ಉಡುಪಿ ಮಿತ್ರ ಪತ್ರಿಕೆ ಸುದ್ದಿ:
ಬ್ರಹ್ಮಾವರ, ಫೆ.10 : ಬಾರಕೂರಿನಲ್ಲಿ ಪ್ರತಿಷ್ಠಾಪಿಸಲ್ಪಟ್ಟಿರುವ ದೇವಾಡಿಗ ಸಮಾಜದ ಕುಲದೇವಿ ಶ್ರೀ ಏಕನಾಥೇಶ್ವರೀ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಫೆ. 16 ರಿಂದ ಫೆ.19ರ ವರೆಗೆ ಜರಗಲಿವೆ. ಆ ಪ್ರಯುಕ್ತ ದಿನಾಂಕ 16.02.2025 ಆದಿತ್ಯವಾರ ಮಧ್ಯಾಹ್ನ ಗಂಟೆ 3.30ಕ್ಕೆ ದೇವಾಡಿಗ ಸಂಘಗಳ ಸದಸ್ಯರು ಮತ್ತು ಸಮಾಜ ಬಾಂಧವರ ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಯು ಬಾರ್ಕೂರು ಸೇತುವೆ ಬಳಿಯಿಂದ ಪ್ರಾರಂಭಗೊಂಡು ಕಾಲ್ನಡಿಗೆಯೊಂದಿಗೆ ದೇವಸ್ಥಾನಕ್ಕೆ ತಲುಪಲಿದೆ. ದೇವಾಡಿಗ ಸಮುದಾಯದ ಸುಮಾರು 50 ರಿಂದ 60 ಸಂಘಗಳು ಹೊರೆ ಕಾಣಿಕೆ ಸಲ್ಲಿಸಲಿವೆ ಎಂದು ಬಾರಕೂರು ಶ್ರೀ ಏಕನಾಥೇಶ್ವರೀ ದೇವಸ್ಥಾನದ ಕಾರ್ಯಕಾರಿ ಸಮಿತಿ ಕಾರ್ಯಾಧ್ಯಕ್ಷ ಜನಾರ್ಧನ ಪಡುಪಣಂಬೂರು ಬ್ರಹ್ಮಾವರದ ಗಜಾನನ ಹೋಟೆಲ್ನಲ್ಲಿ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ದೇವಸ್ಥಾನದಲ್ಲಿ ಫೆ.18 ರಂದು ಮಂಗಳವಾರ ಸೂರ್ಯೋದಯದಿಂದ ಸೂರ್ಯಾಸ್ತಮಾನದವರೆಗೆ ವಿವಿಧ ದೇವಾಡಿಗ ಸಂಘದ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಲಿದ್ದು ಈ ಭಜನಾ ಕಾರ್ಯಕ್ರಮ ನಡೆಸಿಕೊಡಲು ಮುರ್ಡೇಶ್ವರದಿಂದ ತಲಪಾಡಿ, ವಿಟ್ಲದವರೆಗಿನ ಭಜನಾ ತಂಡಗಳವರು ಭಾಗವಹಿಸಲಿದ್ದಾರೆ.
ಫೆ. 19 ಬುಧವಾರವಾರದಂದು ಬೆಳಿಗ್ಗೆ9.00 ಗಂಟೆಗೆ ಸಾಮೂಹಿಕ ಚಂಡಿಕಾಯಾಗ ನಡೆಯಲಿದೆ. ಅಲ್ಲದೆ ಬೆಳಿಗ್ಗೆ ಗಂಟೆ 10.00ರಿಂದ ವಧು-ವರರ ನೋಂದಣಿ ಮತ್ತು ವಧುವರಾನ್ವೇಷಣೆ, ತುಲಾಭಾರ ಸೇವೆ, ಮಧ್ಯಾಹ್ನ ಗಂಟೆ 1.00 ರಿಂದ ಅನ್ನಸಂತರ್ಪಣೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಮಧ್ಯಾಹ್ನ ಗಂಟೆ 2.30 ರಿಂದ “ವಿಶ್ವ ದೇವಾಡಿಗ ಮಹಾಮಂಡಳ” ದ ವಾರ್ಷಿಕ ಮಹಾಸಭೆ ನಡೆಯಲಿದೆ. ಈ ಮಹಾಸಭೆಯಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಾದ್ಯ ಕಲಾವಿದರನ್ನು ಗೌರವಿಸಲಾಗುವುದು. ಎಂದು ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಶ್ರೀ ಏಕನಾಥೇಶ್ವರೀ ದೇವಸ್ಥಾನ ಟ್ರಸ್ಟ್(ರಿ.)ನ ಕಾರ್ಯಕಾರಿ ಸಮಿತಿ ಉಪಾಧ್ಯಕ್ಷ ಯಾದವ ದೇವಾಡಿಗ ಹಳೆಯಂಗಡಿ, ಗೌರವ ಕಾರ್ಯದರ್ಶಿ ಗಣೇಶ ದೇವಾಡಿಗ ಅಂಬಲಪಾಡಿ, ಉಪಾಧ್ಯಕ್ಷ ಸುರೇರ್ಶ ಶೇರಿಗಾರ್ ಕೊಡವೂರು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯ ವೇಣುಗೋಪಾಲ ಬ್ರಹ್ಮಾವರ ಉಪಸ್ಥಿತರಿದ್ದರು.
ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
