ಸಾಲಿಗ್ರಾಮ: ಸ್ಥಳೀಯ ಕಮರ್ಶಿಯಲ್ ವಾಹನಗಳಿಗೆ ಟೋಲ್ ಸಂಗ್ರಹಕ್ಕೆ ಹೊರಟಿರುವ ಕೆಕೆಆರ್ ಕಂಪೆನಿ ಮತ್ತು ಜಿಲ್ಲಾಢಳಿತದ ಧೋರಣೆ ಖಂಡಿಸಿ ಡಿ.31ರಂದು ಕೋಟ ಜಿ.ಪಂ ವ್ಯಾಪ್ತಿಯಲ್ಲಿ ಬಂದ್ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಅಧ್ಯಕ್ಷ ಶ್ಯಾಮ್ ಸುಂದರ್ ನಾಯಿರಿ ತಿಳಿಸಿದರು.
ಅವರು ಸಾಲಿಗ್ರಾಮ ಮಂಟಪ ಹೋಟೇಲ್ ನಲ್ಲಿ ಪ್ರತಿಕಾಗೋಷ್ಟಿ ನಡೆಸಿ ಮಾತನಾಡಿ, ಕೆಕೆಆರ್ ಕಂಪೆನಿ ಜಿಲ್ಲಾಢಳಿತಕ್ಕೆ ಒತ್ತಡವನ್ನು ಹಾಕುತ್ತಿದೆ. ವಾಣಿಜ್ಯ ವಾಹನಗಳಿಗೆ ಟೋಲ್ ಸಂಗ್ರಹಿಸುವಂತೆ, ಆದರೆ ಮೂಲಭೂತ ಸೌಕರ್ಯಗಳನ್ನು ನೀಡದೇ ಟೋಲ್ ಸಂಗ್ರಹ ಎನ್ನುವುದು ಸರಿಯಲ್ಲ. ಈ ಬಗ್ಗೆ ಸಂಸದರಲ್ಲಿಯೂ ಹೇಳಿದ್ದೇವೆ. ಹಾಗೆಯೇ ಸೋಮವಾರ ನಡೆಯುವ ಸಭೆಯಲ್ಲಿ ಈ ಸಮಸ್ಯೆಗೆ ಪೂರ್ಣ ವಿರಾಮ ಬೇಕು. ಇಲ್ಲವಾದಲ್ಲಿ ಮಂಗಳವಾರ ಉಗ್ರಹೋರಾಟ ನಡೆಯಲಿದೆ ಎಂದು ಎಚ್ಚರಿಕೆ ನೀಡಿದರು.
ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಆಶ್ರಯದಲ್ಲಿ ಈಗಾಗಲೇ ಸಾಕಷ್ಟು ಹೋರಾಟ, ಪ್ರತಿಭಟನೆಗಳು ನಡೆದರೂ ಕಂಪೆನಿ ಜಪ್ಪಯ್ಯ ಎಂದಿಲ್ಲ. ಈ ಹಿಂದಿನ ಪ್ರತಿಭಟನೆಯ ವೇಳೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಕಂಪೆನಿಯವರೊಂದಿಗೆ ಚರ್ಚಿಸಿ, ಒಂದು ತಿಂಗಳೊಳಗೆ ರಸ್ತೆ ರಿಪೇರಿ ಮಾಡಬೇಕು, ಹಾಗೂ ಸ್ಥಳೀಯರಿಗೆ ಟೋಲ್ ವಿನಾಯಿತಿ ಮುಂದುವರಿಸಬೇಕು ಎಂದು ಆದೇಶಿಸಿದ್ದರೂ ಕಂಪೆನಿ ಅವರ ಆದೇಶಕ್ಕೆ ಕ್ಯಾರೇ ಎಂದಿಲ್ಲ. ಆದರಿಂದ ಹೋರಾಟ ಸಮಿತಿಯ ಆಶ್ರಯದಲ್ಲಿ, ಸಾರ್ವಜನಿಕರು ದೊಡ್ಡ ಮಟ್ಟದ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದಾರೆ. ಮಾಬುಕಳದಿಂದ ತೆಕ್ಕಟ್ಟೆಯವರೆಗಿನ ಎಲ್ಲ ಅಂಗಡಿ ಮುಂಗಟ್ಟುಗಳನ್ನೂ ಮಂಗಳವಾರ ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲ ಸೂಚಿಸಲಾಗುವುದು. ಈ ಬಗ್ಗೆ ಈಗಾಗಲೇ ಕರಪತ್ರ ಹಂಚಲಾಗಿದೆ.
ಸ್ಥಳೀಯವಾಗಿ 750 ವಾಹನಗಳು ಟೋಲ್ ವಿನಾಯಿತಿ ಪಡೆದಿದೆ. ಈ 750ವಾಹನಗಳಿಂದ ವಾರ್ಷಿಕ 120 ಕೋಟಿ ನಷ್ಟವಾಗಿದೆ ಎಂದು ಸುಳ್ಳು ಲೆಕ್ಕವನ್ನು ತೋರಿಸಿ ಜಿಲ್ಲಾಢಳಿತದ ಕಣ್ಣಿಗೆ ಮಂಕುಬುದ್ದಿ ಎರಚುವ ಕೆಲಸವನ್ನು ಕೆಕೆಆರ್ ಮಾಡಿದೆ.
ಡಿ೩೦ರಂದು ನಡೆಯುವ ಸಭೆಯಲ್ಲಿ ನ್ಯಾಯ ಸಿಕ್ಕರೆ ಹೋರಾಟ ಕೈಬಿಡುತ್ತೇವೆ ಇಲ್ಲವಾದಲ್ಲಿ ಉಗ್ರ ಹೋರಾಟ ಶತಸಿದ್ದ ಎಂದರು.
ಈ ಸಂದರ್ಭ ಸಮಿತಿಯ ಮಾಜಿ ಕಾರ್ಯದರ್ಶಿ ವಿಠಲ ಪೂಜಾರಿ, ಆಲ್ವಿನ್ ಅಂದ್ರಾದೆ, ನಾಗರಾಜ್ ಗಾಣಿಗ, ರಾಜೇಂದ್ರ ಸುವರ್ಣ, ಭೋಜ ಪೂಜಾರಿ, ಲಾರಿ ಮಾಲಕರ ಸಂಘದ ಅಧ್ಯಕ್ಷ ಗಣೇಶ್ ಪೂಜಾರಿ, ಮಹಾಬಲ ಪೂಜಾರಿ ಮೊದಲಾದವರು ಇದ್ದರು.