ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ: ಬ್ರಹ್ಮಾವರ, ಜೂ.೧೧:
ಕ್ಷೇತ್ರ ಶಿಕ್ಷಣಾಧಿಕಾರಿ ಶಬನಾ ಅಂಜುಮ್ ಮಾತನಾಡಿ ಸರಕಾರ ೨ ಜೊತೆ ಬಟ್ಟೆ, ವಾರವಿಡೀ ಮೊಟ್ಟೆ, ರಾಗಿ ಮಾಲ್ಟ್, ಪಠ್ಯಪುಸ್ತಕ ನೀಡುತ್ತಿದೆ. ಇದರ ಜೊತೆಯಲ್ಲಿ ಸರಕಾರಿ ಶಾಲೆಗಳಿಗೆ ದಾನಿಗಳು ಅನೇಕ ಕೊಡುಗೆಗಳನ್ನು ಅತ್ಯಂತ ಪ್ರೀತಿಯಿಂದ ನೀಡುತಿದ್ದಾರೆ. ಈ ಕೊಡುಗೆಗಳು ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಅನುಕೂಲವಾಗುತ್ತಿದೆ.
೫ ವಿದ್ಯಾರ್ಥಿಗಳು ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ವ್ಯಾಪ್ತಿಯಲ್ಲಿ ರಾಜ್ಯಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಮಕ್ಕಳು ಬಾಲ ವಿಜ್ಞಾನಿಗಳಾಗಿ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಪೋಷಕರು ತಮ್ಮ ಮಕ್ಕಳ ಶೈಕ್ಷಣಿಕ ಬೆಳವಣಿಗೆಯನ್ನು ಸದಾ ಗಮನಿಸಬೇಕು. ಮಕ್ಕಳಲ್ಲಿ ಕಲಿಕೆಯ ಶಿಸ್ತನ್ನು ಕಲಿಸಬೇಕು ಎಂದರು.
ಅವರು ಹಂಗಾರಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವಿಧ ಕೊಡುಗೆಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗೀತಾ ಎಚ್.ಎಸ್.ಎನ್.ಫೌಂಡೇಶನ್ ಅಧ್ಯಕ್ಷ ಶಂಕರ ಐತಾಳರವರು ಮಾತನಾಡಿ ಮದ್ಯಮ ವರ್ಗದವರು ಬಡವರ ಮಕ್ಕಳು ಕಲಿಯುವ ಸರಕಾರಿ ಶಾಲೆಗಳು ಬೆಳೆಯಬೇಕು. ಪೋಷಕರು ಊರವರು ಶಾಲೆಗಳ ಬಗ್ಗೆ ಜಾಗೃತೆ ಮಾಡದೇ ಇದ್ದಲ್ಲಿ ಶಾಲೆಯೇ ಮುಚ್ಚುವ ಹಂತಕ್ಕೆ ಬರಲಿದೆ. ಪೋಷಕರು, ಹಳೆ ವಿದ್ಯಾರ್ಥಿಗಳು, ಊರವರು ಸದಾ ಶಾಲೆಯ ಸಂಪರ್ಕದಲ್ಲಿ ಇದ್ದರೆ ಮಾತ್ರ ಸರಕಾರಿ ಶಾಲೆ ಅಭಿವೃದ್ಧಿಯಾಗಲಿದೆ. ಶಿಕ್ಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಮಕ್ಕಳಲ್ಲಿ ಶಿಸ್ತನ್ನು ಕಾಪಾಡಬೇಕು. ಕಚೇರಿಯನ್ನು, ಶಾಲೆಯನ್ನು ಸ್ವಚ್ಚತೆಯಲ್ಲಿ ಇಡಬೇಕು ಎಂದರು.

ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಗೀತಾಶೆಟ್ಟಿ ಉದ್ಘಾಟಿಸಿ ಶುಭ ಹಾರೈಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷೆ ಶ್ರೀಮತಿ ರೇಖಾ ಉಡುಪ, ಶಿಕ್ಷಣ ಸಂಯೋಜಕ ಪ್ರಕಾಶ್, ಹಂಗಾರಕಟ್ಟೆ ಯಕ್ಷಗಾನ ಕಲಾ ಕೇಂದ್ರದ ಕಾರ್ಯದರ್ಶಿ, ಶಾಲಾಭಿವೃದ್ಧಿ ಸಮಿತಿ ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ್, ಚೇತನಾ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಕಲ್ಪನಾ, ನಿವೃತ್ತ ಶಿಕ್ಷಕಿ ಶ್ರೀಮತಿ ಶೇಸು, ಸಿಆರ್ಪಿ ಶ್ರೀಮತಿ ಮಾಲಿನಿ, ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಶೇಖರ ಪೂಜಾರಿ ಉಪಸ್ಥಿತರಿದ್ದರು.

ಎಸ್ಎಸ್ಎಲ್ಸಿ. ಪರೀಕ್ಷೆಯಲ್ಲಿ ರಾಜ್ಯಕ್ಕೆ ೬ನೇ ರ್ಯಾಂಕ್ ಗಳಿಸಿದ ವೈಷ್ಣವಿ ಇವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರಗಳನ್ನು ವಿತರಿಸಲಾಯಿತು.
ಶಿಕ್ಷಕಿ ಶ್ರೀಮತಿ ವೀಣಾ ಶೆಟ್ಟಿ ಶೈಕ್ಷಣಿಕ ಪರಿಕರ ನೀಡಿದ ದಾನಿಗಳ ವಿವರ ನೀಡಿದರು. ಶಿಕ್ಷಕಿ ಶ್ರೀಮತಿ ಪ್ರೆಸಿಲ್ಲ ಸ್ವಾಗತಿಸಿದರು. ಶ್ರೀಮತಿ ಯಶೋಧಾ ವಂದಿಸಿದರು.ಲ ಶಿಕ್ಷಕಿ ಉಷಾರಾಣಿ ಕಾರ್ಯಕ್ರಮ ನಿರೂಪಿಸಿದರು.
