ಹಲುವಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಉದ್ಘಾಟನೆ ; ನೋಟ್ ಪುಸ್ತಕ ವಿತರಣೆ
ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಬ್ರಹ್ಮಾವರ, ಜೂ.೪: ೩೩ ಕೋಟಿ ವಿದ್ಯಾರ್ಥಿಗಳು ದೇಶದಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದು ಅವರ ಮೇಲೆ ದೇಶದ ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ಇರಿಸಿದ್ದಾರೆ. ದೇಶದ ಅಭಿವೃದ್ಧಿಯಲ್ಲಿ ಈ ವಿದ್ಯಾರ್ಥಿಗಳು ತಮ್ಮ ಕೊಡುಗೆಯನ್ನು ಸಲ್ಲಿಸಬೇಕಾದಲ್ಲಿ ಅವರಿಗೆ ಪೋಷಕರು, ಶಿಕ್ಷಕರು ಸರಿಯಾದ ಮಾರ್ಗದರ್ಶನ ನೀಡಬೇಕು ಎಂದು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶಪಾಲ್ ಸುವರ್ಣ ನುಡಿದರು. ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಲುವಳ್ಳಿ ಇಲ್ಲಿ ನಡೆದ ನೋಟ್ ಪುಸ್ತಕ ವಿತರಣಾ ಸಮಾರಂಭ ಹಾಗೂ ಇಂಗ್ಲೀಷ್ ಮೀಡಿಯಂ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಮಾತನಾಡಿದರು.

ಗ್ರಾಮಾಂತರ ಭಾಗದ ಹಲುವಳ್ಳಿ ಸರಕಾರಿ ಶಾಲೆಯನ್ನು ಅಭಿವೃದ್ಧಿ ಪಡಿಸಲು ಉದ್ಯಮಿ ಸುಗ್ಗಿ ಸುಧಾಕರ ಶೆಟ್ಟರೊಂದಿಗೆ ಇಲ್ಲಿಯ ಜನರು ಶ್ರಮಿಸುತ್ತಿದ್ದಾರೆ. ಅಭಿವೃದ್ಧಿಗೆ ಸರಕಾರದ ಅನುದಾನದ ಕೊರತೆ ಇದೆ. ಆದರೂ ಸಿಎಸ್ಆರ್ ಫಂಡ್ ಮೂಲಕ ಅಭಿವೃದ್ಧಿಗೆ ಅನುದಾನ ಒದಗಿಸಲು ಪ್ರಯತ್ನಿಸುತ್ತೇನೆ. ಊರಿನ ಶಾಲೆಗಳ ಅಭಿವೃದ್ಧಿಗೆ ಆಯಾಯ ಭಾಗದ ಜನರು ಸಹಕಾರ ನೀಡಬೇಕು ಎಂದರು.

ಹಲುವಳ್ಳಿ ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಿರುವ ಉದ್ಯಮಿ ಸುಗ್ಗಿ ಸುಧಾಕರ ಶೆಟ್ಟಿ ಮಾತನಾಡಿ ಊರಿನ ಅಭಿವೃದ್ಧಿಯಲ್ಲಿ ಜನರ ಸಹಭಾಗಿತ್ವ ಬಹಳ ಪ್ರಮುಖವಾದುದು. ಊರಿನ ಶಾಲೆ ಊರಿನ ದೇವಾಲಯದ ಬಗ್ಗೆ ಜನರು ವಿಶೇಷ ಕಾಳಜಿ ಹೊಂದಬೇಕು. ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಧ್ಯಮ ವರ್ಗದ ಜನರು ಹಾಗೂ ಕೆಳ ವರ್ಗದ ಜನರ ಮಕ್ಕಳು ಓದುತ್ತಾರೆ. ಆದ್ದರಿಂದ ಈ ಶಾಲೆಗಳನ್ನು ಉಳಿಸಿಕೊಳ್ಳಲು ಪ್ರತಿಯೊಬ್ಬರು ಸಹಕರಿಸಬೇಕು. ಹಲುವಳ್ಳಿ ಶಾಲೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಇಂಗ್ಲೀಷ್ ಮೀಡಿಯಂ ಆರಂಭಿಸಿದ್ದೇವೆ. ಕಟ್ಟಡ ನಿರ್ಮಿಸಿದ್ದೇವೆ. ಮುಂದೆ ಹಾಲ್ ನಿರ್ಮಿಸಲಿದ್ದೇವೆ. ಸ್ಮಾರ್ಟ್ ಕ್ಲಾಸ್ ಆರಂಭಿಸಲಾಗುವುದು. ಮಕ್ಕಳನ್ನು ಕರೆತರಲು ೬ ರಿಕ್ಷಾ ವ್ಯವಸ್ಥೆ ಮಾಡಿದ್ದೇವೆ. ಈ ಶಾಲೆ ಯಾವುದೇ ಒಂದು ಸಮುದಾಯದ ಶಾಲೆ ಅಲ್ಲ. ಸರಕಾರದ ಶಾಲೆ. ಇದು ಎಲ್ಲರ ಶಾಲೆ. ಊರಿನ ಈ ಶಾಲೆಯನ್ನು ಉಳಿಸುವ ಜವಾಬ್ದಾರಿ ಊರಿನ ಜನತೆಯದ್ದಾಗಿದೆ. ಮಕ್ಕಳ ಶೈಕ್ಷಣಿಕ ಜವಾಬ್ದಾರಿ ಎಲ್ಲರದ್ದು. ಪೋಷಕರು ಶಾಲೆಯಲ್ಲಿ ಕರೆಯುವ ಸಭೆಗಳಿಗೆ ತಪ್ಪದೆ ಹಾಜರಾಗಬೇಕು ಎಂದು ನುಡಿದರು.

ಶಾಲೆಯ ವಿದ್ಯಾರ್ಥಿಗಳಿಗೆ ಸುಮಾರು ೫೦ ಲಕ್ಷ ಮೌಲ್ಯದ ನೋಟ್ ಪುಸ್ತಕಗಳನ್ನು ನೀಡಿದ ಎಚ್. ಎಸ್.ಎನ್. ಫೌಂಡೇಶನ್ ಕೊಟೇಶ್ವರ ಇದರ ಅಧ್ಯಕ್ಷ ಶಂಕರ ಐತಾಳರು ಮಾತನಾಡಿ ಸರಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮೀಡಿಯಂ ಆರಂಭಿಸದೇ ಹೋದಲ್ಲಿ ಆ ಶಾಲೆಗಳು ಮುಚ್ಚುವ ಹಂತಕ್ಕೆ ಬರಲಿದೆ. ಆದ್ದರಿಂದ ಇಂಗ್ಲೀಷ್ ಮೀಡಿಯಂ ಆರಂಭಿಸಿ ಎಲ್ಲಾ ಸರಕಾರಿ ಶಾಲೆಗಳನ್ನು ಉಳಿಸಿಕೊಳ್ಳಲು ಆಯಾಯ ಶಾಲೆಗಳಲ್ಲಿ ಪೋಷಕರು, ಶಿಕ್ಷಕರು, ದಾನಿಗಳು ಪ್ರಯತ್ನಿಸಬೇಕು ಎಂದರು.

ಕ್ಷೇತ್ರ ಶಿಕ್ಷಣ ಅಧಿಕಾರಿ ಶಬನಾ ಅಂಜುಮ್ ರವರು ಮಾತನಾಡಿ ಪೋಷಕರು ಶಾಲೆಯಲ್ಲಿ ನಡೆಸುವ ಪೋಷಕರ ಸಭೆಗೆ ತಪ್ಪದೆ ಹಾಜರಾಗಬೇಕು ಎಂದು ನುಡಿದರು.
ಸಭೆಯಲ್ಲಿ ಟಿಪಿಓ ನಿತ್ಯಾನಂದ ಶೆಟ್ಟಿ, ಯುತ್ ಕ್ಲಬ್ ಅಧ್ಯಕ್ಷ ಸುಧಾಕರ ಹಲುವಳ್ಳಿ, ಗ್ರಾಮ ಪಂಚಾಯತ್ ಅಧ್ಯಕ್ಷ ದಿನಕರ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯ ಪ್ರಭಾಕರ ಪೂಜಾರಿ, ಎಸ್.ಡಿ.ಎಂ.ಸಿ ಅಧ್ಯಕ್ಷೆ ಶ್ರೀಮತಿ ಸುಮತಿ, ಬಿಜೆಪಿ ಗ್ರಾಮಾಂತರ ಅಧ್ಯಕ್ಷ ರಾಜೀವ ಕುಲಾಲ್, ಸಿಆರ್ ಪಿ ಶ್ರೀಮತಿ ಲಲಿತಾ ಉಪಸ್ಥಿತರಿದ್ದರು.

ಎಲ್ ಕೆಜಿ. ಯುಕೆಜಿ ಬಿಲ್ಡಿಂಗ್ ನಿರ್ಮಿಸುವಲ್ಲಿ ಸಹಕರಿಸಿದ ಬಂಟರ ಸಂಘದ ಹುಬ್ಬಳ್ಳಿ ಸುಗ್ಗಿ ಸುಧಾಕರ ಶೆಟ್ಟಿ, ಸುಮಾರು ೫೦೦೦೦ ಮೌಲ್ಯದ ಪುಸ್ತಕಗಳನ್ನು ನೀಡಿದ ಶ್ರೀ ಎಚ್.ಎಸ್.ಎನ್ ಫೌಂಡೇಶನ್ ಅಧ್ಯಕ್ಷ ಶಂಕರ ಐತಾಳ್ ಅಮಾಸೆಬೈಲು, ಗುತ್ತಿಗೆದಾರ ಹರೀಶ್ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು.
ಶಂಕರ ಐತಾಳ್ ಅಮಾಸೆಬೈಲ್, ಮುಖ್ಯೋಪಾದ್ಯಾಯನಿ ಶ್ರೀಮತಿ ಸುಮತಿ ಸ್ವಾಗತಿಸಿದರು. ಶಿಕ್ಷಕಿ ಶ್ರೀಮತಿ ಸರಿತಾ ವಂದಿಸಿದರು. ಪ್ರಾಥಮಿಕ ಶಾಲೆಗಳ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.