯ ಬಿಸಿ ಸರಕಾರಕ್ಕೂ ತಟ್ಟಿ, ನೂತನ ಮುಖ್ಯಮಂತ್ರಿಯಾಗಿ ಆಯ್ಕೆಗೊಂಡ ಶ್ರೀಮಾನ್ ಎಸ್. ಬಂಗಾರಪ್ಪರವರು ಶೇಂದಿ ನಿಷೇದ ಆದೇಶವನ್ನು ರದ್ದುಗೊಳಿಸಿದ ಫಲವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಮಾದರಿಯಲ್ಲಿ ಮೂರ್ತೆದಾರರ ಸಹಕಾರಿ ಸಂಘಗಳನ್ನು ಆರಂಭಿಸಲು ಸರಕಾರ ಅವಕಾಶ ಮಾಡಿಕೊಟ್ಟಿತು.
ಕೋಟ ಪರಿಸರದಲ್ಲಿ ಸಂಘಟಿತ ಹೋರಾಟ ನಡೆಸಿದ ಮೂರ್ತೆದಾರರ ಮುಂದಾಳು ಕೋಡಿ ಕೊರಗ ಪೂಜಾರಿಯವರ ಪ್ರವರ್ತಕತ್ವದಲ್ಲಿ ಕೇವಲ 78 ಮಂದಿ ಸದಸ್ಯರಿಂದ ರೂ. 20,250.00 ಪಾಲು ಬಂಡವಾಳದೊಂದಿಗೆ1991ನೇ ನವೆಂಬರ್ 14ರಂದು ಕೋಟ ಮೂರ್ತೆದಾರರ ಸೇವಾ ಸಹಕಾರಿ ಸಂಘ ನೋಂದಣಿಗೊಂಡು ಅಸ್ತಿತ್ವಕ್ಕೆ ಬಂದು, ನವೆಂಬರ್ ೨೬ ರಂದು ಗೋಪಾಲ ಪೈ.ಯವರ ಬಾಡಿಗೆ ಕಟ್ಟಡದಲ್ಲಿ ಕಾರ್ಯರಂಭಗೊಂಡಿತು.
ಮೂರ್ತೆದಾರರ ಸಹಕಾರಿ ಸಂಘಗಳ ಪೈಕಿ ಪ್ರಪ್ರಥಮವಾಗಿ ದಿನಾಂಕ18.01.1993ರಂದು ಬ್ಯಾಂಕಿಂಗ್ ವ್ಯವಹಾರ ಆರಂಭಿಸಿದ್ದು, ಅಂದಿನ ಶಾಸಕರಾದ ರುಕ್ಮಯ ಪೂಜಾರಿಯವರಿಂದ ಉದ್ಘಾಟನೆಗೊಂಡಿತು. 05.12.1997ರಂದು ಬಾರ್ಕೂರು ಶಾಖೆ, 02.10.2000ರಂದು ಸಾಸ್ತಾನ ಶಾಖೆ, 25.05.2014ರಂದು ಕೊಕ್ಕರ್ಣೆ ಶಾಖೆ, 29.02.2016 ರಂದು ಪುತ್ತೂರು ಶಾಖೆ, 04.12.2022ರಂದು ಹೂಡೆ ಶಾಖೆಗಳನ್ನು ಆರಂಭಿಸಿ ಕಾರ್ಯಕ್ಷೇತ್ರದಲ್ಲಿ ಬ್ಯಾಂಕಿಂಗ್ ವ್ಯವಹಾರವನ್ನು ವಿಸ್ತರಿಸಲಾಯಿತು.
ಕೋಟ ಕೇಂದ್ರ ಕಛೇರಿಗೆ ಪೇಟೆಯ ಹೃದಯ ಭಾಗದಲ್ಲಿ 0.23 ಎಕ್ರೆ ನಿವೇಶನವನ್ನು ಖರೀದಿಸಿ ಕಟ್ಟಡ ಹಾಗೂ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಿ ದಿನಾಂಕ 01.12.2009ರಂದು ಅಂದಿನ ಸಹಕಾರಿ ಸಚಿವರಾದ ಶ್ರೀ ಲಕ್ಷ್ಮಣ ಎಸ್. ಸವಧಿ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟನೆಗೊಳಿಸಲಾಯಿತು. ದಿನಾಂಕ 11.11.2014ನೇ ಸಾಲಿನಲ್ಲಿ ಸಾಸ್ತಾನ ಶಾಖೆಗೆ 700 ಚದರ ಅಡಿ ವಿಸ್ತೀರ್ಣದ ಕೋಣೆಯನ್ನು ಖರೀದಿಸಿ ಸಾಸ್ತಾನ ಶಾಖೆಯನ್ನು ಸ್ವಂತ ಕಛೇರಿಗೆ ಸ್ಥಳಾಂತರಿಸಲಾಯಿತು.
ಪ್ರಸ್ತುತ ಸಂಘದ 34ನೇ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಸಂಘದ ಕೇಂದ್ರ ಕಛೇರಿ ವಾಣಿಜ್ಯ ಸಂಕೀರ್ಣ ಹಾಗೂ ಸಭಾಭವನವನ್ನು 4.00 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ್ದು ಇದರಲ್ಲಿ ಸಂಪೂರ್ಣ ಹವಾ ನಿಯಂತ್ರಿತ ಸಭಾಭವನಕ್ಕಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಅಂದಿನ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರ ಶಿಫಾರಸ್ಸಿನಂತೆ ರೂ 50.00 ಲಕ್ಷ ಅನುದಾನ ದೊರೆತಿರುತ್ತದೆ.
ಪ್ರಸ್ತುತ 2023-24ನೇ ಸಾಲಿನಲ್ಲಿ 302 ಕೋಟಿ ರೂ. ವ್ಯವಹಾರವನ್ನು ನಡೆಸಿ ರೂ. 1.06 ಕೋಟಿ ನಿವ್ವಳ ಲಾಭ ಗಳಿಸಿದ್ದು ಶೇಕಡಾ 12% ಡಿವಿಡೆಂಡ್‌ನ್ನು ನೀಡಿರುತ್ತೇವೆ. ಸಂಘವು 1.43 ಕೋಟಿ ಪಾಲು ಬಂಡವಾಳ ಹೊಂದಿದ್ದು, ರೂ. 78.63 ಕೋಟಿ ಠೇವಣಿ, ಸದಸ್ಯರಿಂದ ಬರತಕ್ಕ ಸಾಲ ರೂ. 68.90 ಕೋಟಿ ಆಗಿರುತ್ತದೆ. ರೂ. 26.55 ಕೋಟಿ ರೂ. ಠೇವಣಿಯನ್ನು ವಿವಿಧ ಸಹಕಾರಿ ಸಂಘ ಹಾಗೂ ಬ್ಯಾಂಕುಗಳಲ್ಲಿ ಹೂಡಿಕೆ ಮಾಡಿರುತ್ತದೆ. ಸಂಘದ ದುಡಿಯುವ ಬಂಡವಾಳವು ೧೦೦ ಕೋಟಿಗೆ ಮೀರಿರುತ್ತದೆ.
ಸಂಘವು ಪ್ರಸ್ತುತ ರೂ. 8.50 ಕೋಟಿ ಸ್ಥಿರಾಸ್ತಿ ಮತ್ತು ಕಟ್ಟಡ, ರೂ. 5.10 ಕೋಟಿ ಚರಾಸ್ತಿ ಹೊಂದಿದ್ದು ರೂ. 10.09 ಕೋಟಿ ನಿಧಿಗಳನ್ನು ಹೊಂದಿರುತ್ತದೆ. ಸಂಘವು ಸ್ವಂತ ಬಂಡವಾಳದಿಂದಲೇ ಕಾರ್ಯನಿರ್ವಹಿಸುತ್ತಿದ್ದು, ಮಹಿಳಾ ಸಶಕ್ತೀಕರಣಕ್ಕಾಗಿ 277 ಕಲ್ಪತರು ಮಹಿಳಾ ಸ್ವ-ಸಹಾಯ ಗುಂಪುಗಳನ್ನು ಪ್ರಾಯೋಜಿಸಿದ್ದು, ರೂ. ೬.೦೨ ಕೋಟಿ ಸಾಲ ಸೌಲಭ್ಯವನ್ನು ಒದಗಿಸಿದೆ. ಸತತ 28 ವರ್ಷಗಳಿಂದ ‘ಎ’ ವರ್ಗದ ಆಡಿಟ್ ವರ್ಗೀಕರಣ ಪಡೆದಿರುತ್ತದೆ.
ಸಂಘದಿಂದ ಸೇಫ್ ಡೆಪಾಸಿಟ್ ಲಾಕರ್, ಆರ್.ಟಿ.ಜಿ.ಎಸ್, ನೆಫ್ಟ್, ಈ ಸ್ಟಾಂಪಿಂಗ್, ಆರ್.ಟಿ.ಸಿ ವಿತರಣಾ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಸಂಘದ ಸದಸ್ಯರ ಮಕ್ಕಳಿಗೆ ನೋಟ್‌ಪುಸ್ತಕ ವಿತರಣೆ, ಉನ್ನತ ವ್ಯಾಸಂಗ ನಿಧಿಯಿಂದ ಧನಸಹಾಯ, ಸದಸ್ಯರಿಗೆ ಸಾಮೂಹಿಕ ವಿಮೆ, ಯಶಸ್ವಿನಿ ಆರೋಗ್ಯ ಯೋಜನೆ, ಅನಾರೋಗ್ಯಕ್ಕೊಳಗಾದವರಿಗೆ ಸದಸ್ಯರ ಸಹಾಯ ನಿಧಿಯಿಂದ ಸಹಾಯಹಸ್ತ, ಸದಸ್ಯರ ಕ್ಷೇಮಾಭಿವೃದ್ಧಿ ನಿಧಿಯಿಂದ ರೂ. 1.00 ಲಕ್ಷ ವೈಯಕ್ತಿಕ ಸಾಲ ಹಾಗೂ ಸ್ವ-ಸಹಾಯ ಸಂಘದ ಸಾಲ ಪಡೆದ ಸದಸ್ಯರು ಮೃತರಾದಲ್ಲಿ ಸಾಲ ಮೊತ್ತದ ಶೇಕಡಾ 25% ರಷ್ಟು ಈ ನಿಧಿಯಿಂದ ಭರಿಸಲಾಗುತ್ತಿದೆ.









administrator

Related Articles

Leave a Reply

Your email address will not be published. Required fields are marked *