ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಚಿತ್ತೂರು, ಜೂನ್೨೦: ಶಾಲೆಯಲ್ಲಿ ಉತ್ತಮ ಶಿಕ್ಷಣ ನೀಡಿ ವಿದ್ಯಾರ್ಥಿಗಳ ಬದುಕಿನ ಯಶಸ್ಸಿಗೆ ಶಿಕ್ಷPರು ಕಾರಣರಾಗಬೇಕು. ಅಂತೆಯೆ ಮನೆಯಲ್ಲಿ ಮಕ್ಕಳಿಗೆ ಪೋಷಕರು ಉತ್ತಮ ಸಂಸ್ಕಾರ ಕೊಡುವುದರೊಂದಿಗೆ ಮಕ್ಕಳ ಓದಿನ ಕಡೆಗೂ ಗಮನ ಹರಿಸಬೇಕು ಎಂದು ಎಂ.ಎಸ್.ಮಂಜ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ನುಡಿದರು.

ಅವರು ಪಿಎಂಶ್ರೀ ಸರಕಾರಿ ಪ್ರೌಢಶಾಲೆ ಚಿತ್ತೂರು ಇಲ್ಲಿ ಎಂ.ಎಸ್.ಮಂಜ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಮವಸ್ತ್ರ , ಹಾಗೂ ನೋಟ್ ಪುಸ್ತಕ ವಿತರಿಸಿ ಮಾತನಾಡಿದರು.
ಸ್ಥಳಿಯ ಮುಖಂಡ ಡಾ.ಅತುಲ್ ಕುಮಾರ್ ಶೆಟ್ಟಿ ಮಾತನಾಡಿ ಮನೆಯಲ್ಲಿ ನಮ್ಮ ಮಕ್ಕಳು ನಮ್ಮನ್ನು ಸದಾ ನೋಡುತ್ತಾ ಇರುತ್ತಾರೆ. ನಾವು ಮಾದರಿಯಾಗಿ ವ್ಯವಹರಿಸದೆ ಹೋದಲ್ಲಿ ನಮ್ಮ ಮಕ್ಕಳು ಸಂಸ್ಕಾರವಂತರಾಗಿ ಬೆಳೆಯಲು ಸಾಧ್ಯವಿಲ್ಲ. ಪೋಷಕರು ತಮ್ಮಲ್ಲಿರುವ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಬೇಕು.ಮನೆಯಲ್ಲಿ ಮಕ್ಕಳ ಎದುರು ಜಗಳ ಮಾಡುವುದು ಸರಿಯಲ್ಲ. ಮನೆಯಲ್ಲಿ ಶಾಂತಿಯ ಹಾಗೂ ಪ್ರೀತಿಯ ವಾತಾವರಣ ಇಟ್ಟುಕೊಳ್ಳಬೇಕೆಂದು ನುಡಿದರು.

ಚಿತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ರವೀಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಕೃಷ್ಣಮೂರ್ತಿ ಮಂಜರು ಪ್ರೌಢಶಾಲೆಗೆ ಅಪಾರ ಕೊಡುಗೆ ಕೊಟ್ಟಿದ್ದು ಶಾಲೆಗೆ ‘ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ಪಿಎಂಶ್ರೀ ಸರಕಾರಿ ಪ್ರೌಢಶಾಲೆ’ ಎಂದು ಹೆಸರು ಇಡಲು ಇಲಾಖೆಗೆ ಮನವಿ ಸಲ್ಲಿಸಿಕೊಳ್ಳಲಿದ್ದೇವೆ ಎಂದರು.
ಮುಖ್ಯ ಅತಿಥಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ವಂಡಬಳ್ಳಿ ಜಯರಾಮ ಶೆಟ್ಟ ಮಾತನಾಡಿ ಸರಕಾರಿ ಶಾಲೆಗಳಿಗೆ ಕೃಷ್ಣಮೂರ್ತಿ ಮಂಜರು ಉತ್ತಮ ಕೊಡುಗೆ ನೀಡುತ್ತಿದ್ದಾರೆ ಎಂದರು. ಪತ್ರಕರ್ತ ಚಿತ್ತೂರು ಪ್ರಭಾಕರ ಆಚಾರ್ಯ, ಚಿತ್ತೂರು ಪ್ರೌಢಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಗೌರಿ ಅಡಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕ ನಾಗರಾಜ್ ಸ್ವಾಗತಿಸಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ರಾಘವೇಂದ್ರ ಶೆಟ್ಟಿ ವಂದಿಸಿದರು. ಶಿಕ್ಷಕಿ ಶ್ರೀಮತಿ ನಾಗರತ್ನ ಕಾರ್ಯಕ್ರಮ ನಿರೂಪಿಸಿದರು.