ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಬ್ರಹ್ಮಾವರ, ಸೆ.21: ಬ್ರಹ್ಮಾವರ ಫೌಂಡೇಶನ್ (ರಿ.), ಲಯನ್ಸ್ & ಲಿಯೋ ಕ್ಲಬ್ ಬ್ರಹ್ಮಾವರ – ಬಾರಕೂರು, ಬ್ರಹ್ಮಾವರ ಅಭಿವೃದ್ಧಿ ಸಮಿತಿ(ರಿ.) ಇವರ ಸಹಭಾಗಿತ್ವದಲ್ಲಿ ಅಗಸ್ಟ್ 24ರಂದು ನಡೆದ ಉಚಿತ ತಪಾಸಣಾ ಶಿಬಿರದಲ್ಲಿ ಆಯ್ಕೆ ಆದ ಫಲಾನುಭವಿಗಳಿಗೆ ಸೆ.21 ರಂದು ಭಾನುವಾರ ಬ್ರಹ್ಮಾವರ ಎಸ್.ಎಮ್.ಎಸ್. ಸೈಂಟ್ ಮೇರಿಸ್ ಸಿರಿಯನ್ ಕಾಲೇಜಿನ ಸಭಾಂಗಣದಲ್ಲಿ ಉಚಿತ ಕನ್ನಡ ವಿತರಿಸಲಾಯಿತು.

ಈ ಸಂದರ್ಭ ಪ್ರಸಾದ್ ನೇತ್ರಾಲಯದ ಆಡಳಿತ ನಿರ್ದೇಶಕ ಡಾ. ಕೃಷ್ಣ ಪ್ರಸಾದ್ ಮಾತನಾಡಿ ನಮ್ಮ ಆಸ್ಪತ್ರೆಯ ಜಂಟಿ ಆಶ್ರಯದಲ್ಲಿ ಪ್ರತೀ ವರ್ಷ 100-150 ಉಚಿತ ನೇತ್ರ ತಪಾಸಣ ಶಿಬಿರ ನಡೆಸುತ್ತಾ ಬಂದಿದ್ದೇವೆ. ಈ ಎಲ್ಲಾ ಶಿಬಿರಗಳಿಗಿಂತ ಬ್ರಹ್ಮಾವರ ಫೌಂಡೇಶನ್ ನೇತೃತ್ವದಲ್ಲಿ ನಡೆದ ಶಿಬಿರದಲ್ಲಿ ಅತಿ ಹೆಚ್ಚು ಜನರು ಭಾಗವಹಿಸಿದ್ದಾರೆ ಎಂದು ನುಡಿದರು.

ಬ್ರಹ್ಮಾವರ ಫೌಂಡೇಶನ್ ಸಂಚಾಲಕ ಗೋವಿಂದರಾಜ್ ಹೆಗ್ಡೆ ಮಾತನಾಡಿ ಈ ಬಾರಿಯ ಶಿಬಿರದಲ್ಲಿ 528 ಮಂದಿ ಭಾಗವಹಿಸಿ 78 ಮಂದಿ ಕಣ್ಣಿನ ಪೊರೆ ಚಿಕಿತ್ಸೆಗೆ ನೊಂದಾಯಿಸಿಕೊಂಡು ಈಗಾಗಲೆ 36 ಮಂದಿ ಸರ್ಜರಿ ಮಾಡಿಕೊಂಡಿದ್ದಾರೆ. 291 ಮಂದಿಗೆ ಉಚಿತ ಕನ್ನಡಕ ವಿತರಿಸಲಾಗಿದೆ ಎಂದರು.

ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಭುಜಂಗ ಶೆಟ್ಟಿ ಹಾಗೂ ಭಾರತೀಯ ಜೀವಾ ವಿಮಾ ನಿಗಮದ ಪ್ರತಿನಿಧಿ ದಯಾನಂದ ಶೆಟ್ಟಿ ಹಾರಾಡಿ ಉಪಸ್ಥಿತರಿದ್ದರು.
ಬ್ರಹ್ಮಾವರ ಅಭಿವೃದ್ಧಿ ಸಮಿತಿಯ ಪ್ರತೀತ್ ಹೆಗ್ಡೆ ಸ್ವಾಗತಿಸಿದ್ದು ಪತ್ರಕರ್ತ ಚಿತ್ತೂರು ಪ್ರಭಾಕರ ಆಚಾರ್ಯ ನಿರೂಪಿಸಿ ವಂದಿಸಿದರು. ಎಸ್.ಎಮ್.ಎಸ್.ಕಾಲೇಜಿನ ಅಂತಿಮ ಬಿ.ಕಾಂ.ವಿದ್ಯಾರ್ಥಿಗಳು ಹಾಗೂ ಬ್ರಹ್ಮಾವರ ಅಭಿವೃದ್ಧಿ ಸಮಿತಿ ಸದಸ್ಯರು ಸಹಕರಿಸಿದರು.



